ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – 12
ಕುಚೇಲೋಪಾಖ್ಯಾನ
ಸುಧಾಮ, ಶ್ರೀಕೃಷ್ಣನ ಬಾಲಮಿತ್ರ
ಅತ್ಯಂತ ವಿರಕ್ತನೂ ಶಾಂತಾತ್ಮನೂ
ಜಿತೇಂದ್ರಿಯನೂ ಆದ ಬ್ರಾಹ್ಮಣ
ಬಹಳ ಬಡತನದ ಸ್ಥಿತಿಯಲ್ಲಿದ್ದವನವನು
ಹರಿದ ಬಟ್ಟೆಯ ಧರಿಸುತ್ತಿರಲು
ಜನರು ಕುಚೇಲನೆಂದು ಕರೆಯುತ್ತಿದ್ದರು
ದೈನಾನುಗ್ರಹದಿ ಶೀಲಗುಣಸಂಪನ್ನೆಯಾದ
ಪತ್ನಿ ದೊರಕಿ, ತಮ್ಮ ದ್ರಾರಿದ್ರ್ಯಾವಸ್ಥೆಗಾಗಿ
ಕಿಂಚಿತ್ತೂ ಬೇಸರಿಸದೆ
ಅಲ್ಪಸ್ವಲ್ಪ ಪದಾರ್ಥಗಳನೇ ಶುಚಿಗೊಳಿಸಿ
ಪಾಕಮಾಡಿ ಪತಿಗೂ ಮಕ್ಕಳಿಗೂ ನೀಡುತ್ತಾ
ತನಗಿಲ್ಲದಿದ್ದರೆ ಉಪವಾಸ ಮಾಡುತ್ತಾ
ಬಹಳ ಕೃಶಳಾಗಿದ್ದ ಅವಳ ಕ್ಷುತ್ ಕ್ಷಾಮೆ
ಎಂದೇ ಇತರರು ಸಂಬೋಧಿಸುತ್ತಿರೆ
ತಿಂಡಿ ತೀರ್ಥಗಳಿಲ್ಲದೆ ಬಳಲುತ್ತ
ಕಾಡುವ ಮಕ್ಕಳ ಬಾಧೆಯ ಸಹಿಸಲಾರದೆ
ಪತಿಯ ಬಳಿ ಬಂದು – ನಾಥಾ
ಲಕ್ಷ್ಮೀಪತಿ ಶ್ರೀಕೃಷ್ಣನು ನಿಮ್ಮ ಬಾಲಮಿತ್ರನಲ್ಲವೇ
ಒಮ್ಮೆ ಅವನ ಭೇಟಿ ಮಾಡಿದರೆ
ಆ ಯದುನಾಥನು ನಮಗೆ ಸಹಾಯ ಮಾಡಲಾರನೇ
ಕುಟುಂಬ ರಕ್ಷಣೆಗೆ ಒಮ್ಮೆ ಆತನ ಕಂಡು ಬರಬಾರದೆ –
ಎಂದು ಪ್ರಾರ್ಥಿಸೆ
ಸುಧಾಮ, ಮಿತ್ರನಲ್ಲಿ ಯಾಚನೆಗೆಂದು
ಹೋಗುವುದು ತರವಲ್ಲವೆಂದು ತಿಳಿದಿದ್ದರೂ
ಪತ್ನಿಯ ಮಾತಿಗೆ ಸಮ್ಮತಿಸಲು
ಕೃಷ್ಣಸ್ವಾಮಿಯ ಸಂದರ್ಶನಕೆ
ಬರಿಗೈಲಿ ಹೋಗುವುದು ಯೋಗ್ಯವಲ್ಲವೆಂದು
ಪತ್ನಿ, ಗ್ರಾಮದ ಒಂದೆರಡು ಮನೆಗಳಲಿ
ಯಾಚಿಸಿ ನಾಲ್ಕು ಹಿಡಿ ಅವಲಕ್ಕಿಯನು ತಂದು
ಚಿಂದಿಯ ಬಟ್ಟೆಯಲೇ ಕಟ್ಟಿಕೊಟ್ಟಳು
ಕೃಷ್ಣದರ್ಶನಾಂಕ್ಷಿಯಾಗಿ ಊರು ಕೇರಿ ಹೊಲಗದ್ದೆಗಳ ದಾಟಿ
ದ್ವಾರಕಾನಗರಿಯ ಸಮೀಪಿಸಿ ಯಾದವರ ದಿವ್ಯ ಭವನಗಳ
ನೋಡುತ್ತಾ ಮುಂದುವರೆದು ಎಲ್ಲಕ್ಕಿಂತಲೂ ಭವ್ಯವಾದ
ಸೌಧವ ಕಂಡು, ಅದೇ ಕೃಷ್ಣನರಮನೆಯೆಂದು ತಿಳಿದು
ದ್ವಾರಪಾಲರಿಗೆ, ಕೃಷ್ಣನ ಬಾಲಮಿತ್ರ ಸುಧಾಮ
ಬಂದಿರುವೆಂಬ ವಾರ್ತೆಯ ಅರುಹಲು ವಿನಂತಿಸೆ
ವಾರ್ತೆಯ ತಿಳಿದೊಡೆ ರುಕ್ಮಿಣಿಯೊಡನೆ
ಮಂಚದಲಿ ಕುಳಿತಿರ್ಪ ಕೃಷ್ಣ
ತಡಮಾಡದೆ ಬಾಗಿಲಿನೆಡೆಗೆ ಬಂದು
ಎರಡು ತೋಳುಗಳಿಂದಲೂ ಆಲಂಗಿಸಿ
ಒಳಕರೆತಂದು ಗೆಳೆಯನ, ಮಂಚದ ಮೇಲೆ ಕೂರಿಸಿ
ಪತ್ನಿಯರು ನೀರೆರೆಯಲು ಸುಧಾಮನ ಪಾದಗಳ ತೊಳೆದು
ಪಾದೋದಕವನ್ನು ತನ್ನ ಶಿರಸ್ಸಿಗೆ ಪ್ರೋಕ್ಷಿಸಿಕೊಂಡು
ಪತ್ನಿಯರಿಗೂ ಪುತ್ರರಿಗೂ ಪ್ರೋಕ್ಷಿಸಿದನು
ಮಿತ್ರರಿಬ್ಬರೂ ಗುರುಕುಲವಾಸದ
ನೆನಪುಗಳ ಮೆಲಕು ಹಾಕುತ್ತಾ
ವಿನೋದಗೊಳ್ಳುತ್ತಾ ಸಮಯ ಕಳೆದರು
ಸುಧಾಮ ನಾಚಿಕೆಯಿಂದ ಕಂಕುಳಲ್ಲಿ
ಹುದುಗಿಸಿಟ್ಟುಕೊಂಡ ಅವಲಕ್ಕಿಯ
ಚಿಕ್ಕ ಗಂಟನು ಕೃಷ್ಣ ಹೊರತೆಗೆದು ಬಿಚ್ಚಿ
ಅವಲಕ್ಕಿಯ ಒಂದು ಹಿಡಿಯಷ್ಟನ್ನು ಬಾಯಿಗೆ ಹಾಕಿಕೊಂಡು
ಮತ್ತೊಂದು ಹಿಡಿಯೆಡೆಗೆ ಕೈ ಹಾಕುವಷ್ಟರಲಿ
ರುಕ್ಮಿಣಿ ಅವನ ತಡೆದು
ಪ್ರಭು ನೀ ಭಕ್ಷಿಸಿದ ಒಂದು ಮುಷ್ಟಿ ಅವಲಕ್ಕಿ
ಸುಧಾಮಗೆ
ಇಹಪರಲೋಕ ಸಂಪತ್ತನ್ನುಕೈಗೂಡಿಸಿ
ಕೊಡಲು ಸಾಕಾಗಿದೆ, ಇನ್ನೂ ಉಳಿದದ್ದು
ನಮಗಿರಲಿ, ಎಂದು ತಡೆದಳು
ಸುಧಾಮನು ದಿವ್ಯ ಮೃಷ್ಟಾನ್ನ ಭೋಜನವನು ಭುಂಜಿಸಿ
ಹಂಸತೂಲಿಕಾತಲ್ಪದಲಿ ಮಲಗಿ ವಿರಮಿಸಿ
ದೇವೇಂದ್ರಭೋಗವನು ಅನುಭವಿಸಿ ರಾತ್ರಿಯ ಕಳೆದು
ಪ್ರಾತಃಕಾಲದಿ ಕೃಷ್ಣ, ಸುಧಾಮನಿಗೆ
ಸಂದರ್ಶನವಿತ್ತುದಕ್ಕಾಗಿ ವಂದಿಸಿ
ಅರಮನೆಯ ಬಾಗಿಲಿಗೆ ಕರೆದೊಯ್ದು ಬೀಳ್ಕೊಟ್ಟನು
ತನ್ನ ಅಭೀಷ್ಟವೇನೆಂದು ತಿಳಿಸದೆ ಯಾಚಿಸದೆ
ಸುಧಾಮ ಬರಿಗೈಲಿ ಹಿಂತಿರುಗುತ್ತಾ
ಮಾರ್ಗಮಧ್ಯದಿ ಕೃಷ್ಣನ ಅಭಿಮಾನ
ಪ್ರೇಮನ ನೆನೆಯುತ್ತಾ, ಆ ಮಹಾನುಭಾವ,
ಬ್ರಾಹ್ಮಣನು ಧನಪ್ರಾಪ್ತಿಯಿಂದ
ತನ್ನ ಧಾರ್ಮಿಕ ಮನೋವೃತ್ತಿಯ ತ್ಯಜಿಸಿ
ದೈವಭಕ್ತಿ ಶೂನ್ಯನಾಗಿ ಕೆಡಬಹುದೆಂದು
ತನ್ನ ಬರಿಗೈಲಿ ಕಳುಹಿಸಿರಬಹುದೆಂದು
ಯೋಚಿಸುತ್ತಾ ತನ್ನ ಗ್ರಾಮವ ತಲುಪೆ
ಅದೇನಾಶ್ವರ್ಯ!
ಹರುಕು ಜೋಪಡಿಯಿದ್ದ ಸ್ಥಳದಿ ಭವ್ಯ ಅರಮನೆ!
ಮನೆಯೊಳಗೆ ಮಹಾಲಕ್ಷ್ಮಿಯಂತೆ ದಿವ್ಯಾಭರಣ
ಧರಿಸಿ ಅಲಂಕೃತಳಾದ ಪತ್ನಿ!
ಬಳಿಗೆ ಬಂದು ಪಾದಪೂಜೆಯ ಮಾಡಿ
ಒಳಗೆ ಕರೆದೊಯ್ದಳು
ಸುಧಾಮನು ಮಾಯಾಮನುಷ್ಯರೂಪನಾದ
ಶ್ರೀಕೃಷ್ಣನ ವಿಚಿತ್ರ ಚರ್ಯೆಯ ನೆನೆಯುತ
ಅಲ್ಲಾ, ತನ್ನನು ಬರಿಗೈಲಿ ಕಳುಹಿಸಿ
ಇಲ್ಲಿ ಅಗಣಿತ ಸೌಭಾಗ್ಯವ ಕರುಣಿಸಿರುವನಲ್ಲಾ
ಎಂದು ಸಂಭ್ರಮಿಸುತ್ತ
ಧನಕನಕದ ಸೌಭಾಗ್ಯಕ್ಕಿಂತ ಜನ್ಮ ಜನ್ಮಾಂತರಕೂ
ಅವನ ಪಾದಾರವಿಂದಗಳಲಿ ನಿರಂತರ ಭಕ್ತಿ ನೆಲೆಗೊಳ್ಳಲಿ
ಎಂದು ಪ್ರಾರ್ಥಿಸುತ್ತಾ, ಪತ್ನಿ ಪುತ್ರಾದಿಗಳಿಗೆ ನಿರಂತರ
ದಾರಿದ್ರ್ಯ ನಿವಾರಣೆಯಾಯಿತೆಂಬ ಸಂತಸದಿ
ಸುಧಾಮನು
ನಿರಂತರ ಯಜ್ಷ ಯಾಗಾದಿ ಕರ್ಮಗಳನಾಚರಿಸುತ
ಸಂಸಾರಬಂಧವನು ನೀಗಿಸಿ
ಮುಕ್ತಿ ಸೌಭಾಗ್ಯವನು ಪಡೆದನು
ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45603

-ಎಂ. ಆರ್. ಆನಂದ, ಮೈಸೂರು
