ನ್ಯಾನೋ ಕಥೆಗಳು

Share Button

ಜೀವನ ಪಾಠ
ಜೀವನದ ಜಂಟಾಟಗಳಿಂದ‌ ಬೇಸತ್ತು ಜೀವನವೇ ಬೇಡವೆಂದು ಹೊರಟವನಿಗೆ, ಬೀದಿಯ ಬದಿಯ ಒಂದು ಮೂಲೆಯಲ್ಲಿ ಸುಡುವ ಬಿಸಿಲನು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ತರಕಾರಿಗಳನ್ನು ಮಾರುತ್ತಿದ್ದ, ಇಳಿ ವಯಸ್ಸಿನ ಹಿರಿಯರನ್ನು ಕಂಡಾಗ ಅಯ್ಯೋ ಪಾಪ ಅನಿಸುವುದರೊಳಗೆ, ಇವರಿಗಿಂತಲೂ ನನ್ನ ಬದುಕೇನು ದುಸ್ತರವಲ್ಲವೆನಿಸಿ, ಏನಾದರೂ ಸಾಧಿಸಬೇಕೆಂದವನೇ ಮನೆಯೆಡೆಗೆ ಹೆಜ್ಜೆ ಹಾಕುತ್ತಾ ಹಿಂದುರುಗಿ ಬಂದು ಬಿಟ್ಟ.
.

ಕನಸು
ಹಾದಿ ಬೀದಿಯ ಪುಂಡ ಗೆಳೆಯರೊಡನೆ, ಮೋಜಿನ ಅಮಲಿನಲ್ಲಿ ಮುಳುಗಿದ್ದ ಹುಡುಗನಿಗೆ ಇದ್ದಕ್ಕಿದ್ದಂತೆಯೇ ಅವನೆದುರಿಗೆ ಕೋಣವನೇರಿ ಬಂದವನೊಬ್ಬ ಮುಗಿತು ನಿನ್ನ ಇಹಲೋಕದ ಆಯುಷ್ಯವು, ಹೊರಟು ಬಾ ಈಗಲೇ ನರಕ ಲೋಕಕ್ಕೆ ಎಂದು ಯಮಪಾಶವ ಕೊರಳಿಗೆ ಬಿಗಿದಾಗ, ಅಮ್ಮ ಅಂತ ಜೋರಾಗಿ ಕಿರಿಚಿದಾಗ, ಅಮ್ಮನು ಏನೋ ಹಗಲು ಹೊತ್ತಿನಲ್ಲಿ ಕನಸು ಕಾಣುತ್ತಾ ಕನವರಿಸುತ್ತಿದ್ದೀಯಲ್ಲ, ಎದ್ದೇಳು ಸೋಮಾರಿಯೆಂದು ಬೈದಾಗಲೇ, ಇದುವರೆಗೂ ತಾನು ಕಂಡಿದ್ದು ಕನಸೆಂದು ಹಾಸಿಗೆಯಿಂದ ಎದ್ದು ಬಂದನು.
.
ಆ ದಿನಗಳು

ಬಾಲ್ಯದಲ್ಲಿ ನಾವೆಲ್ಲ ಹುಡುಗಾಟದ ಹುಡುಗರು, ಭಾದ್ರಪದ ಮಾಸ ಬಂತೆಂದರೆ ಸಾಕು ಮನೆಮನೆಗಳಲ್ಲಿ, ಹಾದಿ ಬೀದಿಗಳಲ್ಲಿ ಕೂರಿಸಿ ವಿಜೃಂಭಣೆಯಿಂದ ಮಾಡುವ ಗಣೇಶನ ಹಬ್ಬವನ್ನು ನೋಡಿದಾಗಲೆಲ್ಲ, ಯಾಕೆ ನಮ್ಮ ಮನೆಯಲ್ಲಿ  ಗಣೇಶನ ಹಬ್ಬ ಮಾಡುವುದಿಲ್ಲ ಎಂದು ಅಪ್ಪ ಅಮ್ಮರ ಕೇಳಿದಾಗ ಹಬ್ಬ ಮಾಡುವ ಸಂಪ್ರದಾಯವಿಲ್ಲವೆಂದರು. ಆದರೆ ಇದಕ್ಕೆ ಕಿವಿಗೊಡದೆ ಯಾರೋ ಹೇಳಿದರು, ಮೊದಲ ಬಾರಿ ಹಬ್ಬ ಮಾಡುವವರು ಗಣೇಶನ ಕದ್ದರೆ ತುಂಬ ಒಳ್ಳೆಯದು ಆಗುತ್ತದೆಂಬುದನ್ನು ನಂಬಿ ಕದಿಯಲು ಯತ್ನಿಸಿ ವಿಫಲರಾಗಿ, ಕೆಲವರಿಂದ ಬೈಯಿಸಿಕೊಂಡ ಮೇಲೆ ನಾವು ಹೊಲದಿಂದ ಎರೆ ಮಣ್ಣನ್ನು ತಂದು, ಅದರಲ್ಲಿ ಡೊಳ್ಳು ಹೊಟ್ಟೆಯ, ಆನೆ ಮೊಗದ, ಏಕದಂತ, ವಕ್ರ ತುಂಡ, ಚತುರ್ಭುಜ, ಮೂಷಿಕ ವಾಹನ ರೂಪದ ಗಣೇಶನ ಮೂರ್ತಿಯ ಮಾಡಿ ಮನೆಯಲ್ಲಿ ಕೂರಿಸಿದಾಗ ದೊರೆತ ಆನಂದ, ಖುಷಿ ಸಾಗರದಷ್ಟು. ಅಂದಿನಿಂದ ಪ್ರತಿ ವರ್ಷವೂ ಹಂತ ಹಂತವಾಗಿ ಗಣೇಶನ ಹಬ್ಬವನ್ನು ಚಾಚು ತಪ್ಪದೆ ನೇಮ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದೇವೆ.ಅಂದಿನಿಂದ ಗಣೇಶನ ಕೃಪೆಯಿಂದ ನಮಗೆ ಒಳ್ಳೆಯದಾಗುತ್ತಲಿದೆ.

(ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)
ಹಣವೋ? ಗುಣವೋ?
ಸದ್ಗುಣವಂತ, ಮಧ್ಯಮ ವರ್ಗ ಕುಟುಂಬದ  ಹುಡುಗನಿಗೆ ಸರ್ಕಾರಿ ಕೆಲಸ, ಆಸ್ತಿಪಾಸ್ತಿ ಇಲ್ಲವೆಂದು ಹುಡುಗಿಯ ಕಡೆಯವರು ಆತನನ್ನು ತಿರಸ್ಕರಿಸಿ, ತಮ್ಮ ಮಗಳನ್ನು ಶ್ರೀಮಂತ ಹುಡುಗನ ನೋಡಿ ಅವನೊಡನೆ ಮದುವೆ ಮಾಡಿದರು. ಒಂದೆರಡು ವರ್ಷಗಳಲ್ಲಿ ಶ್ರೀಮಂತ ಹುಡುಗನಿರುವ ದುಶ್ಚಟಗಳು, ಬ್ಯಾಂಕ್ ಹಾಗೂ ಸ್ನೇಹಿತರ ಹತ್ತಿರ ಮಾಡಿರುವ ಸಾಲಗಳು, ಪ್ರತಿನಿತ್ಯ ವರದಕ್ಷಿಣೆ ತರುವಂತೆ ತನಗೆ ಕಿರುಕುಳ ಕೊಡುತ್ತಿರುವ ವಿಷಯವನ್ನು ತವರಿಗೆ ಬಂದ ಮಗಳು ಹೆತ್ತವರಿಗೆ ಅಳುತ್ತಾ ಹೇಳಿದಾಗ, ಅಂದು ಹಣದ ಮುಖ ನೋಡದೆ, ಗುಣವಂತ ‌ಹುಡುಗನ ಜೊತೆ ಮದುವೆ ಮಾಡಿ ಕೊಟ್ಟಿದ್ದರೆ, ಇಂದು ನಮ್ಮ ಮಗಳಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪಶ್ಚಾತ್ತಾಪ ಪಟ್ಟರು.
.
ಋಣಾನುಬಂಧ

ಅನಿರೀಕ್ಷಿತವಾಗಿ ಪರಿಚಿತವಾದ ಇಬ್ಬರಲ್ಲಿ ಕಾಲ ಕಳೆದಂತೆ ಆತ್ಮೀಯತೆಯು ಬೆಳೆಯುತ್ತ, ಅವರಿಬ್ಬರ ನಡುವೆ ಒಡಹುಟ್ಟಿದವರನು ಮೀರಿಸುವ ಸಹೋದರತೆಯ ಬಾಂಧವ್ಯ ಬೆಳೆಯಿತು. ಇವರನ್ನು  ಕಂಡವರೆಲ್ಲ, ಇವರ ಬಗ್ಗೆ ಕೇಳಿದವರೆಲ್ಲರಿಗೂ ಇವರಿಬ್ಬರದು ಋಣಾನುಬಂಧದ ಸಂಬಂಧವೇ ಇರಬೇಕೆಂದು, ಈ ರೀತಿಯ ಬಾಂಧವ್ಯ ತಮಗೂ ಸಿಗಲೆಂದು ದೇವರಲ್ಲಿ ನಿತ್ಯವೂ ಪ್ರಾರ್ಥನೆ ಮಾಡುತ್ತಿದ್ದರು.

-ಶಿವಮೂರ್ತಿ.ಹೆಚ್. ದಾವಣಗೆರೆ.

6 Responses

  1. Hema says:

    ನ್ಯಾನೋ ಕಥೆಗಳು ಸೊಗಸಾಗಿ ಮೂಡಿ ಬಂದಿವೆ…

  2. ನಯನ ಬಜಕೂಡ್ಲು says:

    ಸುಂದರವಾಗಿದೆ ಸರ್ . ಸಣ್ಣ ಸಣ್ಣ ಕಥೆಗಳಲ್ಲಿ ಬದುಕಿನ ವಾಸ್ತವ ಹಾಗು ಪಾಠ ಅಡಗಿದೆ .ವೆರಿ ನೈಸ್

  3. Anonymous says:

    ಸೂಪರ್ ಸರ್ ಬದುಕಿನ ಸತ್ಯ ಗಳು

  4. Shruthi Sharma says:

    ಕಥೆಗಳು ಚೆನ್ನಾಗಿ ಮೂಡಿ ಬಂದಿವೆ 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: