ಪೌರಾಣಿಕ ಕತೆ

ಕಾವ್ಯ ಭಾಗವತ 91 : ರುಕ್ಮಿಣಿ – 1

Share Button

ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – 7
ರುಕ್ಮಿಣಿ – 1

ಮ್ಲೇಚ್ಛಸೈನ್ಯವ ಸೋಲಿಸಿ
ಬಲರಾಮ ಕೃಷ್ಣರು
ಸಕಲೈಶ್ವರ್ಯಗಳ
ದ್ವಾರಕಾಪುರಿಗೆ ಸಾಗಿಸುತ್ತಿರೆ
ಛಲಬಿಡದ ಜರಾಸಂಧ
ತನ್ನ ಹದಿನೆಂಟನೆಯ ದಂಡಯಾತ್ರೆಯ ಆರಂಭಿಸೆ
ದ್ರವ್ಯರಾಶಿಯನ್ನೆಲ್ಲವ ಬಿಟ್ಟು
ಪ್ರವರ್ಷಗಿರಿಯನು ಸೇರೆ
ದುಷ್ಟ ಜರಾಸಂಧ ಕಾಡಿಗೇ ಬೆಂಕಿಹೊತ್ತಿಸೆ
ಉಪಾಯದಿ ಗಿರಿ ಪ್ರಾತ್ಯದಿಂ
ಬಹುದೂರಕೆ ಒಂದೇ ಹಾರಿಕೆಗೆ ನೆಗೆದು
ದ್ವಾರಕಾನಗರಿಯ ಸೇರಿದರು
ಕೃಷ್ಣ ಬಲರಾಮರು

ವಿದರ್ಭದೇಶಾಧಿಪತಿ ಭೀಷ್ಮಕರಾಜನ
ಮಗಳು ರುಕ್ಮಿಣಿ
ರುಕ್ಮೀ ರುಕ್ಮರಥಾ ರುಕ್ಮಬಾಹು ರುಕ್ಮಕೇಶ ರುಕ್ಮಮಾಲಿ
ಐವರು ಸೋದರರು
ರುಕ್ಮಿಣಿಯ ಯದುವೀರ ಕೃಷ್ಣನಿಗೆ
ವಿವಾಹಮಾಡಮಾಡಬೇಕೆಂದೆಣಿಸಿದ
ರಾಜ ಭೀಷ್ಮಕನ ಇಚ್ಛೆಯ ವಿರೋಧಿಸಿದ
ಹಿರಿಯ ಮಗ ರುಕ್ಮಿಯ ಮಾತ ಮೀರಲಾರದೆ
ಅವನಿಚ್ಛೆಯಂತೆ ಶಿಶುಪಾಲನಿಗೆ
ರುಕ್ಮಿಣಿಯ ವಿವಾಹ ಮಾಡಲೊಪ್ಪಿದ ರಾಜ

ಯದುವೀರ ಕೃಷ್ಣನ ರೂಪ ಸೌಂದರ್ಯ
ಸಾಹಸಗಾತೆಗಳನ್ನೆಲ್ಲ
ರಾಜಧಾನಿಗೆ ಬಂದು ಹೋಗುತಿರ್ಪ
ಬ್ರಾಹ್ಮಣ ಮತ್ತಿತರಿಂದ ಅರಿತ ರುಕ್ಮಿಣಿ
ಕೃಷ್ಣನೇ ತನ್ನ ಪತಿಯೆಂಬ
ನಿರ್ಧಾರದಿಂದಿರೆ
ಕೃಷ್ಣನೂ ರುಕ್ಮಿಣಿಯ ಸೌಂದರ್ಯ ಶೀಲ
ಸ್ವಭಾವ ಅಲೌಕಿಕ ಬುದ್ಧಿ ಚಾತುರ್ಯವ
ಕೇಳಿ ತಿಳಿದು
ಅವಳೇ ತನಗೆ ತಕ್ಕ ಪತ್ನಿಯೆಂದು
ನಿರ್ಧರಿಸಿರೆ
ರುಕ್ಮನ ಮಿತ್ರ ಶಿಶುಪಾಲನ
ವರಿಸಬೇಕೆಂಬ ಜನಕನ ನಿರ್ಧಾರಕೆ
ನೊಂದ ರುಕ್ಮಿಣಿ ಕಳವಳದಿಂ
ಯದುವೀರನಿಗೆ ವಿಷಯ ತಿಳಿಸಿ
ತನ್ನ ಉದ್ಧರಿಸುವಂತೆ ಪ್ರಾರ್ಥಿಸಲು
ಓರ್ವ ಬ್ರಾಹಣೋತ್ತಮನನ್ನು
ದ್ವಾರಕೆಗೆ ತನ್ನ ಪತ್ರದೊಡನೆ
ಕಳುಹಿಸಿದ ರುಕ್ಮಿಣಿಯ
ಕೃಷ್ಣ ಪ್ರೇಮಕೆ
ಸಿಗುವುದೇ ಫಲ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
https://surahonne.com/?p=45004

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *