ಲಹರಿ

ಗಡ್ಡ : ಮುಖದ ಮೇಲಿನ ನಾಗರಿ – ‘ಕತೆ’ !

Share Button

ಗಡ್ಡ ಮೀಸೆಗಳನ್ನು ಕುರಿತು ಲೇಖನ ಬರೆಯಲು ಹೊರಟ ನನಗೆ ತಕ್ಷಣ ನೆನಪಾಗಿದ್ದು, ‘ಗಡ್ಡ ಎಳೆದವನಿಗೆ ಮಿಠಾಯಿ’ ಎಂಬ ಮಾಧ್ಯಮಿಕ ಶಾಲೆಯಲ್ಲಿದ್ದ ಪಾಠ! ಚಕ್ರವರ್ತಿಯ ಗಡ್ಡವನ್ನು ಹಿಡಿದು ಎಳೆದವನಿಗೆ ಯಾವ ಶಿಕ್ಷೆಯನ್ನು ಕೊಡಬೇಕೆಂದು ಅಕ್ಬರನ ಒಡ್ಡೋಲಗದಲ್ಲಿ ಚರ್ಚೆ ನಡೆಯುತ್ತಿರುವಾಗ ಬೀರಬಲ್ಲನೊಬ್ಬನೇ ಸರಿಯುತ್ತರ ಕೊಡುತ್ತಾನೆ. ಚಕ್ರವರ್ತಿಯ ಗಡ್ಡವನ್ನು ಎಳೆಯುವ ಧೈರ್ಯ ಇರುವುದು ರಾಜ-ಕುಮಾರನಿಗೆ ಮಾತ್ರ. ಹಾಗಾಗಿ ಅವನ ಬಾಯಿಗೆ ಮಿಠಾಯಿ ಹಾಕಬೇಕೆಂಬುದು ಆತನ ಜಾಣ್ಮೆಯ ತರ್ಕ! ಇರಲಿ. ಹೆಂಗಸರು ಗಂಡಸರ ಎಲ್ಲ ವಸ್ತ್ರ ವಿಭೂಷಣಗಳನ್ನೂ ಅನುಕರಿಸಿ ತಮ್ಮದನ್ನಾಗಿಕೊಂಡರು, ಗಡ್ಡಮೀಸೆಗಳನ್ನು ಹೊರತುಪಡಿಸಿ! ಏಕೆಂದರೆ ಇದು ನಿಸ್ಸಂಶಯವಾಗಿ ಪುರುಷರ ಚಿಹ್ನೆ, ಪುರುಷರಿಗಷ್ಟೇ ಗಡ್ಡ ಮೀಸೆಗಳು ಬೆಳೆಯುವುದು. ವಯಸಾದ ಕಾರಣಕ್ಕೋ ಹಾರ್ಮೋನುಗಳ ಅಸಮತೋಲನದಿಂದಲೋ ಕೆಲವೊಮ್ಮೆ ಅಪರೂಪಕ್ಕೆ ಹೆಂಗಸರಾದವರಿಗೂ ತೆಳುವಾಗಿ ಗಡ್ಡಮೀಸೆಗಳು ಕಾಣಿಸಿಕೊಳ್ಳುವುದುಂಟು. ಇದನ್ನು ಗುರುತಿಸಿ, ಚಿಕಿತ್ಸೆ ಮಾಡಿಸಿಕೊಳ್ಳುವರು. ಗಂಡಸರ ಮುಖದಲ್ಲಿ, ವಿಶೇಷವಾಗಿ ಗಲ್ಲ, ಗಲ್ಲದ ಮಧ್ಯಭಾಗ, ದವಡೆಯ ಹೊರಭಾಗದಲ್ಲಿ ಬೆಳೆವ ಕೇಶವನ್ನು ಗಡ್ಡವೆಂದು ಕರೆಯುತ್ತೇವೆ. ಗಂಡಸರಾದರೆಂಬ ಪ್ರೌಢಾವಸ್ಥೆಯ ಚೋದಕಗಳ ಪರಿಣಾಮವಿದು. ಜೀವವಿಕಾಸದ ಹಾದಿಯಲ್ಲಿ ಗೊರಿಲ್ಲಾಗಳ ಮೇಲಿರುವ ಕೂದಲಿನಂತೆ ಶರೀರದ ಮೇಲೆ ಸಂಪೂರ್ಣ ಕೇಶರಾಶಿ ಹೊಂದಿದ್ದ ಕಾಲದ ನೆಪಮಾತ್ರ ಸಂಕೇತ. ಜಗತ್ತಿನ ಹಲವು ಭಾಗಗಳ ಮನುಷ್ಯ ಪ್ರಭೇದಗಳಲ್ಲಿ ಈ ಗಡ್ಡಮೀಸೆಗಳು ಒಂದೇ ರೀತಿಯಲ್ಲಿ ಬೆಳೆಯುವುದಿಲ್ಲ. ಕೆಲವು ಭಾಗಗಳ ಮಂದಿಗೆ ದಟ್ಟ, ಕೆಲವರಿಗೆ ತೆಳು. ಹಾಗಾಗಿ ಇದು ಜೀವವಿಕಾಸವನ್ನೂ ವಂಶವನ್ನೂ ಆಧರಿಸಿರುವಂಥದು. ಅಷ್ಟೇ ಅಲ್ಲದೇ ಧಾರ್ಮಿಕ ಸಂಪ್ರದಾಯದ ಕಟ್ಟುಕಟ್ಟಳೆಗೂ ಇದು ಒಳಪಟ್ಟ ವಿಶೇಷ. ಕೆಲವು ಧರ್ಮಗಳಲ್ಲಿ ಗಂಡಸರಾದವರಿಗೆ ಪೂರ್ಣ ಗಡ್ಡವು ಅತ್ಯಗತ್ಯವೆಂಬ ಪರಿಗಣನೆ, ಕೆಲವರಲ್ಲಿ ಇದು ಪುರುಷತ್ವ ಪ್ರತೀಕ. ಕೆಲವೊಂದು ಸಂದರ್ಭದಲ್ಲಿ ಇದು ಅನಾಗರಿಕ, ಅಶುಚಿ ಮತ್ತು ಅಶಿಸ್ತಿನ ಸಂಕೇತ! ಯುವಕರಲ್ಲಿ ಇದು ಫ್ಯಾಷನ್ನಿನ ಒಂದು ವಿಧ; ಮುದುಕರಲ್ಲಿ ಅನಾಸಕ್ತಿಯ ದ್ಯೋತಕ. ಬುದ್ಧಿಜೀವಿಗಳೂ ದಾರ್ಶನಿಕರೂ ಸಂನ್ಯಾಸಿಗಳೂ ಆದವರಲ್ಲಿ ಗಡ್ಡವು ತಾತ್ತ್ವಿಕತೆಯ ರೂಪುರೇಖೆ! ಅಂತೂ ಗಡ್ಡಕ್ಕೂ ಇವೆಲ್ಲಕ್ಕೂ ಯಾವ ಸಂಬಂಧವಿಲ್ಲದಿದ್ದರೂ ಕಾಲ ಕಳೆದಂತೆಲ್ಲಾ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಕೊಟ್ಟು ಆ ಮೂಲಕ ಮಂದಿ ಮನಸನ್ನು ಅರ್ಥೈಸುವ ಪ್ರಯತ್ನ ಸಾಗಿದೆ. ಗಡ್ಡವಿದ್ದರೆ ಮಾತ್ರ ಪುರುಷರು ಎಂದೇನಲ್ಲ. ಪುರುಷರಾದವರಿಗೆ ಗಡ್ಡಮೀಸೆಗಳು ಬರುವುದು ಸಹಜ ಅಷ್ಟೇ. ಒಂದಂತೂ ನಿಜ. ಗಡ್ಡವೆಂಬುದು ಮನುಷ್ಯನ ದೇಹ, ಪುರುಷತ್ವ, ಪ್ರಕೃತಿ, ಧರ್ಮ, ಅಧ್ಯಾತ್ಮ, ಸಂಸ್ಕೃತಿ, ವಿಜ್ಞಾನ ಮತ್ತು ಆಧುನಿಕ ಫ್ಯಾಷನ್—ಇವೆಲ್ಲವೂ ಒಂದೇ ಮುಖದ ಮೇಲೆ ಬಂದು ಸೇರುವ ಒಂದು ವಿಶಿಷ್ಟ ವಿಷಯ. ಪ್ರಕೃತಿ, ಪುರುಷತನ, ಅಧ್ಯಾತ್ಮ ಮತ್ತು ಫ್ಯಾಷನ್ನಿನ ಭಾಗವಾಗಿ ಗಡ್ಡವನ್ನು ನಮ್ಮ ನಾಗರಿಕ ಸಮಾಜ ವ್ಯಾಖ್ಯಾನಿಸಿದೆ ಅಷ್ಟೇ.

ಮನುಷ್ಯನ ಮುಖವೆಂದರೆ ಪ್ರಕೃತಿ ಪ್ರತಿಕೃತಿ. ಕಣ್ಣು, ಕಿವಿ, ಮೂಗು, ತುಟಿ, ಕೆನ್ನೆ—ಪ್ರತಿಯೊಂದಕ್ಕೂ ತನ್ನದೇ ಆದ ಅರ್ಥವಿದೆ. ಪುರುಷನ ಮುಖದ ಮೇಲೆ ತನ್ನದೇ ಆದ ಕೋಟೆ ಕಟ್ಟಿಕೊಳ್ಳುವ ಗಡ್ಡ ಮಾತ್ರ ಸ್ವಾರಸ್ಯಕರ. ಕೆಲವರ ಮೊಗದಲಿ ಅದು ಮೃದುವಾದ ನೆರಳು; ಕೆಲವರಲಿ ದಟ್ಟವಾದ ಅರಣ್ಯ; ಇನ್ನು ಕೆಲವರಲಿ ಶಿಸ್ತಿನಿಂದ ಕತ್ತರಿಸಲ್ಪಟ್ಟ ಕಲಾಕೃತಿ; ಇನ್ನು ಹಲವರಲಿ ಅದು ಕಾಲದೊಂದಿಗೆ ಬೆಳೆದ ತಪಸ್ಸೇ ಸರಿ. ಗಡ್ಡವನ್ನು ನೋಡಿದಾಗ ಒಬ್ಬರಿಗೆ ಋಷಿ ನೆನಪಾಗಬಹುದು; ಮತ್ತೊಬ್ಬರಿಗೆ ವಿರಾಗಿ; ಬೇರೊಬ್ಬರಿಗೆ ವಿರಹಿ! ಇಂದಿನ ಯುವಕರಿಗಿದು ಫ್ಯಾಷನ್ ಮಾದರಿ. ಕೆಲವರಿಗೆ ಗಡ್ಡವೇ ಗಂಡಸುತನದ ಸಂಕೇತ; ಕೆಲವರಿಗೆ ಆಧ್ಯಾತ್ಮಿಕತೆಯ ಗುರುತು; ಇನ್ನೂ ಕೆಲವರಿಗೆ ಅದು ವ್ಯಕ್ತಿತ್ವದ ಸ್ವಾತಂತ್ರ್ಯದ ಘೋಷಣೆ. ವಸ್ತುನಿಷ್ಠವಾಗಿ ನೋಡಿದರೆ ಇದು ಕೇವಲ ಮುಖದ ಕೂದಲು. ಮತ್ತೊಂದು ದೃಷ್ಟಿಯಲ್ಲಿ ಪ್ರಕೃತಿಯ ಮುದ್ರೆ. ಸಾಮಾಜಿಕ ದೃಷ್ಟಿಯಲ್ಲಿ ಅದು ವ್ಯಕ್ತಿತ್ವದ ಸಂಕೇತ. ಧಾರ್ಮಿಕ ದೃಷ್ಟಿಯಲ್ಲಿ ಅದು ಆಚರಣೆ. ಸಾಂಸ್ಕೃತಿಕ ದೃಷ್ಟಿಯಲ್ಲಿ ಅದು ಪರಂಪರೆ. ಮನೋವೈಜ್ಞಾನಿಕ ದೃಷ್ಟಿಯಲ್ಲಿ ಅದು ಆತ್ಮಪ್ರತಿಮಾತ್ಮಕತೆಯ ಭಾಗ. ಫ್ಯಾಷನ್ ಲೋಕದಲ್ಲಿ ಅದು ಒಂದು ಶೈಲಿ. ಹೀಗಾಗಿ ಗಡ್ಡದ ಕಥೆ ಮನುಷ್ಯನ ಮುಖದಿಂದ ಆರಂಭವಾದರೂ, ಅದು ಬದುಕನ್ನು ವಿಶ್ಲೇಷಿಸುವ ಮಾನದಂಡವೆಂದು ಧಾರಾಳವಾಗಿ ಹೇಳಬಹುದು. ಗಡ್ಡದ ಪ್ರಮಾಣ ಎಲ್ಲ ಗಂಡಸರಲ್ಲೂ ಒಂದೇ ಇರುವುದಿಲ್ಲ. ವಂಶಪಾರಂಪರ್ಯ, ವಯಸ್ಸು, ಹಾರ್ಮೋನುಗಳ ಪ್ರಭಾವ, ಜನಾಂಗೀಯ ಮತ್ತು ವೈಯಕ್ತಿಕ ದೈಹಿಕ ವ್ಯತ್ಯಾಸಗಳು—ಇವೆಲ್ಲವೂ ಅದರ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತವೆ. ಆದ್ದರಿಂದ ದಟ್ಟವಾದ ಗಡ್ಡವಿರುವವನೇ ಹೆಚ್ಚು ಪುರುಷ, ಗಡ್ಡ ಕಡಿಮೆ ಇರುವವನು ಕಡಿಮೆ ಪುರುಷ ಎಂಬ ಕಲ್ಪನೆಗೆ ವೈಜ್ಞಾನಿಕ ಆಧಾರವಿಲ್ಲ. ಗಡ್ಡವು ಪುರುಷತ್ವದ ಒಂದು ದೃಶ್ಯ ಸಂಕೇತವಷ್ಟೇ; ಆದರೆ ಅದೇ ಪುರುಷತ್ವದ ಸಂಪೂರ್ಣ ಅಳತೆಗೋಲಲ್ಲ!

ಮಾನವನ ಉಗಮ ಮತ್ತು ಇತಿಹಾಸವನ್ನು ಗೊತ್ತು ಮಾಡಲು ಮನುಷ್ಯರ ಮುಖವೂ ಪರಿಮಾಣವೇ. ಪ್ರಾಚೀನ ಈಜಿಪ್ಟ್, ಮೆಸಪಟೋಮಿಯ, ಗ್ರೀಸ್, ರೋಮ್, ಮಧ್ಯಪ್ರಾಚ್ಯ, ಭಾರತ—ಬಹುತೇಕ ಎಲ್ಲ ನಾಗರಿಕತೆಗಳಲ್ಲೂ ಗಡ್ಡಕ್ಕೆ ಯಾವುದೋ ಒಂದು ಸಾಮಾಜಿಕ ಅಥವಾ ಸಾಂಸ್ಕೃತಿಕ ಅರ್ಥವಿತ್ತು. ಒಂದು ಕಾಲದಲ್ಲಿ ಗಡ್ಡವು ಅಧಿಕಾರದ ಸಂಕೇತವಾಗಿದ್ದರೆ, ಮತ್ತೊಂದು ಕಾಲದಲ್ಲಿ ಅದನ್ನು ನೀಟಾಗಿ ತೆಗೆಯುವ ಕ್ಷೌರವು ಶಿಸ್ತಿನ ಸಂಕೇತವಾಯಿತು. ಕೆಲ ಸಮಾಜಗಳಲ್ಲಿ ಗಡ್ಡವು ಪುರುಷಪ್ರಾಧಾನ್ಯ ಅಧಿಕಾರ ನಿಯಂತ್ರಣದ ಗುರುತೆನಿಸಿದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಸ್ವಚ್ಛವಾಗಿ ಬೋಳಿಸಿದ ಮುಖವೇ ನಾಗರಿಕತೆಯ ಲಕ್ಷಣವೆಂದು ಪರಿಗಣಿಸಲಾಯಿತು. ಇತಿಹಾಸದಲ್ಲಿ ಗಡ್ಡದ ಶೈಲಿಯೇ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಗುರುತಿನ ಭಾಗವಾದ ಸಂದರ್ಭಗಳೂ ಇವೆ. ಅಂದರೆ ಗಡ್ಡಕ್ಕೆ ಒಂದು ಸಾರ್ವತ್ರಿಕ ಅರ್ಥವಿಲ್ಲ. ಗಡ್ಡದ ಅರ್ಥವನ್ನು ಪ್ರಕೃತಿಗಿಂತ ಹೆಚ್ಚು ಸಮಾಜವೇ ರೂಪಿಸಿದೆ. ಒಂದು ಕಾಲದಲ್ಲಿ ಗಡ್ಡ ಇಟ್ಟವನು ಗೌರವಾನ್ವಿತ. ಇನ್ನೊಂದು ಕಾಲದಲ್ಲಿ ಬೋಳಿಸಿದವನು ಆಧುನಿಕ. ಒಂದು ದೇಶದಲ್ಲಿ ಗಡ್ಡ ಧಾರ್ಮಿಕ ಆಚರಣೆ; ಮತ್ತೊಂದು ದೇಶದಲ್ಲಿ ಅದು ಫ್ಯಾಷನ್. ಆದ್ದರಿಂದ ಗಡ್ಡದ ಇತಿಹಾಸವೆಂದರೆ ವಾಸ್ತವವಾಗಿ ಮನುಷ್ಯರು ತನ್ನ ವದನಾರವಿಂದಕ್ಕೆ ನೀಡಿದ ಅರ್ಥಗಳ ಇತಿಹಾಸವೇ ಸರಿ.

ಭಾರತೀಯ ಮನಸ್ಸಿನಲ್ಲಿ ಗಡ್ಡಕ್ಕೆ ಒಂದು ವಿಶೇಷ ಸ್ಥಾನವಿದೆ. ವೇದಕಾಲದ ಋಷಿಗಳನ್ನು, ತಪಸ್ವಿಗಳನ್ನು, ಮುನಿಗಳನ್ನು, ಯೋಗಿಗಳನ್ನು ಕಲ್ಪಿಸಿಕೊಳ್ಳುವಾಗ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಗಳಲ್ಲಿ ಉದ್ದ ಕೂದಲು, ಜಟೆ ಮತ್ತು ಗಡ್ಡ ಪ್ರಮುಖ ಲಕ್ಷಣಗಳಾಗಿವೆ. ಭಾರತೀಯ ಸಂಸ್ಕೃತಿಯ ದೃಶ್ಯಭಾಷೆಯಲ್ಲಿ ಗಡ್ಡವು ಸಂಸಾರದಿಂದ ದೂರ ಸರಿದ ಜೀವನದ ಒಂದು ಗುರುತಾಗಿಯೂ ರೂಪುಗೊಂಡಿದೆ. ಆದರಿಲ್ಲಿ ಒಂದು ಸೂಕ್ಷ್ಮವಾದ ವ್ಯತ್ಯಾಸವನ್ನು ಗಮನಿಸಬೇಕು. ಗಡ್ಡವಿದ್ದವರೆಲ್ಲಾ ಋಷಿಯಲ್ಲ; ಋಷಿಯ ಜೀವನದ ಸಂಕೇತವಾಗಿ ಗಡ್ಡವನ್ನು ಸಮಾಜವೇ ಕಲ್ಪಿಸಿಕೊಂಡಿದೆ. ಎಸ್‌ ವಿ ಪರಮೇಶ್ವಭಟ್ಟರು ‘ಏಳೆ ’ ಎಂಬ ಛಂದೋಪ್ರಕಾರದಲ್ಲಿ ಬರೆದ ಪದ್ಯವೊಂದಿದೆ: ‘ಗಡ್ಡ ಬಿಟ್ಟವರೆಲ್ಲ ದೊಡ್ಡವರೆನಬೇಡ; ಗಡ್ಡದ ಹೋತ ದೊಡ್ಡದೇ?’ ಎಂದು. ತಪಸ್ಸು, ವೈರಾಗ್ಯ, ಅರಣ್ಯವಾಸ, ದೇಹಾಲಂಕಾರದ ಮೇಲಿನ ನಿರಾಸಕ್ತಿ—ಇವುಗಳೊಂದಿಗೆ ಗಡ್ಡದ ಚಿತ್ರ ಬೆಸೆದುಕೊಂಡಿತು. ಆಯುರ್ವೇದದಲ್ಲಿ ದಿನಚರಿಯನ್ನು ಹೇಳುವಾಗ ಕೂದಲು, ಗಡ್ಡ ಮತ್ತು ಉಗುರುಗಳ ಆರೈಕೆ, ಅವುಗಳ ಕತ್ತರಿಸುವಿಕೆಯ ಉಲ್ಲೇಖಗಳಿವೆ. ಅಂದರೆ ಪ್ರಾಚೀನ ಭಾರತೀಯ ಜೀವನದಲ್ಲಿ ಮುಖಕ್ಷೌರಕ್ಕೂ ಮಹತ್ವ ಕೊಡಲಾಗಿತ್ತು.

ಋಷಿಯ ಗಡ್ಡವು ಅಶುಚಿತ್ವದ ಸಂಕೇತವಲ್ಲ; ದೈಹಿಕಾಲಂಕಾರದ ನಿರಾಸಕ್ತಿಯ ಸಂಕೇತವಾಗಿರಬಹುದು. ಸನ್ಯಾಸಿಯ ಜೀವನದ ಮೂಲತತ್ತ್ವವೇ ‘ನನ್ನದು’ ಎಂಬ ಭಾವನಿರಸನ. ದೇಹದ ಮೇಲಿನ ಅತಿಯಾದ ಆಸಕ್ತಿ, ಬಾಹ್ಯರೂಪದ ಕಾಳಜಿ, ಸಾಮಾಜಿಕ ಸ್ಥಾನಮಾನಗಳ ಮೇಲಿನ ನಂಟಿನಂಟು—ಇವನ್ನು ಮೀರಿ ಆತ್ಮಸಾಕ್ಷಾತ್ಕಾರದ ಕಡೆಗೆ ಸಾಗುವುದು ಸಂನ್ಯಾಸದ ಒಂದು ಆದರ್ಶ. ಸಾಮಾನ್ಯ ಮನುಷ್ಯರು ಕನ್ನಡಿಯ ಮುಂದೆ ನಿಂತು ತನ್ನ ಮುಖವನ್ನು ರೂಪಿಸಿಕೊಳ್ಳುತ್ತಾನೆ; ಸನ್ಯಾಸಿಗಳು ಕನ್ನಡಿ ನೋಡುವುದನ್ನೇ ಮರೆಯುತ್ತಾರೆ. ನನ್ನ ಮುಖ ಹೇಗಿರಬೇಕು? ಎಂಬ ಪ್ರಶ್ನೆಗೆ ಉತ್ತರವಾಗಿ ಒಬ್ಬ ಗಡ್ಡ ಬೆಳೆಸಬಹುದು. ಮತ್ತೊಬ್ಬನು ನನ್ನ ಮುಖ ಹೇಗಿದೆ ಎಂಬುದೇ ನನಗೆ ಮುಖ್ಯವಲ್ಲ ಎಂಬ ಮನೋಭಾವದಿಂದಲೂ ಗಡ್ಡ ಬೆಳೆಸಬಹುದು. ಇದು ಗಡ್ಡದ ನಿಗೂಢ ತಾತ್ತ್ವಿಕತೆ. ಆದರೆ ಎಲ್ಲಾ ಸಂನ್ಯಾಸಿಗಳೂ ಗಡ್ಡ ಇಟ್ಟುಕೊಳ್ಳಬೇಕು ಎಂಬ ಸಾರ್ವತ್ರಿಕ ಧಾರ್ಮಿಕ ನಿಯಮವಿಲ್ಲ. ವಿವಿಧ ಹಿಂದೂ ಪಂಥಗಳಲ್ಲಿ ದೇಹ ಮತ್ತು ಕೂದಲಿನ ಕುರಿತಂತಿರುವ ಆಚರಣೆಗಳು ವಿಭಿನ್ನವಾಗಿವೆ. ಕೆಲವು ಸಂನ್ಯಾಸ ಪರಂಪರೆಗಳಲ್ಲಿ ಜಟೆ ಮತ್ತು ಗಡ್ಡ ಸಹಜವಾಗಿ ಉಳಿಯುತ್ತವೆ; ಇತರ ಪರಂಪರೆಗಳಲ್ಲಿ ಕ್ಷೌರಕ್ಕೂ ಮಹತ್ವವಿದೆ. ಹೀಗಾಗಿ ಗಡ್ಡವೇ ಅಧ್ಯಾತ್ಮವಲ್ಲ! ಹಿಂದೂ ಬ್ರಾಹ್ಮಣ ಧಾರ್ಮಿಕ ಗುರುಗಳು ಕೇಶಮುಂಡನ ಮಾಡಿಸಿಕೊಂಡು, ಗಡ್ಡಮೀಸೆಗಳನ್ನು ತೆಗೆಯುವಲ್ಲಿ ಮಗ್ನರು. ಇಲ್ಲಿಯೇ ಗಮನಿಸಬೇಕಾದ ವಿಚಾರವೆಂದರೆ, ಗಡ್ಡ ಬಿಟ್ಟಿದ್ದಾರೆ ಎಂಬ ಜನಸಾಮಾನ್ಯರ ಮಾತು. ಇಂಥಲ್ಲಿ ಗಡ್ಡವನ್ನು ಇಟ್ಟುಕೊಂಡಿದ್ದಾರೆ, ತೆಗೆದಿಲ್ಲ ಎಂದರ್ಥ ಮಾಡಬೇಕು! ಇದನ್ನೇ ಚಲನಚಿತ್ರ ಕಲಾವಿದೆಯಾದ ಸುಹಾಸಿನಿಯವರು ಸದ್ಗುರು ಜಗ್ಗಿ ವಾಸುದೇವ್‌ ಅವರ ಸಂದರ್ಶನ ಮಾಡುವಾಗ ಕೇಳಿದರು. ಆಗ ಅವರು, ‘ಗಂಡಸರಾದವರಿಗೆ ಸಹಜವಾಗಿ ಗಡ್ಡ ಬರುತ್ತದೆ, ನಾನು ಇಟ್ಕೊಂಡಿದ್ದೇನೆ. ತೆಗೆದವರನ್ನು ಕೇಳಿ’ ಎಂದು ನಕ್ಕರು. ಆದರೂ ಆಧ್ಯಾತ್ಮಿಕ ಸಾಧನೆಯ ಪಥಿಕರು ಯಾಕೆ ಗಡ್ಡ ಇಟ್ಟುಕೊಳ್ಳುತ್ತಾರೆ? ಎಂಬುದಕ್ಕೆ ನೇರ ಉತ್ತರ ನೀಡಲಿಲ್ಲ. ಕುವೆಂಪು ವಿರಚಿತ ಮಲೆಗಳಲ್ಲಿ ಮದುಮಗಳು ಮಹಾಕಾದಂಬರಿಯಲ್ಲಿ ಗಡ್ಡದಯ್ಯ ಎಂದೇ ಹೆಸರಾದ ಪಾತ್ರವೊಂದರ ಪರಿಣಾಮವು ದೀರ್ಘವೂ ನಿಗೂಢವೂ ಆಗಿದೆ.

ಸಿಖ್ ಪರಂಪರೆಯಲ್ಲಿ ಕೂದಲನ್ನು ಕತ್ತರಿಸದೆ ಉಳಿಸುವುದು ‘ಕೇಶ್’ ಎಂಬ ಪ್ರಮುಖ ಧಾರ್ಮಿಕ ಆಚರಣೆಯ ಭಾಗ. ಯಹೂದಿ ಪರಂಪರೆಯಲ್ಲಿಯೂ ಗಡ್ಡದ ಕುರಿತ ಧಾರ್ಮಿಕ ನಿಯಮಗಳ ಇತಿಹಾಸವಿದೆ. ಇಸ್ಲಾಮಿಕ್ ಪರಂಪರೆಯ ವಿವಿಧ ಪಂಥಗಳಲ್ಲಿಯೂ ಗಡ್ಡಕ್ಕೆ ಮಹತ್ವ ನೀಡಲಾಗಿದೆ. ಭಾರತದಲ್ಲಿನ ಮುಸ್ಲಿಂ ಪುರುಷರಲ್ಲಿಯೂ ಗಡ್ಡದ ಪ್ರಮಾಣ ಗಮನಾರ್ಹವಾಗಿದೆ. ಇದರಿಂದ ಒಂದು ವಿಶಾಲವಾದ ತತ್ತ್ವ ಹೊರ ಹೊಮ್ಮುತ್ತದೆ: ಮನುಷ್ಯನು ತನ್ನ ದೇಹವನ್ನು ತಾನೇ ರೂಪಿಸಿಕೊಳ್ಳಬೇಕೋ ಅಥವಾ ಪ್ರಕೃತಿ ಕೊಟ್ಟ ರೂಪವನ್ನು ಗೌರವಿಸಬೇಕೋ? ಇದೊಂದು ಆತ್ಮಗತ ಪ್ರಶ್ನೆ. ಅವರವರ ಆಸಕ್ತಿ, ಆಲೋಚನೆ ಹಾಗೂ ಬದುಕನ್ನು ಕಾಣುವ ದೃಷ್ಟಿಗಳಿಂದಾಗಿ ಉತ್ತರಗಳೂ ಬೇರೆ ಬೇರೆ.

ಅಂದರೆ ಪ್ರಕೃತಿಯು ಗಡ್ಡವನ್ನು ಕೊಟ್ಟಿರುವುದಕ್ಕೆ ಕೆಲವು ಕಾರ್ಯಾತ್ಮಕ ಕಾರಣಗಳಿರಬಹುದು; ಆದರೆ ಗಡ್ಡದ ಪ್ರತಿಯೊಂದು ಕೂದಲಿಗೂ ನಿರ್ದಿಷ್ಟ ವೈಜ್ಞಾನಿಕ ಉದ್ದೇಶವಿದೆ ಎನ್ನುವುದು ಅತಿರಂಜಿತ ಮಾತು. ಗಡ್ಡವು ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಿಸುತ್ತದೆಯೇ? ಎಂದು ಕೇಳಿಕೊಂಡರೆ: ಕೂದಲು ಸಾಮಾನ್ಯವಾಗಿ ದೇಹದ ಕೆಲವು ಭಾಗಗಳನ್ನು ಪರಿಸರದ ಪ್ರಭಾವಗಳಿಂದ ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಮುಖದ ಗಡ್ಡವೂ ಕೆನ್ನೆ, ದವಡೆ ಮತ್ತು ತುಟಿಯ ಸುತ್ತಲಿನ ಚರ್ಮವನ್ನು ಸೂರ್ಯನ ಬೆಳಕು ಮತ್ತು ಪರಿಸರದ ಕೆಲವು ನೇರ ಪರಿಣಾಮಗಳಿಂದ ಸ್ವಲ್ಪ ಮಟ್ಟಿಗೆ ರಕ್ಷಿಸಬಹುದು ಆದರೆ ಗಡ್ಡವನ್ನು ಸನ್‌ಸ್ಕ್ರೀನ್‌ಗೆ ಪರ್ಯಾಯವೆಂದು ಪರಿಗಣಿಸುವುದು ಸರಿಯಾಗದು. ಒಂದಂತೂ ನಿಜ. ಏನೆಂದರೆ, ಕ್ಷೌರದಿಂದ ಉಂಟಾಗುವ ಕೆಲವೊಂದು ಚರ್ಮದ ಕಿರಿಕಿರಿ ಮತ್ತು ಒರಟುತನ ತಪ್ಪಿಸಿಕೊಳ್ಳಲು ಗಡ್ಡ ಬಿಡುವುದು ಸಹಾಯಕ. ಜೊತೆಗೆ ಸಮಯ, ಶ್ರಮದ ಉಳಿತಾಯವೂ! ಆದರೆ ಹಲವರಲ್ಲಿರುವ ಭಾವನೆಯೆಂದರೆ, ಗಡ್ಡ ತೆಗೆಯುವುದು ಡೀಸೆನ್ಸಿಯ ಲಕ್ಷಣ ಎಂಬುದು. ಎಲ್ಲರಿಗೂ ಸಮರ್ಪಕವಾಗಿ ಗಡ್ಡ ಬರುವುದಿಲ್ಲವೆಂಬುದು ಎಷ್ಟು ಸರಿಯೋ ಹಾಗೆಯೇ ಎಲ್ಲರೂ ಗಡ್ಡ ಇಟ್ಟುಕೊಳ್ಳುವುದು ಸಹ ಚೆಂದ ಕಾಣದು. ಇದು ಆಯಾಯ ಮುಖಲಕ್ಷಣದ ಮೇಲೆ ಅವಲಂಬಿತ. ಸದಾ ಗಡ್ಡ ಇಟ್ಟುಕೊಂಡವರು ಒಮ್ಮೊಮ್ಮೆ ಪೂರ್ಣ ಮುಖಕ್ಷೌರ ಮಾಡಿದಾಗ ಸ್ವತಃ ಅವರಿಗೇ ಅಪರಿಚಿತರಂತೆ ಭಾಸವಾಗುವುದು ಸುಳ್ಳಲ್ಲ! ಅಷ್ಟರಮಟ್ಟಿಗೆ ಗಡ್ಡದಿಂದಲೇ ಗುರುತಾಗಿರುತ್ತಾರೆ. ಗಡ್ಡ ಇಟ್ಟುಕೊಳ್ಳುವುದರಿಂದ ಕೆಲವೊಂದು ತೊಂದರೆಗಳೂ ಉಂಟು. ಚರ್ಮದಿಂದ ಒಸರುವ ಜಿಡ್ಡು, ಬೆವರು, ಆಹಾರದ ಕಣ ಹೀಗೆ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಹಲವು ಸೂಕ್ಷ್ಮಜೀವಿಗಳು ಗಡ್ಡದಲ್ಲೇ ಉಳಿದು ಸೋಂಕುಂಟಾಗಿ, ಗುಳ್ಳೆಯಾಗಿ ಗಾಯವಾಗಿ, ಅದರ ಕಲೆ ಉಳಿದು ಬಿಡುವ ಸಾಧ್ಯತೆಯೂ ಇದೆ. ಮುಖವು ಎಷ್ಟು ಸೂಕ್ಷ್ಮವೆಂದರೆ, ಶುಚಿಗೊಳಿಸುವ ಭರದಲ್ಲಿ ಉಜ್ಜುವ ತಿಕ್ಕುವ ಕ್ರಿಯೆಯಿಂದ ಸಹ ಕೂದಲ ಚೂಪುತುದಿ ಕೆನ್ನೆಗೆ ತಾಗಿ ಗೀರುಗಳಾಗುವ ಸಂಭವವಿದೆ. ಹಾಗಾಗಿ ಗಡ್ಡವನ್ನು ಇಟ್ಟುಕೊಂಡರೆ ಸಾಲದು; ಅದರ ಆರೈಕೆಯನ್ನೂ ನೋಡಿಕೊಳ್ಳಬೇಕು. ಗಡ್ಡದ ಆರೈಕೆಯೇ ಬಹು ದೊಡ್ಡ ಜಗತ್ತು. ಹೆಂಗಸರ ಪಾಲಿನ ಸೌಂದರ್ಯವರ್ಧಕಗಳಿರುವಂತೆ, ಗಂಡಸರ ಗಡ್ಡಕೂ ಹಲವು ಬಗೆಯ ತೈಲ, ಟ್ರಿಮ್ಮರ್‌ಗಳು, ಬಾಚಣಿಗೆಗಳು ಇವೆ. ಕೆಲವರಿಗೆ ಗಡ್ಡ ಬಿಡಲು ಆಸೆ, ಆದರೆ ಅವರಿಗೆ ಒತ್ತೊತ್ತಾಗಿ ಮತ್ತು ಸಮರ್ಪಕವಾಗಿ ಗಡ್ಡ ಬೆಳೆಯುವುದಿಲ್ಲ. ಅಂಥವರು ಭ್ರಮಾಧೀನರಾಗಿ ಹಲವು ಬಗೆಯ ಲೋಶನುಗಳ ಮೊರೆ ಹೋಗುವುದುಂಟು. ಗಡ್ಡ, ಅರೆಗಡ್ಡ, ಮೀಸೆರಹಿತ ಗಡ್ಡ ಹೀಗೆ ಪಟ್ಟಿ ಮಾಡಿದರೆ ಇದೇ ಇನ್ನೊಂದು ಮೀಮಾಂಸೆಯಾದೀತು! ಕೆಲವರು ಗಲ್ಲದಲ್ಲಿ ಬೆಳೆದ ಗಡ್ಡವನ್ನು ತೆಗೆದು ತುಟಿಯ ಕೆಳಗಿನ ಗಡ್ಡವನಷ್ಟೇ ಇಟ್ಟುಕೊಳ್ಳುವುದುಂಟು. ಇದನ್ನು ಫ್ರೆಂಚ್‌ ಸ್ಟೈಲ್‌ ಎನ್ನುವರು. ಭಾರತದ ವಿದೇಶಾಂಗ ಮಂತ್ರಿಯಾಗಿದ್ದ ಇಂದ್ರಕುಮಾರ್‌ ಗುಜ್ರಾಲ್ ಅವರಿಂದ ಇದು ಪ್ರಸಿದ್ಧಿ ಪಡೆಯಿತು. ಹೋತದ ಗಡ್ಡ ಎಂತಲೂ ಆಡಿಕೊಳ್ಳುವರು. ಇಂಥ ಗಡ್ಡಕ್ಕೊಂದು ತಾರ್ಕಿಕ ಕಾರಣವಿದೆ. ಗಲ್ಲದ ಅಕ್ಕಪಕ್ಕ ಬೆಳೆವ ಕೇಶಕ್ಕಿಂತ ಕೆಳದುಟಿಯ ಕೆಳಗೆ ಬೆಳೆವ ಗಡ್ಡವು ಒರಟು. ಆದರೆ ಆ ಭಾಗದ ಚರ್ಮವು ಮೃದು. ಕ್ಷೌರ ಮಾಡುವುದರಿಂದ ಆ ಭಾಗವು ಇನ್ನಷ್ಟು ಬಿರುಸಾಗುವುದರಿಂದ ಇಂಥ ಹೋತದ ಗಡ್ಡವು ಮುನ್ನೆಲೆಗೆ ಬಂತು. ಇದರಿಂದ ಹೊಸ ವಿನ್ಯಾಸವೂ ಲಭಿಸಿದಂತಾಯಿತು; ಅಧರದ ಕೆಳಗಿನ ಚರ್ಮವನ್ನು ರಕ್ಷಿಸಿದಂತೆಯೂ ಆಯಿತು! ಗಡ್ಡಕ್ಕೂ ಸೋಂಬೇರಿತನಕ್ಕೂ ಎಲ್ಲಿಲ್ಲದ ನಂಟು. ಪ್ರತಿದಿನವೂ ಯಾರು ಶೇವ್‌ ಮಾಡುತ್ತಾರೆ? ಎಂಬ ಧೋರಣೆಯ ಗಂಡಸರೇ ಅನೇಕ. (ನಾನೂ ಈ ಕೆಟಗರಿಯವನೇ!) ಹಲವರ ಮುಖದಾಕೃತಿಗೆ ಮುಖದ ಮೇಲಿನ ಗಡ್ಡವು ಹೊಂದಿಕೆಯಾಗುವುದಿಲ್ಲ. ಇದನ್ನು ಅವರೇ ಪ್ರಯೋಗಾತ್ಮಕವಾಗಿ ಕಂಡುಕೊಳ್ಳಬೇಕು. ಗಡ್ಡ ಬಿಟ್ಟರೂ ಆಗಿಂದಾಗ್ಗೆ ಟ್ರಿಮ್‌ ಮಾಡುತ್ತಿರಬೇಕು. ಇಲ್ಲದಿದ್ದರೆ ಅವರ ಬೇಜವಾಬ್ದಾರಿ ಹಾಗೂ ಆಲಸ್ಯತನಗಳು ಎಲ್ಲರಿಗೂ ಗೊತ್ತಾಗುವಂತಾಗುತ್ತದೆ. ಗಡ್ಡದಿಂದ ಇನ್ನೊಂದು ರೀತಿಯ ಪ್ರಯೋಜನವೂ ಉಂಟು. ಮುಖದ ಮೇಲಿನ ಕಲೆಗಳು, ಗಾಯದ ಗುರುತುಗಳು ಇತ್ಯಾದಿಗಳಿದ್ದಾಗ ಹಲವರು ಗಡ್ಡ ಬೆಳೆಸಿ, ಅವನ್ನು ಮುಚ್ಚುವ ಸಾಹಸವನ್ನೂ ಮಾಡುತ್ತಾರೆ.

ಯುವಕನೊಬ್ಬನ ಮುಖದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಗಡ್ಡ ಮೀಸೆಗಳು ಅವರ ಬಾಲ್ಯ ಮುಗಿದ ಮತ್ತು ಯೌವನಾರಂಭವಾದದ್ದರ ಸಂಕೇತ. ನಂತರ ಅದೇ ಗಡ್ಡವು ವಯಸ್ಕನ ಚಹರೆಯಾಗುತ್ತದೆ. ಇನ್ನಷ್ಟು ಬೆಳೆಸಿಕೊಂಡಾಗ ಅದು ಜ್ಞಾನದ ಸಂಕೇತವೂ ಆಗಬಹುದು; ಬಂಡಾಯದ ಸಂಕೇತವೂ ಆಗಿರಬಹುದು. ಅಷ್ಟೇ ಏಕೆ, ಭಕ್ತಿಯ ದ್ಯೋತಕವೂ ಆಗಿರಬಹುದು! ಒಂದು ಗಡ್ಡ, ಹಲವು ಅರ್ಥಛಾಯೆ. ನಮ್ಮ ಪುರಾಣ, ಪುಣ್ಯಕತೆ, ಚಿತ್ರಕಲೆ, ಜನಪದರ ಕಲ್ಪನೆಗಳಲ್ಲಿ ಋಷಿಮುನಿಗಳ ಮುಖವನ್ನು ದೀರ್ಘ ಗಡ್ಡದೊಂದಿಗೆ ಚಿತ್ರಿಸುವುದು ಸಾಮಾನ್ಯ. ಅಂದರೆ ಗಡ್ಡವು ಕಾಲದೊಂದಿಗೆ ಬೆಳೆದ ಚಹರೆ. ಅವರವರು ಇಟ್ಟುಕೊಂಡ ಗಡ್ಡದಲ್ಲಿ ನಾವೇನನ್ನು ನೋಡುತ್ತೇವೆ? ಯಾವ ಭಾವನೆಯನ್ನು ಹುಡುಕುತ್ತೇವೆ? ಎಂಬುದು ನಮ್ಮಂತರಾಳಕ್ಕೆ ಬಿಟ್ಟ ವಿಚಾರ. ಒಬ್ಬರಿಗೆ ನಿಜದ ಯೋಗಿ ಕಾಣಿಸಬಹುದು; ನಂಬಿಕೆ ಇಲ್ಲದವರಿಗೆ ಠಕ್ಕರೆಂದೆನಿಸಬಹುದು. ಇದು ಗಡ್ಡದ ತಪ್ಪಲ್ಲ; ನೋಡುವ ಕಂಗಳ ಮತ್ತು ಭಾವಿಸುವ ಮನದ ಇಂಗಿತ. ಅಂದರೆ ಎಲ್ಲರಿಗೂ ಗಡ್ಡವು ವೈರಾಗ್ಯವೆಂದೇ ಅನಿಸಬೇಕಿಲ್ಲ. ಗಡ್ಡವಿದ್ದ ಮಾತ್ರಕೇ ಜ್ಞಾನಿಯಾಗುವುದಿಲ್ಲ. ಗಡ್ಡವಿಲ್ಲದವನು ಜ್ಞಾನಹೀನನೂ ಅಲ್ಲ. ಜ್ಞಾನವು ಮಿದುಳಿನ ಬುದ್ಧಿಶಕ್ತಿ; ಗಡ್ಡವು ಮುಖದ ಮೇಲಿನ ರೂಹು! ಇವೆರಡರ ನಡುವೆ ಸಂಬಂಧವನ್ನು ಕಟ್ಟಿದ್ದು ಮನುಷ್ಯನ ಕಲ್ಪನೆ. ಸಂನ್ಯಾಸಿಯ ಗಡ್ಡ ಮತ್ತು ಸಾಮಾನ್ಯ ಮನುಷ್ಯನ ಗಡ್ಡದ ವಿಚಾರಕ್ಕೆ ಬಂದರೆ, ಸಾಮಾನ್ಯ ಮನುಷ್ಯ ಗಡ್ಡವನ್ನು ರೂಪಿಸುತ್ತಾನೆ. ಸನ್ಯಾಸಿಯು ಗಡ್ಡವನ್ನು ರೂಪಿಸದೆ ಬಿಡಬಹುದು. ಒಬ್ಬನಿಗೆ ಅದು ಶೈಲಿ. ಇನ್ನೊಬ್ಬನಿಗೆ ಅದು ನಿರ್ಲಿಪ್ತತೆ. ಒಬ್ಬನಿಗೆ ಅದು ತನ್ನನ್ನು ಜಗತ್ತಿಗೆ ಹೇಗೆ ತೋರಿಸಿಕೊಳ್ಳಬೇಕು ಎಂಬ ಪ್ರಶ್ನೆ. ಇನ್ನೊಬ್ಬನಿಗೆ ಜಗತ್ತು ತನ್ನನ್ನು ಹೇಗೆ ನೋಡುತ್ತದೆ ಎಂಬ ಪ್ರಶ್ನೆಯೇ ಅಪ್ರಸ್ತುತ. ಹೀಗಾಗಿ ಒಂದೇ ಗಡ್ಡವು ಎರಡು ವಿರುದ್ಧ ತತ್ತ್ವಗಳನ್ನು ಹೊತ್ತುಕೊಳ್ಳಬಲ್ಲದು: ಅಹಂ ಮತ್ತು ನಿರಹಂ. ‘ನಾನು ಹೀಗೇ ಕಾಣಬೇಕು’ ಎನ್ನುವ ಸ್ವಪ್ರತೀಕದ ಗಡ್ಡವೂ ಇರಬಹುದು. ‘ನಾನು ಹೇಗೆ ಕಾಣುತ್ತೇನೆ ಎಂಬುದು ನನಗೆ ಮುಖ್ಯವಲ್ಲ’ ಎನ್ನುವ ವೈರಾಗ್ಯದ ಗಡ್ಡವೂ ಇರಬಹುದು. ಈಗ ಮತ್ತೆ ಯುವಕರು ಗಡ್ಡ ಇಟ್ಟುಕೊಳ್ಳುವಲ್ಲಿ ಆಸಕ್ತರಾಗಿದ್ದಾರೆ. ಒಂದು ಕಾಲದಲ್ಲಿ ಸ್ವಚ್ಛವಾಗಿ ಬೋಳಿಸಿದ ಮುಖವೇ ವಿದ್ಯಾವಂತ, ಆಧುನಿಕ ಮತ್ತು ಶಿಸ್ತಿನ ಸಂಕೇತವೆಂದು ಪರಿಗಣಿಸಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. Trimmed beard, stubble, designer beard, full beard, French beard, goatee—ಗಡ್ಡವೇ ಒಂದು ಫ್ಯಾಷನ್ ಉದ್ಯಮವಾಗಿ ಬೆಳೆದಿದೆ. ಸಿನಿಮಾ ನಟರು, ಕ್ರೀಡಾಪಟುಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ಫ್ಯಾಷನ್ ಮಾದರಿಗಳ ನಿರ್ಮಾಪಕರು ಈ ಪ್ರವೃತ್ತಿಯನ್ನು ಮತ್ತಷ್ಟು ಬಲಪಡಿಸಿದ್ದಾರೆ.

ಇಂದಿನ ಯುವಕರ ಗಡ್ಡದ ಹಿಂದೆ ಹಲವಾರು ಕಾರಣಗಳಿರಬಹುದು: ಫ್ಯಾಷನ್, ಸ್ವತಂತ್ರ ವ್ಯಕ್ತಿತ್ವ, ಪುರುಷತ್ವದ ಹೊಸ ಕಲ್ಪನೆ, ಸಿನಿಮಾ ಪ್ರಭಾವ, ಸಾಮಾಜಿಕ ಮಾಧ್ಯಮ, ವಯಸ್ಕನಂತೆ ಕಾಣಬೇಕೆಂಬ ಆಸೆ, ಮುಖದ ಆಕಾರವನ್ನು ಬದಲಿಸಿದಂತೆ ಕಾಣಿಸುವ ಬಯಕೆ, ತನ್ನದೇ ಆದ ಶೈಲಿಯನ್ನು ರೂಪಿಸಿಕೊಳ್ಳುವ ಮನೋಭಾವ. ಇಂಥಲ್ಲಿ ಗಡ್ಡವು ಧಾರ್ಮಿಕತೆಯಿಂದ ಹೊರಬಂದು ವೈಯಕ್ತಿಕ ಬ್ರ್ಯಾಂಡ್ ಆಗಿಬಿಟ್ಟಿದೆ. ಹಿಂದೆ ಸಂನ್ಯಾಸಿಯ ಗಡ್ಡ ಅವನ ಗುರುತು. ಇಂದು ಯುವಕನ ಗಡ್ಡ ಅವನ ಸಾಮಾಜಿಕ ಮಾಧ್ಯಮದ ಗುರುತು! ಗಡ್ಡವು ಫ್ಯಾಷನ್ನೋ? ವ್ಯಕ್ತಿತ್ವವೋ? ಎಂದು ಕೇಳುವುದಾದರೆ, ಬರು ಬರುತ್ತಾ ಮನುಷ್ಯರು ತಮ್ಮ ದೇಹವನ್ನೇ ಭಾಷೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಬಟ್ಟೆ ಒಂದು ಭಾಷೆ, ಕೂದಲು ಒಂದು ಭಾಷೆ ಹಾಗೆಯೇ ಗಡ್ಡವೂ! ಗಡ್ಡವು ಪ್ರಕೃತಿಯ ಕೊಡುಗೆ; ಅದಕ್ಕೆ ಅರ್ಥ ನೀಡಿದ್ದು ನಾಗರಿಕ ಸಂಸ್ಕೃತಿ ಎಂದು ಹೇಳಬಹುದು. ಹಿಂದೆ, ಭಗ್ನಪ್ರೇಮಿಗಳೂ ತಂದೆಯಾಗುತ್ತೇನೆಂಬ ಸುದ್ದಿ ತಿಳಿದ ಮೇಲೆ ಗಡ್ಡ ಬೆಳೆಸುವ ಪುರುಷರೂ ದೈವಕ್ಕೆ ಹರಕೆ ಹೊತ್ತ ಭಕ್ತರೂ ಗಡ್ಡವನ್ನು ಬೆಳೆಸಿಕೊಳ್ಳುತ್ತಿದ್ದರು. ಈಗ ಹಾಗಲ್ಲ.

ಗಡ್ಡವು ಒಂದು ಬಗೆಯ ಬಂಡಾಯವೇ! ಸ್ವಾಭಿಮಾನ, ಅಹಂಕಾರ ಮತ್ತು ಆತ್ಮವಿಶ್ವಾಸಗಳು ಬೆರೆತ ಬದುಕಿನ ಸಂಕೇತವಾಗಿದೆ. ಆದರೆ ಬಂಡಾಯವೂ ಫ್ಯಾಷನ್‌ ಆದಾಗ ವ್ಯಕ್ತಿತ್ವ ಕುಸಿಯುತ್ತದೆ. ಗಡ್ಡವೇ ಬಂಡಾಯವಲ್ಲ! ಇಷ್ಟಕೂ ಬಂಡಾಯವೆಲ್ಲಾ ಅರ್ಥಪೂರ್ಣವೂ ಅಲ್ಲ, ಸ್ವಾರ್ಥರಹಿತವೂ ಅಲ್ಲ! ಆದರೆ ಯುವಕರು ಗಡ್ಡ ಬೆಳೆಸಿದರೆ ಫ್ಯಾಷನ್‌ ಎಂತಲೋ ವ್ಯವಸ್ಥೆಯನ್ನು ಪ್ರಶ್ನಿಸುವವರು ಎಂತಲೋ ಭಾವಿಸುವ ನಮ್ಮ ಸಮಾಜದ ಮಂದಿಯು ವಯಸಾದವರು ಗಡ್ಡವನ್ನು ತೆಗೆಯದೇ ಇದ್ದಾಗ ವೈರಾಗ್ಯ, ನಿರಾಸಕ್ತಿ, ಸೋಮಾರಿತನವೆಂದು ವ್ಯಾಖ್ಯಾನಿಸುವರು. ಇಷ್ಟಕೂ ಇದೊಂದು ಶರೀರದ ಬಾಹ್ಯ ಲಕ್ಷಣ. ವಿಪರೀತ ಮಹತ್ವ ಕೊಡುವುದರಲ್ಲಿ ಅರ್ಥವಿಲ್ಲ ಎಂಬ ಅನಿಸಿಕೆಯೂ ಇದೆ. ಜೇಡರ ದಾಸಿಮಯ್ಯ ಎಂಬ ವಚನಕಾರರು ತಮ್ಮೊಂದು ವಚನದಲ್ಲಿ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಎಂದು ಸ್ಥಿರೀಕರಿಸಲು ‘ಮೊಲೆ ಮೂಡಿ ಬಂದಡೆ ಹೆಣ್ಣೆಂಬರು; ಗಡ್ಡ ಮೀಸೆ ಬಂದಡೆ ಗಂಡೆಂಬರು’ ಎಂದೇ ಬರೆದಿದ್ದಾರೆ. ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯಲ್ಲಿ ಶರೀರದ ಬಾಹ್ಯರೂಪಗಳಿಗೆ ಮಹತ್ವವಿಲ್ಲ ಎಂದೇ ಅರ್ಥ. ಆತ್ಮಕ್ಕೆ ಇದಾವುದರ ಹಂಗೂ ಇಲ್ಲ. ಅದೊಂದು ಲಿಂಗಾತೀತ ಅಸ್ತಿತ್ವ; ದೇಹಶಾಸ್ತ್ರವಲ್ಲ. ಬರೀ ಗಡ್ಡ ಬೆಳೆಸಿಕೊಂಡರೇನುಪಯೋಗ? ಜ್ಞಾನ ಬೆಳೆಯುವುದೇ? ಎಂದು ಸೊಡ್ಡಳ ಬಾಚರಸ ಶರಣರು ತಮ್ಮೊಂದು ವಚನದಲ್ಲಿ ಪ್ರಶ್ನಿಸುತ್ತಾರೆ. ‘ಮಂಡೆ ಬೋಳಾದಡೇನು? ಮನ ಬೋಳಾಗದನ್ನಕ್ಕರ’ ಎಂಬುದು ಶಿವಶರಣರ ನೇರ ಮಾತು. ಗಡ್ಡ, ಮೀಸೆ, ತಲೆಗೂದಲನ್ನು ತೆಗೆದು ನಾನು ಖಾಲಿಯಾದೆ ಎಂದುಲಿಯಬಾರದು; ಮನಸನ್ನು ಖಾಲಿ ಮಾಡಿಕೊಳ್ಳಬೇಕು. ಇದು ಕಷ್ಟ. ಈ ಆಚರಣೆಯ ಹಿಂದೆ ಇದೇ ಅರ್ಥ ಇರುವುದು. ಆದರೆ ನಾವು ಕೇವಲ ವಿಚಾರವನ್ನು ಆಚಾರದ ಹಂತದಲ್ಲಷ್ಟೇ ನಿಲ್ಲಿಸಿ ಬಿಟ್ಟಿದ್ದೇವೆ. ‘ಚರುಮವ ತೊಳೆದರೆ ಕರುಮವು ಹೋದೀತೇ?’ ಎಂದು ಕೇಳುತ್ತಾರೆ ದಾಸರು. ಅಂದರೆ ನಮ್ಮ ಆಚರಣೆಗಳು ಕೇವಲ ಸಂಕೇತ, ನಿಜವಾಗಿಯೂ ಇದರ ಆಂತರ್ಯದ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬುದು ಅವರ ಕಳಕಳಿ. ಹಾಗಾಗಿ, ಗಡ್ಡ ಬಿಡುವುದೋ, ಗಡ್ಡ ತೆಗೆಯುವುದೋ ಒಟ್ಟಿನಲ್ಲಿ ಇದೊಂದರಿಂದಲೇ ತನ್ನೆಲ್ಲ ವ್ಯಕ್ತಿತ್ವ ಮತ್ತು ಬದುಕಿನ ಅಸ್ತಿತ್ವಗಳನ್ನು ಪ್ರತಿಪಾದಿಸುತ್ತಿದ್ದೇವೆಂಬುದು ಹುಂಬತನ. ಒಂದು ರೀತಿಯಲ್ಲಿ ಇದು ಸಹ ಒಂದು ಬಗೆಯ ಅಹಂಕಾರವೇ. ನಾನು ಉಳಿದವರಿಗಿಂತ ವಿಭಿನ್ನ ಎಂದು ಸಾರಿ ಹೇಳುವುದು. ಸಕಾರಾತ್ಮಕವಾಗಿ ನೋಡಿದರೆ ಇದು ಆತ್ಮವಿಶ್ವಾಸ; ನಕಾರಾತ್ಮಕವಾಗಿ ನೋಡಿದರೆ ಅಹಂಭಾವ. ಗಡ್ಡದ ಮೂಲಕ ಮನುಷ್ಯನನ್ನು ಕಾಣಬೇಕೇ ವಿನಾ ಗಡ್ಡವನ್ನೇ ಕಾಣಬಾರದು. ಮೊದಲೇ ಪುರುಷರದು ಮೇಲರಿಮೆಯ ಅಹಮು. ಇನ್ನು ಗಡ್ಡ ಬೆಳೆಸಿಕೊಂಡು, ಇದೇ ತನ್ನ ಇರುವಿಕೆಯ ಶೈಲಿಯೆಂದು ಬಿಂಬಿಸುವುದು ಸಹಜ. ದಿನವೂ ಗಡ್ಡ ತೆಗೆವ ಮುಖಕ್ಷೌರ ಸಂಸ್ಕಾರ ಹಲವರದು; ವಾರಕ್ಕೊಮ್ಮೆ ತೆಗೆವ ಉಮೇದು ಇನ್ನು ಹಲವರದು; ಗಡ್ಡವನು ಬೆಳೆಸಿ, ಆಗಾಗ್ಗೆ ಟ್ರಿಮ್‌ ಮಾಡಿಕೊಂಡು, ತಾನು ಹೀಗೆ ಎಂದು ತೋರುವ ತೆವಲು ಇನ್ನು ಹಲವರದು. ಒಟ್ಟಿನಲ್ಲಿ ಇದು ಅನುಕೂಲಸಿಂಧುವೇ ವಿನಾ ನೀತಿಯೂ ಅಲ್ಲ; ನಿಯಮವೂ ಅಲ್ಲ. ಆದರೆ ಸಾಹಿತಿಗಳೂ ಬುದ್ಧಿಜೀವಿಗಳೂ ಎನಿಸಿಕೊಂಡವರ ಟ್ರಂಪ್‌ಕಾರ್ಡ್‌ ಆಗಿಹೋಗಿದೆ ಈ ಗಡ್ಡವೆಂಬುದು! ಜೀನ್ಸ್‌ಪ್ಯಾಂಟ್‌, ಮೇಲೊಂದು ಜುಬ್ಬಾ ಅಥವಾ ಕುರ್ತಾ, ಅಸ್ತವ್ಯಸ್ತವಾಗಿ ಬೆಳೆದ ತಲೆಗೂದಲು ಅಥವಾ ಬೋಳುತಲೆ. ಆದರೆ ಮುಖದಲ್ಲಿ ಎದ್ದು ಕಾಣುವ ಗಡ್ಡ – ಇಂಥ ಸಂಕೇತವನ್ನು ಚಿಂತಕರದೆಂದು ಸಮಾಜವು ಒಪ್ಪಿಕೊಂಡುಬಿಟ್ಟಿದೆ. ಪೂರ್ಣಚಂದ್ರ ತೇಜಸ್ವಿಯವರ ಭಾವಚಿತ್ರಗಳನ್ನು ನೋಡಿದರೆ ಇದು ಸ್ಪಷ್ಟ. ಒಟ್ಟಿನಲ್ಲಿ ಗಡ್ಡಮೀಮಾಂಸೆಯು ಮತಧರ್ಮ, ವಿಜ್ಞಾನ, ಜೀವವಿಕಾಸ, ಸಮಾಜಶಾಸ್ತ್ರ, ಸೌಂದರ್ಯಶಾಸ್ತ್ರ ಹಾಗೂ ಮನೋವಿಜ್ಞಾನಗಳನ್ನು ಹಾದು ಬರಲೇಬೇಕು. ಇದೀಗ ಗಡ್ಡವು ಫ್ಯಾಷನ್‌ ಆಗಿ ಜ಼ೆನ್‌ ಜೀಗಳ ಆದ್ಯಗುರುತಾಗಿ ಹೋಗಿದೆ ಎಂಬಲ್ಲಿಗೆ ಗಡ್ಡದ ಪುರಾಣಕ್ಕೆ ವಿರಾಮ ಹೇಳುತ್ತೇನೆ.

-ಡಾ. ಹೆಚ್‌ ಎನ್‌ ಮಂಜುರಾಜ್‌, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *