ಕರಗದ ಬಾನು
ಕದಲದ ಕಡಲು
ಮೋಹದ ಛಾಯೆ
ಮನಸಿನ ಮಾಯೆ
ಎಲ್ಲವೂ ಪದದ
ಸುತ್ತ ಸುತ್ತಿ
ದೂರ ನಿಲ್ಲುತ್ತದೆ
ಗಾಳಿ ಚದುರಬೇಕು
ಗಂಧ ಹರಡಬೇಕು
ಗೂಡು ತೂಗಬೇಕು
ಗಿರಿ ಗಹ್ವರಗಳು
ನಿಶ್ಚಲವಾಗಬೇಕು
ಅಂತಃಕರಣ ಶಕ್ತಿ
ದೀಪದ ಸಾಲಿನ ನಡುವೆ
ನಿಂತು ಬೆಳಗಬೇಕು
ಸಂಜೆಗೆ ಒಂದು ಹಣತೆಯ
ಬೆಳಕು ಪುಟಿದೇಳಬೇಕು
ನೆಲದ ಕವಿತೆಯೊಳಗೆ
ತಾನೇ ತಾನಾಗಿ
ಝರಿಯೊಂದು ಹರಿಯಬೇಕು
ತಾಳ ಲಯ ಸಂಗೀತದಾಚೆ
ಪುಟ್ಟ ದೋಣಿಯ ಪಯಣ
ಸಾಗಬೇಕು ಅನುದಿನ
ಹಸಿವೆಯ ಹರಿವು
ಸುಳಿಯಾಗಬೇಕು
ಪಟಪಟನೆ ಉರಿವ
ಕೆಂಡದಂಗಳದಿ
ಕಂಗಳ ಸುಳಿಮಿಂಚು
ಸಂಚು ರೂಪಿಸಿ
ಒಳಿತಿನ ಒಳನೋಟವ
ನುಡಿಸಿ ಕೈ ಹಿಡಿದು
ಅನುಸರಿಸಬೇಕು……

-ನಾಗರಾಜ ಬಿ ನಾಯ್ಕ. ಹುಬ್ಬಣಗೇರಿ.

