ಜೇನುಗೂಡು

Share Button

ದಟ್ಟ ಕಾಡಿನ ನಡುವೆ ಹೆಮ್ಮರದ ಟೊಂಗೆಯಲಿ
ತಟ್ಟೆಯಾಕಾರದಲಿ ಜೇನುಗೂಡು
ಕಟ್ಟುಪಾಡುಗಳಿರುವ ಕಷ್ಟಕರ ಜೀವನದಿ
ಒಟ್ಟಾಗಿ ಬಾಳುತಿಹ ಚಂದವನು ನೋಡು

ರಾಜನಿಲ್ಲದ ರಾಜ್ಯ ರಾಣಿಯೇ ತಾಯಾಗಿ
ಹಡೆವಳೈ ನೂರಾರು ಮಕ್ಕಳನು ತಾನು
ಮಂತ್ರಿ ಮಾಗಧರಿಲ್ಲ ಕಹಳೆ ಓಲಗವಿಲ್ಲ
ಸಾಮ್ರಾಜ್ಯ ಸುಂದರವು ಅದ ನೋಡು ನೀನು

ಅಸಂಖ್ಯ ಆಳುಗಳು ಅರಸುವವು ಸುಮಗಳನು
ಮಕರಂದ ತುಂಬುತಲಿ ಗುಟುಕು ಗುಟುಕಾಗಿ
ಕಾಲಲಿ ಪರಾಗವ ತರುತ  ಬೇಸರವಿರದೆ
ಪುಷ್ಪ ಫಲಿತಕೆ ತಾವೆ ಸತತ ನೆರವಾಗಿ

ಅಷ್ಟಕೋನಾಕೃತಿಯ ಅದ್ಭುತವೀ ಗೂಡು
ಅತಿಚತುರ ಶಿಲ್ಪಿಗಳು ಈ ನೊಣಗಳು
ಗೂಡಿನಾ ಮನೆಗಳಲಿ ತುಂಬಿ ತುಳುಕುವ ಮಧುವ
ಹೀರಿ ಬದುಕುವ ಈ ಪುಟ್ಟ ಭ್ರಮರಗಳು

ತುಂಬಿ ನಿಂತಿಹ ಮಧುರ ಮಧುವನ್ನು ತಾ ಬಿಡದೆ
ಪಡೆದು ಬೀಗುವ  ಸ್ವಾರ್ಥಿ ಮನುಜರಿಹರು
ಪ್ರಕೃತಿಯೊಡಗೂಡಿ ಬಾಳುವುದೆ ಸಾರ್ಥಕವು
ತಿಳಿಯಬೇಕಿದೆ ಇದನು ಜಗದ ಜನರು

ಶಂಕರಿ ಶರ್ಮ 

8 Responses

  1. ನಾಗರತ್ನ ಬಿ. ಅರ್. says:

    ಜೇನಿನ ನಿಸ್ವಾರ್ಥ ಸೇವೆ ಮನುಜನ ಸ್ವಾರ್ಥ ಬದುಕಿನ ಹೊರಣವನ್ನು ಕವನದ ಮೂಲಕ ಪಡಿಮೂಡಿಸಿ.. ಸ್ವಲ್ಪ ಹೊತ್ತು ಯೋಚಿಸಿ ತಮ್ಮ ಜೀವಿತಾವಧಿಯಲ್ಲಿ ಏನು ಮಾಡಬೇಕು ಮಾಡಬಹುದು.. ಎನ್ನುವ ಕಡೆ ಲಕ್ಷ್ಯ ವಹಿಸುವಂತಹ ಸಂದೇಶ ನೀಡಿದೆ.ಧನ್ಯವಾದಗಳು ಮೇಡಂ

    • . ಶಂಕರಿ ಶರ್ಮ says:

      ಪ್ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ನಾಗರತ್ನಾ ಮೇಡಂ ಅವರಿಗೆ.

  2. ನಯನ ಬಜಕೂಡ್ಲು says:

    ಸುಂದರವಾದ ಕವನ

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

  3. Anonymous says:

    ಒಗ್ಗಟ್ಟಾಗಿ ಬದುಕುವ ಕುರಿತಾಗಿ ಸುಂದರವಾದ ಪಾಠ ಕಲಿಯಬಹುದಾದ ಜೇನ್ನೊಣಗಳ ಜೀವನ ಶೈಲಿಯನ್ನು ಗಮನಿಸದೆ ಅವು ಶೇಖರಿಸಿಟ್ಟ ಮಧುವನ್ನು ದೋಚುವ ಮಾನವ ಎಂಥಹ ಕ್ರೂರಿ? ಸೊಗಸಾದ ಕವಿತೆ

  4. Padmini says:

    ಸಹೃದಯೀ ಕವನ!

  5. ಡಾ. ಕೃಷ್ಣಪ್ರಭ ಎಂ says:

    ಆಹಾ….ಚಂದದ ಕವನ

  6. B c n murthy says:

    ಜೇನುಗೂಡಿನ, ಜೇನುಹನಿಯಷ್ಟೇ ಮಧುರ ಕವನ

Leave a Reply to ಡಾ. ಕೃಷ್ಣಪ್ರಭ ಎಂ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: