ಮಣಿಯಬಾರದು ಬದುಕು ನೋವಿಗೆ
ಬಂದು ಹೋಗುವ ಯಾವುದೇ ಸೋಲಿಗೆ
ಬಲಿಯಾಗಬಾರದು ಜೀವ ಒತ್ತಡಗಳಿಗೆ
ಎಚ್ಚೆತ್ತುಕೊಳ್ಳಬೇಕು ಬದುಕು ಈ ಘಳಿಗೆ
ನಮ್ಮ ಬದುಕಿನ ಆಳ ಅಗಲವು ಹಿರಿದು
ಯಾವ ತಂತ್ರವು ಹೆಚ್ಚು ಕಾಲ ನಡೆಯದು
ಕುತಂತ್ರದಿಂದ ಅನುದಿನವೂ ಗೆಲ್ಲಲಾಗದು
ಎಲ್ಲ ಮುಖವಾಡವು ಕಳಚಿ ಬೀಳುವುದು
ಒಮ್ಮೊಮ್ಮೆ ಬದುಕು ತುಂಬ ಕಷ್ಟ ಎನಿಸುವುದು
ತಾಳ್ಮೆ ಒಂದಿದ್ದರೆ ಎಲ್ಲ ದೂರ ಸರಿಯುವುದು
ಇಲ್ಲಸಲ್ಲದ ಯೋಚನೆಗೆ ಬಲಿಯಾಗಬಾರದು
ಸರಿತಪ್ಪುಗಳ ಜಿಜ್ಞಾಸೆಗೆ ಬಿದ್ದು ತಪ್ಪಾಗಬಾರದು
ಎಲ್ಲ ಕಷ್ಟ ನಷ್ಟಗಳನ್ನು ಒದ್ದೋಡಿಸಬಹುದು
ಮತ್ತೆ ಮತ್ತೆ ಪುಟಿದು ಎದ್ದು ನಿಲ್ಲಬಹುದು
ಮೊದಲು ನಾವು ಗಟ್ಟಿಯಾಗಿ ನಿಲ್ಲಬೇಕಿಲ್ಲಿ
ಸೋಲು ಗೆಲುವು ಎಲ್ಲವನ್ನೂ ಎದುರಿಸಬೇಕಿಲ್ಲಿ
ಶರಣಾಗಬಾರದು ನಾವು ಎಂದಿಗೂ ಸಾವಿಗೆ
ದಾರಿ ದೀಪವಾಗಬೇಕು ನಮ್ಮವರ ಬದುಕಿಗೆ
ಗಂಟು ಮೂಟೆಕಟ್ಟಿ ಓಡಿಸಬೇಕು ಕಷ್ಟಗಳಿಗೆ
ಇನ್ನಷ್ಟು ಸ್ಫೂರ್ತಿ ತುಂಬಬೇಕು ನಂಬಿದವರಿಗೆ

ನಾಗರಾಜ ಜಿ. ಎನ್. ಬಾಡ, ಕುಮಟ

