ಬೆಳಕು-ಬಳ್ಳಿ

ಜಗದ ಪುಣ್ಯ

Share Button

ತಾಯಿ ಜಗದ ಇನ್ನಾರಿಗಿಲ್ಲದ
ಪುಣ್ಯ ವಿಶೇಷಗಳ ನಮಗೆ ಕೊಟ್ಟಿರುವೆ
ನಿನ್ನ ಎದೆಯ ಎರಡು ಕಳಶ ಕಾಂಚನಗಂಗ
ಕೈಲಾಸ ಶಿವನ ನೆಲೆ ಅಲ್ಲಿ
ಮಳೆ ಬಿಸಿಲು ಚಳಿಗಾಲಕ್ಕೆ
ಮೈಗೊಡದೆ ಸದಾ ಪ್ರವಹಿಸುವ
ಪುಣ್ಯನದಿ ಗಂಗೆ ಭಾರತದರ್ಧ
ನೆಲವನೆಲ್ಲ ಸಮೃದ್ಧಗೊಳಿಸಿದ
ಶಿಖರೋಪಮ ಪುಣ್ಯಧಾಮ ಪುಣ್ಯಜಲ

ಕಂದಹಾರದ ಸಿಂಧೂರ ನಿನ್ನ
ಹಣೆ ಶೃಂಗಾರ ಬೊಟ್ಟು ತಾಯಿ
ದಕ್ಷಿಣದಿ ದಕ್ಷಿಣೋತ್ತರದಿ
ನಿಂತ ಸಹ್ಯಾದ್ರಿ ಕಡಲ ಸಿಹಿ
ನೀರ ಮೊಗೆ ಮೊಗೆದು ಪಶ್ಚಿಮೋತ್ತರ
ಉಣಬಡಿಸುವ ಉನ್ನತ ಪರ್ವತಶ್ರೇಣಿ

ಗುಡ್ಡೆ ಗುಡ್ಡ ಒಣ ನೆಲದಿ
ಉತ್ತರೆಯ ನಾಲ್ಕು ತಂಪುಹನಿ
ಸಮೃದ್ಧ ಬಿಳಿಜೋಳ ಬೆಳೆವ
ಕಪ್ಪುನೆಲ ಇನ್ನೆಲ್ಲಿಹುದು ತೋರು
ಇದು ಅಲ್ಲೆಂಬ ಇಂಚು ನೆಲವನು
ಕಾಣೆ ತಾಯಿ
ನೀ ಜಲಸಮೃದ್ಧಿ
ಪವಮಾನ ಸಮೃದ್ಧಿ ಜನ ಸಮೃದ್ಧಿ
ಸಮೃದ್ಧಿಗಳೆ ಆಕಾರಗೊಂಡ
ಸರ್ವೇಶ್ವರಿ ತಾಯಿ ನೀನು

ಇಲ್ಲಿಲ್ಲದ ಜನ ಇಲ್ಲಿಲ್ಲದ ಧರ್ಮ
ಕೂಡಿ ಒಂದೆಡೆ ಇನ್ನೆಲ್ಲಿಹವು
ಇಲ್ಲಿಲ್ಲದ ಚಿಂತನೆಯ ಹರಹು
ಎಲ್ಲಿದೆ ತೋರು

ಹರಿದ ಬಟ್ಟೆಯ ಸೂಜಿಯಲಿ
ಹೊಲಿವ ಕೈಗೆ ಗುಂಡಿಕ್ಕಿ ಕೊಂದ ಪಠಾಣ
ನಾವೆಲ್ಲ ಒಂದೆಂದು ತೆರೆದ ಕೈಯಲಿ
ಅಪ್ಪಲು ಹೊರಟವನ ಹೂಹಾರ ಸಿಡಿಸಿ
ಕೊಂದ ದಕ್ಷಿಣದ ಕಲಿ
ನಿನ್ನ ಔರಸ ಪುತ್ರ ‌
ನಿನ್ನತರಂಗದ ಕುಲಪುತ್ರ
ಎನಿಸಿ ಮೆರೆದ

ಎಲ್ಲರೂ ಎಲ್ಲವೂ ಸೇರಿ ನಾನಾದೆನೆಂಬ
ಎಚ್ಚರವೀವ ಹಬ್ಬಹರಿದಿನದಲು
ರಕ್ತಸಿಕ್ತ ಖಡ್ಗ ಝಳಪಿಸಿ
ಹೆಮ್ಮೆಯ ನಗು ಬೀರುವ
ಜನ ಮನದ
ಧೀಶಕ್ತಿಗೆ ವಿವೇಕದಾವರಣ
ತೊಡಿಸು ತಾಯಿ

ಎಚ್ಚರದ ಧೀಶಕ್ತಿ ಪ್ರಕಾಶಿತೆ ತಾಯಿ!
ನಮ್ಮ ಅಹಮಿಕೆಯ ಒಳಗೆ
ನಾನೂ ಅವನೂ ಇವನೂ
ಅದೂ ಇದೂ ಎಲ್ಲವೂ
ನಿನ್ನಲಿ ನೆಲೆಗೊಂಡ ಪ್ರಾಣ
ಎನುವ ವಿವೇಕೋನ್ನತಿ
ಕರುಣಿಸು ಸರ್ವೇಶ್ವರಿ

ಜೀವ ತಳೆಯಲಿಹ ಮೃದ್ವಂಗಿಯೂ
ವಿಕಸನ ಪಥದಿ ಮುಕ್ತ ಗಾಮಿನಿಯಾಗುವ ತೆ ರದಿ
ಬೆಟ್ಟದ ಒಡಲ ಜಗನ್ಮಾತೆ
ಅನುಗ್ರಹಿಸು ಅನುಗ್ರಹಿಸು
ವಂದೇ ಮಾತರಂ ಸುಜಲಾ ಸುಫಲಾಂ
ಮಲಯಜ ಶೀತಲಾಂ ಸಸ್ಯಶ್ಯಾಮಲಾಂ
ಮಾತರಂ ವಂದೇ ಮಾತರಂ

-ಗಜಾನನ ಈಶ್ವರ ಹೆಗಡೆ

6 Comments on “ಜಗದ ಪುಣ್ಯ

  1. ಭಾರತಾಂಬೆಯ ಉತ್ಕೃಷ್ಟತೆಯೊಂದಿಗೆ ಉತ್ತಮ ಆಶಯವನ್ನು ಹೊಂದಿದ ಕವನ ಚೆನ್ನಾಗಿದೆ.

  2. ಭಾರತಮಾತೆಯ ಸೌಂದರ್ಯವನ್ನು ಕೊಂಡಾಡುತ್ತಲೇ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿರುವ ಚಂದದ ಕವಿತೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *