ಬೆಳಕು-ಬಳ್ಳಿ

 ನಾನೊಂದು ಚಿನಾರ್

Share Button

ನಾನೊಂದು ಸುಂದರ ಚಿನಾರ್ ಮರ
ನನ್ನ ತವರು ಅತಿಸುಂದರ ಕಾಶ್ಮೀರ

ದಶಕಗಳಿಂದ ನಿಂತಿರುವೆ ನಾನಿಲ್ಲಿ
ವರ್ಷವಿಡೀ ಸುಂದರ ಎಲೆಗಳಲ್ಲಿ
ಆಶೆಯಿಹುದು ಶಾಂತಿಯ ನಿರೀಕ್ಷೆಯಲ್ಲಿ
ಕಾಶ್ಮೀರಿಗಳಿಗೆಲ್ಲ ಒಳ್ಳೆಯದಾಗಲಿ

ಆಗಾಗ ನಡೆಯುವುದು ರಕ್ತಪಾತ
ಮುಗ್ಧ ಜೀವಿಗಳ ಮಾರಣಹೋಮ
ಆಗುವೆ ನಾನಾಗ ಒಂದು ಮೂಕಸಾಕ್ಷಿ
ಆಗುವುದು ನನ್ನ ಪ್ರತಿ ಎಲೆ ಕಣ್ಣೀರ ಹನಿ

ನನ್ನ ಬೇರುಗಳು ಆಳದಲ್ಲಿದ್ದರೂ
ನೆನೆದಿವೆ ಕೆಂಪು ರಕ್ತದೋಕುಳಿಯಲ್ಲಿ
ನನ್ನ ಬೇರುಗಳು ಹೀರಿವೆ ರಕ್ತವ
ನಾನೇನು ಮಾಡಲಿ ಅಸಹಾಯಕಳು

ಅಲ್ಲೇ ಕಣಿವೆಯಲ್ಲಿ ಢಂಢಂ ಸದ್ದು
ಎಲ್ಲೋ ಒಬ್ಬೊಬ್ಬರಾಗಿ ಬಿದ್ದ ಸದ್ದು
ನವವಧುವಾದಳು ನವ ವಿಧವೆ
ಅವಳ ಬಾಳೆಲ್ಲ ಹಾಳಾಯಿತಲ್ಲವೆ

ತಂದೆಯ ಸಾವನ್ನು ಎದುರಿಗೇ
ಕಂದಮ್ಮಗಳು ನೋಡಿ ತತ್ತರಿಸಿ
ಬೆಂದ ಮನದಿಂದ ಇರಬೇಕಲ್ಲ
ಎಂದೆಂದಿಗೂ ದುಃಖದಲ್ಲಿ

ಕಾಶ್ಮೀರವು ಭಾರತ ಮಾತೆಯ ಮುಕುಟ
ಇಲ್ಲೇಕೆ ಈ ಪರಿಯ ದ್ವೇಷದಾಟ
ಎಲ್ಲರೂ ಒಂದಲ್ಲವೇ ಅಕಟಕಟ
ಇಲ್ಲರಲಿ ಶಾಂತಿಯ ಕಿರೀಟ

ಡಾ.ಎಸ್.ಸುಧಾ, ಮೈಸೂರು

12 Comments on “ ನಾನೊಂದು ಚಿನಾರ್

  1. ಹೇಮಾಮಾಲಾ ಅವರಿಗೆ ನಮಸ್ಕಾರ. ಕಾಶ್ಮೀರ ದ ಚಿನಾರ್ ಮರಗಳು ಬಹಳ ಸುಂದರ. ಆದರೆ ರಕ್ತಪಾತಕ್ಕೆ ಸಾಕ್ಷಿ. ನೋಡಿ ಬಂದಾಗ ಈ ಕವಿತೆ ಮೂಡಿತು. ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

  2. ಎಂತಹ ಪದಪುಂಜಗಳು. ಅಲ್ಲೋಲಕಲ್ಲೋಲವಾದ ಮನಸ್ಸಿನ ಚಿತ್ರಣ ಸುಲಲಿತವಾಗಿ ಹರಿದು ಬಂದಿದೆ. ಘಟನೆಗಳು ಇಂದಿಗೂ ಹಸಿರಾಗಿವೆ. ಮತ್ತೆಂದೂ ಮರುಕಳಿಸದಿರಲಿ. ಕವನದ ರಚನೆಗೆ ಅಭಿನಂದನೆಗಳು.

    1. ಥ್ಯಾಂಕ್ಸ್ ನಿರ್ಮಲ. ಜೊತೆಗೆ ನೀನೂ ಇದ್ದೆಯಲ್ಲ.

    2. ಥ್ಯಾಂಕ್ಸ್ ಗೆಳತಿ. ಜೊತೆಗೆ ನೀನೂ ಇದ್ದೆಯಲ್ಲ

    1. ನಾಗರತ್ನ ಥ್ಯಾಂಕ್ಸ್. ಪ್ರತ್ಯಕ್ಷ ನೋಡಿದ್ದು ಬರೆದಿದ್ದೇನಷ್ಟೇ.

  3. ಕಾಶ್ಮೀರ ದ ಪೂರ್ತಿ ಚಿತ್ರಣವನ್ನು ಕಟ್ಟಿ ಕೊಡುವ ಸಾಲುಗಳು ಚೆನ್ನಾಗಿವೆ.

  4. ಕಾಶ್ಮೀರದಲ್ಲಿ ನಡೆದ ರಕ್ತಪಾತವೇ ಕಣ್ಣಿಗೆ ಕಟ್ಟಿದಂತಾಯಿತು…ಎದೆ ನಡುಗಿತು. ..ನೆನಪು ಮಾಸದಂತೆ ಮಾಡಿತು.

    1. ಶಂಕರಿಯವರೇ, ಪಹಲ್ಗಮ್ ಘಟನೆಗೆ 1 ವಾರ ಮೊದಲು ನಾನಲ್ಲಿದ್ದೆ. ಅದು ತುಂಬಾ ಕಾಡುತ್ತಿತ್ತು. ಧನ್ಯವಾದಗಳು ಮೆಚ್ಚಿದಕ್ಕೆ.

  5. ಸುಂದರ ಪ್ರಕೃತಿಯ ತಾಣ ಕಾಶ್ಮೀರದಲ್ಲಿ ನಡೆಯುತ್ತಿರುವ ರಕ್ತಪಾತವನ್ನು ಕಂಡು ಮರುಗಿದ ಮನದಿಂದ ಮೂಡಿಬಂದ ಕವಿತೆ ಮನೋಜ್ಞವಾಗಿದೆ.

  6. ಧನ್ಯವಾದಗಳು ಪದ್ಮಾ. ಇನ್ನು ಮುಂದೆ ಶಾಂತಿ ನೆಲಸಲಿ ಎಂದು ಹಾರೈಸುವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *