ಭೀಮನ ಅಮಾವಾಸ್ಯೆ ಕರ್ನಾಟಕದ ಹೆಂಗಳೆಯರಿಗೆ ವರ್ಷದ ಅತ್ಯಂತ ಹತ್ತಿರದ ವ್ರತಗಳಲ್ಲಿ ಒಂದು. ಇದನ್ನು ಜ್ಯೋತಿರ್ಭೀಮೇಶ್ವರ ವ್ರತ, ಪತಿ ಸಂಜೀವಿನಿ ವ್ರತ ಅಥವಾ ದೀಪಸ್ತಂಭ ಪೂಜೆ ಎಂದೂ ಕರೆಯುತ್ತಾರೆ. ಮದುವೆಯಾದ ಹೆಂಗಸರು ತಮ್ಮ ಪತಿಯ, ಮತ್ತು ಅವಿವಾಹಿತ ಹುಡುಗಿಯರು ತಮ್ಮ ಸಹೋದರರ ಆಯುಷ್ಯ, ಆರೋಗ್ಯ ಹಾಗೂ ಏಳ್ಗೆಗಾಗಿ ಶಿವ-ಪಾರ್ವತಿಯರನ್ನು ಎರಡು ದೀಪಗಳ ರೂಪದಲ್ಲಿ ಪೂಜಿಸುತ್ತಾರೆ.
ಭೀಮನ ಅಮಾವಾಸ್ಯೆ ಪ್ರತಿ ವರ್ಷ ಆಷಾಢ ಮಾಸದ ಅಮಾವಾಸ್ಯೆಯಂದು (ಜುಲೈ-ಆಗಸ್ಟ್) ಬರುತ್ತದೆ. 2026ರಲ್ಲಿ ಇದು ಬುಧವಾರ, ಆಗಸ್ಟ್ 12, 2026ರಂದು ಬರುತ್ತದೆ. ಬೆಂಗಳೂರು ಪಂಚಾAಗದ ಪ್ರಕಾರ ಅಮಾವಾಸ್ಯೆ ತಿಥಿ ಆಗಸ್ಟ್ 12ರ ಬೆಳಗಿನ ಜಾವ 1:53ಕ್ಕೆ ಆರಂಭವಾಗಿ ಅದೇ ದಿನ ರಾತ್ರಿ 11:06ಕ್ಕೆ ಮುಕ್ತಾಯವಾಗುತ್ತದೆ. ವ್ರತವನ್ನು ಅಮಾವಾಸ್ಯೆ ತಿಥಿ ಇರುವ ದಿನದಂದು ಆಚರಿಸುತ್ತಾರೆ; ತಿಥಿಯ ನಿಖರ ಸಮಯ ಸ್ಥಳಕ್ಕೆ ತಕ್ಕಂತೆ ಸ್ವಲ್ಪ ಬದಲಾಗುತ್ತದೆ.
ಮಹತ್ವ
ಈ ವ್ರತದ ಹಿಂದಿನ ಭಾವ ಸರಳ ಮತ್ತು ಆಳವಾದದ್ದು. ಪತಿಯ ದೀರ್ಘಾಯುಷ್ಯ ಮತ್ತು ಸೌಭಾಗ್ಯ. ಮದುವೆಯಾದ ಹೆಂಗಸರು ಸಾಮಾನ್ಯವಾಗಿ ಮದುವೆಯ ನಂತರ ಒಂಬತ್ತು ವರ್ಷ ಈ ವ್ರತವನ್ನು ತಪ್ಪದೇ ಆಚರಿಸುತ್ತಾರೆ. ಅವಿವಾಹಿತ ಹುಡುಗಿಯರು ಒಳ್ಳೆಯ ಗಂಡ ಸಿಗಲಿ ಎಂದು ಪ್ರಾರ್ಥಿಸುತ್ತಾರೆ. ಶಿವ-ಪಾರ್ವತಿಯರ ಆದರ್ಶ ದಾಂಪತ್ಯವೇ ಇಲ್ಲಿ ಪೂಜೆಯ ಕೇಂದ್ರ; ಎರಡು ದೀಪಗಳಲ್ಲಿ ಒಂದು ಶಿವನನ್ನೂ, ಮತ್ತೊಂದು ಪಾರ್ವತಿಯನ್ನೂ ಪ್ರತಿನಿಧಿಸುತ್ತದೆ.
ಭೀಮನ ಅಮಾವಾಸ್ಯೆ ಕಥೆ:
ಸಂಪ್ರದಾಯದ ಕಥೆ ಹೀಗಿದೆ ಒಬ್ಬ ಅರಸ ತನ್ನ ಮಗ ತೀರಿಕೊಂಡರೂ, ಮುಹೂರ್ತ ನಿಗದಿಯಾಗಿದ್ದ ಮದುವೆಯನ್ನು ರದ್ದು ಮಾಡಲಾಗದೆ ಮೃತ ರಾಜಕುಮಾರನಿಗೇ ಮದುವೆ ಮಾಡಲು ನಿರ್ಧರಿಸುತ್ತಾನೆ. ಒಬ್ಬ ಬಡ ಬ್ರಾಹ್ಮಣ ತನ್ನ ಮಗಳನ್ನು ಕೊಟ್ಟು ಮದುವೆ ನೆರವೇರುತ್ತದೆ. ಮದುವೆಯಾದ ಮೇಲೆ ಮೃತ ದೇಹವನ್ನು ದಹನ ಮಾಡಲು ಸಿದ್ಧತೆ ನಡೆಯುತ್ತಿರುವಾಗ ಗುಡುಗು-ಸಿಡಿಲಿನ ಧಾರಾಕಾರ ಮಳೆ ಬರುತ್ತದೆ. ಆ ದಿನ ಭೀಮನ ಅಮಾವಾಸ್ಯೆ ಎಂದು ನೆನಪಿಸಿಕೊಂಡ ಹೊಸ ವಧು, ತನ್ನ ತಾಯಿ ಪ್ರತಿ ವರ್ಷ ಮಾಡಿಸುತ್ತಿದ್ದ ವ್ರತವನ್ನು ಮರೆಯದೆ ನದಿಯಲ್ಲಿ ಸ್ನಾನ ಮಾಡಿ, ಬೇರೇನೂ ಸಿಗದ ಕಾರಣ ಮಣ್ಣಿನ ಹಣತೆಗಳನ್ನೂ ಮಣ್ಣಿನ ಭಂಡಾರವನ್ನೂ ಮಾಡಿ ಭಕ್ತಿಯಿಂದ ಪೂಜೆ ಮುಗಿಸುತ್ತಾಳೆ. ಅವಳ ಶ್ರದ್ಧೆಗೆ ಮೆಚ್ಚಿ ಶಿವ-ಪಾರ್ವತಿಯರು ಪ್ರತ್ಯಕ್ಷರಾಗಿ ಮಣ್ಣಿನ ಭಂಡಾರವನ್ನು ಒಡೆದು, ವರ ಕೇಳಿಕೋ ಎನ್ನುತ್ತಾರೆ. ಆಕೆ ತನ್ನ ಪತಿ ಬದುಕಿ ಬರಲಿ ಎಂದು ಕೇಳಲು, ರಾಜಕುಮಾರ ಮತ್ತೆ ಜೀವ ತಳೆಯುತ್ತಾನೆ. ಇದೇ ಕಾರಣಕ್ಕೆ ಇದನ್ನು ಪತಿ ಸಂಜೀವಿನಿ ವ್ರತ ಎಂದೂ ಕರೆಯುತ್ತಾರೆ.
ಭೀಮನ ಅಮಾವಾಸ್ಯೆ ವ್ರತ ವಿಧಾನ
ಕರ್ನಾಟಕದಲ್ಲಿ ಸಾಮಾನ್ಯವಾಗಿ ಅನುಸರಿಸುವ ರೀತಿ ಹೀಗಿದೆ (ಮನೆ-ಸಂಪ್ರದಾಯಕ್ಕೆ ತಕ್ಕಂತೆ ಸ್ವಲ್ಪ ಬದಲಾಗಬಹುದು):
ಬೆಳಿಗ್ಗೆ ಮಂಗಳ ಸ್ನಾನ ಮಾಡಿ ಪೂಜಾ ಸ್ಥಳ ಸಿದ್ಧಪಡಿಸುತ್ತಾರೆ. ಒಂದು ಮಣೆ ಅಥವಾ ಪೀಠದ ಮೇಲೆ ಅಕ್ಕಿ ಹರಡಿ, ಅದರ ಮೇಲೆ ಎರಡು ದೀಪಗಳನ್ನು (ಕಳಿಕಂಬ) ಇಡುತ್ತಾರೆ ಒಂದು ಶಿವನ, ಮತ್ತೊಂದು ಪಾರ್ವತಿಯ ಪ್ರತೀಕ. ಮಧ್ಯೆ ಗಣಪತಿ, ಶಿವ ಅಥವಾ ಮಂಗಳಗೌರಿಯ ಮೂರ್ತಿ ಇಡುವ ಪದ್ಧತಿಯೂ ಇದೆ.
- ಅರಿಶಿನ ಹಚ್ಚಿದ ದಾರಕ್ಕೆ ಒಂಬತ್ತು ಗಂಟು ಹಾಕಿ ಒಂದು ಹೂವನ್ನು ಕಟ್ಟಿ, ಪೂಜೆಯ ನಂತರ ಅದನ್ನು ಬಲಗೈಗೆ ಕಟ್ಟಿಕೊಳ್ಳುತ್ತಾರೆ.
- ದೀಪಗಳಿಗೆ ಗಂಧ, ಹೂವು, ಅರಿಶಿನ-ಕುಂಕುಮ ಅರ್ಪಿಸಿ ಪೂಜೆ ಮಾಡುತ್ತಾರೆ.
- ಭಂಡಾರ: ಒಳಗೆ ನಾಣ್ಯ ಅಥವಾ ನೆನೆಸಿದ ಕಡಲೆ ಇಟ್ಟು ಹಿಟ್ಟಿನಿಂದ ಕಡುಬು/ಕುಚ್ಚಿದ ಕಡುಬು ತಯಾರಿಸಿ ಬೇಯಿಸುತ್ತಾರೆ. ನೈವೇದ್ಯಕ್ಕೆ ಕಡುಬು, ಕಾಯಿ, ಬಾಳೆಹಣ್ಣು ಮುಂತಾದವು.
- ಪೂಜೆಯ ಕೊನೆಯಲ್ಲಿ ಸಹೋದರರು ಅಥವಾ ಮನೆಯ ಗಂಡು ಮಕ್ಕಳು ಭಂಡಾರವನ್ನು ಒಡೆಯುತ್ತಾರೆ . ಹೊಸ್ತಿಲ ಮೇಲೆ ಕಾಲಿಟ್ಟು ಮೊಣಕೈಯಿಂದ ಕಡುಬು ಒಡೆಯುವ ರೂಢಿ ಹಲವೆಡೆ ಇದೆ. ಒಳಗಿನ ನಾಣ್ಯ ಅವರಿಗೇ ಸೇರುತ್ತದೆ.
- ಆ ದಿನ ಕರಿದ ತಿಂಡಿಗಳನ್ನು ಸಾಮಾನ್ಯವಾಗಿ ತಿನ್ನುವುದಿಲ್ಲ.
- ಒಂಬತ್ತು ವರ್ಷ ವ್ರತ ಮುಗಿದ ಮೇಲೆ ಉದ್ಯಾಪನೆ ಒಂದು ಜೋಡಿ ದೀಪವನ್ನು ಸಹೋದರನಿಗೆ ಅಥವಾ ಬ್ರಾಹ್ಮಣನಿಗೆ ದಾನ ಮಾಡಿ ವ್ರತವನ್ನು ಸಂಪೂರ್ಣಗೊಳಿಸುತ್ತಾರೆ. ಜ್ಯೋತಿ ಭೀಮೇಶ್ವರ ಅಮಾವಾಸ್ಯೆ (ಭೀಮನ ಅಮಾವಾಸ್ಯೆ ವ್ರತ) ವನ್ನು ಶಿವ ಮತ್ತು ಪಾರ್ವತಿ ದೇವಿಗೆ ಅರ್ಪಿಸಲಾಗಿದೆ. ಭೀಮನ ಅಮಾವಾಸ್ಯೆಯಂದು ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಮತ್ತು ಹುಡುಗಿಯರು ತಮ್ಮ ಗಂಡಂದಿರು, ಸಹೋದರರು ಮತ್ತು ಮನೆಯಲ್ಲಿರುವ ಇತರ ಪುರುಷ ಸದಸ್ಯರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ತಂಬಿಟ್ಟು ದೀಪವನ್ನು ಹಿಟ್ಟಿನಿಂದ ತಯಾರಿಸಲಾಗುತ್ತದೆ ಮತ್ತು ಕೋಪ, ಹತಾಶೆ ಮುಂತಾದ ಎಲ್ಲಾ ಕೆಟ್ಟ ಭಾವನೆಗಳನ್ನು ತಣ್ಣಗಾಗಿಸಲು ಬೆಳಗಿಸಲಾಗುತ್ತದೆ.
ಶ್ರಾವಣ ಮಾಸದ ಅಮಾವಾಸ್ಯೆಯಂದು ಬಹಳ ಶುಭ ಸಂಯೋಗ ರೂಪುಗೊಳ್ಳುತ್ತಿದೆ. ಈ ದಿನದಂದು 3 ಶುಭ ಯೋಗಗಳು ರೂಪುಗೊಳ್ಳಲಿವೆ. ಭೀಮನ ಅಮಾವಾಸ್ಯೆಯಂದು ಗುರು ಪುಷ್ಯ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ ರೂಪುಗೊಳ್ಳುತ್ತವೆ. ಆ ದಿನ ದಿನವಿಡೀ ಸರ್ವಾರ್ಥ ಸಿದ್ಧಿ ಯೋಗ ಇರುತ್ತದೆ. ಈ ಯೋಗದಲ್ಲಿ ಮಾಡುವ ಕೆಲಸ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇರುವುದರಿಂದ, ಈ ದಿನದ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ.
ಈ ದಿನವು ಪೂರ್ವಜರ ಭಕ್ತಿಯೊಂದಿಗೆ ಸಹ ಸಂಬಂಧಿಸಿದೆ, ಅಲ್ಲಿ ಪೂರ್ವಜರ ಸ್ಮರಣೆಯನ್ನು ಗೌರವಿಸಲು, ಅವರ ಆಶೀರ್ವಾದ ಮತ್ತು ದುಷ್ಟ ಪ್ರಭಾವಗಳಿಂದ ರಕ್ಷಣೆ ಪಡೆಯಲು ಅರ್ಪಣೆಗಳನ್ನು ಮಾಡಲಾಗುತ್ತದೆ. ಇದು ಶಿವನಿಗೆ ಮೀಸಲಾದ ಸಮಯವಾಗಿದ್ದು, ಆಶೀರ್ವಾದಗಳನ್ನು ಪಡೆಯಲು ಮತ್ತು ಆಸೆಗಳನ್ನು ಈಡೇರಿಸಲು ಉದ್ದೇಶಿಸಲಾದ ಆಚರಣೆಗಳು ಮತ್ತು ಅರ್ಪಣೆಗಳನ್ನು ಒಳಗೊಂಡಿರುತ್ತದೆ.
ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆಯೆಂದು ಕರೆಯಲಾಗುವ ಭೀಮನ ಅಮಾವಾಸ್ಯೆಯ ದಿನದಂದು ಪತಿ ಪಾದ ಪೂಜೆಗೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಈ ದಿನ ವಿವಾಹಿತ ಮಹಿಳೆಯರು ಪತಿಯ ಪಾದ ಪೂಜೆಯನ್ನು ಮಾಡುವ ಮೂಲಕ ಅವರ ದೀರ್ಘಾಯುಷ್ಯದ ವರವನ್ನು ದೇವರಲ್ಲಿ ಬೇಡುತ್ತಾರೆ.
ಇತರೆ ಹೆಸರುಗಳು
ಜ್ಯೋತಿರ್ಭೀಮೇಶ್ವರ ವ್ರತ, ಪತಿ ಸಂಜೀವಿನಿ ವ್ರತ, ದೀಪಸ್ತಂಭ ಪೂಜೆ ಮತ್ತು ಭೀಮ ಅಮಾವಾಸ್ಯೆ ಎಂದೂ ಕರೆಯುತ್ತಾರೆ .ಹೀಗೆ ಪ್ರತಿ ವರ್ಷ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ, ಸಂತೋಷ ನೆಮ್ಮದಿ ದೊರೆತು ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಹೆಣ್ಣು ಮಕ್ಕಳು ಪ್ರತಿ ವರ್ಷ ಭೀಮನ ಅಮಾವಾಸ್ಯೆಯಲ್ಲಿ ವ್ರತಾಚರಣೆ ಮಾಡುತ್ತಾರೆ.

–ಮ. ನ. ಲತಾಮೋಹನ್ ಮೈಸೂರು

