ವಿಶೇಷ ದಿನ

ಬಾರೆ ನನ್ನ ಉಗಾದಿ

Share Button

ಬಾರೆ ನನ್ನ ಉಗಾದಿ
ಹೊಸತನವ ಚಿಮ್ಮುತ//ಪ//
ತೋರುನಿನ್ನ  ಮೊಗವನು
ಶಾಂತಿ ಸಹನೆ ಹೊಮ್ಮುತ //ಅ.ಪ//

ಬಾಳು ಹಸಿರು ತೋರಣ
ಸಿಹಿ ಕಹಿಯ ಹೂರಣ
ಜೀವ ಜಗವೆ ಕಾರಣ
ಸೃಷ್ಟಿ ಚೆಲುವೆ ಪ್ರೇರಣ//ಪ//

ಹೊಂಗೆ ನೆರಳ ತಂಪಲಿ
ದುಂಬಿ ರಾಗದಿಂಪಲಿ
ಮೊಳೆದ ಚಿಗುರ ಸೊಂಪಲಿ
ಸುಮಸೌರಭದ ಕಂಪಲಿ//ಪ//

ಸ್ವಾರ್ಥ ಕ್ರೋಧವಳಿಸುತ
ಮೋಸ ಕಪಟ ಬಿಗಿಯುತ
ಸಮತೆ ತ್ಯಾಗ ಉಳಿಸುತ
ಸುಗುಣ ಭಾವ ಬೆಳೆಸುತ//ಪ//

ಕಾಡು ಮೇಡಿನಡಿಯಿಂದ
ಗಿರಿ ಶಿಖರದ ತುದಿಯಿಂದ
ಬಾನುಬುವಿಯ ಮೇಲಿನಿಂದ
ಜಲ ಸೆಲೆಗಳ ಒಳಗಿನಿಂದ//ಪ//

ಮನದ ಕ್ಷೋಭೆ ನೀಗಿಸೆ
ತನುವ ದಣಿವ ಹೋಗಿಸೆ
‌ಹೃದಯ ಕದವ ತೆರೆಯಿಸೆ
ಒಡಲ ನುಡಿಯ ಆಲಿಸೆ//ಪ//

ಚಿಂತೆ ಚಿತೆಯ ಆರಿಸಲು
ದುಃಖ ದುಗುಡ ಮರೆಸಲು
ಜಡವ ದೂರ ಸರಿಸಲು
ಚೈತನ್ಯವನು ತುಂಬಲು//ಪ//

ನಳನಳಿಸು ಹಸಿರನು
ತುಂಬಿಹರಿಸು ಉಸಿರನು
ನೀಡು ಜಗಕೆ ಬದುಕನು
ನೀಗು ಇಳೆಯ ಬವಣೆಯನು//ಪ//

ಶುಭಲಕ್ಷ್ಮಿ ಆರ್ ನಾಯಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *