ಬೆಳಕು-ಬಳ್ಳಿ

ಕಿಟಕಿ

Share Button

ಅವರಿರವರ ಮಾತಿಗೆ
ತಲೆಕೆಡಿಸಿ ಕೊಳ್ಳುವಿ ಯಾಕೆ
ನಿನ್ನದಲ್ಲದ ತಪ್ಪಿಗೆ
ಸುಮ್ಮನೆ ಕೊರಗುವಿ ಯಾಕೆ

ಮಾತಿಗೆ ಮಾತು ಬೆಳೆಸಿ
ಜಗಳ ಮಾಡುವಿ ಯಾಕೆ
ಮೌನದಿ ಸಾಗುವುದನ್ನು
ಮರೆಯುವಿ ಯಾಕೆ

ಊರು ಎಂದ ಮೇಲೆ
ಕೇರಿ ಇರಲೇ ಬೇಕು
ಕೇರಿಯಲ್ಲಿಯ ಮೋರಿ
ಗಬ್ಬು ನಾರುವುದು ಯಾಕೆ

ಹೊಂದಾಣಿಕೆ ಇರದ ಮೇಲೆ
ದೂರ ದೂರ ಸರಿಬೇಕು ಜೋಕೆ
ಸುಮ್ಮನೆ ಗುದ್ದಾಟವ ಮಾಡಿ
ಯಾತನೆ ಪಡೆಯುವುದು ಯಾಕೆ

ಮನದೊಳಗಿನ ಕಿಡಿ ನೆರೆ_ಹೊರೆಯ
ಸುಡುವ ಮೊದಲು
ನಿನ್ನ ಮನವನ್ನೇ ಸುಡುವುದು
ಎನ್ನುವುದ ಅರಿಯದೆ ಹೋದೆ ಯಾಕೆ

ನಿನ್ನರಿವು ನಿನ್ನೊಳಗೆ
ಇರದೆ ಹೋದ ಮೇಲೆ
ಜಗದ ಜನರಮೇಲೆ ಸುಮ್ಮನೆ
ಗೂಬೆ ಕೂರಿಸುವೆ ಯಾಕೆ

ಸುಡುವ ಮನವನ್ನು ಮೊದಲು
ತಣ್ಣಗೆ ಮಾಡಿಕೊ
ಸುತ್ತಮುತ್ತಲಿನ ಗೌಜು ಗದ್ದಲದ
ಉಸಾಬರಿಯು ನಿನಗೆ ಯಾಕೆ

ಶಾಂತಿ ಕದಡುವ ಜನರ ನಡುವೆ
ಮನಶಾಂತಿ ಹುಡುಕುವಿ ಯಾಕೆ
ಯಾರದು ಸುಖಕ್ಕೆ ದುಡಿ_ದುಡಿದು
ಕತ್ತೆಯಂತೆ ಆಗುವೆ ಯಾಕೆ

ಶಾಂತಿ ನೆಮ್ಮದಿಯ ಜೀವನವ
ಎಲ್ಲೋ ಹುಡುಕುವಿ ಯಾಕೆ
ನಿನ್ನೊಳಮನದ ಬೆಳಕಿನ ಕಿಟಕಿಯ
ತೆರೆಯುವುದ ಮರೆತೆ ಯಾಕೆ

-ನಾಗರಾಜ ಜಿ. ಎನ್.  ಬಾಡ
ಕುಮಟ, ಉತ್ತರ ಕನ್ನಡ.

6 Comments on “ಕಿಟಕಿ

  1. ತನಗೆ ತಾನೇ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ…ಪರಹಾರ ಹುಡುಕಿಕೊಡುವ ತಂತ್ರವನ್ನು ಕವನದ ಮೂಲಕ ಹೇಳಿ ರುವ ರೀತಿ ಚೆನ್ನಾಗಿದೆ ಸಾರ್..ವಂದನೆಗಳು

  2. ಮೌಲ್ಯಯುತ ಸಂದೇಶವನ್ನು ನೀಡುತ್ತಾ, ಒಳಮನಸ್ಸಿನ ಕಿಟಕಿಯನ್ನು ತೆರೆದು ಅಲ್ಲಿನ ಕತ್ತಲನ್ನು ದೂರ ಮಾಡುವ ಪ್ರಯತ್ನ ಮಾಡಿದ ಸುಂದರ ಕವನ

  3. ನೆಮ್ಮದಿಯ ಜೀವನಕ್ಕೆ ಸರಳ ವಿಧಾನಗಳನ್ನು ಕಾವ್ಯಾತ್ಮಕವಾಗಿ ಹೆಣೆದಿರುವ ಕವನ ಸೊಗಸಾಗಿ ಮೂಡಿಬಂದಿದೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *