ಕುಸಿಯುತ್ತಿರುವ ಕುಟುಂಬ ಪ್ರಜ್ಞೆ

Share Button

ಭಾರತೀಯ ಸಾಮಾಜಿಕ ಪದ್ಧತಿಯ ಬೇರು ಕುಟುಂಬ. ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ವಿಶಾಲ ಮನೋಭಾವನೆಯ ಅರಿವು ನಮ್ಮದು.  ಅದರಲ್ಲಿ ಕುಟುಂಬ ಅತ್ಯಂತ ಮೂಲಭೂತ ಸ್ತರದ ವ್ಯವಸ್ಥೆ.  ವಿಭಕ್ತ ಹಾಗೂ ಅವಿಭಕ್ತ ಕುಟುಂಬಗಳ ಬಗ್ಗೆ ತಿಳಿದಿದ್ದೇವೆ . ಈಗಂತೂ ನ್ಯೂಕ್ಲಿಯರ್ ಕುಟುಂಬಗಳೇ ಹೆಚ್ಚು . ಮೊದಲಿನ ವ್ಯವಸಾಯ ವ್ಯವಹಾರದ ಮೇಲೆ ಎಲ್ಲರೂ ಅವಲಂಬಿತರಾಗಿದ್ದಾಗ ಒಂದೇ ಕಡೆ ವಾಸಿಸುವ ಅವಶ್ಯಕತೆ ಇದ್ದಾಗ ಕೂಡು ಕುಟುಂಬಗಳು ಅನಿವಾರ್ಯವೂ ಅವಶ್ಯವೂ ಆಗಿದ್ದವು . ಬದಲಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಕಾಲಘಟ್ಟದಲ್ಲಿ ಅದು ಸಾಧ್ಯವಿಲ್ಲ . ಹಾಗಾಗಿ ಕುಟುಂಬಗಳು ಬೇರೆಡೆಗಳಲ್ಲಿ ಹಂಚಿಹೋಗಿರುವುದು ಸಾಮಾನ್ಯ ಸಹಜ . ಆದರೆ ಮೂಲ ತಾಯಿ ಬೇರೇ ಕುಟುಂಬ ವ್ಯವಸ್ಥೆಯಾದ್ದರಿಂದ ಇಡೀ ಸಂಸಾರದ ವೃಕ್ಷಕ್ಕೆ ಸಾರ ಮೂಲಮನೆಯ ಪೋಷಕರೇ.  ಹಾಗಾಗಿ “ಹತ್ತಿರವಿದ್ದರೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲ್ಲಿ”  ಎಂಬ ಕವಿ ವಾಕ್ಯಕ್ಕೆ ವಿರುದ್ಧವಾಗಿ ದೂರವಿದ್ದರೂ ಆಂತರಿಕ ಆರ್ದ್ರತೆಯನ್ನು ಕಾಪಾಡಿಕೊಳ್ಳುತ್ತಾ ವಿಭಜಿತ ಹಾಗೂ ಅವಿಭಾಜ್ಯ ಕುಟುಂಬಗಳೆಡರ ಅನುಕೂಲತೆಯನ್ನು ಉಪಭೋಗಿಸುತ್ತಿರುವ ದೃಶ್ಯವನ್ನು  ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಕಾಣುತ್ತಿದ್ದೇವೆ.  ಆದರೆ ಒಟ್ಟು ಕುಟುಂಬದ ಸಹಬಾಳ್ವೆಯ ಸೊಗಸನ್ನು ಕಂಡಿರುವ ನಾವು ಅದನ್ನು ನಮ್ಮ ಮಕ್ಕಳಿಗೆ ಅಂದರೆ ಈ ಜನಾಂಗಕ್ಕೆ ತಲುಪಿಸ ಬೇಕಲ್ಲವೇ?  ನಗರದ ವ್ಯವಸ್ಥೆಯಲ್ಲಿ ಗಂಡ ಹೆಂಡತಿ ಹಾಗೂ ಮಕ್ಕಳು ಹೀಗೆ ಎಲ್ಲರ ಮೇಲೂ ಒತ್ತಡದ ಕರಿನೆರಳು ಆವರಿಸಿರುವಾಗ  ಸಂಬಂಧಗಳ ಸುಳುವಿನ ಒಳ ಹೊಳಹುಗಳು ಮಕ್ಕಳ ಮನದಲ್ಲಿ ಮೂಡಿಸಲು ಯಶಸ್ವಿಯಾಗಿದ್ದೇವೇಯೇ?  ಉತ್ತರ ಕಂಡುಕೊಳ್ಳಬೇಕಾಗಿದೆ . 

ಈಗ ಐವತ್ತರ ವಯೋಮಾನದ ನಾನು ಐದು ತಲೆಮಾರುಗಳ ಒಡನಾಟ ಕಂಡಿರುವೆ.  ಮಧ್ಯದ ಮೂರನೆಯ ಬೆಸುಗೆಯಾದ್ದರಿಂದ ಒಂದನೆಯ ತಲೆ ನನ್ನ ಅಜ್ಜಿಯ ಅನುಭವದ ನೆಲೆಗಟ್ಟನ್ನು ಬಲ್ಲವಳಾಗಿ ಐದನೆಯ ಅಂದರೆ ಇಂದಿಗೆ ಹತ್ತು ವರ್ಷದ ವಯೋಮಾನದ ಒಳಗಿರುವ ಮೊಮ್ಮಕ್ಕಳ ವಯಸ್ಸಿನವರನ್ನು ಕಂಡಿದ್ದರಿಂದ ಹೀಗೆ ಬದಲಾಗುತ್ತಿರುವ ಕುಟುಂಬದ ಪರಿಕಲ್ಪನೆಯ ಚಿತ್ರ ಹೆಚ್ಚು ಸ್ಪಷ್ಟವಾಗಿದೆ.  ಅಜ್ಜಿ ಬೆಳೆದಂತಹ ಅರವತ್ತು ಎಪ್ಪತ್ತು ಜನಗಳ ಕುಟುಂಬ ವ್ಯವಸ್ಥೆಯಿಂದ ಹಿಡಿದು ಈಗಿನ ಮೂರು ಅಥವಾ ನಾಲ್ಕು ಜನರ ಪುಟ್ಟ ಸಂಸಾರದ ತನಕದ ಪರಿಷ್ಕರಣೆಯಲ್ಲಿ ಸಿಂಹಪಾಲು ಆರ್ಥಿಕ ವ್ಯವಸ್ಥೆಯೇ ಆದ್ದರಿಂದ ಸಾಮಾಜಿಕ ವ್ಯವಸ್ಥೆಯೂ ಸ್ಥಿತ್ಯಂತರ ಹೊಂದುತ್ತಾ ಸಾಗುತ್ತಿದೆ ಎನ್ನಬಹುದು.  

ಮೊದಲೇ ಹೇಳಿದಂತೆ ಬದಲಾವಣೆಗೆ ಹೊಂದಿ ನಡೆಯಬೇಕಿರುವುದು ಸಹಜ . ಕುಟುಂಬದ ಸದಸ್ಯರ ಮಧ್ಯದ ಸಂಬಂಧ ಸಾಮರಸ್ಯ ಒಂದು ಹಂತದವರೆಗಾದರೂ ಉಳಿಸಿಕೊಳ್ಳಬೇಕಾಗಿರುವುದು ಕರ್ತವ್ಯ . ಇಲ್ಲಿಯೂ ಸಂಪ್ರದಾಯ ಆಚರಣೆಗಳು ಮುಖ್ಯಪಾತ್ರ ವಹಿಸುತ್ತವೆ . ಸಂತೋಷದಲ್ಲಿ ಆಗಲಿ ಸಾವಿಗೆ ಸಂಬಂಧಿಸಿದ ಆಚರಣೆಗಳಲ್ಲಿ ಎಲ್ಲ ಸದಸ್ಯರ ಉಪಸ್ಥಿತಿ ಬೇಡುವುದು ಇದಕ್ಕೆ ಹಿಡಿದ ಕನ್ನಡಿ.  ವಿದೇಶವಾಸ ಉದ್ಯೋಗದ ಅನಿವಾರ್ಯತೆಗಳು ಈಗ ಅಂತಹ ಸಂದರ್ಭಗಳನ್ನು ಕಡಿಮೆ ಮಾಡಿ ಬಿಡುತ್ತಿವೆ . ನಾಗರಿಕತೆ ಆಧುನಿಕತೆ ಬೆಳೆದಷ್ಟು ಮನುಷ್ಯ ತನ್ನದೇ ಚಿಪ್ಪಿನಲ್ಲಿ ಹುದುಗುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ.  ಇದು ದೀರ್ಘಕಾಲದಲ್ಲಿ ಖಿನ್ನತೆ ಮೊದಲಾದ ಮಾನಸಿಕ ಸಮಸ್ಯೆಗಳಿಗೂ ಎಡೆ ಮಾಡಿಕೊಡುತ್ತದೆ.  ಮುಂಚೆ ಹತ್ತಿರದ ಹಿರಿಯ ಬುದ್ಧಿವಂತ ಕುಟುಂಬ ಸದಸ್ಯರು ಮಾಡುತ್ತಿದ್ದ ಕೆಲಸಕ್ಕೆ ಈಗ ಹಣ ಕೊಟ್ಟು ಆಪ್ತ ಸಲಹೆಗಾರರ (councellors)ಮೊರೆ ಹೋಗಬೇಕಾಗಿದೆ . ಇದು ಇಂದಿನ ಯುಗದ ಅಭಿಶಾಪ ಎಂದರೆ ತಪ್ಪಾಗಲಾರದು.  ಶುಭ ಅಶುಭ ಸಂದರ್ಭಗಳಲ್ಲಿ,  ಬೇಸಿಗೆ ದಸರಾ ರಜೆಗಳಲ್ಲಿ ಅಜ್ಜಿ ಮನೆಯಲ್ಲಿ ಎಲ್ಲಾ ಕಸಿನ್ ಗಳು ಸೇರುತ್ತ ಇದ್ದಾಗಿನ ಅನುಭವಗಳನ್ನು ಇಂದಿನ ಬೇಸಿಗೆ ಶಿಬಿರಗಳು ನೀಡಲು ಸಾಧ್ಯವೇ? ಸಹಕಾರ ಸಮರಸ ಹಂಚಿಕೊಳ್ಳುವ ಗುಣಗಳನ್ನು ಬೆಳೆಸುತ್ತಿದ್ದ ಸ್ವಲ್ಪ ಮಟ್ಟಿಗೆ ಸಂಕುಚಿತ ಭಾವಗಳನ್ನು ಬಿಡಿಸುತ್ತಿದ್ದ ಅಂದಿನ ಅಭ್ಯಾಸಗಳು ಇಂದು ಕಾಣಲು ಸಾಧ್ಯವೇ? ತಮ್ಮದೇ ಕೋಣೆ ಬಿಟ್ಟು ಬಂದವರನ್ನು ಮಾತನಾಡಿಸಲು ಹೊರಬರದ ಯುವಜನಾಂಗವನ್ನು ಕಂಡಿದ್ದೇನೆ . ಇತ್ತೀಚಿನ ಇಪ್ಪತ್ತು ಮೂವತ್ತು ವರ್ಷಗಳಿಂದ ಓದು ಒಳ್ಳೆಯ ಉದ್ಯೋಗದ ಓಟದ ಸ್ಪರ್ಧೆಯ ರೇಸ್ ಕುದುರೆಯನ್ನಾಗಿ ಮಾಡಿದ ಪರಿಣಾಮವೇ ಇದು ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.  ಓದಿಗೆ ನೀಡುವ ಅತಿ ಪ್ರಾಮುಖ್ಯತೆಯಿಂದಾಗಿ ಮಕ್ಕಳನ್ನು ಸೀಮಿತ ಪ್ರಪಂಚದಲ್ಲಿ ಉಳಿಯುವಂತೆ ಮಾಡಿ ಕುಟುಂಬದ ಬಗ್ಗೆ ಪ್ರೀತಿ ವಾತ್ಸಲ್ಯವನ್ನು ವ್ಯಾಪಾರೀಕರಣ ಮಾಡಿ ವಿಮುಖರಾಗುವಂತೆ ಮಾಡಿದ್ದು ನಮ್ಮ ತಪ್ಪೇ ಅಲ್ಲವೇ?  ಅವರು ಗಳಿಸಿದ ಅಂಕಗಳ ಮೇಲೆ ತೆಗೆದುಕೊಳ್ಳುವ ಸಂಬಳದ ಮೇಲೆ ಹಿರಿಮೆ ತೋರಿಸಿದಾಗ ಅದಕ್ಕೆ ಕಷ್ಟಪಟ್ಟ ಪೋಷಕರ ಬಗ್ಗೆ ಅಭಿಮಾನವೂ ಬೆಳೆಯಬೇಕಿತ್ತು.  ಅಪ್ಪ ಅಮ್ಮ ಸಂಬಂಧಗಳಿಗೆ ಬೆಲೆ ಕೊಡುತ್ತಾರೆ ಎಂಬುದನ್ನು ನಡವಳಿಕೆ ನೋಡಿಯೆ ಬೆಳೆದ ಮುಂದಿನ ಪೀಳಿಗೆಯಲ್ಲಿ ಈಗ ನಾವು ನಮ್ಮದೇ ಪ್ರತಿಬಿಂಬ ನೋಡಬೇಕಾಗಿರುವುದು ನಮ್ಮ ಪೀಳಿಗೆಯ ದುರದೃಷ್ಟ . 

ಸಮಬಾಳ್ವೆ ಸಹಚರ್ಯ ಇಲ್ಲದಿದ್ದರೂ ಹತ್ತಿರದ ಸಂಬಂಧಿಕರಲ್ಲಿ ಆರೋಗ್ಯಪೂರ್ಣ ಅನುಬಂಧ ಉಳಿಸಿಕೊಳ್ಳಬೇಕು.  ಪರಸ್ಪರ ಸುಖ ದುಃಖಗಳಲ್ಲಿ ಭಾಗಿಯಾಗಿ ಸಹಾಯ ಹಸ್ತ ನೀಡಬೇಕು.  ಆದರೆ ಅದಕ್ಕೆ ಪ್ರತಿಫಲ ನಿರೀಕ್ಷೆ ಇದ್ದರೆ ಮತ್ತೆ ವ್ಯವಹಾರವಾಗಿ ಬಿಡುತ್ತದೆ.  ಮಾಡಿದ ಒಳ್ಳೆ ಕಾರ್ಯಗಳಿಗೆ ಕರ್ಮಸಿದ್ಧಾಂತದ ಅನುಗುಣವಾಗಿ ಬೇರೆ ರೀತಿಯಲ್ಲಿ ಬೇರೆಯವರಿಂದ ಸಹಾಯ ಬರಬಹುದು.  ಮೊದಲನೆಯ ಹೆಜ್ಜೆ ನಾವಿಟ್ಟು ಕೈ ನೀಡಿದರೆ ಮುಂದೆ ನಮ್ಮ ಮುಂದೆ ಚಾಚಿದ ಹಸ್ತ ಬಂದೇ ಬರುತ್ತದೆ . ನಮ್ಮ ಈ ಆಚರಣೆಗಳನ್ನು ಮಕ್ಕಳಿಗೂ ಕಲಿಸುತ್ತಾ ಕೌಟುಂಬಕ ಪ್ರೀತಿ ವಿಶ್ವಾಸಗಳಿಗೆ ಒತ್ತು ಕೊಟ್ಟು ಪ್ರಥಮ ಪ್ರಾಶಸ್ತ್ಯ  ಕೊಡಬೇಕೆಂದು ಕಲಿಸುತ್ತಾ ಹೋದರೆ ಮುಂದಾದರೂ ಆರೋಗ್ಯಪೂರ್ಣ ಸ್ವಸ್ಥ ಸುಂದರ ಸಮಾಜ ಮತ್ತೆ ಹುಟ್ಟ ಬಹುದಲ್ಲವೇ? ಶಾಂತಿ ಸೌಹಾರ್ದತೆಗಳ ಬಾಳ ಉಸಿರಾಗಬಹುದಲ್ಲವೇ? ಮನೆಗೆದ್ದು ಮಾರು ಗೆಲ್ಲುವ ಈ ಕಾರ್ಯದಿಂದ ನಾವು ಪೋಷಕರು ಹೊಸ ದಿಗಂತದೆಡೆಗೆ ಪಯಣ ಆರಂಭಿಸೋಣವೇ?

ಸುಜಾತಾ ರವೀಶ್ 

4 Responses

  1. ನಾಗರತ್ನ ಬಿ. ಆರ್ says:

    ವಾಸ್ತವಿಕ ಬದುಕಿನ ಲೇಖನ ಸೊಗಸಾಗಿ ಮೂಡಿಬಂದಿದೆ.. ಧನ್ಯವಾದಗಳು.

  2. ನಯನ ಬಜಕೂಡ್ಲು says:

    ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನುವ ಮಾತೇ ಇದೆ. ಚಂದದ ಬರಹ.

  3. Padma Anand says:

    ಚಿಂತನೆಗೆ ಹಚ್ಚುವ ಉತ್ತಮ ಆಶಯಯುಳ್ಳ ಲೇಖನ. ಅಭಿನಂದನೆಗಳು.

  4. . ಶಂಕರಿ ಶರ್ಮ says:

    ಉತ್ತಮ ಆಶಯಗಳ ಸೊಗಸಾದ ಲೇಖನ ಸಕಾಲಿಕವೂ ಹೌದು.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: