ವಾಟ್ಸಾಪ್ ಕಥೆ 12: ಆಸರೆ.

Share Button

ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು

ಎಂಟು ವರ್ಷದ ಬಾಲಕ ವಿವೇಕನನ್ನು ಅವನ ತಾಯಿ ಒಂದು ಪ್ರಶ್ನೆ ಕೇಳಿದಳು. ‘ಮಗೂ ನಮ್ಮ ದೇಹದ ಅತ್ಯಮೂಲ್ಯವಾದ ಭಾಗ ಯಾವುದು?’ ಬಾಲಕನು ಸ್ವಲ್ಪ ಹೊತ್ತು ಯೋಚಿಸಿ ‘ಕಿವಿಗಳು’ ಎಂದನು.

‘ಮಗೂ ಲೋಕದಲ್ಲಿ ಕೇಳಿಸಿಕೊಳ್ಳಲಾಗದ ನೂರಾರು ಜನರಿದ್ದಾರೆ. ಆದರೂ ಅವರು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಕಿವಿಗಳು ಅತ್ಯಮೂಲ್ಯವಾದವು ಎನ್ನಿಸುವುದಿಲ್ಲ. ಆಲೋಚಿಸು’ ಎಂದಳು.

ಕೆಲವು ದಿನಗಳಾದವು. ಮತ್ತೊಮ್ಮೆ ತಾಯಿ ಮಗನಿಗೆ ಅದೇ ಪ್ರಶ್ನೆಯನ್ನು ಕೇಳಿದಳು. ಆಗ ವಿವೇಕನು ತಾನು ಗಳಿಸಿಕೊಂಡ ತಿಳಿವಳಿಕೆಯಿಂದ ‘ಕಣ್ಣುಗಳು’ ಎಂದುತ್ತರಿಸಿದನು.

‘ಮಗೂ ನೀನೇ ನೋಡಿದ್ದೀಯೆ, ಎಷ್ಟೋ ಜನರಿಗೆ ಕಣ್ಣಗಳು ಕಾಣಿಸುವುದಿಲ್ಲ. ಅವಿಲ್ಲದೆಯೇ ಅವರು ಸಾಮಾನ್ಯರಂತೆ ಬದುಕು ನಡೆಸುತ್ತಿದ್ದಾರೆ. ಆದ್ದರಿಂದ ಕಣ್ಣುಗಳು ಸರಿಯಾದ ಉತ್ತರವಲ್ಲ’ ಎಂದಳು.

ಮತ್ತೆ ಹಲವಾರು ತಿಂಗಳುಗಳು ಕಳೆದವು. ಅವರ ಮನೆಯಲ್ಲಿ ವಿವೇಕನ ಪ್ರೀತಿಯ ಅಜ್ಜ ವಯಸ್ಸಾಗಿ ತೀರಿಕೊಂಡರು. ಅವರು ತಾಯಿಯ ತಂದೆಯಾದ್ದರಿಂದ ಆಕೆಗೆ ತುಂಬ ದುಃಖವಾಯಿತು. ಆಕೆ ಬಿಕ್ಕಿ ಅಳುತ್ತಿದ್ದಳು. ನೆಂಟರಿಷ್ಟರೂ ಅಳುತ್ತಿದ್ದರು. ಆತನ ತಂದೆಯೂ ದುಃಖಪಡುತ್ತಿದ್ದರು. ಇವರೆಲ್ಲರನ್ನು ನೋಡಿ ವಿವೇಕನಿಗೂ ಅಳು ಬಂದುಬಿಟ್ಟಿತು. ಅಳುತ್ತಿದ್ದ ವಿವೇಕನನ್ನು ಅವನ ತಂದೆ ತಬ್ಬಿಕೊಂಡು ಸಮಾಧಾನ ಪಡಿಸುತ್ತಿದ್ದರು. ವಿವೇಕನ ತಲೆಯನ್ನು ಅವರ ಭುಜದ ಮೇಲೆ ಒರಗಿಸಿಕೊಂಡು ಕೈಯಿಂದ ಮೃದುವಾಗಿ ನೇವರಿಸುತ್ತಾ ಸಾಂತ್ವನ ಹೇಳಿದರು. ಸ್ವಲ್ಪ ಹೊತ್ತಾದ ನಂತರ ವಿವೇಕನಿಗೆ ಸಮಾಧಾನವಾಗಿ ನೆಮ್ಮದಿಯಿಂದ ತಂದೆಯ ಭುಜದ ಆಸರೆಯಲ್ಲಿ ನಿದ್ರೆ ಮಾಡಿಬಿಟ್ಟ.

ಆಗ ಅವನ ತಾಯಿ ಮತ್ತೆ ಮಗನನ್ನು ಮನುಷ್ಯನ ಅಮೂಲ್ಯವಾದ ಭಾಗ ಯಾವುದೆಂದು ಪ್ರಶ್ನೆ ಮಾಡಿದಳು. ವಿವೇಕನಿಗೆ ಉತ್ತರ ಹೊಳೆಯಲಿಲ್ಲ. ”ನನಗೆ ತಿಳಿಯದಮ್ಮಾ, ನೀನೇ ಹೇಳು” ಎಂದು ನುಡಿದ.

ತಾಯಿ ಹೇಳಿದಳು ”ಮನುಷ್ಯನ ಅತ್ಯಮೂಲ್ಯವಾದ ಭಾಗ ಅವನ ಭುಜಗಳು” ಎಂದಳು. ಅದಕ್ಕೆ ವಿವೇಕನು ”ಭುಜಗಳ ಮೇಲೆ ಮನುಷ್ಯನ ತಲೆಯಿದೆ. ಅದು ಎತ್ತಿ ಹಿಡಿಯಲು ಸಹಾಯ ಮಾಡುತ್ತದೆ ಎಂದಲ್ಲವೇ?” ಎಂದು ಪ್ರಶ್ನಿಸಿದ.

”ಹಾಗಲ್ಲ ಮಗೂ, ದುಃಖದಲ್ಲಿರುವ ಮತ್ತೊಬ್ಬ ಮನುಷ್ಯನಿಗೆ ಆಸರೆಯಾಗಿ ಸಾಂತ್ವನ ನೀಡುತ್ತದೆ. ನಿರಾಶೆಯಿಂದಿರುವವರಿಗೆ ನಿನಗಾಧಾರವಾಗಿ ನಾನಿದ್ದೇನೆ ಎಂಬ ಧೈರ್ಯ ನೀಡುತ್ತದೆ. ಇದರಿಂದ ಅವರಲ್ಲಿ ಭರವಸೆ ಮೂಡುವಂತೆ ಮಾಡುತ್ತದೆ”. ಎಂದಳು.

ಮುಂದುವರೆಯುತ್ತಾ ”ನಾವು ಸಾಧಿಸಿದ್ದೆಲ್ಲವೂ ಕಳೆದುಹೋಗಬಹುದು, ನಾವು ಆಡಿದ ಮಾತುಗಳು ಮರೆತು ಹೋಗಬಹುದು. ನಾವೂ ಅಳಿದು ಹೋಗಬಹುದು ಆದರೆ ನಮ್ಮ ಭುಜದ ಮೇಲೆ ತಲೆಯಿಟ್ಟು ಸಾಂತ್ವನ ಅನುಭವಿಸಿದವರು, ಅದರಿಂದ ಭರವಸೆ ಪಡೆದುಕೊಂಡವರು ಎಂದೂ ನಮ್ಮನ್ನು ಮರೆಯಲಾರರು. ಪರರಿಗಾಗಿ ನೆರವು ನೀಡುವ ಇಂತಹದೊಂದು ಭುಜ ನಿನಗೆ ಲಭ್ಯವಾದರೆ ನೀನು ಯಾವತ್ತೂ ನಿರಾಶನಾಗಬೇಕಾಗಿಲ್ಲ. ಅಧೈರ್ಯ ಪಡಬೇಕಾಗಿಲ್ಲ” ಎಂದಳು.

ದಿನನಿತ್ಯದ ಬದುಕಿನಲ್ಲಿ ನಮಗೆ ಹಲವಾರು ಸಲ ಇಂಥಹ ಸನ್ನಿವೇಶಗಳು ಎದುರಾಗುತ್ತವೆ. ನಾವು ಸಂಕಷ್ಟದಲ್ಲಿರುವ, ದುಃಖದಲ್ಲಿರುವ ಯಾವುದೇ ವ್ಯಕ್ತಿಗೆ ನಮ್ಮ ಭುಜದಾಸರೆಯನ್ನು ನೀಡಿದ್ದೇವೆಯೇ? ಎಂಬ ಬಗ್ಗೆ ಆಲೋಚಿಸಬೇಕು.

ವಾಟ್ಸಾಪ್ ಕಥೆಗಳು
ಸಂಗ್ರಹ ಬಿ.ಆರ್ ನಾಗರತ್ನ, ಮೈಸೂರು

12 Responses

  1. sujatha says:

    ತುಂಬಾ ಸುಂದರ ಕಥೆ ಮತ್ತು ಚಿತ್ರ.

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ. ನೀತಿಯುಕ್ತ

  3. ಆಶಾನೂಜಿ says:

    ಸೂಪರ್

  4. ನನ್ನ ಕಥೆ ಓದಿ ಮೆಚ್ಚಿ ಪ್ರತಿಕ್ರಿಯೆ ವ್ಯಕ್ತ ಪಡಿಸಿರುವ ಸಾಹಿತ್ಯ ಸಹೃದಯರಿಗೆ ಧನ್ಯವಾದಗಳು.

  5. Padma Anand says:

    ಮಕ್ಕಳ ಮನದಲ್ಲಿ ಸಾತ್ವಿಕ ತಿಳುವಳಿಕೆಯನ್ನು ಬಿತ್ತುವ ಚಂದದ ಸಂದೇಶ ಹೊತ್ತ ಸುಂದರ ಕಥೆ. ಹಾಗೆಯೇ ಅದಕ್ಕೊಪ್ಪುವ ಚಂದದ ರೇಖಾಚಿತ್ರ.

  6. ಧನ್ಯವಾದಗಳು ಪದ್ಮಾಮೇಡಂ

  7. ಶಂಕರಿ ಶರ್ಮ says:

    ಉತ್ತಮ ಸಂದೇಶಯುಕ್ತ ಸರಳ ಕಥೆ

  8. SHARANABASAVEHA K M says:

    ಸರಳ ಸುಂದರವಾದ ಬರಹ‌‌..‌…..ಆ ಕತೆಯಲ್ಲಿ ಬರುವ ಮಗುವಿಗೆ ಇದ್ದ ಕುತೂಹಲ ನಮಗೂ ಇತ್ತು……ಇನ್ನೊಬ್ಬರ ದುಃಖವನ್ನು ಮರೆಸಿ ಸಾಂತ್ವನ ನೀಡುವುದು ಮಹತ್ತರ ಎಂದೂ ನಿಮ್ಮ ಬರಹ ಸಾರಿದೆ…..ಚೆನ್ನಾಗಿ ಮೂಡಿ ಬಂದಿದೆ ಮೇಡಂ

  9. ಧನ್ಯವಾದಗಳು ಶಂಕರಿ ಮೇಡಂ..ಹಾಗೂಶರಣಬಸವೇಶ ಸರ್

  10. S.sudha says:

    ಆಸರೆ ಬೇಕಾದದ್ದು .

  11. ಧನ್ಯವಾದಗಳು ಸುಧಾ ಮೇಡಂ

Leave a Reply to sujatha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: