ಕಾವ್ಯ ಭಾಗವತ 27: ವರ್ಣಾಶ್ರಮ ಧರ್ಮ
27. ಸಪ್ತಮ ಸ್ಕಂದ – ಅಧ್ಯಾಯ – 4
ವರ್ಣಾಶ್ರಮ ಧರ್ಮ
ನಾರದರು ಧರ್ಮರಾಜನಿಗುಪದೇಶಿಸಿದ
ಮಾನವ ಧರ್ಮ, ಸಕಲ ಮಾನವ ಕುಲಕೆ
ದಾರಿದೀಪ
ಸತ್ಯ, ಭೂತದಯೆ, ಜಪಸ್ನಾನಾದಿಗಳಿಂದ
ದೇಹಶುದ್ಧಿ
ಉಚಿತ ಕಾಲ – ಋತುಕಾಲದಲಿ ಮಾತ್ರ
ಸ್ವಸ್ರ್ತೀಯ ಸಂಬಂಧ
ಮನಸ್ಸು, ಮಾತು, ಕಾಯಗಳಲಿ
ವ್ಯತ್ಯಾಸವಿಲ್ಲದ ಏಕರೂಪತೆ
ಚರಾಚರಸಮಸ್ತ ಭೂತಗಳಲಿ
ಜೀವಾತ್ಮದ ಇರುವಿಕೆ
ಮತ್ತವನ ಅಂತರ್ಯಾಮಿಯಾಗಿ
ಪರಮಾತ್ಮನಿಹನೆಂಬರಿವು
ತನ್ನೆಲ್ಲ ಕತೃತ್ವವ ಭಗವಂತಗೆ ಅರ್ಪಿಸಿ
ಅನನ್ಯ ಶರಣ್ಯನಾಗೆ
ಜನ್ಮಸಾರ್ಥಕ್ಯ ಪಡೆವುದು ನಿಶ್ಚಿತ
ಪತಿಯೇ ದೈವವೆಂದು ನಂಬಿ
ಅವನುಪಚರಿಸುತ
ಮನೆ, ಮನಗಳನ್ನಾಗಾಗ ಶುಭ್ರಗೊಳಿಸುತ
ಸತ್ಯ, ಪ್ರಿಯ, ಹಿತವಾದ ಮಾತುಗಳಿಂ
ಮಿತಭಾಷಿಣಿಯಾಗಿರ್ಪ ಸತಿ
ಪತಿ ಶುಶ್ರೂಷೆ ಪರಮಧರ್ಮವೆಂದು
ನಡೆದರೆ, ಸ್ರ್ತೀ ಗೃಹಲಕ್ಷ್ಮಿಯಾಗಿ
ನಿತ್ಯಸುಖಿಯಾಗುವಳು
ಬ್ರಹ್ಮಚಾರಿ ಗುರುಕುಲವಾಸಿ
ಸದಾ ವ್ಯಾಸಂಗ ನಿರತನಾಗಿ
ಗುರುಸೇವೆಯೇ ಪರಮಗುರಿಯಾಗಿಸಿ
ಜ್ಞಾನಾರ್ಜನೆ, ಶಕ್ತಿ ವರ್ಧಿಸಲು ಶ್ರಮಿಸಿ
ನಿಷ್ಠೆಯಿಂ ಬ್ರಹ್ಮಚರ್ಯಾಶ್ರಮ ಧರ್ಮವ ಪಾಲಿಸಿ
ಗುರುಕೃಪೆಗೆ ಪಾತ್ರನಾದವ ಧನ್ಯ
ಗ್ರಹಸ್ಥಾಶ್ರಮದಿ ಮೂರು
ಆಶ್ರಮ ಜೀವಗಳಿಗೂ
ಆಶ್ರಯ ನೀಡ್ಪ ಕಾಯಕ
ಅತಿಥಿ ಅಭ್ಯಾಗತ ಸೇವೆ
ಗುರುದೇವತಾರಾಧನೆ
ಷೋಡಶ ಕರ್ಮಾನುಷ್ಟಾನದಿಂ
ಸತ್ ಸಂತಾನವ ಪಡೆದು
ಪೋಷಿಪ ಗೃಹಸ್ಥ ಧರ್ಮ
ಸಕಲ ಧರ್ಮದಾಚರಣೆಗೆ
ಮೂಲಸ್ಥಾಯಿ
ಗೃಹಸ್ಥಾಶ್ರಮದಂತ್ಯದಲಿ,
ವೃದ್ಧಾಪ್ಯದಲಿ, ನಿಷ್ಕಾಮಿಯಾಗಿ
ಕಾಮಕ್ರೋಧಾದಿ ಅರಿಶಡ್ವರ್ಗಗಳ
ನಿಯಂತ್ರಿಸಿ, ಇಂದ್ರಿಯ ಪರ
ಮನಸ್ಸು, ಬುದ್ಧಿ, ಚಿತ್ತಾದಿಗಳ
ಪಳಗಿಸಿ, ಭಗವತ್ಪರವಾಗುವ ಪರಿ
ಸಾಧನೆಗೈದು
ಆತ್ಮಚಿಂತನಾ ಪರನಾಗಿ
ಸರ್ವೋತಮತ್ವವ ಧೃಡಪಡಿಸಿಕೊಂಡು
ನಿಸ್ಸಂಗವಾಗಿ ಲೋಕಕ್ಷೇಮ ಹಿತಸಾಧನೆಗೆ
ಭಗವಂತ ಧ್ಯಾನನಿರತ
ವಾನಪ್ರಸ್ಥಾನಶ್ರಮ
ಮನುಜನಂತಿಮ ವರ್ಣಾಶ್ರಮ ಧರ್ಮ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41752
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಬಹಳ ಕ್ರಿಸ್ಪ್ ಆಗಿದೆ
ಚೆನ್ನಾಗಿದೆ
ಎಂದಿನಂತೆ ಕಾವ್ಯಭಾಗವತ ಓದುಸಿಕೊಂಡು ಹೋಯಿತು..ವರ್ಣಾಶ್ರಮ ಧರ್ಮದ ಬಗ್ಗೆ ನೆನಪು ಮೂಡಿಸಿತು ಸಾರ್
ವರ್ಣಾಶ್ರಮ ಧರ್ಮದ ಸರಳ ಸುಂದರ ಅನಾವರಣ
ವರ್ಣಾಶ್ರಮ ಧರ್ಮ ಪಾಲನೆಯ ಕುರಿತು ಅರಿವನ್ನು ಉಂಟುಮಾಡಿದ ಕಾವ್ಯ ಭಾಗವತ ಸರಳ, ಸುಂದರ. ಧನ್ಯವಾದಗಳು ಸರ್.
ಚೆನ್ನಾಗಿದೆ ಸರ್ ವಂದನೆಗಳು