ಸದ್ದಿರದ ಸುದ್ದಿಗಳು

Share Button

ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/
ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು//

ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/
ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು//

ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ ಸಂಜೆ ಸೂರ್ಯನನ್ನು/
ಮರಳು ದಡದ ಮೇಲೆ ಮೆಲ್ಲಗೆ ಮೆಲುಕುವ ಮಲ್ಲಿಗೆ ದಂಡೆಯೊಂದು ನೀನು//

ನೀ ಬರುವ ಸಮಯಕ್ಕೆ ಕಾಯುವ ಭಾವಗಳು ಹರಿಯುವವು ಮಳೆಗಾಲದ ಹೊಳೆಯಾಗಿ/
ಹೋಗಿ ಮೈಯೊಡ್ಡಿ ನೆನೆಯುವ ಗುಂಗಿಗೆ ರಂಗೇರಿಸುವ ಮಳೆಬಿಲ್ಲೊಂದು ನೀನು//

ಕಂಡು ಹಿಡಿಯಬೇಕು ಹೊಸ ಸೂತ್ರ ನೀ ಕೊಟ್ಟ ಕನಸುಗಳ ಕಚಗುಳಿ ಲೆಕ್ಕ ಹಾಕಲು/
ಆ ಮೂಗಿನ ನತ್ತು ಪ್ರತಿ ರಾತ್ರಿಗಳ ಮತ್ತು ಜೀವ ತಳೆಯುವ ಜಾಗರಣೆಯೊಂದು ನೀನು//

ಮಟಮಟ ಮಧ್ಯಾಹ್ನ ಕಪ್ಪು ಬಿಳಿ ಮೋಡಗಳ ಪಯಣ ಧರೆಗಿಳಿಯಲು ಅನುರಾಗ/
ಕಳೆದೋಗುವ ಮುನ್ನ ವ್ಯರ್ಥವಾಗಿ ಚಳಿಗಾಲ ಹಿಡಿದಪ್ಪಿದ ಎಳೆಬಿಸಿಲೊಂದು ನೀನು//

ಇಲ್ಲದೊಂದು ಕವಿತೆಯದು ಕಾಡುವಂತಹ ಒನಪು ಹೊದ್ದುಕೊಂಡು ಬಿಸುಪು/
ಸುಮ್ಮಸುಮ್ಮ ನಗುವ ಸದ್ದಿರದ ಸಂಗತಿಗಳಿಗೆ ಸುದ್ದಿಯಾಗುವ ನೆಪವೊಂದು ನೀನು//

-ಬಸವರಾಜ ಕಾಸೆ ,  ವಿಜಯಪುರ

      

3 Responses

  1. Krishnaprabha says:

    ಚಂದದ ಕವನ

  2. ನಯನ ಬಜಕೂಡ್ಲು says:

    ಸುಂದರವಾದ ಸಾಲುಗಳು.

  3. Shankari Sharma says:

    ಗಝಲ್ ತರಹ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: