ನಾವು ಆಲೋಚನೆ ಏಕೆ ಮಾಡುತ್ತಿಲ್ಲ?

Share Button

ಆಲೋಚನೆ ಎಂಬ ಬುದ್ಧಿ ಶಕ್ತಿ ಮನುಷ್ಯನಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಸರಿ ಯಾವುದು?ತಪ್ಪು ಯಾವುದು? ಒಳಿತು, ಕೆಡುಕುಗಳ ಬಗ್ಗೆ ಸಾರಾಸಾರ ವಿವೇಚನೆ ಅಂತೆಯೇ ಬದುಕಲ್ಲಿ ಬರುವ ಕಷ್ಟಗಳನ್ನು ದೂರೀಕರಿಸಿ ಸುಖದ ನೆಲೆಯನ್ನು ತಂದು ಕೊಳ್ಳುವುದು, ಇವೆಲ್ಲವನ್ನೂ ಆತ ತನ್ನ ಆಲೋಚನಾ ಶಕ್ತಿಯಿಂದ ನಿರ್ಧಾರ ತಳೆದು ಅದರಂತೆ ಕಾರ್ಯೋನ್ಮುಖನಾಗುತ್ತಾನೆ. ಎಲ್ಲರೂ ಆಲೋಚಿಸುತ್ತಾರೆ. ಆದರೆ ಎಲ್ಲರಿಗೂ ಒಂದೇ ರೀತಿಯ ಆಲೋಚನೆ ಬರಲಾರದು. ಇವು ಸಂದರ್ಭಗಳಿಗೆ ಅನುಗುಣವಾಗಿ ಅಥವಾ ಆಯಾ ಪ್ರಸಂಗಕ್ಕೆ ತಕ್ಕಂತೆ ವಿಭಿನ್ನವಾಗಿರುವುದಂತೂ ಖಂಡಿತ. ಅವರವರ ಭಾವಕ್ಕೆ ಹಾಗೂ ಅವರವರ ಅನುಭವ, ಸಾಮರ್ಥ್ಯ, ಬುದ್ಧಿ ಶಕ್ತಿಗೆ ಸಂಬಂಧ ಪಟ್ಟಂತೆ ಆಲೋಚಿಸುವ ಶಕ್ತಿ ಬೇರೆ, ಬೇರೆ ತೆರನಾಗಿರುತ್ತದೆ. ಸಮಾಜದಲ್ಲಿ ಕೆಲ ಮಂದಿ ಹೋರಾಟ ಸ್ವಭಾವದವರೂ, ಶಾಂತ ಸ್ವಭಾವವಿರುವವರೂ, ಇಲ್ಲವೇ ಪಾಲಾಯನವಾದಿಗಳು ಇರುವುದನ್ನು ಕಾಣುತ್ತೇವೆ. ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಆಲೋಚನೆಗಳು ಹರಿಯತೊಡಗುತ್ತವೆ.
.
ಎಲ್ಲವನ್ನೂ ನಂಬುವುದರಿಂದ ನೋವು ನಮಗೆ: ಒಂದೊಂದು ಸಲ ನಾವು ಯಾವುದನ್ನೂ ಪರೀಕ್ಷಿಸುವ ಗೋಜಿಗೆ ಹೋಗದೆ ಎಲ್ಲವನ್ನೂ ನಂಬಿ ಬಿಡುವ ಮಟ್ಟಕ್ಕೂ ಬರುತ್ತೇವೆ. ಬೇರೆಯವರು ಏನಾದರೊಂದು ಹೇಳಿದಾಗ, ಅವರು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡು ಎಲ್ಲದ್ದಕ್ಕೂ ಸರಿ ಎಂದು ಗೋಣಾಡಿಸುವ ಹಂತಕ್ಕೂ ತಲುಪುತ್ತೇವೆ. ಇಂತಹ  ಪ್ರವೃತ್ತಿ ನಮ್ಮ ಸ್ವಂತ ವ್ಯಕ್ತಿತ್ವವನ್ನು ನಾಶ ಮಾಡಿ ನಾವು ಅವರಿಗೆ ಗುಲಾಮರಾಗಿ ಬಿಡುವುದಲ್ಲದೆ ಸೋಲುವ ಹಂತಕ್ಕೂ ಮುಂದುವರಿಯುವ ಸ್ಥಿತಿ. ಹೇಳಿ ಕೇಳಿ ಇದು ಆಧುನಿಕ ಯುಗ ನಮ್ಮ ಮನಸ್ಥಿತಿಯನ್ನು ತಿಳಿದು ಕೊಂಡ ಅನೇಕ ಮಂದಿ ನಮ್ಮನ್ನು ವಂಚಿಸುವ ಮಟ್ಟಕ್ಕೂ ತಲುಪಿಸಿ ಬಿಡುತ್ತಾರೆ. .
.
ನಮ್ಮ ಮನಸ್ಥಿತಿ, ಆಲೋಚನಾ ಶಕ್ತಿ ಹೇಗಿದೆಯೆಂದರೆ : ನಮ್ಮ ಮನಸ್ಥಿತಿ ಎಲ್ಲಿಯ ತನಕ  ಇದೆ ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ಕೊಡ ಬಹುದು. ಟಿವಿ ಜಾಹಿರಾತುಗಳಲ್ಲಿ ಕ್ರೀಮ್, ಶಾಂಪು ಹಾಗೂ ಇನ್ನಿತರ ವಸ್ತುಗಳು ಹೊಸದು ಕಂಡ ಕೂಡಲೇ ಅದನ್ನು ಕೊಂಡು ತರುವ ತನಕ ನಮಗೆ ಚಡಪಡಿಕೆ ತಪ್ಪಿದ್ದಲ್ಲ. ಒಂದರಿಂದ ಇನ್ನೊಂದಕ್ಕೆ ಹಾರುವ ಮಾರು ಹೊಗುವ ಸ್ಥಿತಿ ಯನ್ನು ತಲುಪುವ ಮಟ್ಟಕ್ಕೆ ಬಂದಿದ್ದೇವೆ. ಇಲ್ಲಿ ನಮ್ಮ ಆಲೋಚನೆಗಳು ಮಂಕಾಗಿ ಬಿಡುತ್ತವೆ. ಇತ್ತೀಚೆಗಂತೂ ಜಾಹಿರಾತುಗಳ ಭರಾಟೆ ಬಲು ಹೆಚ್ಚಾಗಿದೆ ಎಂದೇ ಹೇಳ ಬಹುದು. ಅದು ಒಂದು ಜಾಹಿರಾತು, ಪ್ರಚಾರ ಮಾಡುವುದೇ ಅದರ ಉದ್ದೇಶ ಅಂದ ಮೇಲೆ ನಾವು ಅದರತ್ತ ಅದರ ಅಂಶಗಳನ್ನು ವಿಚಾರ ಮಾಡದೆ ಅನೇಕ ತಪ್ಪುಗಳನ್ನು ಮಾಡುತ್ತಲಿದ್ದೇವೆ. ಸಿಗರೇಟು ಹಾನಿಕರ ಎಂದು ಪ್ಯಾಕ್ ಮೇಲೆ ಬರೆದಿರುತ್ತದೆ. ಬರೆದ ಶಾಸನದ ಎಚ್ಚರಿಕೆಯನ್ನು ಓದಿದರೂ ಜನ ಕೆಟ್ಟ ಚಾಳಿ ಬಿಡಲಾರರು. ಮದ್ಯಪಾನ, ತಂಬಾಕು  ಇನ್ನಿತರ ದುಶ್ಚಟಗಳಿಂದ ಸಾವು ಸಂಭವಿಸುತ್ತದೆ, ಕ್ಯಾನ್ಸರ್ ಬರುತ್ತದೆ ಎಂದು ತಿಳಿದಿದ್ದರೂ ಆಲೋಚಿಸದೆ ಅದರ ಸೆಳೆತಕ್ಕೆ ಬಿಟ್ಟಿರಲಾರದೆ ಅಂಟಿ ಕೊಂಡು ಬಿಟ್ಟಿದ್ದೇವೆ. ಒಂದೊಂದು ಸಲ ಸುಳ್ಳನ್ನೇ ಎಲ್ಲರೂ ಹೇಳುವಂತಾದರೆ ಸುಳ್ಳೇ ಸತ್ಯವಾಗಿ ಹಾಗೂ ಆಪ್ತವಾಗಿ ಬಿಡುತ್ತದೆ. ಚೂಯಿಂಗಮ್, ಬಬಲ್ ಗಮ್ ಒಳ್ಳೆಯದಲ್ಲವೆಂದು ಗೊತ್ತಿದ್ದೂ ಮುಖದ ವ್ಯಾಯಾಮಕ್ಕೆ ಒಳ್ಳೆಯದೆಂದು ಯಾರೊ ಹೇಳಿದರೆಂದು ಇವುಗಳಿಗೆ ಎಲ್ಲಿಲ್ಲದ ಬೇಡಿಕೆ. ಟೂತ್‌ಪೇಸ್ಟ್ ಗಳಿಂದ ಹಿಡಿದು ಮುಖದ ಅಂದ ಹೆಚ್ಚಿಸುವ, ಗಡ್ಡ ತೆಗೆಯುವ ತರತರದ ಬೇರೆ ಬೇರೆ ಕಂಪನಿಗಳ ಕ್ರೀಮ್ ಗಳು, ಪೌಡರುಗಳು ಒಂದೇ ಎರಡೇ ಅಬ್ಬಬ್ಬಾ ಎನ್ನುವಷ್ಟು ಮಟ್ಟದಲ್ಲಿ ನಮ್ಮನ್ನು ಆಕರ್ಷಿಸಲ್ಪಡುತ್ತವೆ. ನಮ್ಮ ಹಿರಿಯರು ಯಾವುದೇ ಸೋಪೂ ಕ್ರೀಮೂ ಇಲ್ಲದೆ ಬರಿ ನೀರಿನಲ್ಲಿಯೇ ಗಡ್ಡ ತೆಗೆಯುತ್ತಿರಲಿಲ್ಲವೇ? ಯಾವುದೇ ಕ್ರೀಮುಗಳಿಲ್ಲದೆ  ಮುಖಕ್ಕೆ ಬರೀ ಅರಶಿನ ಹಚ್ಚಿ ಕೊಂಡ ಹೆಂಗಳೆಯರ ಮುಖದ ಸೌಂದರ್ಯ ಏನಾಗಿದೆ? ” ಕಿವಿಯ ಬಣ್ಣ ಹೇಗಿದೆಯೋ ಹಾಗೆ ಮೈ ಮುಖದ ಬಣ್ಣ” ಇದು ಸತ್ಯದ ಮಾತು! ಜಾಹೀರಾತುಗಳಲ್ಲಿ ಬಿಳಿ ಹುಡುಗಿಯರನ್ನೇಕೆ ಮುಖದ ಕ್ರೀಮ್ ಹಾಗೂ ಸೋಪುಗಳ ಪ್ರಚಾರಕ್ಕೆ ಬಳಸುತ್ತಾರೆ? ಹೀಗೆ ಅನೇಕ ಪ್ರಶ್ನೆಗಳು ಏಳುವುದು ಸಹಜ.
ಈಗಿನ ಕಾಲದಲ್ಲಿ ಯಂತ್ರಗಳ ಜೊತೆ ನಾವೂ ಯಂತ್ರ ಮಾನವರಾಗಿ ಬಿಟ್ಟಿದ್ದೇವೆ. ಬಟ್ಟೆ ತೊಳೆಯುವ ಮೆಶಿನ್ ನಿಂದ ಹಿಡಿದು ಗ್ರೈಂಡರ್ ಹೀಗೆ ಎಲ್ಲದಕ್ಕೂ ಯಂತ್ರಗಳೇ. ಇವೆಲ್ಲವೂ ನಮ್ಮ ಮೌಢ್ಯದಿಂದ ಕೊಳ್ಳುವ ವಸ್ತುಗಳು, ಜೊತೆಗೆ ಎಲ್ಲಾ ಕೆಲಸಗಳಿಗೂ ಕಂಪ್ಯೂಟರ್, ಮೊಬೈಲ್ ಗಳು.          ಕುಳಿತಲ್ಲೇ ಕೆಲಸ. ಇವಿಲ್ಲದೆ ಯಾವ ಕೆಲಸ ಕಾರ್ಯಗಳೂ ನಡೆಯಲಾರದು ಎಂಬ ವಸ್ತು ಸ್ಥಿತಿಗೆ ನಮ್ಮನ್ನು ನಾವು ಮಾರಿ ಕೊಂಡಿದ್ದೇವೆ ಎಂದೇ ಹೇಳ ಬಹುದು. ನಿಜ, ಈಗ ಸಮಯವಿಲ್ಲ ಎಲ್ಲವೂ ಸುಲಭವಾಗ ಬೇಕು. ಇಲ್ಲಿ ಮುಖ್ಯವಾಗಿ ಗಮನಿಸುವುದೇನೆಂದರೆ ಒಂದೆಡೆ ಮನಸ್ಸಿಗೆ ಒತ್ತಡ ಇನ್ನೊಂದೆಡೆ ಶರೀರಕ್ಕೆ ವ್ಯಾಯಾಮ, ಚಟುವಟಿಕೆಗಳಿಲ್ಲದೆ ಮನುಷ್ಯ ಅನೇಕ ರೋಗಗಳನ್ನು ಆಹ್ವಾನಿಸುವ ಕೆಲಸ. ಅದಕ್ಕೂ ಇವೆ ಜಿಮ್ ಗಳೆಂಬ ಶರೀರ ಸದೃಢ ಮಾಡುವ ಅವೇ ಯಂತ್ರಗಳು!
.
ಪೂರ್ವಾಗ್ರಹ ಪೀಡಿತ ಮನಸ್ಸು: ಜೀವನದಲ್ಲಿ ಕಷ್ಟಗಳು ಎದುರಾದಾಗ ನಾನು ಪಡೆದು ಕೊಂಡು ಬಂದಿದ್ದೇ ಇಷ್ಟು, ನನ್ನ ಹಣೆಬರಹ, ನಾನು ಮಾಡಿದ ಕರ್ಮ, ನನ್ನ ಜಾತಕದಲ್ಲೂ ಹೀಗೇ ಬರೆದಿದೆ, ಈ ರೀತಿ ಆಲೋಚಿಸಿ ಕಾಣದ ಅದೃಷ್ಟಕ್ಕೆ ಮುಖ ಮಾಡಿ ತಮ್ಮ ತಪ್ಪಲ್ಲವೆಂದು ಕೈ ತೊಳೆದು ಕೊಳ್ಳುತ್ತೇವೆ. ಇಂತಹ ಪೂರ್ವ ಪೀಡಿತ ಮನಸ್ಸು ನಮ್ಮ ಆಲೋಚನೆಗಳನ್ನು ಸ್ಥಗಿತ ಗೊಳಿಸುವ ಮಟ್ಟಕ್ಕೂ ಕಂಡೊಯ್ಯುತ್ತದೆ. ಇದನ್ನು ಪ್ರತಿಪಾದಿಸುವುದು ಉದ್ದೇಶವಲ್ಲ. ಆದರೆ ನಮ್ಮ ಆಲೋಚನೆಗಳನ್ನು ಹರಿಯ ಬಿಟ್ಟು ವಿವೇಚನೆ ಮಾಡ ಬೇಕೆನ್ನುವುದು ತಾತ್ಪರ್ಯ. .

ನಾವು ಸರಿಯಾಗಿ ಆಲೋಚನೆ ಮಾಡದಿದ್ದರೆ: ಜನರು ಇಟ್ಟ ದುಡ್ಡಿಗೆ ಅಧಿಕ ಬಡ್ಡಿ ದೊರಕುವಂತಾದರೆ,  ಅತೀ ಕಮ್ಮಿ ಬೆಲೆಗೆ ವಸ್ತುಗಳು ಸಿಗುವಂತಾದಾಗ ಅಲ್ಲಿ ಜನರ ಗುಂಪು ಮುನ್ನುಗ್ಗುತ್ತಿರುವುದನ್ನು ನೋಡಿದಾಗ ಈ ನಮ್ಮ ಜನ ತಿಳಿದು ತಿಳಿದೂ ಇಂತಹ ಬಲೆಗೆ ಬೀಳುತ್ತಿದ್ದಾರಲ್ಲಾ ಎಂದು ಆಶ್ಚರ್ಯವಾಗುತ್ತದೆ. ಮಾತ್ರೆ ಇಂಜೆಕ್ಷನ್‌ ಇಲ್ಲದೆ ಬರೀ ಮಾತಿನಿಂದಲೇ ಕಾಯಿಲೆಗಳನ್ನು ಗುಣ ಪಡಿಸಲು ಸಾಧ್ಯವೆಂದು  ಅಮಾಯಕ ಜನರನ್ನು ಮರಳು ಮಾಡುವ ನಕಲಿಗಳು, ಹಾಗಾದರೆ ಕಷ್ಟ ಪಟ್ಟು ಓದಿ ಜನ ಸೇವೆ ಮಾಡುವ ವೈದ್ಯರೇನು ಮಾಡ ಬೇಕು? ಇವಲ್ಲದೆ ಉದ್ಯೋಗ ಕೊಡಿಸುತ್ತೇವೆಂದು ನೆಪ ಮಾತ್ರಕ್ಕೆ ತರಗತಿಗಳನ್ನು ನಡೆಸಿ ಮೋಸ ಮಾಡುವ ಮಂದಿಗಳು, ಚೀಟಿ ವ್ಯವಹಾರ ನಡೆಸಿ ಜನರಿಂದ ಹಣ ಪಡೆದು ಕಾಣೆಯಾಗುವ ಘಟನೆಗಳನ್ನು ಪತ್ರಿಕೆ ಹಾಗೂ ಮಾಧ್ಯಮಗಳಿಂದ ತಿಳಿದು ಕೊಂಡಿರುತ್ತೇವೆ. ಸಮಾಜದಲ್ಲಿ ಇಂದು ವ್ಯಕ್ತಿಗಳ ಆಯ್ಕೆ ಮಾಡುವ ಪ್ರಕ್ರೀಯೆಯಲ್ಲೂ ಗೊತ್ತಿದ್ದೂ ಇಂತಹ ಪ್ರಮಾದಗಳನ್ನು ಮಾಡುತ್ತಲೇ ಬಂದಿದ್ದೇವೆ. ನಂಬಿಕೆಯಿಂದ ಶೋಷಣೆ ಆಗುತ್ತಿದೆ ಎಂಬುವುದಾದರೆ, ಅರ್ಥಹೀನ ಎಂದಾದಲ್ಲಿ ಅಲ್ಲಿಂದ ಹೊರ ಬರುವುದರಲ್ಲಿ ಯಾವ ತೊಡಕೂ ಆಗಲಾರದು. ಹೀಗಾಗ ಬಾರದೆಂದು ನಮಗೆ ಎಷ್ಟೇ ಆತ್ಮೀಯರಿರಲಿ, ವಿಶ್ವಾಸಿಗರಿರಲಿ ಅವರು ಆಡಿದ್ದಕ್ಕೆಲ್ಲಾ ಸೈ ಗುಟ್ಟಿ ಹೇಳಿದ್ದಕ್ಕೆಲ್ಲಾ ತಲೆದೂಗುವ ಪ್ರವೃತ್ತಿಯಿಂದ ಮೊದಲು ಕಳಚಿ ಕೊಂಡು ನಮ್ಮ ಸ್ವಂತ ನಿರ್ಧಾರ ಬುದ್ಧಿ ಶಕ್ತಿಯನ್ನು ಬೆಳೆಸಿ ಕೊಳ್ಳುವುದು ಸೂಕ್ತ.

ಇಂದಿನ ಆಧುನಿಕ ಯುಗದಲ್ಲಿ  ಧೂಮಪಾನ, ಮದ್ಯಪಾನ ಮಾಡುವುದೂ ಒಂದು ಪ್ರತಿಷ್ಟೆಯ ವಿಷಯ, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಎನ್ನುವುದೂ ಕಾಮನ್ ಎನ್ನುವ ಮಟ್ಟಕ್ಕೆ ತಲುಪಿದ್ದೇವೆ ಎಂದರೆ ಆಶ್ಚರ್ಯ ಪಡ ಬೇಕಾಗಿಲ್ಲ. ನಮ್ಮ ಆಲೋಚನೆಗಳು ಎತ್ತ ಸಾಗುತ್ತಿವೆ ಎನ್ನುವ  ಕಲ್ಪನೆಯೂ ಕೂಡ ಬಾಧಿಸದೆ ಇರುವ ಮಟ್ಟಕ್ಕೆ ಇಂದು ತಲುಪಿದ್ದೇವೆ. ಆಲೋಚಿಸದೆ ತಪ್ಪು ಹಾದಿ ತುಳಿದು ಕೊನೆಗೆ ಪಶ್ಚಾತ್ತಾಪ ಪಡುವುದರಲ್ಲಿ ಅರ್ಥವಿಲ್ಲ. ಇವೆಲ್ಲಾ ನಮ್ಮ ಆಲೋಚನೆಗಳನ್ನು ಬದಿಗೆ ಸರಿಸಿ ವಿವೇಚನೆಗೆ ರಜೆ ಕೊಟ್ಟುದರ ಪರಿಣಾಮವಿದು. ನಮ್ಮ ಮನೋವೃತ್ತಿಯನ್ನು ಬದಲಾಯಿಸಿ ಕೊಂಡಾಗ ಮಾತ್ರ ಮನುಷ್ಯ ಇಂತಹ ಪೀಡನೆಯಿಂದ ಪಾರಾಗ ಬಹುದು. ಯಾವುದೇ ವಿಚಾರಗಳಲ್ಲಿ ನಮ್ಮ ಆಲೋಚನೆಗಳನ್ನು ಜಾಗೃತ ಗೊಳಿಸಿ ವಿವೇಚನೆಯಿಂದ ವರ್ತಿಸಿದರೆ ಅನೇಕ ವಿಷಯಗಳಿಂದ ಪಾರಾಗ ಬಹುದಲ್ಲವೇ?…

 ,

 –ಇಂದಿರಾ ಪಿ. ಪುತ್ತೂರು.  

2 Responses

  1. Hema says:

    ಚಿಂತನೆಗೆ ಹಚ್ಚುವ ಬರಹ…ಚೆನ್ನಾಗಿದೆ.

  2. Geetha Girish says:

    Good article

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: