ಬೆಳಕು-ಬಳ್ಳಿ

ಮುಕ್ತಕಗಳು

Share Button

ಅರೆಘಳಿಗೆ ನಿರ್ಣಯವು ಜೀವವನೆ ತೆಗೆಯುವುದು
ತರುವುದದು ಚಿಂತೆಯನು ಒಡನಾಡಿಗಳಿಗೆ
ಕರೆ ಬರುವ ತನಕವೂ ಕಾಯುವುದು ಸಹನೆಯಲಿ
ಹರಿಚಿತ್ತ ಸತ್ಯವದು ಬನಶಂಕರಿ

ಕೋಪವದು ಮನದಲ್ಲಿ ಕುದಿಯುತಿಹ ಲಾವವದು
ತಾಪವನು ಹಿಂಗಿಸಲು ಸಹನೆಯದು ಇರಲಿ
ದೀಪವದು ತನ್ನುರಿಯ ಶಾಂತಿಯಲಿ ಕೊಡುವಂತೆ
ರೂಪುಗೊಳಿಸುತ ಬಾಳು ಬನಶಂಕರಿ

ಮಾನವಗೆ ಧನದಾಸೆ ಅತಿರೇಕವಿರುತಿರಲು
ಮಾನ ಹೋದರು ಬಿಡನು ಸಂಪತ್ತಿನಾಸೆ
ದಾನ ನೀಡಲು ಮನವು ಶಾಂತಿಯನು ಪಡೆಯುವುದು
ದೀನರಿಗೆ ಕರುಣೆಯಲಿ ಬನಶಂಕರಿ

ಪರರಲ್ಲಿ ಅತಿಯಾದ ನಂಬಿಕೆಯು ತರವಲ್ಲ
ತರತರಹ ಜನರಿಹರು ಎಲ್ಲೆಲ್ಲು ನೋಡು
ವರವಹುದು ಸುಜನರನು ಗೆಳೆತನದಿ ಕಾಣುವುದು
ಬರಿದೆ ಮರುಗುವುದಲ್ಲ ಬನಶಂಕರಿ

ಕಾಣದಾ ಕೈಯೊಂದು ಕುಣಿಸುತಿದೆ ಸಕಲರನು
ಕಾಣುತಿರೆ ರಂಗದಲಿ ಬಹುವಿಧದ ನಟರ
ವೇಣುವನು ನುಡಿಸುತಿಹ ಮಾಧವಗೆ ನಮಿಸುತಲಿ
ಜಾಣಳಾಗುತ ಬದುಕು ಬನಶಂಕರಿ

-ಶಂಕರಿ ಶರ್ಮ., ಪುತ್ತೂರು.

10 Comments on “ಮುಕ್ತಕಗಳು

    1. ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು

  1. ಒಂದೊಂದು ಮುಕ್ತಕಗಳು ನೀತಿಯುಕ್ತವಾಗಿವೆ. ಬದುಕಲು ಮಾರ್ಗದರ್ಶನ ನೀಡುತ್ತವೆ. ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿವೆ. ವಂದನೆಗಳು ಮೇಡಂ

    1. ತಮ್ಮ ಸಹೃದಯೀ ನುಡಿಗಳಿಗೆ ಶರಣೆಂಬೆ.

  2. ತಮ್ಮ ಮೆಚ್ಚುಗೆಯ ನುಡಿಗಳಿಗೆ ವಂದನೆಗಳು ಗಾಯತ್ರಿ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *