ಬೆಳಕು-ಬಳ್ಳಿ

ಮಾಗಿದ ಉಳುಮೆ

Share Button

ಹದವಾಗಿ ಮಳೆ ಬಂದು ಮೇಲೆ ಹೂ ಬಿಸಿಲು ಕಾದು
ಆಗಾಗ ಹನಿಯಿಕ್ಕುವ ವಾತವರಣದಲಿ ನಡೆದಿದೆ ಉಳುಮೆಯ ಯಜ್ಞ

ಒಳಗಿರುವ ಮಣ್ಣ ನವಿರಾಗಿ ಹೊರ ಹಾಕಿ ಇಡೀ ಹೊಲದಲಿ ತುಂಬಿದೆ ಕೆಂಬಣ್ಣ
ಹಬ್ಬಿರುವ ಸಣ್ಣ ಹುಲ್ಲು ಗಿಡಗಂಟಿ ಬುಡ ಸಮೇತ ಮೇಲೆ ಬಂದು ಒಳ ಸೇರುತಿದೆ

ಬುವಿಯ ತುಂಬೆಲ್ಲಾ ಸಾಲು ಸಾಲು ಗೆರೆಗಳು ಮೂಡುತಿವೆ
ಮುಂಬರುವ ಬೀಜಗಳಿಗೆ ನೆಲೆಯಾಗಲು ಮೆತ್ತನೆಯ ನೆಲದ ಹಾಸಿಗೆ ಸಿದ್ದವಾಗುತ್ತಿದೆ

ಆಗಾಗ ಬೀಸುವ ಗಾಳಿಗೆ ಮೇರೆಯಲಿ ನಿಂತ ಮರಗಳು ಹೊಯ್ದಾಡಿ ಹುರುಪು ತುಂಬುತಿವೆ
ಹೊರ ಬಂದ ಹುಳ ಹುಪ್ಪಟೆಗಳ ಹೆಕ್ಕಿ ತಿನ್ನುವ ಹಕ್ಕಿಗಳು ಹಿಂದೆ ಹಿಂದೆ ಹಾರುತಿವೆ

ಹೊಟ್ಟೆ ತುಂಬಿಸುವ ಬೆಳೆ ತೆಗೆಯುವ ನೇಗಿಲ ಯೋಗಿಯ ಮೊಗದಲ್ಲಿ ಕಿರುನಗೆ ತುಂಬಿದೆ
ತುಸು ತೇವಾಂಶ ಬೆರೆತ ಮಣ್ಣಿನ ಕಂಪಿಗೆ ಮೈ ಮನವೆಲ್ಲಾ ಅರಳಿದೆ

ಗೀರು ಕೊಯ್ದು ಬೀಜ ಚೆಲ್ಲಿದರೆ ಭರಪೂರ ಇಳುವರಿ ನೀಡುವ
ಭೂಮಾತೆಯ ಕೃಪೆಯ ನೆನೆದು ಕಣ್ಣು ತುಂಬಿ ಬಂದಿದೆ
ಕೆಸರು ಮೆತ್ತಿದ ರೈತನ ಅಂಗಿಯ ಭಿತ್ತಿಯಲಿ ಅನುಪಮ ಚಿತ್ರ ಮೂಡಿದೆ

ಬಿತ್ತನೆ ಮಾಡಿ ಪೈರು ಪಡೆಯುವ ಕಾಯಕ ಯೋಗಿಯ ಲೀಲೆ ಕಣ್ಣಿಗೆ ಕಟ್ಟಿದೆ
ಫಲವತ್ತಾದ ಭೂಮಿಯ ನಂಬಿದವರ ಬಾಳಲಿ ಸಂತಸ ಮೂಡಲೆಂದು ಮನ ಬೇಡಿದೆ

– ಶರಣಬಸವೇಶ ಕೆ. ಎಂ

6 Comments on “ಮಾಗಿದ ಉಳುಮೆ

  1. ಅನ್ನದಾತನ ದುಡಿಮೆಯ ಹಂತಗಳು ಸೊಗಸಾಗಿ ಮೂಡಿಬಂದ ಚಂದದ ಕವನ.

Leave a Reply to SHARANABASAVEHA K M Cancel reply

 Click this button or press Ctrl+G to toggle between Kannada and English

Your email address will not be published. Required fields are marked *