ಮೊಗದ ತುಂಬಾ ನಗು ಎದೆಯಲ್ಲಿ ಅಳಿಸದ ಕೃತಜ್ಞತಾ ಭಾವ
ನನಗಿತ್ತ ಬಾಳು ಬದುಕು ಎಲ್ಲಾ ನಿನ್ನದೇ ಎನ್ನುವ ಈ ಜೀವ
ಗತಿಸಿ ಹೋದ ದಿನಗಳ ನೆನೆದಾಗ ಎಲ್ಲೆಲ್ಲೂ ನಿನ್ನ ಕೃಪೆ ಕಾಣಿಸುತ್ತಿದೆ
ಪಡೆದ ಭಾಗ್ಯಗಳ ಹಿಂದೆ ನಿನ್ನದೇ ಅಭಯ ಹಸ್ತವಿದೆ ಎನಿಸುತ್ತಿದೆ
ಸಾಧಿಸಲು ಎನ್ನ ಬಳಿ ಏನಿತ್ತು ಗುಲಗಂಜಿಯಷ್ಟು ಸಹಾ ಧೈರ್ಯವಿರಲಿಲ್ಲ
ಮಾಡಬಲ್ಲೆನೆಂಬ ವಿಶ್ವಾಸ ನಂಬಿಕೆ ಹತ್ತಿರವೇ ಸುಳಿದಿರಲಿಲ್ಲ
ಅದೇಗೆ ಎಲ್ಲವನ್ನೂ ನೀ ಸಾಧ್ಯವಾಗಿಸಿದೆ
ಯಾವ ಮಾಯದಲ್ಲಿ ಎನಗೆ ಭರವಸೆಯ ತುಂಬಿದೆ
ಹೂ ಎತ್ತಿಟ್ಟಂತೆ ಕಾರ್ಯ ಕೆಲಸಗಳ ನಡೆಸಿಕೊಟ್ಟು ಕರುಣೆಯ ತೋರಿದೆ
ಎನ್ನ ಮೌನ ಪ್ರಾರ್ಥನೆಗಳಿಗೆ ಯಾವಾಗಲೂ ಬಿಡದೆ ವರವನ್ನು ನೀಡಿದೆ
ಜರುಗಿದ ಪ್ರತಿ ಘಟನೆಗಳ ಹಿಂದೆ ನಿನ್ನದೇ ಪವಾಡ ಕಾಣಿಸುತ್ತಿದೆ
ಕರಗಿದ ಕಷ್ಟಗಳಲಿ ನಿನ್ನ ಮಮತೆಯ ಸೆಲೆ ಬಿಡದೆ ಹರಿಯುತ್ತಿದೆ
ನೆನಸದಾ ಮುನ್ನವೇ ಕಾರ್ಯಗಳು ಕೈಗೂಡುತ್ತಿವೆ
ಕೈಗೆಟುಕದ ಅವಕಾಶಗಳು ಅಚ್ಚರಿಯೆನಿಸುವಂತೆ ಎನಗಾಗಿ ಕಾಯುತ್ತಿವೆ
ಮರೆತು ಮರೆಯುವಂತಿಲ್ಲ ನಿನ್ನ ದಿವ್ಯ ರೂಪವ
ಕರೆದು ಕರೆಯಲೇಬೇಕಲ್ಲ ನಿನ್ನ ಪುಣ್ಯ ನಾಮವ
ಜನ್ಮ ಜನ್ಮದಲಿ ನಿನ್ನನೇ ಜಪಿಸುವಂತಾಗಲಿ
ಕ್ಷಣ ಕ್ಷಣವೂ ನಿನ್ನ ಸ್ಮರಣೆ ಎನ್ನ ಉಸಿರಲಿ ಬೆರತಿರಲಿ
ಕಲ್ಲೆಂದವರು ಯಾರೋ ನಿನ್ನ ಎನ್ನ ಪಾಲಿಗೆ ಬೆಣ್ಣೆಯಾಗಿರುವೆ
ಇಲ್ಲೆಂದವರು ಯಾರೋ ನಿನ್ನ ಕೂಗಿದಾಗ ವಿವಿಧ ರೂಪದಲ್ಲಿ ಬಂದು ಕಾಪಾಡಿರುವೆ
ಶರಣಬಸವೇಶ ಕೆ. ಎಂ
ಭಗವಂತನಿಗೆ ಕೃತಘ್ನತೆಯ ನ್ನು ಅರ್ಪಿಸುವ ಕವಿತೆ ಚೆನ್ನಾಗಿದೆ… ಸಾರ್
ಭಗವಂತನಿಗೆ ಕೃತಜ್ಞತೆ ಅರ್ಪಿಸುತ್ತಾ ಆತನ ಮಹಿಮೆ ಅನಾವರಣಗೊಳಿಸಿರುವ ರೀತಿ ಚೆನ್ನಾಗಿದೆ. ಅಭಿನಂದನೆಗಳು ಸರ್.
ಶರಣಾಗತ ಭಾವ
ಜೀವ ಹಾಗೂ ಜೀವನವನ್ನಿತ್ತ, ಕಣ್ಣಿಗೆ ಕಾಣದ ಶಕ್ತಿ ಭಗವಂತನಿಗೆ ಶರಣಾದ ಭಾವ… ಚೆನ್ನಾಗಿ ಮೂಡಿಬಂದಿದೆ.
ಶರಣಾಗತಿ; ಸಂಪೂರ್ಣ ಅಹಮಿನ ಅವನತಿ
ಹೌದು, ಇದು ಎಲ್ಲರಲು ಮೂಡಿದರೆ ಅದುವೇ ಸುಕೃತಿ
ಕಣ್ಣಿಗೆ ಕಾಣದ ನಾಟಕಕಾರ ಮನದಿ ಕಾಣುವ; ಅದುವೇ ಮನದ ಮಹಿಮೆ !
ಧನ್ಯವಾದ ಗೆಳೆಯರೇ