ಗಿಡಗಳ ನೆಟ್ಟು ಪೋಷಿಸಿ ಪೊರೆಯುತ
ಪರಿಸರ ರಕ್ಷಣೆ ಮಾಡೋಣ
ತಡೆಯುತ ನಮ್ಮಯ ಸುತ್ತಲ ಮಲಿನವ
ಶುದ್ಧದಿ ನಾವು ಬಾಳೋಣ//೧//
ಹಸಿರೇ ಉಸಿರು ಎಂಬುವ ತತ್ವವ
ನಂಬಿ ದಿನವೂ ಸಾಗೋಣ
ಭೂಮಿಯ ಒಡಲಿಗೆ ಕೇಡನು ಬಗೆಯದೆ
ಜೀವ ಜಾಲವ ಉಳಿಸೋಣ//೨//
ಪ್ಲಾಸ್ಟಿಕ್ ಎನ್ನುವ ಘನವಾದ ತ್ಯಾಜ್ಯವ
ಬಳಸದೆ ಬದುಕನು ಸಾಗಿಸುವ
ಪರಿಸರದಲ್ಲಿ ಹೊಗೆಯನು ಹರಡುವ
ವಾಯು ಮಾಲಿನ್ಯವ ತಡೆಯೋಣ//೩//
ಅನುದಿನ ನಮಗೆ ಪರಿಸರ ದಿನವು
ಎಂಬುದ ಜನರಿಗೆ ಅರುಹೋಣ
ವನಗಳ ಬೆಳೆಸಲು ನೀರನು ಉಳಿಸಲು
ಶಾಂತಿಯುಬದುಕಲಿ ಎನ್ನೋಣ//೪//
ಎಲೆಗಳು ಹಸಿರನು ಹೂಗಳು ಗಂಧವ
ಸೂಸಲು ಹಿತವು ಧರೆಯಲ್ಲಿ
ಸೊಂಪಿನ ಕಾಯ್ಗಳ ಮಾಗಿದ ಫಲಗಳ
ಕಾಣಲು ಪಾವನ ಇಳೆಯಲ್ಲಿ//೫//
ನೆಟ್ಟಿಹ ಗಿಡಕೆ ನೀರು ಗೊಬ್ಬರ
ಹಾಕುತ ಸಂಪದ ಕಾಣೋಣ
ಸೊಂಪಲಿ ಬೆಳೆದ ಗಿಡಮರದಿಂದ
ಬಾಳಿನ ಸೊಗವನು ಪಡೆಯೋಣ//೬//

–ಶುಭಲಕ್ಷ್ಮಿ ಆರ್ ನಾಯಕ

