ಬೆಳಕು-ಬಳ್ಳಿ

ಎಂಜಲು !

Share Button

ಏನನರ್ಪಿಸಲಿ ದೇವ
ನಾನೆಂಬುದೇ ನಿನ್ನ ಭಾವ!

ಆಘ್ರಾಣಿಪ ಗಂಧವೆಲ್ಲ ಕುಸುಮದೆಂಜಲು
ಬೀಸಿ ಬಹ ತಂಗಾಳಿ ಗಿಡಮರದೆಂಜಲು
ಸವಿರುಚಿಯ ಹಣ್ಣುಹಂಪಲು ಪಕ್ಷಿಯೆಂಜಲು
ಸಮಸ್ತ ಲೋಕವೇ ನೇಸರನ ಕಣ್ಣೆಂಜಲು

ಏನನರ್ಪಿಸಲಿ ದೇವ
ನಿನ್ನೆಂಜಲು ಈ ಜೀವ!

ಸ್ವರ್ಗ ನರಕ ಮನದೆಂಜಲು
ಪುಣ್ಯಪಾಪ ಪುರಾಣದೆಂಜಲು
ತರ್ಕ-ತತ್ತ್ವವೆಲ್ಲ ಬುದ್ಧಿಯೆಂಜಲು
ಪರಮಾತ್ಮನೆಂಬುದೇ ವಿಶ್ವದೆಂಜಲು

ಏನನರ್ಪಿಸಲಿ ದೇವ
ನೀನೇ ನನ್ನಂಥ ಭಕ್ತರೆಂಜಲು!

ಪರಿಶುದ್ಧಿಯೆಂಬುದು ಸುಳ್ಳಿನೆಂಜಲು
ಪವಿತ್ರವೆಂಬುದು ಕಲ್ಪನೆಯೆಂಜಲು
ಎಂಜಲಿರದ ಒಂದೇ ಒಂದು
ಸಿಗದ ಧರೆಯಲಿ ಧ್ಯಾನ ಕೂಡ ಸಂಬುದ್ಧರೆಂಜಲು !

ಏನನರ್ಪಿಸಲಿ ದೇವ
ಕಣ್ಣೀರು ಕೂಡ ಕಣ್ಣಿನೆಂಜಲು

ಮನವೆಂಬುದು ಮಾತಿನೆಂಜಲು
ಮೌನವಂತೂ ಅರಿವೆನೆಂಜಲು
ಒಳಗಣ್ಣ ತೆರೆದು ನೋಡಲು
ಇದು ಕೂಡ ಎಲ್ಲರು ಬಳಸುವ ಭಾಷೆಯೆಂಜಲು !!

(“ನೀರು ಪ್ರಾಣಿಗಳೆಂಜಲು ; ಹಾಲು ಕರುವಿನೆಂಜಲು” ಎಂಬ ಕನಕದಾಸರ ನುಡಿಯಿಂದ ಪ್ರೇರಿತ !)

ಡಾ. ಹೆಚ್‌ ಎನ್‌ ಮಂಜುರಾಜ್‌, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *