ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 5
ಶಂಖಚೂಡ, ವೃಷಭಾಸುರ ವಧಾ
ಬಲರಾಮ ಕೃಷ್ಣರು ಯಮುನಾನದಿಯ
ಉಪವನದಿ ವಿಹರಿಸುತ್ತಿರೆ
ಕೃಷ್ಣನ ಮನೋಹರ ವೇಣುಗಾನಕೆ
ಗೋಪಿಸ್ತ್ರೀಯರು ನೃತ್ಯ ಗಾಯನದಿ ವಿನೋದಿಸುತ್ತಿರೆ
ಕುಬೇರನನುಚರ ಶಂಖಚೂಡ ಸ್ತ್ರೀಯರನ್ನೆಲ್ಲಾ ಅಪಹರಿಸೆ
ಲಲನೆಯರ ಆಕ್ರಂದನವ ಕೇಳಿ ಧೀರ ಬಲರಾಮ ಕೃಷ್ಣರು
ಅವನ ಬೆನ್ನಟ್ಟಿ ತಲೆಯ ಬೇಧಿಸಿ
ನಂತರದಿ
ಅವನ ಶಿರೋಭೂಷಣವಾಗಿರ್ಪ ರತ್ನವ
ಅಣ್ಣ ಬಲರಾಮನಿಗರ್ಪಿಸಿದ ಕೃಷ್ಣ
ರಾತ್ರಿಯ ಶರಶ್ಚಂದ್ರಿಕೆಯಲಿ ಯಮುನಾ ತೀರದಿ
ವಿವಿಧ ಕ್ರೀಡೆಯಲಿ ನಲಿವ ಗೋಪಾಂಗನೆಯರಿಗಲ್ಲದೆ
ಪುರುಷರಿಗೂ ಪೀತಾಂಬರದಿ ಅಲಂಕೃತನಾಗಿ
ಕೃಷ್ಣ ವೇಣುಗಾನ ಮಾಡುತ್ತಾ ನಡೆವ
ಮೋಹನ ರೂಪವ ನೋಡಿ
ಬ್ರಹ್ಮ ರುದ್ರಾದಿ ದೇವಮುಖ್ಯರು
ವೇಣುಗಾನದ ಸ್ವರಬೇಧಗಳ ತತ್ವವ
ತಿಳಿಯಲಾರದಾದರೂ ತಲೆದೂಗುತ
ವೇಣುಗೀತೆಯ ಸವಿದು ನಲಿವರು
ಕಂಸದೂತರಿಗೆಲ್ಲಿ ವಿರಾಮ?
ಅರಿಷ್ಟನಾಮಿ ರಕ್ಕಸ ಗೂಳಿಯ ರೂಪದಿ
ಗೋವುಗಳ ಮಂದೆಯ ಹೊಕ್ಕು
ಗೋವು, ಗೋಪಾಲಕರನ್ನೆಲ್ಲ ಚದುರಿಸುತ್ತಿರೆ
ಕೃಷ್ಣನು ಆ ದುಷ್ಟ ವೃಷಭದ ಎರಡೂ ಕೊಂಬುಗಳ ಪಿಡಿದು
ಬಟ್ಟೆಯನು ಹಿಂಡುವಂತೆ ಕೊರಳ ಹಿಂಡಿ ತಿರುಗಿಸಲು
ವೃಷಭಾಸುರ ಏಳಲು ಪ್ರಯತ್ನಿಸೆ
ಕೃಷ್ಣ ಅದರ ಕೊಂಬುಗಳೆರಡನ್ನೂ ಕಿತ್ತು
ಅವುಗಳಿಂದಲೇ ರಕ್ಕಸನ ಸಂಹರಿಸಿದ
ಸರ್ವರೂ ಪರಮಾನಂದದಿ ಮಹಾಬಾಹು
ಸತ್ಯ ಸಂಪನ್ನ ಕೃಷ್ಣನಿಗಭಿನಂದಿಸಿ ಸ್ತುತಿಸಿದರು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44748

-ಎಂ. ಆರ್. ಆನಂದ, ಮೈಸೂರು

