ವಿಶೇಷ ದಿನ

ಯುಗಾದಿಯ ವಿಶೇಷತೆಗಳು

Share Button


ಯುಗಾದಿ ಎಂದರೆ ಸೃಷ್ಟಿಯ ಆರಂಭ,ಯುಗಾರಂಭ. ಇಲ್ಲಿ ಹೊಸ ವರ್ಷಾರಂಭ ಎಂಬುದೇ ಅರ್‍ಥೈಕೆ.ನಮ್ಮ ಧಾರ್ಮಿಕ ಪದ್ಧತಿ(ಪಂಚಾಂಗ) ಪ್ರಕಾರ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬೆರಡು ಆಚರಣೆಗಳು.ವಸಂತ ಋತುವಿನಲ್ಲಿ ಬರುವ ಈ ಹಬ್ಬಗಳಿಗೆ ಮದುಮಗಳಿನ ಮೆರುಗು!. ಚಿಗುರೆಲೆ ಫಲಪುಷ್ಪ ಬಿಡುವ ಕಾಲ!!. ಕೋಗಿಲೆ ಗಾನ!!!. ಇವುಗಳೆಲ್ಲ ಕಾಲ ವಿಶೇಷತೆಗಳು. |ಯುಗ-ಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ| ಹೊಸ ವರುಷಕೆ ಹೊಸತು-ಹೊಸತು ತರುತಿದೆ| ಇದು ರಸ‌ಋಷಿ ದ.ರಾ.ಬೇಂದ್ರೆಯವರು ರಚಿಸಿದ ಹಾಡಿನ ಅರ್ಥವತ್ತಾದ ಮೊದಲ ಸಾಲು ಚಾಂದ್ರಮಾನ ಯುಗಾದಿಃ-ಚಂದ್ರನ ಬೆಳಕಿಗೆ ಹಾಗೂ ಚಲನೆಗೆ ಸೂರ್ಯನೇ ಆಧಾರವೆಂಬುದನ್ನರಿತ ನಮ್ಮ ಪೂರ್ವಜರು ಲೆಕ್ಕಾಚಾರ ಹಾಕಿ ಚಾಂದ್ರಮಾನ ಯುಗಾದಿಯ ದಿನವನ್ನು ಕಂಡುಕೊಂಡು ಹೊಸವರ್ಷ ಆರಂಭಿಸಿದರು.ಆ ದಿನವೇ ನವ ವರ್ಷಾರಂಭ.ಶಾಲಿವಾಹನ ಶಕೆ ಆರಂಭ. ಹಾಗೆಯೇ ಹೊಸ ಪಂಚಾಂಗ ಪ್ರಾರಂಭ. ಇದು ಚೈತ್ರಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ. |ಚೈತ್ರಮಾಸಿ ಜಗದ್ಬ್ರಹ್ಮಾ ಸಸರ್ಜ ಪ್ರಥಮೇ ಹನಿ| ಶುಕ್ಲಪಕ್ಷೇ ಸಮಗ್ರಂತು ತದಾ ಸೂರ್ಯೋದಯೇ ಸತಿ|| ಇದು ಸಂಸ್ಕೃತ ಶ್ಲೋಕ. ಚೈತ್ರಮಾಸದ ಪ್ರಾರಂಭದ ಸೂರ್ಯೋದಯದ ವೇಳೆ; ಚತುರ್ಮುಖ ಬ್ರಹ್ಮನು ಸಂಪೂರ್ಣ ಜಗತ್ತಿನ ಸೃಷ್ಟಿ ಮಾಡಿದನು ಎಂಬುದಾಗಿ ಪೂರ್ವಜರ, ಪುರಾಣಕಾರರ ಹೇಳಿಕೆ.

ಆಚರಣೆಃ– ಅಂದು ಮಂಗಳ ಸ್ನಾನ, ಹೊಸವಸ್ತ್ರಧಾರಣೆ, ಮನೆಮುಂದೆ ತಳಿರು-ತೋರಣ,ರಂಗೋಲಿ ವೈವಿಧ್ಯ, ಪಂಚಾಂಗ ಶ್ರವಣ, ಸಿಹಿ ಅಡುಗೆ ಮಾತ್ರವಲ್ಲ ಬೇವು-ಬೆಲ್ಲ ಸೇವನೆ ಹಾಗೂ ಹಂಚುವಿಕೆ. ಕಷ್ಟ-ಸುಖಗಳೆರಡನ್ನೂ ಒಂದೇ ಸಮನಾಗಿ ಸ್ವೀಕರಿಸಬೇಕು, ಹಂಚಿಕೊಳ್ಳಬೇಕು ಎಂದರೆ; ನೆರೆಹೊರೆಯವರ,ಬಂಧುಗಳ ಕಷ್ಟ-ಸುಖಕ್ಕೆ ನಾವು ಸ್ಪಂಧಿಸಬೇಕು ಎನ್ನುವ ತತ್ವವೇ ಬೇವು-ಬೆಲ್ಲ ಸೇವನೆಯ,ಹಂಚುವ ಉದ್ದೇಶ. ವಿಕಾರಿ ಸಂವತ್ಸರ ಮುಗಿದು ಶಾರ್ವರಿ ಆರಂಭ ಮೊನ್ನೆ ಮಾರ್ಚಿ ಇಪ್ಪತ್ತೈದಕ್ಕೆ.ಅರ್ಥಾತ್ ಈ ಬಾರಿಯ ಹೊಸಯುಗಾದಿ.

ಇವಿಷ್ಟು ಪ್ರತಿವರ್ಷದ ಆಚರಣೆಯಾದರೆ; ಇದಕ್ಕೂ ಹೊರತಾಗಿ ಆ ಮನೆಯಲ್ಲಿ ಆ ವರ್ಷ ಮಗಳ ಮದುವೆ ಮಾಡಿದರೆ ನವ ದಂಪತಿಗಳನ್ನು ಕರೆಸಿ ಸನ್ಮಾನ ಮಾಡಿ,ಉಡುಗೊರೆ ಕೊಡುವ ಸಂಪ್ರದಾಯವಿದೆ.

ಸೌರಮಾನ ಯುಗಾದಿಃ-ಭೂಮಿಯಲ್ಲಿ ಆಗುವ ಕಾಲ ಪರಿವರ್ತನೆಗೆ ಸೂರ್ಯನೇ ಕಾರಣವೆಂದು;ಸೂರ್ಯ ಮೇಷರಾಶಿಗೆ ಬರುವ ದಿನವನ್ನು ಲೆಕ್ಕಹಾಕಿ ಸೌರಮಾನ ತಿಂಗಳು ಆರಂಭವಾಯಿತು.ಇದನ್ನು ಹೆಚ್ಚಾಗಿ ಕೇರಳೀಯರು ವಿಷು ಸಂಕ್ರಮಣವೆಂದು ಆಚರಿಸುವರು. ಕೇರಳದ ಹೆಚ್ಚಿನ ಜಮೀನುದಾರರ ಮನೆಗಳಲ್ಲಿ ವಿಷುಸಂಕ್ರಮಣದ ಮಾರಣೆದಿನ ಅಂದರೆ ವಿಷುಕಣಿದಿನ ಒಕ್ಕಲಿಗರು ಅಥವಾ ಕೆಲಸಗಾರರು ತಮ್ಮ ತಮ್ಮ(ಫಲವಸ್ತು) ವಿಷುಕಾಣಿಕೆಯನ್ನೊಪ್ಪಿಸಿ ಮೂಡೆಕಡುಬು,ಪಾಯಸ ತಿಂದು ಉಡುಗೊರೆಯನ್ನು ಪಡೆದು ಬರುವ ಹಿಂದಿನಪದ್ಧತಿ ಕೆಲವು ಮನೆಗಳಲ್ಲಿ ಈಗಲೂ ಮುಂದುವರಿಯುತ್ತಾ ಇರುವುದು ಕಾಣಬಹುದು.

PC: keralaculture.org

ಈ ಹೊಸವರ್ಷಕ್ಕೆ ಈ ಬಾರಿ 14-4-2020 ರಂದು ವಿಷುಕಣಿ. ಈ ದಿನ ಎಲ್ಲಾ ಸುವಸ್ತುಗಳನ್ನೂ ಬಂಗಾರ ಆಭರಣ, ಫಲವಸ್ತುಗಳನ್ನೂ ದೇವರಕೋಣೆಯಲ್ಲಿಟ್ಟು ಮನೆಮಹಿಳೆ ದೀಪ ಬೆಳಗಿ ಶಂಖ ಊದಿ, ಮತ್ತೆ ಮಕ್ಕಳನ್ನೆಬ್ಬಿಸಿ ಪ್ರಾತಃಕ್ಕಾಲ ಅವರಿಗೆ ಪ್ರಥಮತಃ ಕಣಿದರ್ಶನ ಮಾಡಿಸುವರು. ಮತ್ತೆ ಹಿರಿಯರ ಆಶೀರ್ವಾದ ಪಡೆದು, ಕಿರಿಯರಿಗೆ ಆಶೀರ್ವಾದ ನೀಡುವುದರ ಮೂಲಕ ಆದಿನ ಪ್ರಾರಂಭಗೊಳ್ಳುವುದು. ಉದ್ಯೋಗಿಗಳೂ ಆ ದಿನದಂದು ತಮ್ಮ ತಮ್ಮ ಮೂಲಮನೆಗೆ ತೆರಳಿ ಹಿರಿಯರಾಶೀರ್ವಾದ ಪಡೆದು ಸಿಹಿಯೂಟ ಉಂಡು ಮರಳುವ ಪದ್ಧತಿಯಿದೆ.

ಗದ್ದೆ ಬೇಸಾಯದವರು ವಿಷುಕಣಿದಿನ ಎತ್ತುಗಳ ಸಹಿತ ನೊಗ-ನೇಗಿಲು ಹಿಡಿದು ಗದ್ದೆ ಹೂಡದೆ ಇರಲಾರರು. ಮುಂದೆ ಯಾವುದೇ ದಿನ ಮುಂಗಾರು ಮಳೆ ಬರುವ ಸಾಧ್ಯತೆ ಇದೆಯಾದ್ದರಿಂದ ಹಾಗೂ ಇದೊಳ್ಳೆಯ ಮುಹೂರ್ತವಾದ್ದರಿಂದಲೂ ಗದ್ದೆಗೆ ನೇಗಿಲು ಊರಲು ಪ್ರಾರಂಭಿಸುತ್ತಾರೆ.

ಆಚರಣೆಯ ಮಹತ್ವಃ-ಯುಗಾದಿ ದಿನ ಪಂಚಾಂಗ ಶ್ರವಣ ಮಾಡುವುದರಿಂದ ವರ್ಷಪೂರ್ತಿ ಸಿಗುವ ಒಟ್ಟು ಫಲ ಅಲ್ಲದೆ ಅವರವರ ರಾಶಿಭವಿಷ್ಯವನ್ನೂ ತಿಳಿಯಬಹುದು. ಹಬ್ಬ-ಹರಿದಿನಗಳನ್ನು ಆಚರಿಸದಿದ್ದರೆ ಜೀವನಕ್ಕೆ ಅರ್ಥ ಇಲ್ಲ.( ಹರಿದಿನ ಅಂದ್ರೆ ಏಕಾದಶಿ ದಿನ).ತಲೆ ತಲಾಂತರದಿಂದಲೇ ಆಚರಿಸಿಕೊಂಡು ಬರುವ ಸಂದರ್ಭದಲ್ಲಿ ಪರಸ್ಪರ ಎಲ್ಲರೂ ಕೂಡುವಿಕೆಯಲ್ಲಿ ಕಷ್ಟ-ಸುಖಗಳ,ಕ್ಷೇಮಸಮಾಚಾರಗಳ ವಿನಿಮಯ ಮಾಡಿಕೊಂಡರೆ ಆಧ್ಯಾತ್ಮಿಕಭಾವ, ದೈವೀಕೃಪೆ ಇವುಗಳೆಲ್ಲ ಮೇಳೈಸಿಗೊಂಡು ಮನಶ್ಶಾಂತಿ ಸಿಗುವುದರಲ್ಲಿ ಸಂದೇಹವಿಲ್ಲ.

ನಮ್ಮ ಸಂಸ್ಕೃತಿ ಸಂಪ್ರದಾಯವೇ ನಮ್ಮ ತಾಯಿಬೇರು. ಈ ತಾಯಿಬೇರು ಕಡಿದರೆ ನಮ್ಮ ನೆಲೆ ತಪ್ಪುವುದರಲ್ಲಿ ಸಂದೇಹವಿಲ್ಲ.ಕೊನೆಯದಾಗಿ ಈ ಶಾರ್ವರಿ ನಾಮ ಸಂವತ್ಸರವು, ನೆಮ್ಮದಿ, ಸುಖಸಂಪತ್ತು ಲಭಿಸಲಿ.ವಿಶ್ವಕ್ಕೇ ಬಂದಕೊರೋನ ಪೀಡೆ ತೊಲಗಿ ಎಲ್ಲರಿಗೂ ಆಯುರಾರೋಗ್ಯ ದೊರೆತು ದೇಶ ರಾಮರಾಜ್ಯವಾಗಲಿ ಎಂದು ಹಾರೈಸೋಣ. |ಸರ್ವೇಜನಾ ಸುಖಿನೋಭವಂತು|

-ವಿಜಯಾಸುಬ್ರಹ್ಮಣ್ಯ,ಕುಂಬಳೆ.

6 Comments on “ಯುಗಾದಿಯ ವಿಶೇಷತೆಗಳು

    1. ವಿಷುಕಣಿಯ ವರ್ಣನೆ ಬಹಳಸುಂದರವಾಗಿ ವರ್ಣಿಸಿದಿರಿ .‍ akkooo

  1. ಯುಗಾದಿ ಹಬ್ಬದ ಮಹತ್ವವನ್ನು ಬಹಳ ಚೆನ್ನಾಗಿ ವಿವರಿಸಿರುವಿರಿ, ಹಬ್ಬದ ಶುಭಾಶಯಗಳು

  2. ಯುಗಾದಿ,ವಿಷು ಮಹತ್ವ ವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಎಲ್ಲರಿಗೂ ಶುಭವಾಗಲಿ..

Leave a Reply to ASHA nooji Cancel reply

 Click this button or press Ctrl+G to toggle between Kannada and English

Your email address will not be published. Required fields are marked *