ಮಹಿಳೆಯ ಕೌಟುಂಬಿಕ ಬಾಂಧವ್ಯ ಹಾಗೂ ಬದ್ಧತೆ

Share Button

 

ಭಾರತೀಯ ಮಹಿಳೆಯ ಸಂಸ್ಕೃತಿ-ಸಂಸ್ಕಾರವು ವಿಶ್ವಮಾನ್ಯತೆ ಪಡೆದು ಆದರ್ಶವೂ ಆದರಣೀಯವೂ ಆಗಿದೆ.ಇಲ್ಲಿಯ ಮಹಿಳೆಯ ಕುಟುಂಬ ಬಾಂಧವ್ಯ ಬಲು ವಿಸ್ತಾರವಾದುದು.ಅದೊಂದು ರೀತಿಯ ವಿಶಾಲವಾದ ಆಲದ ಮರದಂತೆ!.ಒಬ್ಬ ಸ್ತ್ರೀ  ಯಾ  ನಾರಿ ತನ್ನ ಜನನದಿಂದ ಮೊದಲ್ಗೊಂಡು ಮರಣದ ತನಕ ಎರಡು ಕುಟುಂಬದ ಸದಸ್ಯಳಾಗಿ ಹಾದುಹೋಗುತ್ತಾಳೆ. ಹುಟ್ಟುಕುಟುಂಬ ಒಂದಾದರೆ; ಸೇರಿದ ಕುಟುಂಬ ಇನ್ನೊಂದು.ಹಾಗೆಯೇ ಬಾಂಧವ್ಯದಲ್ಲೂ  ರಕ್ತ ಸಂಭಂಧ ಹಾಗೂ ನೆಂಟಸ್ತಿಕೆ ಸಂಬಂಧ ಎಂಬೀ ಎರಡು ವಿಧಗಳು.

ವಿವಾಹವಾಗುವ ಸಂದರ್ಭದಲ್ಲಿ ಸಪ್ತಪದಿ ತುಳಿಯುವಾಗ ಪುರೋಹಿತರು ನೀಡುವ ಉಪದೇಶದಂತೆ ‘ಧರ್ಮೇಚ, ಅರ್ಥೇಚ, ಕಾಮೇಚ’-ಸತಿಪತಿಗಳಾದ ನೀವಿಬ್ಬರೂ ಬದುಕಿನುದ್ದಕ್ಕೂ ಧರ್ಮ,ಅರ್ಥ,ಕಾಮ, ಮೋಕ್ಷಗಳ ಸಾಧನೆಗಾಗಿ ಜೊತೆಯಲ್ಲೇ ಬಾಳಬೇಕು. ಬೌದ್ಧಿಕ ಉನ್ನತಿಗಾಗಿ ಧರ್ಮ, ಶರೀರದ ಪೋಷಣೆಗಾಗಿ ಅರ್ಥ, ಸಂತೃಪ್ತಿ ಸತ್ಸಂತಾನಕ್ಕಾಗಿ ಕಾಮ, ಆತ್ಮೋನ್ನತಿಗಾಗಿ ಮೋಕ್ಷ , ಎಂಬುದು ಹಿಂದೂಗಳ ನಂಬಿಕೆ. ವಿವಾಹವು ಹೆಣ್ಣಿನ ಬದುಕಿಗೊಂದು ಆಧಾರ.ಈ ವಿಚಾರ ಆಧುನಿಕ ಕಾಲಕ್ಕೆ ಅನ್ವಯಿಸುವುದಿಲ್ಲವಾದರೂ ಹೆಣ್ಣಿಗೊಂದು ರಕ್ಷಣೆ ಬೇಕು ಎಂಬುದು ಸರ್ವಕಾಲಿಕ ಸತ್ಯ. ಹೆಣ್ಣಿಗೆ ವಿವಾಹವಾಗುವ ತನಕ ತಂದೆಯೂ ವಿವಾಹದ ನಂತರದಲ್ಲಿ ಪತಿಯೂ ಮುಂದೆ ವೃದ್ಧಾಪ್ಯದಲ್ಲಿ ಮಕ್ಕಳೂ ಆಸರೆ ಎಂದು ಮನುಸ್ಮೃತಿಯಲ್ಲಿ ಬರೆದಿದ್ದಾನೆ. ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟ ಮೇಲೆ ಹೆಣ್ಣಿನ ಜವಾಬ್ದಾರಿ ಹೆಚ್ಚುತ್ತದೆ. ಅಲ್ಲಿ ಪ್ರಾರಂಭದಲ್ಲಿ ಕೆಲವರಿಗೆ ಒಂದು ರೀತಿಯ ಭಯದಿಂದಾಗಿ ಪ್ರತಿಯೊಂದಕ್ಕೂ ಗಾಬರಿ, ಗಲಿಬಿಲಿ ಅನುಭವ ಆಗಬಹುದು. ತವರಿನಲ್ಲಿದ್ದಂತೆ ಸೇರಿದ ಮನೆಯಲ್ಲಿ ಸ್ವೇಚ್ಛೆಯಾಗಿರಲು ಬರುವುದಿಲ್ಲ. ಆದರೆ ಧೈರ್ಯ,ಆತ್ಮವಿಶ್ವಾಸ ಇದ್ದವರು ಎದೆಗುಂದದೆ ವಾಸ್ತವಿಕತೆಯ ಭದ್ರನೆಲೆಗಟ್ಟಿನಲ್ಲಿ ನಿಲ್ಲುತ್ತಾರೆ. ಮಕ್ಕಳು-ಮರಿಗಳಾದ ಮೇಲಂತೂ ಜವಾಬ್ದಾರಿ ಹೆಚ್ಚುತ್ತದೆ.

ಕುಟುಂಬದಲ್ಲಿ ಸಮಸ್ಯೆಗಳು, ಕಷ್ಟ-ಕೋಟಲೆಗಳು ಎದುರಾಗುತ್ತವೆ.ತ್ಯಾಗ, ಸಹನೆಗಳ ಪರೀಕ್ಷೆ ಆಗಬಹುದು.ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳ ಗೋಡೆ, ಬದುಕಿನ ನದಿಯನ್ನು ತಡೆ ಹಿಡಿಯಬಹುದು. ಆದರೆ ಒಂದೊಂದು ಸಮಸ್ಯೆಯೂ ಅವಕಾಶವನ್ನು ಸೃಷ್ಟಿಸುತ್ತದೆಯಲ್ಲದೆ ಅನುಭವ ಪಾಠವನ್ನು ಕಲಿಸುತ್ತದೆ. ಇಂತಹ ಸಿಹಿ-ಕಹಿ ಅನುಭವಿಸಿದ ಮೇಲಷ್ಟೆ ಯುವತಿ ಪ್ರಭುದ್ಧಳಾಗುತ್ತಾಳೆ.ಸ್ತ್ರೀಯರು ಮನೆಯ ಗೃಹಿಣಿಯರಾಗಿ ಮಹತ್ತರ ಪಾತ್ರ ವಹಿಸಬೇಕಾಗುತ್ತದೆ. |ಗೃಹಿಣಿ ಗೃಹ ಮುಚ್ಚತೇ| ಸದ್ಗೃಹಿಣಿಯು ಮನೆಗೆ ಶೋಭೆಯನ್ನು ತರುವವಳಾಗಿದ್ದಾಳೆ.ಈಗಿನ ಉದ್ಯೋಗಸ್ಥರು ಈ ಮಾತನ್ನು ತಳ್ಳಿಹಾಕುವುದಾದರೂ ಹೊರಗೆ ದುಡಿಯುವ ಮಹಿಳೆ, ಎರಡು ಜವಾಬ್ದಾರಿಯನ್ನು ಹೊರಬಲ್ಲವಳಾದರೆ [ವಿಭಕ್ತ ಕುಟುಂಬವಾದರೂ]; ಅಲ್ಲಿ ಸುಖ, ಸಾಮರಸ್ಯಗಳು ನೆಲೆಯೂರಲು ಸಾಧ್ಯವಿದೆ.ಮಹಿಳೆಯರು ತಾರುಣ್ಯದಿಂದಲೇ ತಮ್ಮ ಗುಣ ಶೀಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕಾಗುತ್ತದೆ.

ವಧುವನ್ನು ನೋಡಲು ಬಂದಾಗ ಅವಳಲ್ಲಿ ಹಾಡು ಹಸೆ ಹೇಳಿಸಿ ಉತ್ತೀರ್ಣಳಾದರೆ; ಅಡಿಗೆಕೆಲಸ ಮನೆಗೆಲಸಗಳೆಲ್ಲ ಬಲ್ಲವಳಾದರೆ ವರನ ಹಿರಿಯರು ಆಯ್ಕೆ ಮಾಡುವ ಕಾಲವೊಂದಿತ್ತು. ಹಿರಿಯರು ನೋಡಿ ನಿರ್ಣಯಿಸಿದ ಮೇಲಷ್ಟೆ ಮದುವೆ ನಡೆಯುವುದಲ್ಲದೆ; ಹುಡುಗ-ಹುಡುಗಿ ಪರಸ್ಪರ ಮುಖ ನೋಡಿಕೊಳ್ಳುವುದೂ ಹಸೆಮಣೆಯ ಮೇಲಷ್ಟೆ ಆಗಿತ್ತು. ಹೀಗೆ ಮನೆತುಂಬಿ ಬಂದ ಹೆಣ್ಣು ಮನೆಗೆಲಸ,ಮನೆಮಂದಿಯ ಊಟೋಪಚಾರ,ಹಿರಿಯರ ಬೇಕು-ಬೇಡಗಳನ್ನೆಲ್ಲ ಪೂರೈಸಬೇಕಲ್ಲದೆ  ’ಕ್ಷಮಯಾ ಧರಿತ್ರಿ’ ಎಂದು ಆಕೆಗೆ ಹಿತವಚನ ಹೇಳಲಾಗುತ್ತಿತ್ತು. ಆಕೆ ಭೂಮಿತೂಕದವಳಾಗಿರಬೇಕೆಂದು ಮನೆಯವರೂ ಬಂಧುವರ್ಗದವರೂ  ಬಯಸುತ್ತಿದ್ದರು. ಅಂತಹ ಕನ್ಯೆಯ ವಯಸ್ಸೆಷ್ಟು ಗೊತ್ತೇ…!?.ಕೇಳಿ ಬೆಚ್ಚಿ ಬೀಳಬೇಡಿ. ಕೇವಲ ಐದರಿಂದ ಹತ್ತು ವರ್ಷದೊಳಗೆ!. ಹೀಗೆ ವಿವಾಹವಾಗಿ ಸಾಗಿಬಂದ ತಲೆಮಾರು ಉತ್ಸಾಹಿಗಳೂ ಅನುಭವಿಗಳೂ ಕಿರಿಯರಿಗೆ ಮಾರ್ಗದರ್ಶಕರೂ ಆಗಿ ಕಾಣಸಿಗುತ್ತಾರೆ. ಹೆಣ್ಣು ತುಂಬು ಸಂಸಾರದಲ್ಲಿದ್ದಾಗಲೂ ತವರನ್ನು ಮರೆಯುವುದಿಲ್ಲ.ಅದಕ್ಕಾಗಿಯೇ ಜನಪದೀಯರು ಹೀಗೆ ಹಾಡಿದ್ದಾರೆ…|ಹೆಣ್ಣು ಹುಟ್ಟಿತು ಎಂದು ಅಣ್ಣ ಚಿಂತಿಸಬೇಡ| ಹೆಣ್ಣುಂಗು ಪರರ ಒಡವೆಯ| ಆ ಹೆಣ್ಣು; ಅಣ್ಣ ನೀ ಬಾರೆಂದೆ ಕರೆಯುಗು||  ಅದೆಷ್ಟು ಅರ್ಥಗರ್ಭಿತವಾಗಿದೆ ಈ ಸಾಲುಗಳು!.ಪುತ್ರ ಸಂತಾನವಾಗಬೇಕೆಂದು ಬಯಸಿ ಹಲವು ದೇವರುಗಳಿಗೆ ಹರಕೆಹೊತ್ತು ಪಡೆದ ಮಗುವಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಇಂಜಿನಿಯರೋ ಡಾಕ್ಟ್ರೋ ಆಗಿ ಹೊರದೇಶದಲ್ಲಿ ಹೋಗಿ ಕುಳಿತು ವೃದ್ಧ ತಂದೆ-ತಾಯಿಯರನ್ನು ಮರೆತು ಬಿಡುವ ಸನ್ನಿವೇಶವೇ ಈಗ ಎಲ್ಲೆಡೆ ಕಾಣುತ್ತಿದೆ. ಅಂತಹವರಿಗಾಗಿಯೇ  ಅದೆಷ್ಟೋ ಕಾಲದ ಹಿಂದೆ ಮೇಲಿನ ಜಾನಪದ ಹಾಡು ರಚಿಸಿದ್ದಾರೆ ಅನಿಸುತ್ತಿದೆ.


ಹೆಣ್ಣಿನ ಶ್ರೇಷ್ಟತೆಃ-      ಯಾದೇವಿ ಸರ್ವ ಭೂತೇಷು ಮಾತೃರೂಪೇಣ ಸಂಸ್ಥಿತಾ| ನಮಸ್ತಸ್ಮೈ ನಮಸ್ತಸ್ಮೈ  ನಮಸ್ತಸ್ಮೈ ನಮೋನಮಃ|| ಎಂಬ ಜಗನ್ಮಾತೆಯ ಸ್ತುತಿಯಿಂದ ಮಾತೆಯ ಮಹತ್ವದ ಅರಿವಾಗುವುದು. |ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ  ನ  ಭವತಿ| ಎಂದು ಶಂಕರಾಚಾರ್ಯರು ತಾವು ರಚಿಸಿದ ದೇವ್ಯಪರಾಧಾ ಕ್ಷಮಾಪಣಾ ಸ್ತೊತ್ರದಲ್ಲಿ ಹೇಳಿದ್ದಾರೆ “ಲೋಕದಲ್ಲಿ ಕೆಟ್ಟ ಮಗ ಹುಟ್ಟ ಬಹುದು ಆದರೆ ಕೆಟ್ಟ ತಾಯಿ ಎಂದಿಗೂ ಇರಲಾರಳು. ಸ್ತ್ರೀ ಇತರ ಬಾಂಧವ್ಯಗಳಿಂದ ಮಾತೆಯಾಗಿ ಮಾಡುವ ಜವಾಬ್ದಾರಿಗಳೇ ಹಿರಿದೆನಿಸುತ್ತದೆ.ಭ್ರೂಣ ರೂಪದಿಂದ ಹಿಡಿದು ಮಗು ಜನಿಸಿ ಅದಕ್ಕೆ ಹೊರಗಿನ ಪ್ರಪಂಚದ ಆಗುಹೋಗುಗಳ ತಿಳುವಳಿಕೆ  ಬರುವವರೆಗೂ ಮಗು ತಾಯಿಯನ್ನೇ ಅವಲಂಬಿಸಿರುತ್ತದೆ.ಒಂದೇ ತಟ್ಟೆಯಲ್ಲಿ,ಒಟ್ಟಿಗೇ ಊಟ ಮಾಡುವವರಿದ್ದಾರೆ.ಆದರೆ ಒಂದೇ ಬಾಯಿಯಲ್ಲಿ ಒಟ್ಟಿಗೇ ಊಟ ಮಾಡುವವರಿದ್ದಾರೆ ಎಂದರೆ; ಅದು ತಾಯಿ-ಮಗು.ಗರ್ಭಸ್ಥ ರೂಪದಲ್ಲಿ. ಮಗು ತಾಯಿಯ ಆಧಾರದಿಂದ ಮಾತ್ರವಲ್ಲದೆ ಆಚಾರ, ವಿಚಾರ, ಚಿಂತನೆಗಳು  ಅಮ್ಮನ ಮನಸ್ಥಿತಿಯಿಂದಲೂ ಪ್ರಭಾವಿತವಾಗುತ್ತದೆ. ಮಹಾಭಾರತದ ಅಭಿಮನ್ಯು ಚಕ್ರವ್ಯೂಹವನ್ನು ಬೇಧಿಸುವ ವಿದ್ಯೆಯನ್ನು ಮಾತೆ ಸುಭದ್ರೆಯ ಗರ್ಭದಲ್ಲಿರುವಾಗ[ಕೃಷ್ಣ ಸುಭದ್ರೆಗೆ ಹೇಳುತ್ತಿದ್ದಾಗ]  ಆಕೆಯ ಜ್ಞಾನೇಂದ್ರಿಯಗಳ ಮೂಲಕ  ಪಡೆದುಕೊಂಡಿದ್ದು ಯೋಗ್ಯ ಉದಾಹರಣೆ. ಹಿರಣ್ಯ ಕಶಿಪುವುನ ವಿಷ್ಣು ವಿರೋಧವನ್ನು ನಿರ್ಮೂಲನ ಮಾಡುವುದಕ್ಕಾಗಿ ನಾರದ ಮುನಿಗಳು; ಗರ್ಭವತಿಯಾಗಿದ್ದ ಕಯಾದುವು ದೇವಗುಣ ಸಂಕೀರ್ತನ ಪ್ರಭಾವಕ್ಕೆ ಒಳಗಾಗುವಂತೆ ಮಾಡಿದರು. ಇವು ಪುರಾಣದ ಉದಾಹರಣೆಗಳಾದರೆ; ಶಿವಾಜಿಯು ಸಮರ್ಥ ವೀರ ಚಕ್ರವರ್ತಿಯಾಗುವಂತೆ ಆತನ ತಾಯಿ ಜೀಜಾಬಾಯಿ ಪ್ರಭಾವವೇ ಕಾರಣವೆಂದು ಇತಿಹಾಸ ಹೇಳುತ್ತದೆ. ಸ್ತ್ರೀ ಶಕ್ತಿ ದೇವತೆ. ಮಹಿಳೆ ಮನಸ್ಸು ಮಾಡಿದರೆ ಅವಳಿಂದಾಗದ ಕೆಲಸವೇ ಇಲ್ಲ. ಒಬ್ಬ ಮಹಾನ್ ವ್ಯಕ್ತಿಯ ಹಿಂದೆ ಆತನ ಶ್ರೇಯಸ್ಸಿಗೆ ಕಾರಣೀಭೂತಳಾಗಿ ಒಬ್ಬ ಸ್ತ್ರೀ ಇದ್ದಾಳೆ. ಆಕೆ ತಾಯಿಯೋ ಸೋದರಿಯೋ ಸ್ನೇಹಿತೆಯೋ ಯಾರೇ ಆಗಿರಬಹುದು. ಇದು ಅನುಭವಿಗಳ ಮಾತು. “ಮಾತೃ ದೇವೋಭವ”. ತಾಯಿಯನ್ನು ದೇವರಿಗೆ ಹೋಲಿಸಿದ್ದಾರೆ.ಆದರೆ ಜನ್ಮಕೊಡದ ಸಾಕುಮಾತೆಯರೂ ಹೆತ್ತ ತಾಯಿಗಿಂತ ಮಿಗಿಲಾಗಿ ಸಾಕಿದ್ದಿದೆ. ಉದಾಃ ಕೃಷ್ಣನನ್ನು ಸಾಕಿದ ಯಶೋದೆ, ಚಂದ್ರಹಾಸನನ್ನು ಶತ್ರುಗಳಿಂದ ರಕ್ಷಣೆಮಾಡಿ ಸಾಕಿದ, ಸೇವಕಿಯ ಉದಾಹರಣೆ ಕೊಡಬಹುದು.

ಇಂದಿನ ಮಾತೆಯರಿಗೆ ಕಿವಿಮಾತುಃ-ಕೆಲವು ದಶಕಗಳ ಹಿಂದೆ ಮಾತೆಯರು ತಮ್ಮ ಹೆಣ್ಣು ಮಕ್ಕಳು ಋತುಮತಿಯರಾದ ಮೇಲಷ್ಟೇ ಕಾಮುಕರಿಂದ ರಕ್ಷಣೆ ಮಾಡುವ ಜಾಗ್ರತೆ ವಹಿಸಿಕೊಳ್ಳಬೇಕಿತ್ತು. ಆದರೆ ಇತ್ತೀಚೆಗೆ ಹೆಣ್ಣು ಶಿಶು ಭೂಮಿಗೆ ಬಿದ್ದಾಕ್ಷಣದಿಂದ ಅದರ ಶೀಲ ಕಾಪಾಡುವ ಕಣ್ಣಿಡಬೇಕೆಂದರೆ!; ಇಂತಹ ನರರಾಕ್ಷಸ ಸಮಾಜ ಈಗ ಸೃಷ್ಟಿಯಾಗಿದೆ ಎಂಬುದನ್ನರಿತಾಗ ಮೈ ನವಿರೇಳುತ್ತದೆ. ಹಾಗೆಯೇ ಹೆಣ್ಣುಮಕ್ಕಳು ಲೌ ಜಿಹಾದ್ ಎಂಬ ಮಾಯಾ ಪುರುಷನ ಬಲೆಗೆ ಬಿದ್ದು ಮುಂದೆ ಮತಾಂತರ!, ಆಮೇಲೆ ದೇಶಾಂತರ!!,ಅದಕ್ಕೂ ಮುಂದೆ ಲೋಕಾಂತರ!!! ಆಗುವ ವರದಿಯನ್ನು ನಿತ್ಯಲೂ ಪತ್ರಿಕೆಗಳಲ್ಲಿ ನೋಡುತ್ತೇವೆ.ಈ ನಿಟ್ಟಿನಲ್ಲಿ,  ಹೆಣ್ಣು ಹೆತ್ತವರು ತಮ್ಮ ಎಚ್ಚರವೆಂಬ ಕಣ್ಣನ್ನು ಮುಚ್ಚಿದರೆ; ಮಕ್ಕಳನ್ನು ಕೈ ಬಿಟ್ಟರೆ, ಮುಂದೆ ಅವರ ಕಾಲು ಹಿಡಿದು ಬೇಡಿಕೊಳ್ಳುವ ಪರಿಸ್ಥಿತಿ ಬಂದೀತು ಎಂಬುದಂತೂ ಸುಳ್ಳಲ್ಲ.ಅದಕ್ಕಾಗಿ ಮಕ್ಕಳಿಗೆ ಅಕ್ಷರ ಕಲಿಸುವಾಗಲೇ ನಮ್ಮ ಸಂಸ್ಕೃತಿ- ಸಂಸ್ಕಾರಗಳನ್ನು ಕಲಿಸಬೇಕು. ಪ್ರತಿ ದಿನವೂ ಅವರ ಮೇಲೆ ಎಚ್ಚರವೆಂಬ ಕಣ್ಣನ್ನು ತೆರೆದಿಡಬೇಕು. ಸನಾತನ ಧರ್ಮದಲ್ಲಿ ಹಲವು ದೈವ ದೇವರುಗಳಿದ್ದರೂ ದೇವಾರಾಧನೆಗೆ ದೇವರ, ಸಮಯದ,ದಿನಗಳ ನಿರ್ಬಂಧವಿಲ್ಲ.ಅವರವರ ನಕ್ಷತ್ರ,ಜಾತಕ, ಮನಸ್ಸಿಗೆ ಹೊಂದಿಕೊಂಡು ಆರಾಧನೆ ಮಾಡುವ ಸ್ವಾತಂತ್ರ್ಯವಿದೆ. ಈ ಮುಕ್ತ ಸ್ವಾತಂತ್ರ್ಯ ಅನ್ಯ ಮತಗಳಲ್ಲಿಲ್ಲ ಎಂಬುದನ್ನು ಹೆಣ್ಣು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು. ಹೆಣ್ಣು ಮಕ್ಕಳು ನಮ್ಮ ಸನಾತನ ಧರ್ಮದ ಬಗ್ಗೆ ಪ್ರಶ್ನೆ ಹಾಕಿದಾಗ ಸಮರ್ಪಕ ಉತ್ತರ ನೀಡದೆ ಜಾರಿಕೊಂಡಿದ್ದಾದರೆ; ಮಕ್ಕಳಿಗೆ ನಮ್ಮ ಧರ್ಮದಲ್ಲಿ ವಿಶ್ವಾಸ ತಪ್ಪಲು ಆಸ್ಪದವಿದೆ.ಹಾಗಾಗಲು ಬಿಡಲೇಬಾರದು. ತಾಯಂದಿರಿಗೆ ಆ ತಿಳುವಳಿಕೆ ಇಲ್ಲದಲ್ಲಿ; ತಿಳಿದವರಿಂದ ತಿಳಿಹೇಳಿಸುವ ಕೆಲಸ ಖಂಡಿತ ಮಾಡಿ, ಎಂಬುದನ್ನು ಇಲ್ಲಿ ಒತ್ತಿ ಹೇಳುತ್ತಿದ್ದೇನೆ.

’ಸಂಸಾರ ಗುಟ್ಟು ವ್ಯಾಧಿ ರಟ್ಟು’ ಎಂಬ ಗಾದೆಯಿದೆ. ಕುಟುಂಬದಲ್ಲಿ ಕೆಲವಷ್ಟು ಜತನ ಮಾಡುವ, ಗುಪ್ತವಾಗಿಡುವ ವಿಷಯಗಳಿರುತ್ತವೆ. ಅದನ್ನು ಕಾಪಾಡಿಕೊಂಡು ಬರುವ ಜಾಣತನ  ಸ್ತ್ರೀಯರ ಮೇಲಿದೆ. ಆದರೆ ವ್ಯಾಧಿ ಯನ್ನು ವ್ಯೈದ್ಯರ ಮುಂದೆ ಮರೆಮಾಚಬಾರದು. ಹೆಣ್ಣಿಗೆ ಯಾರಲ್ಲಿ,ಹೇಗೆ ಮಾತಾಡಬೇಕೆಂದು ತಿಳಿದಿರಬೇಕು. ಅತ್ತೆ-ಸೊಸೆಯರು 36 ಆಗಿರದೆ 63 ಆಗಿರಬೇಕು.ಸಾಮರಸ್ಯವಿಲ್ಲದೆ ಪರಸ್ಪರ ಕಚ್ಚಾಡುತ್ತಿದ್ದರೆ; ಆ ಮನೆಯಲ್ಲಿ ಶಾಂತಿ-ನೆಮ್ಮದಿ ಎಲ್ಲಿಂದ? ಮನೆ ಮಂದಿಯಲ್ಲಿ ಒಡಕು ಮೂಡಿಸುವ ಕೆಲಸವೂ ಹಾಗೆಯೇ ಒಂದುಗೂಡಿಸುವ ಕಲೆಯೂ ಹೆಣ್ಣಿಗೆ ಇದೆಯಂತೆ!. ಒಬ್ಬರ ತಪ್ಪನ್ನು ಕ್ಷಮಿಸಬೇಕೇ ವಿನಹಃ ದ್ವೇಷ ಸಾಧನೆ ಮಾಡಬಾರದು ಎಂಬುದು  ಕಿವಿಮಾತು.  ಮನೆಯೊಳಗೆ ಸಂಘಟನಾ ಚತುರತೆ  ಇರುವ ಸ್ತ್ರೀಗೆ  ಸಮಾಜ ಸಂಘಟನಾ ಸಾಮಾರ್ಥ್ಯವೂ ಬರಲೇ ಬೇಕು.  ’ಹೆಣ್ಣು ಸಂಸಾರದ ಕಣ್ಣು’ ಎಂದಿದ್ದಾರೆ ಅನುಭವಿಗಳು!. ಹೆಣ್ಣಿನ ಇರವು  ಉತ್ತಮಗೊಂಡರೆ ಸಂಸಾರವು ಹಸನಾಗುವುದರಲ್ಲಿ ಸಂಶಯವೇ ಇಲ್ಲ.ಇಂದಿನ ನಾರಿ ಎಲ್ಲ ಕ್ಷೇತ್ರದಲ್ಲೂ ಅಂದರೆ..ಸೇನಾ ಸೇವೆಯಲ್ಲೂ ತನ್ನ ಛಾಪನ್ನು ಒತ್ತಿದ್ದಾಳೆ ಎಂಬುದು ಶ್ಲಾಘನೀಯ. ಹೀಗೆ  ಹತ್ತು ಸಂಸಾರಗಳಿಂದ  ಒಂದು ಉತ್ತಮ ಸಮಾಜ. ಈ ಸಮಾಜದಿಂದಲೇ ದೇಶ,ರಾಷ್ಟ್ರ, ಎಲ್ಲವೂ. ವೈಯಕ್ತಿಕ ಗುಣಶೀಲಗಳು, ಸಾಂಸಾರಿಕ ನೀತಿ ಇವು ಅತ್ಯಂತ ಮುಖ್ಯವಾದವುಗಳು. ವ್ಯಕ್ತಿ   ಸಂಪತ್ತೇ ದೇಶ ಸಂಪತ್ತೂ ಆಗಿದೆ. ಆ  ಸಂಪತ್ತನ್ನು ವೃದ್ಧಿಪಡಿಸುವ ಹೊಣೆಯಲ್ಲಿ  ಮಹಿಳೆಯರೂ ಭಾಗಿಗಳಾಗೋಣ.
.
– ವಿಜಯಾಸುಬ್ರಹ್ಮಣ್ಯ, ಕುಂಬಳೆ.

2 Responses

  1. Hema says:

    ಮಹಿಳಾ ದಿನಕ್ಕೆ ಅತಿ ಸೂಕ್ತವಾದ ಹಿತನುಡಿಗಳು..ಧನ್ಯವಾದಗಳು

    • ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

      ಪ್ರಕಟಿಸಿ ಸಹಕರಿಸಿದ ಆತ್ಮೀಯ ಹೇಮ ಮಾಲಾ ನಿಮಗೂ ಮನದಾಳದ ಧನ್ಯವಾದಗಳು.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: