ಯುವಜನತೆಯಲ್ಲಿ ಹೆಚ್ಚುತ್ತಿದೆ ವಿಕೃತಿ
ಮರೆಯುತ್ತಿದ್ದಾರೆ ನಮ್ಮ ಸುಸಂಸ್ಕೃತಿ
ತೋರುತ್ತಿದ್ದಾರೆ ದುಷ್ಟ ಹೇಯ ಮನಸ್ಥಿತಿ
ಪ್ರೀತಿ ಪ್ರೇಮದ ಹೆಸರಲ್ಲಿ ರಾಕ್ಷಸ ಪ್ರವೃತ್ತಿ
ಪ್ರೀತಿ ಬಯಸುವುದು ಸಹಜ ಪ್ರೀತಿಯನ್ನೇ
ನೀಡಬಾರದು ಅದು ಯಾರಿಗೂ ನೋವನ್ನೇ
ಆಗಬೇಕು ಪರಿಶುದ್ಧ ಮನಸು ಮನಸಿನ ಮಿಲನ
ಅರಳಬೇಕು ಹೂವಿನಂತೆ ಜೀವನ ಮೌಲ್ಯ
ಸದಾ ಬಯಸಬೇಕು ಪರಸ್ಪರ ಕೇವಲ ಒಳಿತನ್ನೇ
ಇರಬೇಕು ಒಬ್ಬರಿಗೊಬ್ಬರು ನಿತ್ಯವೂ ನೆರಳಂತೆ
ಬರಬಾರದು ಪ್ರೀತಿ ಆತ್ಮೀಯತೆಯಲ್ಲಿ ಕಲಹ
ನೀಡಬಾರದು ಯಾರಿಗೂ ಎಂದಿಗೂ ವಿರಹ
ಏನಾದರೂ ಬರಬಾರದು ಪ್ರೀತಿ ನಡುವೆ ದ್ವೇಷ
ಬೇರೆ ಯಾವುದೇ ಕಾರಣಗಳಿಗೆ ದೂರಾದರೂ
ಮನದೊಳಗೆ ಬೆಳೆಯದಿರಲಿ ರೋಷ ಆವೇಶ
ಸದಾ ಹಿತವನ್ನ ಬಯಸುವದು ಆಗಲಿ ಉದ್ದೇಶ
ಪ್ರೀತಿ ವಿಶ್ವಾಸದಿಂದ ಗೆಲ್ಲಬಹುದು ಜಗವನ್ನೇ
ದ್ವೇಷಕ್ಕೆ ಬಿದ್ದರೆ ಕಳೆದುಕೊಳ್ಳಬೇಕಾಗುತ್ತದೆ ಬದುಕನ್ನೇ
ಎಲ್ಲರಿಗೂ ಬಯಸಬೇಕು ಕೇವಲ ಒಳಿತನ್ನೇ
ಬಿತ್ತಿ ಬೆಳೆಯಬೇಕು ಶಾಂತಿ ಸೌಹಾರ್ದತೆಯನ್ನೇ
ಸಾಯುವುದು ಸಾಯಿಸುವುದು ಅತ್ಯಂತ ಹೇಯ
ಮಾನವೀಯತೆ ಆಗಬೇಕು ನಮ್ಮ ಧ್ಯೇಯ
ಪ್ರೀತಿ ವಿಶ್ವಾಸ ತೋರುತ್ತ ಆಗಿರಬೇಕು ವಿಧೇಯ
ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತ
ಪಾಶವೀ ಕೃತ್ಯಕ್ಕೆ ಹೇಳಲೇ ಬೇಕಿದೆ ಇತಿಶ್ರೀ

ನಾಗರಾಜ್ ಜಿ.ಎನ್. ಬಾಡ,ಕುಮಟ.

