ಏನನರ್ಪಿಸಲಿ ದೇವ
ನಾನೆಂಬುದೇ ನಿನ್ನ ಭಾವ!
ಆಘ್ರಾಣಿಪ ಗಂಧವೆಲ್ಲ ಕುಸುಮದೆಂಜಲು
ಬೀಸಿ ಬಹ ತಂಗಾಳಿ ಗಿಡಮರದೆಂಜಲು
ಸವಿರುಚಿಯ ಹಣ್ಣುಹಂಪಲು ಪಕ್ಷಿಯೆಂಜಲು
ಸಮಸ್ತ ಲೋಕವೇ ನೇಸರನ ಕಣ್ಣೆಂಜಲು
ಏನನರ್ಪಿಸಲಿ ದೇವ
ನಿನ್ನೆಂಜಲು ಈ ಜೀವ!
ಸ್ವರ್ಗ ನರಕ ಮನದೆಂಜಲು
ಪುಣ್ಯಪಾಪ ಪುರಾಣದೆಂಜಲು
ತರ್ಕ-ತತ್ತ್ವವೆಲ್ಲ ಬುದ್ಧಿಯೆಂಜಲು
ಪರಮಾತ್ಮನೆಂಬುದೇ ವಿಶ್ವದೆಂಜಲು
ಏನನರ್ಪಿಸಲಿ ದೇವ
ನೀನೇ ನನ್ನಂಥ ಭಕ್ತರೆಂಜಲು!
ಪರಿಶುದ್ಧಿಯೆಂಬುದು ಸುಳ್ಳಿನೆಂಜಲು
ಪವಿತ್ರವೆಂಬುದು ಕಲ್ಪನೆಯೆಂಜಲು
ಎಂಜಲಿರದ ಒಂದೇ ಒಂದು
ಸಿಗದ ಧರೆಯಲಿ ಧ್ಯಾನ ಕೂಡ ಸಂಬುದ್ಧರೆಂಜಲು !
ಏನನರ್ಪಿಸಲಿ ದೇವ
ಕಣ್ಣೀರು ಕೂಡ ಕಣ್ಣಿನೆಂಜಲು
ಮನವೆಂಬುದು ಮಾತಿನೆಂಜಲು
ಮೌನವಂತೂ ಅರಿವೆನೆಂಜಲು
ಒಳಗಣ್ಣ ತೆರೆದು ನೋಡಲು
ಇದು ಕೂಡ ಎಲ್ಲರು ಬಳಸುವ ಭಾಷೆಯೆಂಜಲು !!
(“ನೀರು ಪ್ರಾಣಿಗಳೆಂಜಲು ; ಹಾಲು ಕರುವಿನೆಂಜಲು” ಎಂಬ ಕನಕದಾಸರ ನುಡಿಯಿಂದ ಪ್ರೇರಿತ !)
ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

