ಬೆಳಕು-ಬಳ್ಳಿ

ನಿಧಾನವಾಗಿ ನೀ ನಶಿಸಲಾರಂಭಿಸುವೆ !

Share Button

ಎಲ್ಲೂ ಪಯಣಿಸದೇ ನೆಲದಲೇ ಬೇರು ಕಚ್ಚಿದಂತೆ ನಿಂತಲ್ಲಿಯೇ ಕುಂತಾಗ
ಪುಸ್ತಕವೊಂದರ ಪುಟಗಳಲಿ ನೀ ಮೊಗವಿಟ್ಟು ಓದದೇ ಮಗುಮ್ಮಾದಾಗ
ಜೀವಭಾವದ ಏರಿಳಿತಗಳ ಸಶಬ್ದಕೆ ಕಿವಿಗೊಡದೆ ಅಸೂಕ್ಷ್ಮ ಮತಿಯಾದಾಗ
ಸ್ವತಃ ನಿನ್ನನು ಯಾವ ಪರಾಮರ್ಶೆಗೂ ಒಳಪಡಿಸಿ ಕೊಳ್ಳದೇ ಸ್ಥಗಿತವಾದಾಗ

ನಿನ್ನಮೂಲ್ಯ ಆತ್ಮಗೌರವವನು ಹರಾಜಿಗಿಟ್ಟು ಬೇಕಾಬಿಟ್ಟಿ ಬದುಕಿ ಬಿಟ್ಟಾಗ
ಸಹಬಾಳ್ವೆ ಮರೆತು ಏಕಾಕಿತನದ ಗೋಡೆ ಕಟ್ಟಿಕೊಂಡು ವಾಸ ಮಾಡುವಾಗ
ನಿಸ್ತೇಜವೆನಿಪ ಹಳೆಯ ಪ್ರವೃತ್ತಿಗಳಿಗೇ ಲಗತ್ತಾಗಿ ಅದರ ಗುಲಾಮನಾದಾಗ
ಹೊಸದಾರಿಯನು ಅನ್ವೇಷಿಸದೇ ಹಳೆಯ ದಾರಿಯಲೇ ನಡೆದು ಬಿಟ್ಟಾಗ

ಹೊಸತಿಗೆ ತುಡಿಯದೇ ಹೊಸ ಸ್ನೇಹಕ್ಕೆ ಮಿಡಿಯದೇ ನಿಂತ ನೀರಾದಾಗ
ಜೀವಿತದಲಿ ಘಟಿಸುವ ಏನೆಲ್ಲಾ ಸಂಭವಗಳಿಗೆ ಒಳಿತು ಕೆಡುಕುಗಳಿಗೆ
ಮುಖಾಮುಖಿಯಾಗದೇ ಸತ್ವ ಕಳೆದುಕೊಂಡು ಅಧೀರನಾದಾಗ
ತೀವ್ರತರ ಭಾವಗಳ ಹೃದಯಪೂರ್ವಕವಾಗಿ ಸ್ವೀಕರಿಸದೇ ಹೋದಾಗ

ಸುರಕ್ಷಿತ ವಲಯದಿಂದೀಚೆ ಬಂದು ಅಪರಿಚಿತಕ್ಕೆ ಎದುರಾಗದಿದ್ದಾಗ
ಮಾಡುವ ಕೆಲಸದಲಿ ತೃಪ್ತಿ ಕಾಣದೆ ನೀರಸವೇ ಯಾಂತ್ರಿಕವಾದಾಗ
ಕನಸುಗಳ ಕಚಗುಳಿಗೆ ಸ್ವಲ್ಪವಾದರೂ ಭಾವುಕವಾಗದೇ ಹೋದಾಗ
ಕನಿಷ್ಠ ಒಮ್ಮೆಯಾದರೂ ಎದೆಯ ಪಿಸುದನಿಗೆ ಓಗೊಡದೇ ಇದ್ದಾಗ

ಬುದ್ಧಿ ತರ್ಕಿಸುವ ಎಲ್ಲವನೂ ತೆಗೆದಿರಿಸಿ,
ಕರುಳ ಕೂಗಿಗೆ ಸ್ಪಂದಿಸದೇ ಹೋದಾಗ
ನಿನಗೆ ನೀನೇ ಅಪರಿಚಿತನಾಗಿ ಬಿಟ್ಟಾಗ
ನಿಧಾನವಾಗಿ ನೀ ಸಾಯಲಾರಂಭಿಸುವೆ !

ಕವಿ ಪಾಬ್ಲೊ ನೆರೂಡಾ

ಮೂಲ : ಚಿಲಿ ದೇಶದ ರಾಷ್ಟ್ರೀಯ ಕವಿ ಪಾಬ್ಲೊ ನೆರೂಡಾ
ಇಂಗ್ಲಿಷ್ ಅವತರಣಿಕೆ : ಮಾರ್ತಾ ಮೆಡಿರೋಸ್
ಕನ್ನಡಕ್ಕೆ : ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *