ಬೊಗಸೆಬಿಂಬ

ಉಪೇಕ್ಷೆ ಎಂಬ ದಿವ್ಯಮಂತ್ರ !

Share Button

ಒಂದು ಹಂತ ಕಳೆದ ಮೇಲೆ ಜೀವನದಲ್ಲಿ ಅಪೇಕ್ಷೆಗಿಂತ ಉಪೇಕ್ಷೆಯೇ ಮಿಗಿಲಾಗುವುದು. ‘ಯಾವುದನು ಉಪೇಕ್ಷಿಸಬೇಕೆಂಬುದನು ಅರಿಯುವುದೇ ನಿಜವಾದ ಕಲೆ’ ಎಂಬುದನ್ನು ಪರ್ಷಿಯಾದ ಕವಿ ರೂಮಿ ಚೆನ್ನಾಗಿ ಮನದಟ್ಟು ಮಾಡಿಸಿದ್ದಾನೆ. The art of knowing is knowing what to ignore! ಜ್ಞಾನದ ಸೌಂದರ್ಯವಿರುವುದೇ ಇಂಥಲ್ಲಿ. ಅರಿಯುವ ಕಲೆ ಎಂದರೆ ಸುಮ್ಮನೆ ಎಲ್ಲವನ್ನೂ ಗುಡ್ಡೆ ಹಾಕಿಕೊಳ್ಳುವುದಲ್ಲ; ಬೇಡದೇ ಇರುವುದನ್ನು ಬಿಟ್ಟು ಮುನ್ನಡೆಯುವುದು. ರೂಮಿಯು ಇಲ್ಲಿ ಜ್ಞಾನದ ಬಗ್ಗೆ ಮಾತಾಡುತ್ತಿಲ್ಲ; ಅದು ಅವನಿಗೆ ಬೇಕಾಗಿಯೂ ಇಲ್ಲ. ಅವನ ಗಮನ ಇರುವುದೆಲ್ಲಾ ತಿಳಿಯುವ ಕಲೆಯಲ್ಲಿ. ಏಕೆಂದರೆ ಆತ ಕೇವಲ ತತ್ತ್ವಜ್ಞಾನಿಯಲ್ಲ; ಅವನೊಳಗೆ ಕವಿಯೊಬ್ಬ ಅಡಗಿದ್ದಾನೆ. ಸತ್ಯವನ್ನು ಸೌಂದರ್ಯದೊಂದಿಗೆ ಆವಿಷ್ಕರಿಸುವುದವನ ವೃತ್ತಿ; ಕಲಾತ್ಮಕವಾಗಿ ಕಾಣಿಸುವುದವನ ಪ್ರವೃತ್ತಿ. ಜ್ಞಾನದ ಮೂಲ ಅರಿಯುವುದು ಅಥವಾ ತಿಳಿಯುವುದು. ಹಾಗಾಗಿ ಈತ ಮೂಲಕ್ಕೇ ಕೈ ಹಾಕುತ್ತಾನೆ. ಅರಿಯುವಾಗಲೇ ನಿಮ್ಮೊಳಗೆ ಆಯ್ಕೆ ನಡೆಯಬೇಕು. ಯಾವುದು ಉಪೇಕ್ಷೆ; ಯಾವುದು ಅಪೇಕ್ಷೆ ಎಂಬುದು ಮೊದಲು ನಿರ್ಧಾರವಾಗಬೇಕು. ಅದಕಾಗಿ ನಮ್ಮ ಮೂಲ ಮನೋಧರ್ಮ ಅಂದರೆ ನಮ್ಮ ಇಷ್ಟಾನಿಷ್ಟಗಳನ್ನು ಕಂಡುಕೊಂಡಿರಬೇಕು. ಯಾವುದು ಬೇಕು? ಯಾವುದು ಬೇಡ? ಎಂಬ ಸ್ಪಷ್ಟತೆ ಇಲ್ಲದಿದ್ದರೆ ಮುಂದೆ ಅನಾಹುತವಾಗುತ್ತದೆ. ಒಂದು ಹಂತ ಕಳೆದ ಮೇಲೆ ಅಂದರೆ ನಾವು ಪ್ರಬುದ್ಧರಾಗುತ್ತಾ ಹೋದಂತೆ ನಮಗೆ ಸಂಬಂಧಪಡದ ವಿಷಯಗಳಲ್ಲಿ ತಲೆ ಹಾಕುವುದನ್ನು ಬಿಟ್ಟು ಬಿಡಬೇಕು. ಈ ಬಿಟ್ಟು ಬಿಡುವಿಕೆಯೇ ನಿಜವಾದ ಅರಿವು. ಇದನ್ನೇ ಪೂರ್ಣಚಂದ್ರ ತೇಜಸ್ವಿಯವರು ಬೇರೊಂದು ರೀತಿಯಲ್ಲಿ ಹೇಳುತ್ತಾರೆ: ಸುಮ್ಮನೆ ನಮಗೆ ಅಗತ್ಯವಿದ್ದಷ್ಟನ್ನು ಮಾತ್ರ ತಿಳಿದುಕೊಂಡು, ಮಿಕ್ಕಿದ್ದನ್ನು ನೋಡಿ ಅಚ್ಚರಿ ಪಡುತ್ತಾ ಇದ್ದುಬಿಡುವುದು ಒಳ್ಳೆಯದು.’ ತೇಜಸ್ವಿಯಂಥವರು ಜಗತ್ತಿನ ಎಲ್ಲ ಚರಾಚರಗಳಲ್ಲೂ ಏಕಪ್ರಕಾರದ ಆಸಕ್ತಿಯನ್ನು ಇಟ್ಟುಕೊಂಡಿದ್ದವರು. ಈ ಆಸಕ್ತಿಯು ಬೆರಗಾಗಿ, ಅದೇ ಬರೆಹದ ಬದುಕಾಗಿ ಮಾರ್ಪಾಟಾಗುವಷ್ಟರಮಟ್ಟಿಗೆ ಅವರದು ಪ್ರತಿಭಾಸೆಲೆ. ಹುಲ್ಲುಕಡ್ಡಿಯಿಂದ ಹುಲುಮಾನವನ ಮೂಲಕ ಸಾಗಿದ ಅವರ ಹಾದಿ ನಿಸರ್ಗದ ಸಾವಿರಾರು ವಿದ್ಯಮಾನಗಳಲ್ಲಿ ಇರುವ ನಿಯತಿಯನ್ನು ಕಂಡರಿಸಿದವರು ಅಷ್ಟೇ ಅಲ್ಲದೆ, ಮನುಷ್ಯನ ಸಂಕೀರ್ಣ ಸಮಾಜದ ನೂರಾರು ಗೋಳು ಗೋಜಲುಗಳನ್ನು ಅವುಗಳ ಮೂಲಸ್ವರೂಪದಲ್ಲಿ ಅಡಗಿರುವ ವಿಧಿಲೀಲೆಗಳನ್ನು ಸಹ ರೋಚಕವಾಗಿಯೂ ಕಲಾತ್ಮಕವಾಗಿಯೂ ಅಭಿವ್ಯಕ್ತಿಸಿದವರು. ಅಂಥವರು ಹೀಗೆ ಹೇಳುತ್ತಾರೆಂದರೆ ನಮ್ಮಂಥ ಸಾಮಾನ್ಯರು ಸ್ವಲ್ಪ ವಿವೇಕದಿಂದ ವಿಚಾರಿಸಬೇಕು: ನಮಗೆ ಅಗತ್ಯವಿದ್ದಷ್ಟನ್ನು ಮಾತ್ರ ತಿಳಿದುಕೊಳ್ಳಬೇಕು; ಉಳಿದದ್ದನ್ನು ಕೇವಲ ಬೆರಗಿನಿಂದ ಕಂಡು ಸುಮ್ಮನಾಗಬೇಕು.

ಒಂದು ಹಂತ ಕಳೆದ ಮೇಲೆ ಮತ್ತು ಆ ಹಂತ ಕಳೆಯುವ ತನಕ ಎಂದು ಸ್ಥೂಲವಾಗಿ ಎರಡು ಭಾಗ ಮಾಡಿಕೊಂಡರೆ ಈ ‘ಹಂತ’ವನ್ನು ನಿರ್ಣಯಿಸುವ ಮಾನದಂಡ ಯಾವುದಾಗಬೇಕು? ಬದುಕಿನ ಅನುಭವಗಳಿಂದ ಪಕ್ವಗೊಂಡ ಮನಸ್ಥಿತಿ ಎಂದಿಟ್ಟುಕೊಳ್ಳಬಹುದು. ಪಕ್ವತೆ ಅಥವಾ ಪ್ರಬುದ್ಧತೆಯ ಹಂತ ತಲಪಿದರೆ ಈ ಒಂದು ಹಂತ ಕಳೆದ ಮೇಲೆ ಎಂದು ತೀರ್ಮಾನಕ್ಕೆ ಬರಬಹುದಾಗಿದೆ. ನಮಗೆ ಎರಡು ಬದುಕುಗಳು. ಎರಡನೆಯ ಬದುಕು ಶುರುವಾಗುವುದು ಯಾವಾಗೆಂದರೆ, ನಮಗೆ ಇರುವುದು ಒಂದೇ ಬದುಕು ಎಂಬುದು ಮನವರಿಕೆಯಾದಾಗ!’ ಎಂದು ಬಹಳ ಹಿಂದೆಯೇ ಚೀನಾದ ಕನ್‌ಫ್ಯೂಷಿಯಸ್‌ ಹೇಳಿರುವುದು ಈ ಅರ್ಥದಲ್ಲಿಯೇ!! ಅಲ್ಲಿಯವರೆಗೆ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುತ್ತೇವೆ, ಕಟ್ಟಿಕೊಳ್ಳುವ ಹಾದಿಯಲ್ಲಿ ಎಡವುತ್ತಿರುತ್ತೇವೆ, ಬೀಳುತ್ತಿರುತ್ತೇವೆ, ನಡು ನಡುವೆ ಎದ್ದು ನಿಲ್ಲುತ್ತಿರುತ್ತೇವೆ. ಒಂದೊಮ್ಮೆ ಓಡಿದರೂ ನಿಧಾನ ನಡೆದರೂ ಸುಸ್ತಾಗಿ ಕುಂತರೂ ನಿರ್ದಿಷ್ಟ ಗಮ್ಯ ತಲಪಲು ಪ್ರಯಾಸಪಡುತ್ತಿರುತ್ತೇವೆ. ಒಂದು ಮಟ್ಟದ ಪಕ್ವತೆ ಒದಗಿದ ಮೇಲೆ ಯಾವುದನ್ನು ಕಡೆಗಣಿಸಿ ಬದುಕಬೇಕೆಂಬುದನ್ನು ಅರಿಯದೇ ಹೋದರೆ ನಮ್ಮದು ಆ ಮಟ್ಟಿಗೆ ರೋತೆ, ಕ್ಯಾತೆ ಮತ್ತು ಜೀವನದಲ್ಲಿ ಸೋತೆ! ಯಾವು ಯಾವುದೋ ಕಾರಣಕ್ಕೆ ನಮ್ಮನ್ನು ಕಂಡರೆ ಆಗದವರು ಮತ್ತು ನಮ್ಮ ಸಾಧನೆ, ಸಿದ್ಧಿಯನ್ನು ಹಂಗಿಸುವವರು – ಇವರನ್ನು ಕಡೆಗಣಿಸದೇ ಹೋದರೆ ಸುಖವಿದ್ದರೂ ನೆಮ್ಮದಿಯಿಲ್ಲದಂತಾಗುವುದು. ಸೇಡು ತೀರಿಸಿಕೊಳ್ಳಲು ಹೊರಡುವುದು, ಅಂಥವರನ್ನು ಮೆಚ್ಚಿಸಿಯೇ ಬದುಕುತ್ತೇನೆನ್ನುವುದು ಹುಂಬತನ. ನಾವು ಬದುಕಿರುವುದನ್ನೇ ಸಹಿಸದವರು ಇದ್ದಾರೆಂದು ಜೀವ ಕಳೆದುಕೊಳ್ಳಲು ಹೊರಡುವುದು ಮೂರ್ಖತನ. ಸಿಂಪಲ್ಲಾಗಿ ನಿರ್ಲಕ್ಷಿಸಬೇಕು. ಕೆಟ್ಟದ್ದನ್ನೂ ಕೆಟ್ಟವರನ್ನೂ ಉಪೇಕ್ಷಿಸಬೇಕು. ಆದರಿಸುವುದಕ್ಕಿಂತಲೂ ಅವಗಣಿಸುವುದು ಎಲ್ಲ ರೀತಿಯಲ್ಲೂ ಕ್ಷೇಮಕರ. ನಮ್ಮ ನೆಮ್ಮದಿಯನ್ನು ಡಿಸ್ಟರ್ಬಿಸುವುದೇ ಅಂಥವರ ಗುರಿಯಾಗಿರುವಾಗ ನಾವು ಡಿಸ್ಟರ್ಬಾದರೆ ಅದು ಅವರ ಗೆಲುವು; ನಮ್ಮ ಸೋಲು! ಈ ನಿಟ್ಟಿನಲ್ಲಿ ಕಿವುಡುತನ ಮತ್ತು ಮೂಕತನಗಳೇ ನಮ್ಮ ಅಸ್ತ್ರವಾಗಬೇಕು. ಒಂದು ಕಿರುನಗೆಯ ನಿರ್ಲಕ್ಷ್ಯವು ಇಂಥೆಲ್ಲ ತೊಡಕುಗಳಿಗೂ ದಿವ್ಯೌಷಧ. ಮಾತು ಇಂಥ ಕಡೆ ಅನಾಹುತ; ಪ್ರತಿಕ್ರಿಯೆಯು ಬಿರುಮಾರುತ. ಅದರಲ್ಲೂ ಮಾತಿನ ಮೂಲಕ ನೀಡುವ ಪ್ರತಿಕ್ರಿಯೆಯು ಅಪಾಯಕಾರಿಯೂ ಹೌದು. ಏಕೆಂದರೆ ಇಂಥಲ್ಲಿ ‘ಅವರೇನಾಡಿದರು? ಮತ್ತು ಮಾಡಿದರು?’ ಎಂಬುದು ಮ್ಯಾಟರೇ ಆಗುವುದಿಲ್ಲ; ‘ನಾವು ಏನೆಂದೆವು?’ ಎಂಬುದಷ್ಟೇ ಮುಖ್ಯವಾಗಿ ಬಿಡುತ್ತದೆ. ಯಾವತ್ತೂ ಅಷ್ಟೇ: ಕ್ರಿಯೆಗಿಂತ ಪ್ರತಿಕ್ರಿಯೆಯ ಮೇಲೆಯೇ ಮಂದಿಯ ಚಿತ್ತ! ‘ಮೊದಲಿನಿಂದಲೂ ಅವರು ಹಾಗೆಯೇ; ನೀವೂ ಅವರ ಮಟ್ಟಕ್ಕೆ ಇಳಿದುಬಿಟ್ಟಿರಲ್ಲಾ!’ ಎಂದೇ ಸಮಾಜ ಅಂದರೆ ನಮ್ಮನು ಸುತ್ತುವರಿದ ಬಳಗವು ಪ್ರತಿಕ್ರಿಯಿಸಿದವರನ್ನೇ ಗುರಿಯಾಗಿಸಿ ಕಟಕಿಯಾಡುತ್ತದೆ ಅಥವಾ ಬುದ್ಧಿ ಹೇಳಲು ಶುರುವಿಡುತ್ತದೆ. ಹಾಲಿನವಳು ಮತ್ತು ಮೊಸರಿನವಳು ಯಾವುದೋ ಕ್ಷುಲ್ಲಕ ಕಾರಣಕಾಗಿ ಬಡಿದಾಡಿಕೊಳ್ಳಲು ಹೋದಾಗ ಮೊಸರಿನವಳಿಗಿಂತ ಹಾಲಿನವಳು ವಿಪರೀತ ಜಾಗ್ರತೆ ವಹಿಸಲೇಬೇಕು; ಹಾಲು ಮೊಸರಿನ ಮೇಲೆ ಬಿದ್ದರೂ ಮೊಸರುಗಡಿಗೆ ಹಾಲಿನ ಮೇಲೆ ಬಿದ್ದರೂ ಕೆಡುವುದು ಹಾಲೇ! ಅಂದರೆ ಇಲ್ಲಿ ಆದ್ಯತೆಗಳು ಬಹಳ ಮುಖ್ಯ. ನೆಮ್ಮದಿ ನಮಗೆ ಬೇಕೆಂದಾದರೆ ಹೆಚ್ಚು ಜಾಗ್ರತೆ ವಹಿಸಬೇಕಷ್ಟೇ. ಅವರು ಅಂದಿದ್ದಕ್ಕೋ ನಿಂದಿಸಿದ್ದಕ್ಕೋ ನಿರಾಕರಿಸಿದ್ದಕ್ಕೋ ಇವರು ಪ್ರತಿಕ್ರಿಯಿಸಿದರೆಂದರೆ ಮುಂದಾಗುವ ಪರಿಣಾಮಕೆ ಸಿದ್ಧರಾಗಲೇಬೇಕು. ಪ್ರತಿಕ್ರಿಯಿಸದೇ ಇರಲು ಹೆಚ್ಚು ಶಕ್ತಿ ಬೇಕು; ತಾಳ್ಮೆ ಬೇಕು ಮತ್ತು ಮುಖ್ಯವಾಗಿ ಪಕ್ವತೆ ಇರಬೇಕು. ‘ಟೀಕೆಗಳು ಸಾಯುತ್ತವೆ; ಕೆಲಸಗಳು ಉಳಿಯುತ್ತವೆ’ ಎಂಬ ಕುವೆಂಪು ಅವರ ಮಾತಿನ ಯಥಾರ್ಥತೆಯನ್ನು ಅರಿಯಬೇಕಾದದ್ದು ಇಂಥಲ್ಲಿಯೇ.

ಆದರೆ ನಾವು ಹುಲುಮಾನವರು, ಷಡ್ರಸಗಳನುಂಡವರು ಪ್ರತಿಕ್ರಿಯಿಸದೇ ಇರಲು ಸಾಧ್ಯವೇ? ಸಾಧ್ಯವಿದೆ! ಸುಮ್ಮನಿರಲು ಪ್ರಯತ್ನಿಸಬೇಕು!! ಮಾತಾಡುವ ಮುಂಚೆಯೇ ನಮ್ಮೊಳಗೆ ಮಾತಾಡಿ ಕೊಳಬೇಕು. ಮಾತು ಅನಿವಾರ್ಯವಾದರಷ್ಟೇ ಪ್ರತಿಕ್ರಿಯಿಸಬೇಕು. ಆ ಪ್ರತಿಕ್ರಿಯೆಯು ನಮ್ಮ ವ್ಯಕ್ತಿತ್ವವನ್ನೂ ಅದರ ಪಕ್ವತೆಯನ್ನೂ ಪ್ರತಿನಿಧಿಸುವಂತಿರಬೇಕು. ನಾವು ಬಾಯಿ ತೆರೆಯುವಾಗಲೆಲ್ಲಾ ಹೃದಯವೂ ತೆರೆಯಲ್ಪಡುವುದೆಂಬ ತಿಳಿವಳಿಕೆ ಬರಬೇಕು! Don’t Speak unless you can improve on the Silence ಹಿತವಚನವಿದೆ. ಮೌನವನು ಇನ್ನಷ್ಟು ಉತ್ತಮೀಕರಿಸುವುದಾದರಷ್ಟೇ ಮಾತಾಡಬೇಕಂತೆ! ಮೌನವೇ ಸರಿಯಿತ್ತು ಎನ್ನುವುದಾದರೆ ಮಾತು ವ್ಯರ್ಥ. ಅದರಂತೆಯೇ ನಂನಮ್ಮ ಪ್ರತಿ-ಕ್ರಿಯೆ. ಅದು ಮಾತಿನಲ್ಲೂ ಇರಬಹುದು; ಕ್ರಿಯೆಯಾಗಿಯೂ ಅವತರಿಸಬಹುದು. ಒಟ್ಟಿನಲ್ಲಿ ಕ್ರಿಯೆಗಿಂತ ಪ್ರತಿಕ್ರಿಯೆಯು ಉತ್ತಮವಾಗಿರಬೇಕು. ಗಿಲ್ಟು ಕಾಡುವುದಾದರೆ ಪ್ರತಿಕ್ರಿಯೆ ಬೇಕಾಗಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಸುಮ್ಮನಿರುವುದೇ ಸಂತತನ. ನಮಗೆ ಗೊತ್ತಿಲ್ಲದ ವಿಚಾರಗಳೋ ಅರ್ಧಂಬರ್ಧ ತಿಳಿದ ವಿಚಾರಗಳೋ ನಮ್ಮ ಚಪಲವಾಗಬಾರದು. ಇದೆ ನಮ್ಮ ದುರ್ಬಲತೆಯ ಕನ್ನಡಿ. ನಮಗೆ ಪ್ರವೇಶವಿಲ್ಲದ ಮತ್ತು ಅರಿವಿಲ್ಲದ ಸಂಗತಿಗಳನ್ನು ಚರ್ಚಿಸಲು ಹಿಂದೇಟು ಹಾಕಬೇಕು. ‘ಇದರ ಬಗ್ಗೆ ನಮಗೇನೂ ಗೊತ್ತಿಲ್ಲ’ ಎನ್ನುವುದೇ ಮರ್ಯಾದೆ. ಅಂದು ಅನ್ನಿಸಿಕೊಂಡರು ಎಂಬ ಗಾದೆಯಂತೆ, ಏನೋ ಹೇಳಲು ಹೋಗಿ ಇನ್ನೇನೋ ಆಗಬಾರದು. ನಮ್ಮ ಸಡಿಲ ಮಾತಿನಿಂದಾಗಿ ವ್ಯಕ್ತಿತ್ವವೂ ಸಡಿಲವಾಗುವುದು; ಇದ್ದ ಗೌರವವೂ ಕಳೆದು ಹೋಗುವುದು. ತಮಾಸೆ ಮಾಡಲು ಹೋಗಿ ಅಮಾಸೆ ಆಯಿತೆಂಬಂತೆ, ಜೋಕು ಮಾಡಲು ಹೋಗಿ ನಾವೇ ಜೋಕಿಗೆ ವಸ್ತುವಾಗಬಾರದು. ಹಾಸ್ಯವು ಹಾಸ್ಯಾಸ್ಪದವಾದಾಗ ಬರೀ ಜೋಕಲ್ಲ, ಬದುಕೂ ನರಳುತ್ತದೆ. ಗಾಂಭೀರ್ಯ ಕಳೆದು ಹೋಗುತ್ತದೆ. ನಮ್ಮ ಭಾಗವಹಿಸುವಿಕೆಯು ಸರಿಯಾಗಲಿಲ್ಲವೆಂಬ ಅಪರಾಧೀ ಭಾವವೂ ಕಿತ್ತು ತಿನ್ನುತ್ತದೆ. ಹಾಗಾಗಿ ಇರುವ ಒಂದು ದಿವ್ಯ ಮಂತ್ರವೆಂದರೆ, ಉಪೇಕ್ಷಿಸುವುದು. ಯಾರೋ ಏನೋ ಅಂದರೆಂದು ತಲೆ ಕೆಡಿಸಿಕೊಂಡು, ಅಹಮಿಗೆ ಪೆಟ್ಟಾಯಿತೆಂದು ಭಾವಿಸಿ, ಪ್ರತಿಕ್ರಿಯಿಸಿದಾಗ ಎಡವಟ್ಟುಗಳಾಗಿ ಬಿಡುತ್ತವೆ. ಯಾವುದನ್ನು ನಿರ್ಲಕ್ಷಿಸಬೇಕೆಂದು ತಿಳಿದಾಗಲಷ್ಟೇ ಯಾವುದಕ್ಕೆ ಮಹತ್ವ ನೀಡಿ, ಮನ್ನಣೆ ಕೊಡಬೇಕೆಂಬುದು ತಿಳಿಯುವುದು. ಎಲ್ಲಕೂ ಮನ್ನಣೆ ನೀಡಿದರೆ ಬದುಕು ಹರಿದ ಗೋಣಿಯಂತಾಗುವುದು. ಎಲ್ಲರನ್ನೂ ಮೆಚ್ಚಿಸಲು ಹೊರಡುವವರು ಯಾರಿಂದಲೂ ಮೆಚ್ಚುಗೆ ಪಡೆಯಲಾರರು. ಎಲ್ಲರಿಗೂ ಸ್ನೇಹಿತರಾಗಲು ಹಾತೊರೆಯುವವರಿಗೇನೇ ಹೆಚ್ಚಿನ ವೈರಿಗಳು ಹುಟ್ಟಿಕೊಳ್ಳುವುದು. ‘ಮೂರು ದೋಸೆ ಕೊಟ್ಟರೆ ಸೊಸೆ ಕಡೆ; ಆರು ದೋಸೆ ಕೊಟ್ಟರೆ ಅತ್ತೆ ಕಡೆ’ ಎಂಬ ಗಾದೆಮಾತಿನಂತೆ ನಮ್ಮಲ್ಲೊಂದು ಸ್ಪಷ್ಟವಾದ ನೀತಿ ನಿಲುವು ಇಲ್ಲದೇ ಹೋದಾಗ ಸ್ವಂತಿಕೆ ಕಳೆದುಕೊಂಡು ಯಾರದೋ ಅನುಯಾಯಿಗಳಾಗಿ ಬಾಲಬಡುಕರಾಗಿ ಬಿಡುತ್ತೇವೆ. ‘ಹೌದಪ್ಪನ ಚಾವಡಿಯಲ್ಲಿ ಹೌದಪ್ಪ; ಅಲ್ಲಪ್ಪನ ಚಾವಡಿಯಲ್ಲಿ ಅಲ್ಲಪ್ಪ’ ಎಂಬ ಇನ್ನೊಂದು ಗಾದೆಯೂ ಇದೆ. ಎಲ್ಲಕೂ ಪ್ರತಿಕ್ರಿಯಿಸಲೇಬೇಕಿಲ್ಲ ಎಂಬುದನ್ನು ಕಂಡುಕೊಂಡರೆ ಆ ಮಟ್ಟಿಗೆ ನಾವು ನಿರಾಳ. ಇಷ್ಟಕ್ಕೂ ಎಲ್ಲವನ್ನೂ ಗೆಲ್ಲಲೇಬೇಕೆಂದೇನಿಲ್ಲ; ಕೆಲವನ್ನು ಕೈ ಬಿಡುವುದೇ ನಿಜಗೆಲುವು ಎಂಬೊಂದು ಮಾರ್ಮಿಕ ಮಾತೊಂದಿದೆ. ಮಾತಾಡಿ ಬಿಡಲು ಹೆಚ್ಚು ಸಂಯಮ ಬೇಕಿಲ್ಲ; ಆದರೆ ಮಾತಾಡದೇ ಇರಲು ಬೇಕೇ ಬೇಕು! ಏಕೆಂದರೆ ಬಹಳಷ್ಟು ಸಂದರ್ಭಗಳಲ್ಲಿ ಮಾತಾಡದೇ ಇರುವುದೇ ನಿಜ ಸಾಧನೆ. ಮಾತಾಡಿ ಹಗುರವಾಗುವುದಕ್ಕಿಂತ ಸುಮ್ಮನಿದ್ದು ಸಂತರಾಗುವುದೇ ವಾಸಿ. ಇದು ಗೊತ್ತಾಗುವುದು ಸೂಕ್ಷ್ಮವೂ ಸಂವೇದನಾಶೀಲವೂ ಆದ ಮನೋಧರ್ಮಕ್ಕೆ ಮಾತ್ರ. ‘ಹೆಳವನ ಮಾಡು, ಅಂಧಕನ ಮಾಡು, ಕಿವುಡನ ಮಾಡು’ ಎಂದೆಲ್ಲಾ ಬಸವಣ್ಣನವರು ತಮ್ಮೊಂದು ವಚನದಲ್ಲಿ ಅಂಗಲಾಚುವುದು ಈ ಅರ್ಥದಲ್ಲಿಯೇ. ‘ಅನ್ಯವಿಷಯಕ್ಕೆಳಸದಂತೆ ಮಾಡು’ ಎಂದವರು ತಮ್ಮ ಇಷ್ಟದೈವ ಕೂಡಲಸಂಗಮನಲ್ಲಿ ಮೊರೆಯಿಡುವರು. ನಮ್ಮ ಪಾಡಿಗೆ ನಾವಿರುವುದೇ ಇಂದಿನ ದುಬಾರಿ ಯುಗದಲ್ಲಿ ಕಡುಕಷ್ಟ. ನಮ್ಮನು ಮಾತಾಡಿಸಲು, ಪ್ರತಿಕ್ರಿಯೆ ಹೇಳಿಸಲು ಸುತ್ತಣ ಸಮಾಜವು ಹೊಂಚು ಹಾಕುತ್ತಿರುತ್ತದೆ. ಇದನ್ನರಿತು ಗೆಲ್ಲಬೇಕು ಅಂದರೆ ಜಾಣ ಜಾಣೆಯರ ನಡುವೆ ದಡ್ಡರಾಗಿರಬೇಕು. ಆಗಲೇ ನೆಮ್ಮದಿ. ಆದರೆ ನಾವು ಹೀಗಿರುವುದಿಲ್ಲ ಎಂಬುದು ಬೇರೆ ಮಾತು.

ಒಂದು ಪಕ್ಷ ಹೀಗಿದ್ದರೆ ‘ಮಂದಿಯು ಏನೆಂದುಕೊಂಡಾರು?’ ಎಂದೇ ಆಲೋಚಿಸುತ್ತೇವೆ. ‘ನಮ್ಮ ಮೌನವನ್ನು ಅಹಮೆಂತಲೋ, ದುರಹಂಕಾರವೆಂತಲೋ ಕರೆದು ಹಣೆಪಟ್ಟಿ ಹಚ್ಚಿಬಿಟ್ಟರೆ?’ ಎಂಬ ಆತಂಕದಿಂದಲೇ ನಾವು ನಮ್ಮನು ಈ ಲೋಕಕ್ಕೆ ಅರ್ಥ ಮಾಡಿಸಲು ಹೊರಡುತ್ತೇವೆ. ಬಹಳಷ್ಟು ಸಲ ನಮ್ಮ ಮಾತುಗಳು ನಮ್ಮನು ಇನ್ನೊಬ್ಬರಿಗೆ ಅರ್ಥ ಮಾಡಿಸುವ ವ್ಯರ್ಥ ಸಾಹಸವೇ ಆಗಿರುತ್ತದೆ. ಮಾತಿರುವುದೇ ನಮ್ಮ ಅನಿಸಿಕೆ-ಅಭಿಪ್ರಾಯಗಳನೂ ಧೋರಣೆಗಳನೂ ದೃಷ್ಟಿಕೋನಗಳನೂ ಅಭಿವ್ಯಕ್ತಿಸಲೆಂದೇ ತಿಳಿದಿದ್ದೇವೆ. ಬಾಯಿ ಬಿಟ್ಟರೆ ಸಾಕು, ನಮ್ಮ ಮನದೊಳಗಿರುವ ತಿಕ್ಕಾಟ ತುಮುಲಗಳನು ಇನ್ನೊಬ್ಬರಿಗೆ ದಾಟಿಸುವ ಶಬ್ದಸ್ಖಲನವೇ ಎಲ್ಲೆಲ್ಲೂ, ಯಾವಾಗಲೂ! ‘ಹೊರ ಹಾಕುವುದು ಮತ್ತು ಹೊರ ಹಾಕಿಸುವುದು’ ಸೃಷ್ಟಿಯ ಸಹಜ ಚೋದ್ಯ; ಆದರೆ ನಾವಿದಕ್ಕೆ ಜೋತು ಬಿದ್ದೆವೋ ಮುಗಿಯಿತು ನಮ್ಮ ಕತೆ. ನೆಮ್ಮದಿ ಹಾಳು; ಮನಸು ಬೋಳು ಬೋಳು. ಒಂದಂತೂ ಸ್ಪಷ್ಟ: ಗಿಲ್ಟು ಕಾಡದಂತೆ ಬದುಕುವುದೇ ಬಹು ದೊಡ್ಡ ಸಾರ್ಥಕತೆ. ‘ನಾವು ಹಾಗೆ ಮಾತಾಡಬಾರದಿತ್ತು; ಮಾತಾಡಿ ಹಗುರವಾಗಿಬಿಟ್ಟೆ; ಹೀಗೆ ಮಾತಾಡಿಸುವುದೇ ಅವರ ಕುತಂತ್ರವಾಗಿತ್ತು; ಒಳಮನದ ಹೊಂಚುಸಂಚಾಗಿತ್ತು’ ಎಂದು ನಾವು ಆಲೋಚಿಸಿದೆವೋ ಅಲ್ಲಿಗದು ಅಪರಾಧೀಭಾವ! ಎಷ್ಟೋ ಸಲ ಹೀಗನಿಸುವುದು ಸಹಜ. ಏನೋ ಮಾತಾಡಲು ಹೋಗಿ ಇನ್ನೇನೋ ಮಾತಾಡಿಬಿಟ್ಟೆ ಎಂಬ ಪಶ್ಚಾತ್ತಾಪ ಕಾಡುವುದು ಒಮ್ಮೊಮ್ಮೆ. ಆಗೆಲ್ಲ ಇಂಥ ಸುಮ್ಮನಿರುವ ಸಂತತನವನ್ನು ನಾವು ಆರೋಪಿಸಿಕೊಂಡಿದ್ದರೆ ಗಿಲ್ಟಿನಿಂದ ಬಳಲುವುದು ತಪ್ಪುತ್ತಿತ್ತು.

ಯಾವ ಸಂದರ್ಭದಲ್ಲಿ ಮೌನ ವಹಿಸುವುದನ್ನು ಅರಿಯಲಾರರೋ ಅಂಥವರು ಯಾವ ಸಂದರ್ಭದಲ್ಲಿ ಏನು ಮಾತಾಡಬೇಕೆಂಬುದನ್ನೂ ಅರಿಯರು! ಮಾತು ಬಹು ದೊಡ್ಡ ಅಸ್ತ್ರ; ಆದರೆ ಸಂಯಮವು ಅದಕಿಂತ ದೊಡ್ಡ ನೀತಿ. ಮುಂದಾಗುವ ಅನಾಹುತವನ್ನೇ ತಪ್ಪಿಸಿ ಬಿಡುವ ಸ್ವರಕ್ಷಣಾ ಕೌಶಲ್ಯ. ವಟಗುಟ್ಟುವ ಜಾಳು ಮಾತಿಗಿಂತ ತೆಪ್ಪಗಾಗುವ ಮೌನವೇ ಸೂಕ್ತ. ಒಂದು ಮಾತಿನಿಂದ ಯುದ್ಧಗಳೇ ಆಗಿ ಬಿಡುತ್ತವೆ; ಅರ್ಥವತ್ತಾದ ಮೌನವೋ ಯುದ್ಧಗಳೇ ಆಗದಂತೆ ನೋಡಿಕೊಳ್ಳುತ್ತವೆ. ಹಾಗಂತ ಮಾತಾಡಲೇಬಾರದೆಂದಲ್ಲ. ಉಪೇಕ್ಷಿಸಿ ಸುಮ್ಮನಾಗುವ ತಂತ್ರದಿಂದ ನಮ್ಮ ಮೌನದಿಂದಲೇ ಅವರನ್ನು ಮಾತಾಡಿಸಿ, ಅರ್ಥ ಮಾಡಿಸುವ ತಾಳುಮೆಯಿಂದ ಬಹಳಷ್ಟು ಸನ್ನಿವೇಶಗಳಲ್ಲಿ ಮನದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದಷ್ಟೇ ಇಂಥಲ್ಲಿ ಮಥಿತಾರ್ಥ.

‘ಅಹಂಕಾರಕೆ ಉದಾಸೀನವೇ ಮದ್ದು’ ಎಂದು ನಮ್ಮ ಹಿರಿಯರು ಒಂದೇ ಸಾಲಿನಲ್ಲಿ ಇಷ್ಟೂ ಭಾವವನ್ನು ಅಡಗಿಸಿಟ್ಟಿದ್ದಾರೆ. ಸ್ವಲ್ಪ ನಿಧಾನಿಸಿದರೆ, ಔದಾಸೀನ್ಯವೆಂಬ ಅವುಷಧಿ ಸೇವಿಸಿದರೆ ಸಾಕು. ಎಂಥ ಅಹಂಕಾರಿಗಳೂ ಮೂಲೆಗುಂಪಾಗುತ್ತಾರೆ ಮತ್ತು ವಿಧಿಯಾಟದಲ್ಲಿ ಅವರ ಸರದಿ ಮುಗಿದು ‘ಕಾಲಕಸ’ವಾಗುವುದನ್ನು ನಾವೇ ಕಣ್ಣಾರೆ ಕಾಣಬಹುದು. ಎಂಥೆಂಥವರು ಏನೇನಾಗಿ ಹೋದರು! ಭುವಿಯನ್ನು ಗೆದ್ದು ತಮ್ಮದನ್ನಾಗಿಸಿಕೊಳ್ಳುವ ಗರ್ವದಲಿ ಎಲ್ಲರೂ ಮಣ್ಣಾಗಿ ಹೋದರು. ಅಪೇಕ್ಷೆಗೆ ಉಪೇಕ್ಷೆಯೇ ದಿವ್ಯೌಷಧ. ಉಪೇಕ್ಷಿಸಿ, ನಿರ್ಲಕ್ಷಿಸಿ ನಮ್ಮಷ್ಟಕೆ ನಾವಿದ್ದು, ನಮ್ಮ ಪಾಡನು ಹಾಡಾಗಿಸುವ ಕಲೆಯಲಿ ತಲ್ಲೀನರಾದರೆ ಮಾತ್ರ ನೆಮ್ಮದಿ; ಪ್ರತಿಕ್ರಿಯಿಸುತ್ತಾ, ವಿವರಿಸುತ್ತಾ, ಅರ್ಥೈಸುತ್ತಾ ಕೂತೆವೋ ಅದಕೆ ತುದಿ ಮೊದಲಿರುವುದಿಲ್ಲ. ಅರ್ಥ ಮಾಡಿಕೊಳ್ಳುವುದಿಲ್ಲವೆಂದು ಹಟ ಹಿಡಿದವರಿಗೆ ಅರ್ಥೈಸಿ ಪ್ರಯೋಜನವಿಲ್ಲ; ಅರ್ಥ ಮಾಡಿಕೊಂಡವರಿಗೆ ಅದರ ಅಗತ್ಯವಿಲ್ಲ! ಇದೇ ಜೀವನ ವಿವೇಕ.

ಡಾ. ಹೆಚ್ ಎನ್ ಮಂಜುರಾಜ್,  ಹೊಳೆನರಸೀಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *