ಅರಣ್ಯ ರೋದನವಾಯ್ತು ಕೇಳುವವರಿಲ್ಲ ನಿನ್ನ ಕೂಗು
ನಿನ್ನ ನಿಷ್ಠೆ ಪ್ರಾಮಾಣಿಕತೆಗೆ ಇಲ್ಲ ಕವಡೆ ಕಾಸಿನ ಕಿಮ್ಮತ್ತು
ತನ್ನತನವ ಹೆಚ್ಚಿಸಿಕೊಳ್ಳಲು ನಡೆಸಿದ ಕುಟಿಲ ಕಾರ್ಯತಂತ್ರಕ್ಕೆ ಸಿಕ್ಕಿದೆ ಗೆಲುವು
ಮೊದಲು ಹಾಡಿ ಹೊಗಳಿದವರ ಕಣ್ಣಲ್ಲಿಂದು ಕಸವಾಗಿಹೆವು
ಬಿರುದು ಸನ್ಮಾನಗಳ ಜಾಗದಲಿ ಬರೀ ಅವಹೇಳನ ಮಾತುಗಳು
ಬಿದ್ದ ಹುಲಿಗೆ ಆಳಿಗೊಂದು ಕಲ್ಲು ಎನ್ನುವಂತೆ ತೂರಿ ಬರುತಿಹ ಬಿರು ನುಡಿಗಳು
ಕಲಿ ಪಾರ್ಥನಂತೆ ಕದನದಲಿ ಹೋರಾಡಿ ಗೆದ್ದ ವಿಜಯಗಳು ಈಗ ನೆನಪಿಲ್ಲ
ನೀವೇ ಅಮೂಲ್ಯ ಆಸ್ತಿ ಅನ್ನುವ ಮಾತು ಮರೆತೇ ಹೋಗಿದೆಯೆಲ್ಲಾ
ಕೆಲ ವರ್ಷಗಳ ಅಂತರದಲ್ಲಿ ಎಲ್ಲಾ ಅಯೋಮಯವಾಗಿದೆ
ಬದಲಾದ ಪರಿಸ್ಥಿತಿ ನಿಲ್ಲದ ಸ್ಪರ್ಧೆ ಕಣ್ಣೀರ ತರಿಸಿದೆ
ಜಂಘಾಬಲವೇ ಉಡುಗಿ ಹೋಗಿ ಆತಂಕ ಮನೆ ಮಾಡಿದೆ
ಆತ್ಮವಿಶ್ವಾಸವೇ ಕುಗ್ಗಿ ಹೋಗಿ ಎಮ್ಮ ಬಲಹೀನತೆ ಮೇಲಾಗಿದೆ
ನೈಜತೆ ಅರಿಯದೆ ಏಕಪಕ್ಷೀಯವಾಗಿ ನಿರ್ಧರಿಸುವ ಮನಸ್ಥಿತಿಗೆ ಏನು ಹೇಳಲಿ
ಚಿನ್ಮಯನ ಕೃಪೆ ಇರುವವರೆಗೆ ಹೀಗೆ ತೇಲುತಾ ಸಾಗೋಣವೆಂದು ಮನವ ಸಂತೈಸಲಿ
-ಕೆ.ಎಂ ಶರಣಬಸವೇಶ
