ಪರಾಗ

ಕಥೆ: ಬೆಟ್ಟದಷ್ಟು ಕಷ್ಟ : ಭಾಗ -2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮುಂದಿನ ಎರಡು ವರ್ಷಗಳು ಎರಡು ತಿಂಗಳುಗಳಾಗಿ ಕಳೆಯಿತು.  ಸೂರಜ್‌ ಉನ್ನತ ಹುದ್ದೆಗೆ ಮುಂಬಯಿಯ ಕಂಪನಿಯೊಂದರಲ್ಲಿ ನೇಮಕಗೊಂಡನು.  ಕಾರುಣ್ಯಾ ತಾನೂ ಅಲ್ಲಿಯೇ ಮತ್ತೊಂದು ಕಂಪನಿಯಲ್ಲಿ ಕೆಲಸನ್ನು ಹುಡುಕಿಕೊಂಡು ಹಿಂಬಾಲಿಸಿದಳು.

ತಂದೆತಾಯಿಯರು ಮುಂಬಯಿಗೆ ಬರುವುದು, ಇವರುಗಳು ಬೆಂಗಳೂರಿಗೆ ಹೋಗುವುದೂ, ಇಬಿಬ್ಬರೇ, ಕುಟುಂಬ ಸಮೇತರಾಗಿ, ಸುತ್ತಾಡಲು ಹೋಗುವುದು, ಹೀಗೆ ಚಂದದಿಂದ ಬಾಳದೋಣಿ ಸಾಗುತಿತ್ತು.

ಒಂದು ಶನಿವಾರ ಅತ್ತೆ, ಅಮ್ಮನೊಂದಿಗೆ ಗ್ರೂಪ್‌ ಕಾಲ್‌ ಮಾಡಿ ಹೇಳಿದಳು ಕಾರುಣ್ಯಾ –

ನಿನ್ನೆ ಡಾಕ್ಟರ್‌ ಹತ್ತಿರ ಹೋಗಿದ್ದೆವು, ಎಲ್ಲಾ ತರಹದ ಟೆಸ್ಟಗಳನ್ನು ಮಾಡಿ ಹೇಳಿದರು, ನನಗೀಗ ಮೂರು ತಿಂಗಳು ತುಂಬಿದೆ.

ಮತ್ತೊಮ್ಮೆ ಸಂಭ್ರಮದ ನಕ್ಷತ್ರಗಳು ಎಲ್ಲರೆದೆ ತುಂಬಾ ಚೆಲ್ಲಿತು. 

ಗಂಡನ ಮನದೆನ್ನೆಯಾಗಿ, ಎರಡೂ ಮನೆಗಳ ಕಣ್ಮಣಿಯಾಗಿ, ಅಮ್ಮ ಅತ್ತೆಯನ್ನೇ ಮುಂಬಯಿಗೆ ಸರದಿಯಂತೆ ಕರೆಸಿಕೊಳ್ಳುತ್ತಾ, ನಂತರ ಮಗುವಿನೊಂದಿಗೆ ಕಳೆಯಲು ಜಾಸ್ತಿ ರಜದ ಅವಶ್ಯಕತೆ ಇದೆ ಎನ್ನುತ್ತಾ ಎಂಟು ತಿಂಗಳು ತುಂಬುವವರೆಗೆ ಅಫೀಸಿಗೆ ಹೋಗಿ ಬರುತ್ತಿದ್ದಳು.

ಒಂಭತ್ತನೇ ತಿಂಗಳಿಗೆ ಬಿದ್ದ ನಂತರ ಬೆಂಗಳೂರಿನ ಅಮ್ಮನ ಮನೆಗೆ ಬಂದ ಕಾರುಣ್ಯಾ ಖ್ಯಾತ ಪ್ರಸೂತಿ ತಜ್ಞೆ ಡಾ.ಸುಜಾತ ಅವರಲ್ಲಿ ಹೋಗಿ ಬಂದಳು. ಹಿಂದಿನ ರಿಪೋರ್ಟ್‌ ಗಳ ಮೇಲೆ ಕಣ್ಣಾಡಿಸಿ, ಅವಳನ್ನು ಪರೀಕ್ಷಿಸಿ – ಎಲ್ಲಾ ಸರಿಯಾಗಿದೆ, ಇನ್ನು ೧೮-೨೦ ದಿನಗಳಲ್ಲಿ ಹೆರಿಗೆಯಾಗಬಹುದು, ಅಲ್ಲಿಯವರೆಗೆ ನಾಲ್ಕು ದಿನಗಳಿಗೆ ಒಂದು ಬಾರಿ ಚೆಕಪ್‌ ಗೆ ಬರುತ್ತಾ ಇರಿ – ಎಂದರು.

ಎಲ್ಲರೂ ಅತ್ಯಂತ ಉತ್ಸಾಹದಿಂದ ಆಗಮಿಸಲಿರುವ ಎರಡೂ ಕುಟುಂಬಗಳ ಹೊಸ ಕುಡಿಗಾಗಿ ಕಾಯುತ್ತಿದ್ದರು.

ಎಂಟು ದಿನಗಳ ನಂತರ ಎರಡನೇ ಬಾರಿ ಚೆಕಪ್‌ ಗೆ ಹೋಗಿ ಸ್ಕ್ಯಾನ್‌ ಮಾಡಿಸಿದ ಕಾರುಣ್ಯಾಳಿಗೆ ಬರಸಿಡಿಲು ಎರಗಿತ್ತು.  ಡಾ.ಸುಜಾತ ತಕ್ಷಣವೇ ಅಡ್ಮಿಟ್‌ ಆಗಲು ತಿಳಿಸಿ, ಹಲವಾರು ರೀತಿಯ ಪರೀಕ್ಷೆಗಳಿಗೆ ಬರೆದುಕೊಟ್ಟರು.  ಮುಂಬಯಿಗೆ ರಿಪೋರ್ಟುಗಳನ್ನು ಕಳುಹಿಸಿ ಫಲಿತಾಂಶವನ್ನು ತರಿಸಿಕೊಂಡರು. ಅಂದು ಸಂಜೆ ಮನೆಯವರುಗಳೆಲ್ಲರನ್ನು ಕೂರಿಸಿಕೊಂಡು ಡಾ.ಸುಜಾತ ವಿವರಿಸಿದರು –

ಹೊಟ್ಟೆಯಲ್ಲಿರುವ ಭ್ರೂಣದ ಮೂಳೆಗಳಲ್ಲಿ ಸ್ಟೆಮ್‌ ಸೆಲ್ಲುಗಳ ತೀವ್ರ  ಕೊರತೆ ಇದೆ.  ಇದು ಲಕ್ಷದಲ್ಲಿ ಒಬ್ಬರಿಗೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತದೆ.  ಈಗ ಹುಟ್ಟುವ ಮಗುವಿಗೆ ವಾರಕ್ಕೆ ಎರಡು ಬಾರಿ ಇಡೀ ದೇಹದ ರಕ್ತವನ್ನು ಶುದ್ಧೀಕರಿಸಬೇಕಾಗುವುದು.  ಈ ಸ್ಟೆಮ್‌ ಸೆಲ್ಲುಗಳು ಅಥವಾ ಅಸ್ಥಿಮಜ್ಜೆಯ ಉತ್ಪಾದನೆ ಎಲ್ಲರಲ್ಲಿ ನೈಸರ್ಗಿಕವಾಗಿ ಆಗುತ್ತದಾದರೂ ಕೆಲವೊಮ್ಮೆ, ಆಗಲೇ ಹೇಳಿದಂತೆ ಲಕ್ಷಕ್ಕೆ ಒಬ್ಬರಲ್ಲಿ ಈ ರೀತಿಯ ಕೊರತೆ ಉಂಟಾಗುತ್ತದೆ.  ದುರಾದೃಷ್ಟಶಾತ್‌ ಆಗಲೇ ಒಂಭತ್ತನೇ ತಿಂಗಳಿಗೆ ಬಿದ್ದಿರುವುದರಿಂದ, ಮಿಕ್ಕೆಲ್ಲ ರೀತಿಯಲ್ಲಿ ಭ್ರೂಣದ ಬೆಳವಣಿಗೆಯಲ್ಲಿ ದೋಷವಿಲ್ಲದಿರುವುದರಿಂದ ಇಂದೇ ಶಸ್ರ್ತಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯುತ್ತೇನೆ.  ನಾಳೆ ಮುಂಬಯಿಯಿಂದ ಆಗಮಿಸಲಿರುವ ತಜ್ಞವೈದ್ಯರ ಸಮಕ್ಷಮದಲ್ಲಿ ಮೊದಲ ರಕ್ತ  ಶುದ್ಧೀಕರಣ ಕಾರ್ಯ ಆಗುತ್ತದೆ.  ನಂತರ ಅವರ ಸೂಚನೆಯ ಮೇರೆಗೆ ಇದೇ ವಿಷಯದಲ್ಲಿ ಪರಿಣಿತಿಯನ್ನು ಹೊಂದಿರುವ ʼಶೈಲಜಾ ಮಲ್ಟಿ ಸ್ಪೆಷಾಲಿಟಿ ನರ್ಸಿಂಗ್‌ ಹೊಂʼನಲ್ಲಿ ಡಾ.ಶೈಲಜಾ ಅವರ ಮೇಲ್ವಿಚಾರಣೆಲ್ಲಿ ಇನ್ನು ಮುಂದೆ ಸಧ್ಯಕ್ಕೆ ಎರಡು ದಿನಗಳಿಗೆ ಒಮ್ಮೆಯಂತೆ ಪ್ರೊಸೀಜ಼ರ್‌ ಮಾಡಬೇಕಾಗುತ್ತದೆ.  ಈಗ ಯೋಚಿಸುತ್ತಾ ಕಾಲ ಕಳೆಯಲು ಸಮಯವಿಲ್ಲ, ಇದು ತಾಯಿ ಮತ್ತು ಮಗು ಇಬ್ಬರಿಗೂ ಅಪಾಯಕಾರಿ, ಇನ್ನು ಎರಡು ನಿಮಿಷಗಳಲ್ಲಿ ನಿಮ್ಮ ಅಭಿಪ್ರಾಯದೊಂದಿಗೆ ಈ ಅರ್ಜಿಯನ್ನು ಭರ್ತಿ ಮಾಡಿ ತಂದುಕೊಡಿ ಎನ್ನುತ್ತಾ ಮುಂದಿನ ತಯಾರಿಗೆಂದೋ, ಕುಟುಂಬದ ಮನೋವಿಪ್ಲವಕ್ಕೆ ಸಾಕ್ಷಿಯಾಗಲಾರದೆಯೋ ಎದ್ದು ಹೊರನಡೆದರು.

ಸೂರಜ್‌ ಒಂದು ಕ್ಷಣ ಕೂಡ ಯೋಚಿಸದೆ ತನ್ನ ಸಹಿಯನ್ನು ಹಾಕಿ ಕಾರುಣ್ಯಾಳ ಒಪ್ಪಿಗೆಗಾಗಿ ಅವಳೆಡೆಗೆ ನೋಡಿದ.  ನಿರ್ವಿಣ್ಣಳಾಗಿದ್ದ ಅವಳು ಮುಖಭಾವದಲ್ಲೇ ಸೂರಜನ ನಿರ್ಧಾರಕ್ಕೆ ಒಪ್ಪಿಗೆಯನ್ನು ಸೂಚಿಸಿದಳು.

ಹುಟ್ಟಿದ ಮುಗುವನ್ನು ದೇವರ ಕೋಣೆಯಲ್ಲಿ ಮಲಗಿಸಿ ಕಿವಿಯಲ್ಲಿ “ವಿನೀತ್”‌ ಎಂದು ಉಸುರಿಸಿ ಹೆಸರಿಸಿದರು.

ಮುಂದಿನ ವರ್ಷಗಳು ಕುಟುಂಬಕ್ಕೆ ಅಗ್ನಿಪರೀಕ್ಷೆಯಂತೆ ಆಗಿತ್ತು. ಕಾರುಣ್ಯಾ ಸ್ವ-ಇಚ್ಚೆಯಿಂದ ಕೆಲಸ ಬಿಟ್ಟಳು.    ಆರೆಂಟು ತಿಂಗಳಲ್ಲೇ ಸೂರಜನಿಗೆ‌ ಬೆಂಗಳೂರಿನ ಕಂಪನಿಯೊಂದರಲ್ಲೇ ಕೆಲಸ ಸಿಕ್ಕಿ ಇಲ್ಲಗೇ ಬಂದಾಯಿತು.

ವನಜ ಪಕ್ಕದ ಬಡಾವಣೆಯಲ್ಲಿನ ಫ್ಲಾಟ್‌ ಒಂದನ್ನು ಬಾಡಿಗೆಗೆ ಪಡೆದು ಸೂರಜ್‌, ಕಾರುಣ್ಯಾ, ಮಗು ಅಲ್ಲಿರುವ ವ್ಯವಸ್ಥೆ ಮಾಡಿ ಅವರಿಗೆ ಏಕಾಂತ ಕಲ್ಪಿಸಿದರು.  ಸದಾ ಹೋಗಿ ಬಂದು ಮಾಡುತ್ತಾ ಎಲ್ಲರೂ ಆದಷ್ಟೂ ತೊಂದರೆಯಾಗದಂತೆ ಸಹಕರಿಸುತ್ತಿದ್ದರು.

ಮಗುವನ್ನು ಕಾಪಿಡುವುದು ಅತೀ ಕಷ್ಟದ ಕೆಲಸವಾಗಿತ್ತು. ಯಾವುದೇ ರೀತಿಯ ಸೋಂಕು ತಗಲದಂತೆ ನೋಡಿಕೊಳ್ಳ ಬೇಕಿತ್ತು.  ಡಾಕ್ಟರ್‌ ಹತ್ತಿರ ಹೋಗುವ ದಿನ ಬಂದರೆ ವಿನೀತ್‌ ಮಂಕಾಗಿಬಿಡುತಿತ್ತು.  ಅದನ್ನು ನೋಡಿ ಕಾರುಣ್ಯಾ ಕೂಡ ಮಂಕಾಗುತ್ತಿದ್ದಳು.  ಆದರೆ ತನ್ನ ಕರ್ತವ್ಯದಲ್ಲಿ ಚೂರೂ ಲೋಪ ಬರದಂತೆ ನೋಡಿಕೊಳ್ಳುತ್ತಿದ್ದಳು.  ಸೂರಜನಿಗೆ ಹೇಳಿಬಿಟ್ಟಿದ್ದಳು –

ಸೂರಜ್‌, ಮ್ಯಾನ್‌ ಪ್ರಪೋಸಸ್‌, ಗಾಡ್‌ ಡಿಸ್ಪೋಸಸ್ ಅಂತ ಆಯಿತು.  ಇರಲಿ, ನನಗೇನೂ ನಮ್ಮ ಮಗುವನ್ನು ಕಾಪಿಡುವುದು ಕಷ್ಟವಿಲ್ಲ.  ಆದರೆ, ಅದಕ್ಕೆ ಹಣವೂ ಸಹ ಬೇಕೇ ಬೇಕು.  ಹಾಗಾಗಿ ನೀನು ನಮ್ಮ ಬಗ್ಗೆ ಯೋಚಿಸುತ್ತಾ ಕೂರಬೇಡ, ಕೆರಿಯರ್‌ ಕಡೆ ಗಮನ ಹರಿಸು.  ನನಗೆ ತುಂಬಾ ಸುಸ್ತಾದಾಗ ಹೇಳುತ್ತೀನಿ ಆಗ ಮಾತ್ರ ನೀನು ನನಗೆ ಸ್ವಲ್ಪ ವಿಶ್ರಾಂತಿ ನೀಡು, ಮಿಕ್ಕಂತೆ ಮಗುವಿನ ಆಟಪಾಟಗಳನ್ನು ನೀನು ನೋಡಿಕೋ, ಮಿಕ್ಕೆಲ್ಲ ಜವಾಬ್ದಾರಿ ನನಗೆ ಬಿಡು.

ಕಾರುಣ್ಯಾಳ ಕಾರ್ಯಕ್ಷಮತೆ ಎಷ್ಟಿತ್ತು ಎಂದರೆ ಡಾ.ಶೈಲಜಾ ಅವರು ಅಲ್ಲಿಗೆ ಬರುತ್ತಿದ್ದ ಮಿಕ್ಕ ರೋಗಿಗಳ ಮನೆಯವರಿಗೆ ಇವಳ ಉದಾಹರಣೆ ಕೊಟ್ಟು ಹೇಗಿರಬೇಕೆಂದು ಹೇಳುತ್ತಿದ್ದರು.

ಮೊದಲ ದಿನ ಮಗುವಿಗೆ ರಕ್ತ ಶುದ್ಧೀಕರಿಸುವ ಕಾರ್ಯ ನಡೆಸಿದಾಗಲೇ ಡಾ. ಶೈಲಜಾ ಹೇಳಿದ್ದರು – ಸಧ್ಯಕ್ಕೆ ಎರಡು ದಿನಕ್ಕೊಮ್ಮೆ ಮಾಡುವ ಈ ಕ್ರಿಯೆ, ಮುಂದುವರೆದಂತೆ ಅಕಸ್ಮಾತ್‌ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತಿದ್ದಂತೆ ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ಮುಂದೂಡಬಹುದು.  ಅಲ್ಲದೆ ಅಕಸ್ಮಾತ್‌ ಮಗುವಿಗೆ ಹೊಂದಿಕೆಯಾಗುವ ಬ್ಲೆಡ್‌ ಸ್ಟೆಮ್‌ ಸೆಲ್ಸ್‌ ಅಥವಾ ಅಸ್ಥಿಮಜ್ಜೆಯನ್ನು ಹೊಂದಿರುವ ಯಾರಾದರೂ ದಾನಿಗಳು ಸಿಕ್ಕಿದರೆ ಕಸೀ ಕೂಡ ಮಾಡಬಹುದು.  ಅದಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಸಂಸ್ಥೆಗಳಿವೆ.  ಅವುಗಳಲ್ಲಿ ಧಾತ್ರಿ ಬ್ಲಡ್‌ ಸ್ಟೆಮ್‌ ಸೆಲ್‌ ಡೋನರ್ಸ್‌ ರಿಜಿಸ್ಟ್ರಿ ಅಂತ ಚೆನೈನ ಸಂಸ್ಥೆಯೊಂದರ ಕಾರ್ಯಕ್ಷಮತೆ ತುಂಬಾ ಚೆನ್ನಾಗಿದೆ.  ನಮ್ಮ ನರ್ಸಿಂಗ್‌ ಹೊಂ ಆ ಸಂಸ್ಥೆಯೊಂದಿಗೆ ಸಹಯೋಗವನ್ನು ಹೊಂದಿದೆ.  ಅಲ್ಲಿ ಇಂದೇ ನವಜಾತ ಶಿಶುವಿನ ಅಗತ್ಯತೆಯನ್ನು ತಿಳಿಸಿ ರಿಜಿಸ್ಟರ್‌ ಮಾಡೋಣ, ಇದಕ್ಕೆ ನಿಮ್ಮ ಒಪ್ಪಿಗೆ ಮುಖ್ಯ – ಎಂದು ಹೇಳಿ ಸಹಿ ಹಾಕಲು ಪತ್ರಗಳನ್ನು ನೀಡಿದರು.

ಅವರು ಹೇಳಿದ ಯಾವ ಮಾತುಗಳೂ ಕಿವಿಯೊಳಗೆ ಇಳಿಯುವ ಸ್ಥಿತಿಯಲ್ಲಿ ಕಾರುಣ್ಯಾ, ಸೂರಜ್‌ ಇರಲಿಲ್ಲ.  ಯಾಂತ್ರಿಕವಾಗಿ ಸಹಿ ಮಾಡಿಕೊಟ್ಟರು.

ವಿನೀತನಿಗೆ ನಾಲ್ಕೂವರೆ ವರ್ಷಗಳಾಗಿತ್ತು.  ಕಾರುಣ್ಯಾ ಮನೆಯಲ್ಲೇ ಎಲ್ಲಾ ಹೇಳಿಕೊಟ್ಟಿದ್ದಳು.  ಒಂದನೇ ತರಗತಿಯ ಮಗುವಿಗೆ ಬರಬೇಕಿದ್ದ ಎಲ್ಲ ಆಟಪಾಠಗಳನ್ನೂ ವಿನೀತನಿಗೆ ಕಲಿಸಲಾಗಿತ್ತು. ಆದರೆ ಅವನ ಜೊತೆಗಾರರು ಮಾತ್ರ ಅಮ್ಮ, ಅಪ್ಪ, ಕೆಲವೊಮ್ಮೆ, ಅಜ್ಜಿಯಂದಿರು, ತಾತಂದಿರು ಆಗಿತ್ತು.

ಒಮ್ಮೆ ಹೀಗೇ ವನಜ ಮಾಡಿಕೊಟ್ಟಿದ್ದ ಸಿಹಿ ಮತ್ತು ಖಾರದ ಒತ್ತುಶ್ಯಾವಿಗೆಯ ಡಬ್ಬಗಳೊಂದಿಗೆ ಲೋಕೇಶ್‌ ಮೊಮ್ಮಗನನ್ನು ನೋಡಿಕೊಂಡು ಹೋಗಲು ಬಂದಿದ್ದರು.  ಈ ರೀತಿಯ ಭೇಟಿಗಳು ಇಬ್ಬರ ತಂದೆತಾಯಿಯರ ಮನೆಗಳಿಂದಲೂ ಆಗಾಗ್ಗೆ ನಡೆಯುತಿತ್ತು. 

ಕಾರುಣ್ಯಾ ವಿನೀತನನ್ನು ಸ್ನಾನಕ್ಕೆ ಕರೆದೊಯ್ದಿದ್ದಳು.  ಅವಳ ಫೋನ್‌ ರಿಂಗಣಿಸಿತು.  ಲೋಕೇಶ್‌ ಅವರೇ ರಿಸೀವ್‌ ಮಾಡಿದರು, ಆ ಕಡೆಯಿಂದ –

ನಾನು, ʼಧಾತ್ರಿʼಯಿಂದ ಕರೆ ಮಾಡುತ್ತಿದ್ದೇನೆ – ಎನ್ನುತ್ತಲೇ, ʼಒನ್‌ ಸೆಕೆಂಡ್‌ʼ ಎಂದು ಹೇಳಿ, ವಿನೀತನೊಂದಿಗೆ ಒಳ ಬಂದ ಕಾರುಣ್ಯಾ ಕೈಗೆ ಫೋನನ್ನು ಕೊಟ್ಟು ತಾವೇ ಮೊಮ್ಮಗನಿಗೆ ಬಟ್ಟೆ ಹಾಕಲು ಒಳಗೆ ಕರೆದೊಯ್ದರು.

ಕಾರುಣ್ಯಾ ಹೇಳಿದಳು – ನಾನು ಕಾರುಣ್ಯಾ ಮಾತನಾಡುತ್ತಿರುವುದು

ನಿಮಗೊಂದು ಸಂತಸದ ವಿಷಯ ತಿಳಿಸಬೇಕಿತ್ತು.  ಕೇರಳದ ತ್ರಿಶೂರ್‌ ನಗರದ ಇಪ್ಪತ್ತಾರು ವರ್ಷದ ದಾನಿಯೊಬ್ಬರ ಆರೋಗ್ಯಪೂರ್ಣವಾದ ಅಸ್ಥಿಮಜ್ಜೆ, ಸ್ಟೆಮ್ ಸೆಲ್ಸ್‌ ನಿಮ್ಮ ಮಗ ವಿನೀತ್‌ ದೇಹಕ್ಕೆ ಹೊಂದಿಕೆಯಾಗುವಂತಿದೆ.  ನಾಳೆಯೇ ನೀವು ಚೆನೈಗೆ ಮಗುವಿನೊಂದಿಗೆ ಬರಲು ಸಾಧ್ಯವೇ? ದಾನಿ ಮಿ.ಜೋಸೆಫ್‌ ಕೂಡ ಬರಲು ತಯಾರಿದ್ದಾರೆ.

ಕಾರುಣ್ಯಾ ಕ್ಷಣ ಕೂಡ ಯೋಚಿಸದೆ ಹೇಳಿದಳು – ಖಂಡಿತಾ ಬರುತ್ತೇವೆ, ಏನೇನು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಆ ಕಡೆಯಿಂದ  ಹಲವು ವಿವರಗಳನ್ನು ನೀಡಿದರು.

ಮಾರನೆಯ ದಿನ ಕಾರುಣ್ಯಾ, ಸೂರಜ್‌, ವಿನೀತ್‌ ಚೆನೈಗೆ ವಿಮಾನದಲ್ಲಿ ಹೊರಟರು.

ಮುಂದಿನದೆಲ್ಲಾ, ಭಗವಾನ್‌ ಕಾ ಆನೇ ಮೆ ದೇರ್‌ ಹೈ, ಅಂಧೇರ್‌ ನಹೀ (ದೇವರ ಕರುಣೆ ದೊರೆಯಲು ನಿಧಾನವಾಗಬಹುದೇ ಹೊರತೂ, ಅವನು ನಿಷ್ಕರುಣಿಯಲ್ಲ) ಅನ್ನುವಂತೆ ನಡೆಯಿತು.  ಹಲವಾರು ಟೆಸ್ಟುಗಳು ನಡೆದವು.  ಎಲ್ಲ ಓಕೆ ಎಂದಾಯಿತು.  ಒಂದು ಶುಭದಿನ ಇಪ್ಪತ್ತಾರು ವರ್ಷದ ಮಿ.ಜೋಸೆಫ್‌ ಅವರ ಸ್ಟೆಮ್‌ ಸೆಲ್ಸ್‌ ಅಥವಾ ಅಸ್ಥಿಮಜ್ಜೆಯನ್ನು ವಿನೀತನ ದೇಹಕ್ಕೆ ಕಸಿ ಮಾಡಲಾಯಿತು.  ಸೂರಜ್, ಕಾರುಣ್ಯಾ, ಭಗವಂತನಲ್ಲಿ, ಮೊದಲು ಈ ಕಸಿಯಿಂದ ಜೋಸೆಫ್‌ ಅವರಿಗೆ ಯಾವ ತೊಂದರೆಯೂ ಆಗದಿರಲಿ, ಹಾಗೆಯೇ ನಮ್ಮ ಮಗುವನ್ನೂ ಕಾಪಾಡು ತಂದೆ ಎಂದು ಬೇಡಿಕೊಂಡರು.

ಸ್ಟೆಮ್‌ ಸೆಲ್ಸ್‌ ಗಳನ್ನು ಪುಟ್ಟ ವಿನೀತನಿಗೆ ದಾನ ನೀಡಿ ಎರಡು ದಿನಗಳ ನಂತರ ಮಿ.ಜೋಸೆಫ್‌ ಆರೋಗ್ಯಪೂರ್ಣವಾಗಿ ಹಸನ್ಮುಖದಿಂದ ಈ ಕುಟುಂಬಕ್ಕೆ ಶುಭ ಹಾರೈಸಿ ತಮ್ಮೂರಿಗೆ ಹೊರಟರು.

ದಿನದಿಂದ ದಿನಕ್ಕೆ ವಿನೀತ್‌ ಹುಣ್ಣಿಮೆಯ ಚಂದ್ರನಂತೆ ಚೇತರಿಸಿಕೊಂಡನು.  ಆರು ತಿಂಗಳಲ್ಲಿ ಪೂರ್ಣವಾಗಿ ಎಲ್ಲರಂತೆ ಆದನು.  ಅವನನ್ನು ನೋಡಿ ಕುಟುಂಬದವರು ಮಾತ್ರವಲ್ಲದೇ ಡಾ. ಸುಜಾತ, ಡಾ.ಶೈಲಜಾ, ಧಾತ್ರಿ ಸಮಾಜ ಸೇವಾ ಸಂಸ್ಥೆ, ಮಿ.ಜೋಸೆಫ್‌ ಎಲ್ಲರೂ ಹರ್ಷಚಿತ್ತರಾದರು.

ಡಾ.ಶೈಲಜಾ – ಈಗ ವಿನೀತ್‌ ಸಂಪೂರ್ಣ ಗುಣವಾಗಿದ್ದಾನೆ, ಇನ್ನು ಮುಂದೆ ಇಲ್ಲಿಗೆ ಬರುವುದು ಬೇಡ, ಅವನನ್ನು ಅಗತ್ಯಬಿದ್ದರೆ ಯಾರಾದರೊಬ್ಬ ಸಹಜ ಮಕ್ಕಳ ವೈದ್ಯರ ಹತ್ತಿರ ಕರೆದೊಯ್ಯಿರಿ, ಎಲ್ಲಾ ಒಳ್ಳೆಯದಾಗಲಿ – ಎಂದು ಹೇಳಿದರು.

ಮತ್ತೊಮ್ಮೆ ಫೋನ್‌ ರಿಂಗಣಿಸಿತು.  ಅಲ್ಲೇ ಇದ್ದ ಕಾರುಣ್ಯಾ ರಿಸೀವ್‌ ಮಾಡಿದಳು – ನಾವು ಎನ್‌ ಡಿ ಟಿ ವಿ ಇಂದ ಮಾತನಾಡುತ್ತಿದ್ದೇವೆ, ನಾಳೆ ಹನ್ನೆರಡು ಗಂಟೆಗೆ ನಿಮ್ಮದೊಂದು ಸಂದರ್ಶನ ಬೇಕಿದೆ, ಕೊಡುತ್ತೀರಾ? ನಿಮ್ಮೊಂದಿಗೆ ಮಿ.ಸೂರಜ್‌, ಮಾ.ವಿನೀತ್‌ ಕೂಡ ಇರಬೇಕು, ನಮ್ಮ ಮಾಯಾರಾವ್‌ ಅವರು ನಿಮ್ಮೊಂದಿಗೆ ಮಾತನಾಡ ಬಯಸುತ್ತಾರೆ.

ಖಂಡಿತಾ – ಎಂದು ಫೋನಿರಿಸಿದಳು.

ದೃಷ್ಯಮಾಧ್ಯಮದ ಸುಪ್ರಸಿದ್ಧ ಸಂದರ್ಶಕಿ ಮಾಯಾರಾವ್‌ ಅವರೊಡನೆ ಸಂದರ್ಶನ ಪ್ರಾರಂಭವಾಯಿತು.  ಕಾರುಣ್ಯಾ, ಸೂರಜ್‌ ತಮ್ಮ ಭಾವನೆಗಳನ್ನು ಹಂಚಿಕೊಂಡರು.  ವೀಡಿಯೋ ಕಾಲ್‌ ನಲ್ಲಿ ತ್ರಿಶೂರ್‌ ನಿಂದ ಮಿ.ಜೋಸೆಫ್‌ ಜಾಯಿನ್‌ ಆದರು.  ಅಲ್ಲೇ ತನ್ನ ಆಟಿಕೆಗಳೊಂದಿಗೆ ಆಟವಾಡುತ್ತಿದ್ದ ವಿನೀತ್‌ – ಓ ಜೋಸೆಫ್‌ ಮಾಮಾ, ನೀವು ಯಾವಾಗ ನಮ್ಮೂರಿಗೆ ಬರುತ್ತೀರಾ – ಎಂದು ಖುಷಿಯಿಂದ ಕೈ ತಟ್ಟುತ್ತಾ ಕೇಳಿದ.  ಆರೋಗ್ಯಪೂರ್ಣವಾಗಿ ಆಟವಾಡುತ್ತಿದ್ದ ವಿನೀತನನ್ನು ನೋಡಿ ಸಂದರ್ಶನ ಮರೆತ ಜೋಸೆಫ್‌ ಕೂಡ – ಈಗಲೇ ಹಾರಿ ಬರೋಣ ಅನ್ನಿಸುತ್ತಿದೆ, ಖಂಡಿತಾ ಬರ್ತೀನಿ ಮರಿ ನಿನ್ನ ನೋಡೋಕೆ – ಎಂದರು.

ಇವರುಗಳ ಸಂತಸದಲ್ಲಿ ಭಾಗಿಯಾಗುತ್ತಾ ಮಾಯಾರಾವ್‌ ಹೇಳಿದರು – ಅಂತೂ ಬೆಟ್ಟದಂತೆ ಬಂದ ಕಷ್ಟಗಳು. .

ಸೂರಜ್‌ ಅವರ ಮಾತನ್ನು ತಡೆದು ಹೇಳಿದ – ಖಂಡಿತಾ ಮಂಜಿನಂತೆ ಕರಗಲಿಲ್ಲ, ನನ್ನ ಕಾರುಣ್ಯಾ ಬೆಟ್ಟವನ್ನು ಕಡಿದು, ಕಡಿದು ಪರಿಹಾರದ ದಾರಿಯನ್ನು ಕಂಡು ಹಿಡಿದಳು.  ಅವಳ   ಮನೋಸ್ಥೈರ್ಯ,  ಉದಾರ ಮನದ ಮಿ.ಜೋಸೆಫ್‌, ನುರಿತ ವೈದ್ಯರು, ಕುಟುಂಬದ ಜನರ ಸಹಕಾರದೊಂದಿಗೆ ನನ್ನ ವಿನೀತ್‌ ಈಗ ಎಲ್ಲ ಮಕ್ಕಳಂತೆ ನಿಮ್ಮ ಮುಂದೆ ಆಟವಾಡುತ್ತಿದ್ದಾನೆ.

ಕಾರುಣ್ಯಾ – ನೀನೇನು ಕಡಿಮೆ ಮನೋವೇದನೆ ಅನುಭವಿಸಿದೆಯಾ ಸೂರಜ್, ನಿನ್ನ ಸಹಕಾರವಿಲ್ಲದಿದ್ದರೆ.

ಮಾಯಾರಾವ್‌ ನಗುತ್ತಾ – ಓಕೆ, ಓಕೆ, ಇಡೀ ಟೀಂಗೆ ಶುಭಾಶಯಗಳು.  ಇಂತಹಾ ಇನಫರಮೇಟಿವ್, ಸುಖಾಂತ್ಯದ ಹೆಚ್ಚು ಹೆಚ್ಚು ಸಂದರ್ಶನಗಳು ನನಗೆ ಸಿಗುತ್ತಿರಲಿ – ಎನ್ನುತ್ತಾ ಮಂಗಳ ಹಾಡಿದರು.

(ಮುಗಿಯಿತು)
ಈ ಕಥೆಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45658

ಪದ್ಮಾ ಆನಂದ್ , ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *