ಬೆಳಕು-ಬಳ್ಳಿ

ಹೀಗೊಂದು ಪ್ರಾರ್ಥನೆ

Share Button

ಮರಗಳ ‌ಮಾರಣ ಹೋಮ ಮಾಡಿ
ಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿ
ಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆ
ಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ಕೈಗಾರೀಕರಣ ಹೆಸರಲ್ಲಿ ಮಾರಣಾಂತಿಕ ರಾಸಾಯನಿಕಗಳ
ನದಿ ಪಾತ್ರಕ್ಕೆ ಯಥೇಚ್ಛವಾಗಿ ಹರಿಯ ಬಿಟ್ಟು
ಕೊಚ್ಚೆ ಕೊಳಕುಗಳನ್ನು ಪವಿತ್ರ ಜಲಕ್ಕೆ ಹಕ್ಕಂತೆ ಸೇರಿಸಿ
ಜಲ‌ಮಾಲಿನ್ಯವ ಉಂಟು ಮಾಡಿದ‌ ಎನಗೆ
ತ್ಯಾಜ್ಯಗಳ ಶುಚಿಗೊಳಿಸಿ ಕೊಳಚೆ ನೀರನು ಶುದ್ಧೀಕರಿಸಿ
ನಿರ್ಮಲ ಸ್ವಚ್ಛ ಜಲವ ಪಡೆಯಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ಭೂತಾಯಿಯ ಎದೆ ಬಗೆದು ಖನಿಜ ಸಂಪತ್ತುಗಳ ಲೂಟಿ ಮಾಡಿ
ಸೂಕ್ಷ್ಮ ಜೈವಿಕ ಪರಿಸರವ ಅಸಮತೋಲನಗೊಳಿಸಿ
ಮರಗಿಡಗಳ ಕೆಂಪಾಗಿಸಿದ ಕಡು ಪಾಪಿಯಾದ ನನಗೆ
ವಿವೇಚನಾಯುತವಾಗಿ ಸಂಪನ್ಮೂಲಗಳ ಬಳಸಿಕೊಂಡು
ಮತ್ತೆ ಗಿಡಗಳ ಹರಿತ್ತನ್ನು ಕಾಪಾಡಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ಅತಿ ಇಳುವರಿಯ ಆಸೆಗೆ ಬಿದ್ದು ಬಂಗಾರ ಬೆಳೆಯುವ
ಮಣ್ಣಿಗೆ ವಿಷಕಾರಿ ಕೀಟನಾಶಕಗಳ ಸುರಿದು
ಅವೈಜ್ಞಾನಿಕವಾಗಿ ರಸಗೊಬ್ಬರಗಳ ನೀಡಿ
ಹೊಲ‌ಗದ್ದೆಗಳ ಸೌಳಾಗಿಸಿದ ಎನಗೆ
ಪರಂಪರಾಗತ ಕೃಷಿಯ ಅಳವಡಿಸಿಕೊಂಡು
ಇಳೆಯ ನಗಿಸಿ ಸಮೃದ್ಧ ಬೆಳೆ ತೆಗೆಯಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ವೈಚಾರಿಕತೆಯ ಹೆಸರಲ್ಲಿ ನೀತಿ ನಿಯಮಗಳ ಗಾಳಿಗೆ ತೂರಿ
ಸ್ವಾತಂತ್ರ್ಯದ ಸೋಗಿನಲ್ಲಿ ಸ್ವೇಚ್ಛೆಚಾರವ ಮೆರೆದು
ಕಂದಾಚರವ ಖಂಡಿಸುವ ಭರದಲ್ಲಿ
ಸಂಸ್ಕೃತಿ ಆಚರಣೆಗಳ‌ ಮರೆತು
ಸಾಂಸ್ಕೃತಿಕ ಹಿಂಜರಿಕೆಗೆ ಕಾರಣಕರ್ತನಾದ ನನಗೆ
ಹಳೆಯ ಬೇರು ಹೊಸ ಚಿಗುರು ಎಂಬಂತೆ
ಉತ್ತಮಪಡಿಸಿ ನಮ್ಮತನವ ಉಳಿಸಿಕೊಳ್ಳಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

ಪ್ರಾರ್ಥನೆ ಭಜನೆಯ ಹೆಸರಲ್ಲಿ ಧ್ವನಿವರ್ಧಕಗಳ ಬಳಸಿ
ದುರಸ್ತಿ ಕಾಣದ ವಾಹನಗಳ‌ ಎರ್ರಾಬಿರ್ರಿ ಓಡಿಸಿ
ನಿರ್ವಹಣೆ ಮಾಡದ ಯಂತ್ರಗಳ‌ ಚಲಾಯಿಸಿ
ಕಿವಿಗಡಚ್ಚಿಕ್ಕುವ ಗಲಾಟೆ ಗದ್ದಲಗಳಿಂದ ಶಬ್ದ ಮಾಲಿನ್ಯಕೆ
ಸಾಕ್ಷಿಯಾದ ಎನಗೆ
ಸಾರ್ವಜನಿಕ ಸಾರಿಗೆ ಬಳಸಿಕೊಂಡು
ವಾಹನಗಳ ದುರಸ್ತಿ ಮಾಡಿಸಿ ಯಂತ್ರಗಳ ಸರಿಯಾಗಿ ನಿರ್ವಹಿಸಿ
ಶಾಂತ ನಾದಮಯ ಪರಿಸರವ ಪಡೆಯಲು
ಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ

-ಕೆ.ಎಂ. ಶರಣಬಸವೇಶ

3 Comments on “ಹೀಗೊಂದು ಪ್ರಾರ್ಥನೆ

  1. ಪ್ರಕೃತಿಯನ್ನು ಸಕಲ ರೀತಿಗಳಲ್ಲೂ ಹಾಳುಗೆಡವಿದ ನಮಗೆ, ಅವುಗಳನ್ನು ಸುಸ್ಥಿತಿಗೆ ತರಲು ಅವಕಾಶ ಕೋರಿದ ಸಂದೇಶಯುಕ್ತ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *