ಮರದಲ್ಲಿ ಮುದುಡಿ ಅವಿತಿರುವ ಹಳದಿ ಎಲೆಗಳ
ಹತ್ತಿ ಕೀಳದಿರು ನೀನು ತೆರೆದು ಬೇಸರದಿಂದ ಕಂಗಳ
ಕೆಲದಿನಗಳಲಿ ತೊಟ್ಟು ಕಳಚಿ ಆ ಎಲೆಗಳು ತಮ್ಮಷ್ಟಕ್ಕೆ ತಾವೇ ಬಿದ್ದು ಹೋಗುವವು
ಮನೆಯಲ್ಲಿನ ಹಿರಿಯರ ಕೂಡ ಕೆಲಕಾಲ ಈಗಲೇ ಕಳೆದುಬಿಡು
ಒಂದು ದಿನ ಅವರು ಬರೀ ಗೋಡೆಯ ಚಿತ್ರದಲ್ಲಿ ಉಳಿದು ಬಿಡುವರು
ಯಾವಾಗಲಾದರೂ ಅವರ ಮೆಚ್ಚಿನ ತಿಂಡಿ ಮಾಡಿ ತಿನಿಸಿಬಿಡು
ಯಾರಿಗೆ ಗೊತ್ತು ಮರು ಕ್ಷಣದಲ್ಲಿ ಅವರು ತಿನ್ನುವುದೇ ಮರೆತು ಬಿಡುವರು
ಬದುಕಲಿ ಬಿಡು ಅವರ ಇಷ್ಟದಂತೆ ಬಳಸಲಿ ಬಿಡು ಅವರ ಇಚ್ಛೆಯಂತೆ
ಯಾಕೆಂದರೆ ಮುಂದೊಂದು ದಿನ ಎಲ್ಲಾ ನಿನಗೇ ಬಿಟ್ಟು ಹೊರಟು ಹೋಗುವರು
ಹೇಳಿದ್ದೇ ಹೇಳುವರೆಂದು ಹಿಯ್ಯಾಳಿಸದಿರು ಅವರನು
ಮತ್ತೆಂದೂ ಮಾತನಾಡದೆ ದಿವ್ಯ ಮೌನಕೆ ಜಾರಿಬಿಡುವರು…ಜಾರಿಬಿಡುವರು…
ಮೂಲ : ಗೌರ್ ಗೋಪಾಲ್ ದಾಸ್ ರ ಹಿಂದಿ ಭಾಷೆಯಲ್ಲಿನ ಬೋಧನೆ
ಭಾವಾನುವಾದ : ಕೆ.ಎಂ ಶರಣಬಸವೇಶ.

