ಸುರಹೊನ್ನೆಗೊಂದು ಸಲಾಮ್.

Share Button

ಗೃಹಿಣಿ ಹಾಗೂ ಹವ್ಯಾಸಿ ಬರಹಗಾರ್ತಿಯಾಗಿರುವ ನನಗೆ ಅಂತರ್ಜಾಲದಲ್ಲಿ ಸುರಹೊನ್ನೆ ಎಂಬ ಪತ್ರಿಕೆಯೊಂದನ್ನು ನಡೆಸುತ್ತಿರುವ ಶ್ರೀಮತಿ ಬಿ. ಹೇಮಮಾಲಾರವರ ಪರಿಚಯ ಇತ್ತೀಚಿನದು. ಈ ಮೊದಲು ನಾನು ಅವರನ್ನು ನಮ್ಮ ಸಾಹಿತ್ಯ ದಾಸೋಹವೆಂಬ ಕೂಟದಲ್ಲಿ ನೋಡಿದ್ದೆನಾದರೂ ಪತ್ರಿಕೆಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಕಾರಣವಿಷ್ಟೆ ಆ ಪತ್ರಿಕೆಗೆ ಚಿಕ್ಕಚಿಕ್ಕ ಕವನಗಳು, ಲೇಖನಗಳನ್ನು ಮಾತ್ರ ಕಳುಹಿಸಲು ಸಾಧ್ಯ ಎಂದು ತಿಳಿದಿದ್ದೆ. ನನಗೆ ಅಷ್ಟು ಚಿಕ್ಕದಾಗಿ ಬರೆಯುವುದು ಸಾಧ್ಯವಿಲ್ಲವೆಂದು ಸುಮ್ಮನಾಗಿಬಿಟ್ಟಿದ್ದೆ.

ದಿನಗಳೆದಂತೆ ಆ ಪತ್ರಿಕೆಗೆ ಬರೆಯುತ್ತಿದ್ದ ಡಾ. ಸುಧಾ ರಮೇಶ್ ದಂಪತಿಗಳು, ಶ್ರೀ ಆರ್.ಎ.ಕುಮಾರ್‌ರವರ ಲೇಖನಗಳನ್ನು ಓದುತ್ತಿದ್ದಾಗ ನಾನೇಕೆ ಒಮ್ಮೆ ಪ್ರಯತ್ನಿಸಬಾರದು? ಎಂದು ಪ್ರೇರಿತಳಾಗಿ ಅವರುಗಳನ್ನು ಸಂಪರ್ಕಿಸಿ ಆ ಪತ್ರಿಕೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಂಡೆ. ನಂತರ ನಾನೂ ಬರಹಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಹೀಗೆ ಪತ್ರಿಕೆಯೊಡನೆ ಸಂಪರ್ಕವನ್ನು ಬೆಳೆಸಿಕೊಂಡ ನಾನು ಅಲ್ಲಿ ಪ್ರತಿ ವಾರವೂ ಪ್ರಕಟವಾಗುತ್ತಿದ್ದ ಇತರರ ಲೇಖನಗಳು, ಕವನಗಳತ್ತ ಕಣ್ಣಾಡಿಸುತ್ತಾ ಪ್ರತಿಕ್ರಿಯಿಸುವ ಪರಿಪಾಠ ಬೆಳೆಸಿಕೊಂಡೆ.

ಈ ಅಂತರದಲ್ಲಿ ಸುರಹೊನ್ನೆಯಲ್ಲಿ ಸ್ಥಿರ ಅಂಕಣಗಳನ್ನು ಪ್ರಾರಂಭಿಸುವ ಆಲೋಚನೆ ಇದೆ ಎನ್ನುವ ಜಾಹೀರಾತು ನನ್ನನ್ನು ಸೆಳೆಯಿತು. ಆಗ ತಾನೇ ನಾನು ಬರೆದು ಮುಗಿಸಿದ್ದ ಒಂದು ಕಾದಂಬರಿಯನ್ನೇಕೆ ಇವರಿಗೆ ನೀಡಿ ಧಾರಾವಾಹಿಯಾಗಿ ಪ್ರಕಟಿಸಲು ಕೋರಬಾರದೆನ್ನಿಸಿತು. ಶ್ರೀಮತಿ ಹೇಮಮಾಲಾರವರನ್ನು ಸಂಪರ್ಕಿಸಿ ನನ್ನ ಕೋರಿಕೆ ಮುಂದಿಟ್ಟೆ. ಅದಕ್ಕೆ ಅವರು ತಮ್ಮ ಪತ್ರಿಕೆಗೆ ಒಗ್ಗುವಂತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ನೋಡುತ್ತೇನೆ ನನಗೆ ಕಳುಹಿಸಿಕೊಡಿ ಎಂದು ಪ್ರತಿಕ್ರಿಯಿಸಿದರು. ಅದರಂತೆ ಕಾದಂಬರಿಯನ್ನು ಕಳುಹಿಸಿದ ನಂತರ ಅದನ್ನು ಪೂರ್ಣವಾಗಿ ಓದಿ ಅವರ ಪತ್ರಿಕೆಯ ನಿಯಮಾವಳಿಗೆ ಹೊಂದಿಕೊಳ್ಳುತ್ತದೆ ಪ್ರಕಟಿಸಬಹುದೆಂದರು.

ಅವರ ಸಮ್ಮತಿಯ ಮೇರೆಗೆ ಜನವರಿ 2021 ಏಳನೆಯ ದಿನಾಂಕದಿಂದ ಪ್ರತಿವಾರ ಧಾರಾವಾಹಿಯಾಗಿ ನನ್ನ ಕಾದಂಬರಿ ನೆಮ್ಮದಿಯ ನೆಲೆ ಪ್ರಾರಂಭವಾಗಿ 22  ಏಪ್ರಿಲ್ 2021 ರಂದು ಮುಕ್ತಾಯಗೊಂಡಿದೆ. ನನ್ನ ಈ ಪ್ರಥಮ ಕಾದಂಬರಿಯನ್ನು ಅಚ್ಚುಕಟ್ಟಾಗಿ ಸಾಂದರ್ಭಿಕ ಚಿತ್ರಗಳನ್ನು ಜೋಡಿಸಿ ಅಂದವಾಗಿ ಪ್ರಕಟಿಸಿದ ಸುರಹೊನ್ನೆ ಅಂತರ್ಜಾಲ ಪತ್ರಿಕೆಯ ಸಮಪಾದಕರಾದ ಶ್ರೀಮತಿ ಹೇಮಮಾಲಾರವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಹಾಗೆಯೇ ಅದನ್ನು ಓದಿ ಪ್ರತಿಕ್ರಯಿಸಿದ ಸಾಹಿತ್ಯ ಸಹೃದಯರೆಲ್ಲರಿಗೂ ನನ್ನ ಧನ್ಯವಾದಗಳು ಸಲ್ಲುತ್ತವೆ.

ಮತ್ತೊಮ್ಮೆ ಮಗದೊಮ್ಮೆ ಶ್ರೀಮತಿ ಹೇಮಮಾಲಾರವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾ ಇದೇ ಪ್ರೋತ್ಸಾಹ, ಉತ್ತೇಜನ ನಿರಂತರವಾಗಿರಲೆಂದು ಆಶಿಸುತ್ತೇನೆ.

-ಬಿ.ಆರ್.ನಾಗರತ್ನ, ಮೈಸೂರು.

6 Responses

  1. ನಯನ ಬಜಕೂಡ್ಲು says:

    Wow. ಮೇಡಂ ತುಂಬಾ ಚೆನ್ನಾಗಿತ್ತು ನಿಮ್ಮ ಧಾರಾವಾಹಿ. ಮುಂದೆಯೂ ಇಂತಹುದೇ ಒಳ್ಳೆಯ ಕತೆಯ ನಿರೀಕ್ಷೆ ಇದೆ ನಿಮ್ಮಿಂದ.

  2. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಮೇಡಂ

  3. sudha says:

    congratulations

  4. Hema says:

    ಸುರಹೊನ್ನೆಯ ಬಗ್ಗೆ ನಿಮ್ಮ ಪ್ರೀತಿ, ಅಭಿಮಾನ ಹೀಗೆಯೇ ಇರಲಿ…ವೈಯುಕ್ತಿಕವಾಗಿ ಈ ಕಾದಂಬರಿ ನನಗೆ ಇಷ್ಟವಾಯಿತು. ಸುರಹೊನ್ನೆಯಲ್ಲಿ ಪ್ರಕಟಿಸಲು ಕಾದಂಬರಿಯನ್ನು ಬರೆದ ಕೊಟ್ಟ ತಮಗೆ ಧನ್ಯವಾದಗಳು.

  5. ಬಿ.ಆರ್.ನಾಗರತ್ನ says:

    ತಮಗೂ ಧನ್ಯವಾದಗಳು ಗೆಳತಿ ಹೇಮಾ.ನಾನು ಬರೆದ ಪ್ರಥಮ ಕಾದಂಬರಿಯನ್ನು ಆತ್ಮೀಯತೆಯಿಂದ ಕೈಗೆ ತೆಗೆದುಕೊಂಡು. ಸಾಂದರ್ಭಿಕವಾದ ಚಿತ್ರಗಳನ್ನು ಹಾಕಿ ಅದರ ಅಂದವನ್ನು ಹೆಚ್ಚಿಸಿ ಹಾಗೇ ಕಥೆಯನ್ನು ಕುತೂಹಲ ಘಟ್ಟಕ್ಕೆ ನಿಲ್ಲಿಸಿ ಓದುಗರ ಆಸಕ್ತಿ ಕೆರಳಿಸಿ ಎಲ್ಲೂ ಹದಗೆಡದಂತೆ ಮುಕ್ತಾಯ ಮಾಡಿ ಪ್ರೋತ್ಸಾಹ ನೀಡಿದ ನಿಮಗೆ ಅನಂತ ಧನ್ಯವಾದಗಳು.ಸುರಹೊನ್ನೆ ಪತ್ರಿಕೆ ಚಿರಾಯುವಾಗಲಿ ಮತ್ತೆ ಮತ್ತೆ ಬರೆಯಬೇಕೆಂಬ ಹಂಬಲ ಹುಟ್ಟಿಸಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.

  6. ಶಂಕರಿ ಶರ್ಮ says:

    “ನೆಮ್ಮದಿಯ ನೆಲೆ” ಸಾಮಾಜಿಕ ಕಾದಂಬರಿಯು ಧಾರಾವಾಹಿ ರೂಪದಲ್ಲಿ ನಮ್ಮೆಲ್ಲರ ನೆಚ್ಚಿನ ಸುರಹೊನ್ನೆಯಲ್ಲಿ ಬಹಳ ಸೊಗಸಾಗಿ ಮೂಡಿಬಂದಿತ್ತು. ಪ್ರಕಟಿಸಿದ ಹೇಮಮಾಲಾರಿಗೂ, ಕಾದಂಬರಿಗಾರ್ತಿ ನಾಗರತ್ನ ಮೇಡಂ ಅವರಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳು.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: