ಕರಿಘಟ್ಟದಲ್ಲಿ ಹಸಿರುಕ್ರಾಂತಿ

Share Button

ಆಧುನಿಕ ಜೀವನಶೈಲಿಗೆ  ಒಗ್ಗಿಕೊಂಡ ಜನರಿಗೆ  ತಿಂಗಳಿಗೆ ಒಮ್ಮೆಯಾದರೂ ಭಾನುವಾರದ ರಜಾದಿನದಂದು ಯಾವುದಾದರೂ ಸುಂದರವಾದ ನಿಸರ್ಗದ ಮಡಿಲಿನಲ್ಲಿ ಚಾರಣ ಕೈಗೊಳ್ಳಬೇಕು ಅಥವಾ ಯಾವುದಾದರೂ ದೇವಾಲಯಕ್ಕೆ ಭೇಟಿ ಕೊಡಬೇಕು ಎನಿಸುತ್ತದೆ.   ಬಹಳಷ್ಟು ಸಂದರ್ಭಗಳಲ್ಲಿ ‘ಹಸಿರೇ ಉಸಿರು, ಕಾಡಿದ್ದರೆ ನಾಡು’ ಎಂಬ ಮಾತನ್ನು ಹೇಳುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಆದರೆ ಇದನ್ನು ಅನುಷ್ಟಾನಕ್ಕೆ ತರಲು ಅನುಕೂಲ, ಮಾರ್ಗದರ್ಶನ ಇರುವುದಿಲ್ಲ.  ಸಣ್ಣ ಬೆಟ್ಟವೊಂದಕ್ಕೆ ಚಾರಣ, ದೇವಾಲಯಕ್ಕೆ ಭೇಟಿ ಹಾಗೂ  ಪ್ರಕೃತಿಯ ನಡುವೆ ಶ್ರಮದಾನವನ್ನು  ಮಾಡಿ  ಈ ಎಲ್ಲಾ ಅಶಯಗಳನ್ನು ನೆರವೇರಿಸಿ,  ವಾರಾಂತ್ಯವನ್ನು ಸಂಪನ್ನವಾಗಿಸಬೇಕೆ ? ಹಾಗಾದರೆ, ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕರಿಘಟ್ಟ ಬೆಟ್ಟಕ್ಕೆ ಪುಟ್ಟ ಚಾರಣ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳಬಹುದು.

ಶ್ರೀರಂಗಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಕರಿಘಟ್ಟಕ್ಕೆ ಬಸ್ಸು, ಕಾರುಗಳ ಮೂಲಕ ಪ್ರಯಾಣಿಸಬಹುದು.  ಬೆಟ್ಟವನ್ನು ಹತ್ತಲು ಸುಮಾರು  400 ಮೆಟ್ಟಿಲುಗಳಿವೆ. ಬೆಟ್ಟದಲ್ಲಿ  ಸುಂದರವಾದ  ಶ್ರೀನಿವಾಸ ದೇವಾಲಯವಿದೆ. ಇಲ್ಲಿನ ಶ್ರೀನಿವಾಸ ಮೂರ್ತಿಯನ್ನು ಭೃಗು ಮಹರ್ಷಿಯು ಸ್ಥಾಪಿಸಿದರೆಂಬ ನಂಬಿಕೆಯಿದೆ. ಹನುಮಂತನು ಸಂಜೀವಿನಿ ಪರ್ವತವನ್ನು ಒಯ್ಯುತ್ತಿರುವಾಗ ಬೆಟ್ಟದ ಭಾಗವೊಂದು ಇಲ್ಲಿ ಬಿದ್ದ ಕಾರಣ ಇಲ್ಲಿ ಬಹಳಷ್ಟು ಔಷಧೀಯ ಸಸ್ಯಗಳಿವೆ ಎಂಬ ಪ್ರತೀತಿಯೂ ಇದೆ. ಅನತಿ ದೂರದಲ್ಲಿ ಚಾರಣಾಸಕ್ತರಿಗಾಗಿ ಪುಟ್ಟ ಬೆಟ್ಟವೊಂದಿದೆ. ಅದನ್ನೇರಿದಾಗ ಕಾಣಸಿಗುವ ಸುತ್ತುಮುತ್ತಲಿನ ದೃಶ್ಯಗಳು ಬಲು ಸೊಗಸು. ದೂರದಲ್ಲಿ ಕಾಣಿಸುವ ಕಾವೇರಿ ನದಿಯ ತಟದಿಂದ ಬೀಸಿ ಬರುವ ತಂಗಾಳಿ ಬೆಟ್ಟಹತ್ತಿ ಬಂದ ಆಯಾಸವನ್ನು ಪರಿಹರಿಸುತ್ತದೆ. ಪ್ರಕೃತಿಯ ಶುದ್ಧ ಪರಿಸರದಲ್ಲಿ ಆಗಾಗ ಸ್ವಲ್ಪ ಕಾಲ ಕಳೆದರೆ ಆರೋಗ್ಯವೃದ್ಧಿಯಾಗುವುದಂತೂ ಖಚಿತ.


ಕರಿಘಟ್ಟದಲ್ಲಿ , ಸ್ಥಳೀಯರಾದ ಶ್ರೀ ರಮೇಶ್ ಅವರು ಸ್ವಯಂಪ್ರೇರಿತರಾಗಿ, ನಿಸ್ವಾರ್ಥವಾಗಿ, ವರುಷಕ್ಕೆ ಇನ್ನೂರು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದು, ಇದುವರೆಗೆ ಸುಮಾರು ಆರುನೂರಕ್ಕೂ ಹೆಚ್ಚು ಗಿಡಗಳು ಬೆಳೆದಿವೆ, ಬೆಳೆಯುತ್ತಾ ಇವೆ. ಎಲ್ಲಾ ಗಿಡಗಳಿಗೂ ಖಾಲಿ ಬಾಟಲ್ ಗಳನ್ನು ಕಟ್ಟಿ ಹನಿ ನೀರಾವರಿ ಅಳವಡಿಸಿ ಕಾವೇರಿ ನದಿಯಿಂದ ನೀರನ್ನು ಹೊತ್ತು ತಂದು ಬಾಟಲ್ ಗಳಿಗೆ ತುಂಬಿಸಿ ಗಿಡಗಳಿಗೆ ನೀರುಣಿಸುತ್ತಾರೆ. ಹೆಚ್ಚಿನ ಗಿಡಗಳ ಬುಡದಲ್ಲಿ ಔಷಧೀಯ ಗುಣಗಳುಳ್ಳ ಮೂಲಿಕಾಸಸ್ಯಗಳನ್ನೂ ನೆಟ್ಟಿದ್ದಾರೆ. ಕೆಲವು ಗಿಡಗಳ ರೆಂಬೆಗಳಿಗೆ ಮಣ್ಣಿನ ತಟ್ಟೆಗಳನ್ನು ಕಟ್ಟಿ ಅವುಗಳಲ್ಲಿ ಸಿರಿಧಾನ್ಯಗಳನ್ನಿಟ್ಟು ಪಕ್ಷಿಗಳಿಗೂ ಆಹಾರ ಒದಗಿಸುವ ವ್ಯವಸ್ಥೆ ಹಾಗೂ ಇನ್ನು ಕೆಲವು ಗಿಡಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಬರಹಗಳುಳ್ಳ ಫಲಕಗಳನ್ನೂ ಜೋಡಿಸಿರುವುದು ಕಂಡುಬಂತು. ಇವೆಲ್ಲದರ ಜೊತೆಗೆ, ಆಕ್ಕಪಕ್ಕದ ಗ್ರಾಮಗಳಲ್ಲಿ, ಬೆಟ್ಟಕ್ಕೆ ಬೆಂಕಿ ಹಚ್ಚುವುದರಿಂದ ಆಗುವ ಪರಿಸರ ಹಾನಿಯ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ಹಂಚುವ ಕೆಲಸವನ್ನೂ ಮಾಡಿ ಸ್ಥಳೀಯರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.

ರಮೇಶ್ ಅವರು ನಿರುಪಯುಕ್ತವಾದ ಖಾಲಿ ಬಾಟಲಿಗಳಿಗೆ ಪುಟ್ಟ ಪೈಪ್ ಗಳನ್ನು ಅಳವಡಿಸಿ ಗಿಡಗಳಿಗೆ ಹನಿ ನೀರಾವರಿ ಮಾಡುತ್ತಿರುವ ವಿಶಿಷ್ಟ ಶೈಲಿ ಅನುಕರಣೀಯ. ನೀರಿನ ಮಿತವ್ಯಯದ ಜೊತೆಗೆ ಅತ್ಯುತ್ತಮವಾಗಿ ಪ್ಲಾಸ್ಟಿಕ್ ಕಸದ ಮರು ಉಪಯೋಗವೂ ಆಗುತ್ತದೆ. ಆಸಕ್ತರು ರಮೇಶ್ (8123331332) ಅವರನ್ನು ಮುಂಚಿತವಾದ ಸಂಪರ್ಕಿಸಿ, ಅವರ ಮಾರ್ಗದರ್ಶನದಲ್ಲಿ ಸಸಿಗಳ ನೆಡುವಿಕೆ, ಪೋಷಣೆ ಇತ್ಯಾದಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ‘ಶ್ರಮದಾನ’ ಮಾಡಬಹುದು.

ವಿಶ್ವ ಪರಿಸರ ದಿನವೆಂದು ಆಚರಿಸಲಾಗುವ ಜೂನ್ 5 ರಂದು ಶಾಲಾಕಾಲೇಜುಗಳು, ಸಂಘಸಂಸ್ಥೆಗಳು ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಇದು ಉತ್ತಮ ಪ್ರಯತ್ನವಾದರೂ, ಜನವಸತಿ ಇರುವ ಸ್ಥಳಗಳಲ್ಲಿ ನೆಡಲಾದ ಗಿಡಗಳಿಗೆ ಪ್ರಚಾರ ಹೆಚ್ಚು, ಆಯುಸ್ಸು ಕಡಿಮೆ ಎಂಬುದು ಕಟುವಾಸ್ತವ! ಪ್ರತಿ ಊರಿನಲ್ಲಿಯೂ ಗುಡ್ಡ ಬೆಟ್ಟಗಳಿರುತ್ತದೆ. ಆಧುನಿಕ ಜೀವನಶೈಲಿಯ ಅನಿವಾರ್ಯತೆಗಳಿಗಾಗಿ ಹಲವಾರು ಮರಗಳನ್ನು ಕಡಿಯಲಾಗಿರುತ್ತದೆ. ಸ್ಥಳೀಯ ಸಹೃದಯರು ಬಿಡುವು ಮಾಡಿಕೊಂಡು, ಜನದಟ್ಟಣೆಯಿಂದ ದೂರವಿರುವ ಸ್ಥಳಗಳಿಗೆ ಹೋಗಿ ಗಿಡಗಳನ್ನು ನೆಟ್ಟು ಪೋಷಿಸುವ ಹವ್ಯಾಸವನ್ನು ಬೆಳೆಸಿದರೆ ವರ್ಷವಿಡೀ ವನಮಹೋತ್ಸವವಾಗಬಲ್ಲುದು.

ಹೇಮಮಾಲಾ.ಬಿ, ಮೈಸೂರು

(ಡಿಸೆಂಬರ್ 02,  2017ರ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

https://www.udayavani.com/kannada/news/multifaceted/256026/green-revolution-in-karighatta

2 Responses

  1. ಭಾವೀ ಜನಾಂಗಕ್ಕೆ ಪ್ರಕೃತಿಯನ್ನು ಸಹಜ ರೀತಿಯಲ್ಲಿ ಬಿಟ್ಟುಹೋಗಬೇಕೆಂಬ ಕಳಕಳಿಯ ಕಾರ್ಯವನ್ನು ಎಲ್ಲರ ಅರಿವಿಗೆ ತರುವುದೂ, ಆ ಮೂಲಕ ಯುವ ಮನಸ್ಸುಗಳಲ್ಲಿ ಸ್ಫೂರ್ತಿ ತುಂಬುವುದೂ ಪುಣ್ಯದ ಕೆಲಸವೇ ಅಲ್ಲವೇ..!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: