ತಾಯಂದಿರ ದಿನ?

Share Button

ಕಾಶ್ಮೀರದೊಡಲಿನಲಿ
ಸ್ವರ್ಗಕ್ಕೆ ಲಗ್ಗೆ ಹಾಕಿದೆವೆಂದು
ಕುಣಿಯುತ್ತ ನಲಿಯುತಿರಲು
ನಿಮಿಷಾರ್ಧದಲಿ ಆಹುತಿಯಾದರು
ಶತ್ರುಗಳ ಮಾರಣ ಹೋಮಕೆ
ತಾಯಂದಿರ ಒಲವಿನ ಪುತ್ರರು

ಹಿಮದ ಮಡಿಲಲಿ ರಕ್ತದೋಕಳಿ
ಅಮಾಯಕರ ಪ್ರಾಣಾರ್ಪಣೆ
ಭಯೋತ್ಪಾದಕರ ಅಟ್ಟಹಾಸ
ಮೊಳಗಿತು ಗಡಿಗಳ ದಾಟಿ
ಬೆಚ್ಚಿತು ಇಡೀ ವಿಶ್ವ ನಂಬಲಾಗದೆ ಕಟು ಸತ್ಯ

ಮತ್ತೀಗ ದಿಟ್ಟ ಮಾತೆಯರು
ಕಳಿಸಿಹರು ತಮ್ಮ ಕುಲಪುತ್ರರನು
ಕುತಂತ್ರಿ ನೀಚರನು ಸದೆಬಡೆಯಲೆಂದು
ಮಳೆ ಬಿಸಿಲು ಮಂಜು ಲೆಕ್ಕಿಸದೆ ಕಾದಲೆಂದು
ತಪ್ಪಿತಸ್ಥರಿಗೆ ಪಾಠ ಕಲಿಸಲೆಂದು

ಈ ಬವಣೆಗೆ ಕೊನೆ ಎಂದು?
ಬಸಿರ ಕೊರಗಿಗೆ ಅಂತ್ಯವಿದೆಯೇ?
ಹೆತ್ತ ಮಗನೆದುರೇ ಪ್ರಾಣಾರ್ಪಣೆ ಗೈದ
ಅಮಾಯಕರಿಗೆ ನ್ಯಾಯ ದೊರೆಯುವುದೇ?
ಇವೆಲ್ಲ ಕನಸಾಗಬಾರದೇ? ಹುಸಿಯಾಗಬಾರದೇ?
ಮಮ್ಮಲ ಮರುಗಿದೆ ತಾಯಿ ಜೀವ

ಎಂದೆಂದೂ ಮರೆಯಲಾಗದ ದೃಶ್ಯ
ಕಣ್ಮುಂದೆ ಕುಣಿದು ಅಣಕಿಸಿದೆ
ಹಚ್ಚಹಸಿರು ನೆನಪನ್ನು ಮರೆವುದೆಂತು?
ಮಾತೆಯರಿಗೆ ಶುಭ ಕೋರುವುದೆಂತು?

ಧೈರ್ಯವೇ ಸರ್ವತ್ರ ಸಾಧನವೆನ್ನೋಣವೇ?
ಸಮಯವೇ ಉಪಶಮನವೆನ್ನೋಣವೇ?
ಜನ್ಮಭೂಮಿಗೆ ಅಸು ನೀಗಿದವರಿಗೆ
ಸಂತಾಪದ ನೆರೆ ಹರಿಸೋಣವೇ?

ಎಂದೆಂದಿಗೂ ಬಾರದಿರಲಿ ಮತ್ತೊಮ್ಮೆ
ಹೃದಯವಿದ್ರಾವಕ ಭೀಕರ ವಿಷ ಘಳಿಗೆ
ಜೈ ಹುತಾತ್ಮ ಜೈ ಜವಾನ್ ಎಂದುಸುರಿ
ಅರ್ಪಿಸುವೆ ನಿಮಗೆಲ್ಲರ ಕಣ್ಣೀರ ತರ್ಪಣ

-ಜಿ.ವಿ.ನಿರ್ಮಲ

7 Responses

  1. ಪದ್ಮಾ ಆನಂದ್ says:

    ಒಡಲಾಳದಿಂದ ಹುಟ್ಟಿ ಬಂದ ಕವಿತೆ ಮನಕಲಕುವಂತಿದೆ, ಓದಿ ಮೌನವಾಗಿ ರೋಧಿಸೋಣವೆನಿಸಿತು.

  2. ಕವಿತೆ ಓದಿ ಮನಸ್ಸು ಆರ್ಧವಾಯತು ಮೇಡಂ

  3. ಶುಭಲಕ್ಷ್ಮಿ ಆರ್ ನಾಯಕ. says:

    ಅರ್ಥಪೂರ್ಣ ಕವಿತೆ ಮೇಡಮ್

  4. ನಯನ ಬಜಕೂಡ್ಲು says:

    ತುಂಬಾ ನೋವಿನಿಂದ ಕೂಡಿವೆ ಸಾಲುಗಳು.

  5. Nirmala G V says:

    ನನ್ನ ಕವಿತೆಗೆ ಸ್ಪಂದಿಸಿದವರಿಗೆ ಮನದಾಳದ ವಂದನೆಗಳು.

  6. Anonymous says:

    ತುಂಬಾ ಮನಮುಟ್ಟುವಂತಿದೆ

  7. ಶಂಕರಿ ಶರ್ಮ says:

    ನಿಜಾರ್ಥದಲ್ಲಿ ಹುತಾತ್ಮರಿಗೆ ಕಣ್ಣೀರ ತರ್ಪಣವನ್ನಿತ್ತ ಅರ್ಥಪೂರ್ಣ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: