ಬದುಕಲ್ಲಿ ತುಂಬಿರಲು ಬೇಸರ
ಜೀವನ ಎನಿಸುವುದು ನಶ್ವರ
ಕಿರಿಕಿರಿಯು ಆಗುವುದು ಪ್ರತಿಕ್ಷಣ
ಮನದಿ ಕಾಡುವುದು ವಿಲಕ್ಷಣ
ಕುಳಿತಲ್ಲಿ ಕುಳಿತುಕೊಳ್ಳಲಾಗದ
ಚಡಪಡಿಕೆ ಗೊಂದಲದ ಗೂಡು
ಹತಾಶೆ ನಿರಾಸೆಗೆ ಸಿಲುಕುವುದು
ಹೇಳಲಾಗದು ಮನದ ಪಾಡು
ಯಾವೊಂದೂ ಮಾತು ರುಚಿಸದು
ಮೌನವಷ್ಟೇ ಆಗ ಹಿತವೆನಿಸುವುದು
ಸಿಟ್ಟಿನಿಂದ ಮನವು ಸಿಡಿಯುವುದು
ಆಕ್ರೋಶವು ಹೊರ ಹೊಮ್ಮುವುದು
ಶೂನ್ಯದತ್ತ ವಾಲುವುದು ಮನಸು
ಪ್ರತಿಯೊಂದಕ್ಕೂ ತೋರುವುದು
ನಿರುತ್ಸಾಹ ತುಂಬಿದ ಮುನಿಸು
ಯಾವುದರ ಮೇಲಿರದು ಪ್ರೀತಿ
ಎಲ್ಲರಿಂದ ದೂರ ಸರಿಯುವುದು
ಸುತ್ತಲೂ ಕತ್ತಲು ಕವಿದಂತೆನಿಸುವುದು
ಭರವಸೆಯ ಬೆಳಕು ಎಲ್ಲೂ ಕಾಣಿಸದು
ಜೀವನವೇ ಸಾಕು ಸಾಕೆನಿಸಿಬಿಡುವುದು
ಎಲ್ಲವೂ ಇಲ್ಲಿ ಕ್ಷಣಿಕ ಅರಿತರಿದೆ ಸುಖ
ಒಂದಿಷ್ಟು ಸಾಕು ಇದ್ದು ಹೋಗುವುದಕ್ಕೆ
ಶಾಶ್ವತವಾಗಿರದು ಯಾವುದೂ ಜೊತೆಗೆ
ಜೀವಿಸಬೇಕು ಸುಖ ದುಃಖಗಳ ಮರೆತು
ನಗುನಗುತಾ ಎಲ್ಲರೊಡನೆ ಸ್ನೇಹದಿಂದ ಬೆರೆತು
ನಾಗರಾಜ ಜಿ. ಎನ್. ಬಾಡ, ಕುಮಟ

