ಹಿಡಿಂಬಾ ಮಂದಿರ…. ಎಷ್ಟೊಂದು ಸುಂದರ..

Share Button
Hemamala. B, DGM, Kluber Lubrication (I) Pvt.Ltd. Mysore

ಹೇಮಮಾಲಾ.ಬಿ

ಎಪ್ರಿಲ್  2012 ರಲ್ಲಿ ಹಿಮಾಚಲ ಪ್ರದೇಶದ ಕೆಲವು ಪ್ರೇಕ್ಷಣೀಯ  ಸ್ಥಳಗಳನ್ನು ನೋಡಿ ಬಂದಿದ್ದೆವು. ’ಮನಾಲಿ’ಯಲ್ಲಿರುವ ಹಿಡಿಂಬಾ ದೇವಾಲಯ ಅವುಗಳಲ್ಲಿ ಒಂದು.

ಮನಾಲಿ ಪಟ್ಟಣದಿಂದ ಕಾರಿನಲ್ಲಿ ಪ್ರಯಾಣ ತುಂಬಾ ಮುದ ಕೊಟ್ಟಿತು. ಬೆಟ್ಟಗಳ ನಡುವೆ, ಹಸಿರಿನ ವನಸಿರಿಯ ಮಧ್ಯೆ ಹಾದು ಹೋಗುವ ಅಂಕು-ಡೊಂಕಾದ ರಸ್ತೆ. ಇಲ್ಲಿ ದೇವದಾರು, ಓಕ್, ಪೈನ್ ಇತ್ಯಾದಿ ಮರಗಳು ಸೊಂಪಾಗಿ ಬೆಳೆದಿದ್ದು, ಸುಮಾರಾಗಿ ’ಊಟಿಯ’ ಪರಿಸರವನ್ನು ಹೋಲುತ್ತದೆ. ನಮ್ಮ ಸುತ್ತಲೂ ಕಡಿದಾದ ಬೆಟ್ಟಗಳು, ಅಲ್ಲಲ್ಲಿ ಕಾಣಿಸುವ ಸೇಬಿನ ತೋಟಗಳು, ನೂರಾರು ಸಣ್ಣ ಪುಟ್ಟ ಝರಿಗಳು..ದಾರಿಯುದ್ದಕ್ಕೂ ಜತೆಯಾಗುವ ’ಬಿಯಾಸ್’ ನದಿ ಅಥವಾ ಇನ್ಯಾವುದೋ ಉಪನದಿಯ ಜುಳು-ಜುಳು ನಾದ. ಇಲ್ಲಿನ ನದಿಗಳಲ್ಲಿ ಬೆಳಗಿನ ಸಮಯ ನೀರಿನ ಹರಿವು ಸ್ವಲ್ಪ ಕಡಿಮೆ ಇರುತ್ತದೆ. ಸಂಜೆ ಆಗುತ್ತಿದ್ದಂತೆ  ನೀರಿನ ರಭಸ ಹೆಚ್ಚುತ್ತದೆ. ಹಿಮಾಲಯ ಪರ್ವತ ಶ್ರೇಣಿಯಿಂದ ಹಿಮ ಕರಗಿ ನದಿಗೆ ಸೇರುವುದೇ ಇದಕ್ಕೆ ಕಾರಣ.

ಸ್ವಲ್ಪ ಪ್ರಯಾಣದ ನಂತರ  ಹಿಡಿಂಬಾ ಮಂದಿರ ತಲಪಿದೆವು.

Hidimba mandira

ಹಿಡಿಂಬಾ ಮಂದಿರ

ತಮಾಷೆಗೆಂದೋ, ಕುಚೋದ್ಯಕ್ಕೆಂದೋ-  ಸ್ಥೂಲಕಾಯದ ಸ್ತ್ರೀಯರನ್ನು ’ಹಿಡಿಂಬೆ’ ಗೆ ಹೋಲಿಸಿ ಲೇವಡಿ ಮಾಡುವವರಿದ್ದಾರೆ. ಹಾಗಾಗಿ, ರಾಕ್ಷಸಿ ಹಿಡಿಂಬೆಯ  ದೇವಾಲಯ ಅವಳ ಉಪಮೆಗೆ ತಕ್ಕಂತೆ ಬಲು ದೊಡ್ಡದಿರಬಹುದೆಂದು ಊಹಿಸಿದ್ದೆ. ನನ್ನ  ನಿರೀಕ್ಷೆ ತಪ್ಪಾಯಿತು. ಹಿಡಿಂಬಾ ದೇವಾಲಯವು ಚಿಕ್ಕದಾದರೂ ಚೊಕ್ಕವಾಗಿತ್ತು. ಮರದ ಕುಸುರಿ ಕೆಲಸವನ್ನೊಳಗೊಂಡ ಪುಟ್ಟದಾದ ಬಾಗಿಲು, ಸುಮಾರು 5 ಅಡಿ ಎತ್ತರ, 3 ಅಡಿ ಅಗಲವಿದ್ದಿರಬಹುದು. ಅದಕ್ಕಿಂತ ಉದ್ದದವರು ತಲೆ/ಬೆನ್ನು ಬಾಗಿಸಿದರೆ ಮಾತ್ರ ಮಂದಿರದ ಒಳಗೆ ಹೋಗಲು ಸಾಧ್ಯ. ದೇವಾಲಯದ ಒಳಗೆ ಒಂದು ಪುಟ್ಟ ಗುಹೆ ಇದೆ.  ಹಿಡಿಂಬೆ ಇಲ್ಲಿ ಕುಳಿತು ತಪಸ್ಸನ್ನು ಆಚರಿಸಿದಳು ಎಂಬ ನಂಬಿಕೆ. ಖಂಡಿತವಾಗಿಯೂ, ಹಿಡಿಂಬೆ ಧಡೂತಿಕಾಯದವಳಾಗಿದ್ದರೆ, ಅವಳಿಗೆ ಅಲ್ಲಿ ತಪಸ್ಸಿಗೆ ಕೂರಲು ಅಸಾಧ್ಯ! ನಾವು ಹಿಡಿಂಬೆಗೆ ಇಷ್ಟು ಅವಮಾನ ಮಾಡುವುದು ಸರಿಯೇ ಅನಿಸಿತು.

Yak -animal

ಯಾಕ್ ಪ್ರಾಣಿ

ಅನತಿ ದೂರದಲ್ಲಿ  ಘಟೋತ್ಕಚನ ಗುಡಿಯಿದೆ. ಅಲ್ಲಿ ಅಲಂಕೃತ ಯಾಕ್ ಪ್ರಾಣಿಗಳಿದ್ದುವು. ಅವುಗಳ ಮೇಲೆ ಪ್ರವಾಸಿಗಳನ್ನು ಸವಾರಿ ಮಾಡಿಸಿ ಹಣ ಸಂಪಾದಿಸುವವರು  ಕೆಲವರು. ಹಾಗೆಯೇ 30 ರೂ. ಕೊಟ್ಟರೆ ಮುದ್ದಾದ ಮೊಲಗಳನ್ನು ಎತ್ತಿಕೊಂಡು  ಫೋಟೊ ತೆಗೆಯಬಹುದಾಗಿತ್ತು.

ಕೊರೆಯುವ ಚಳಿ, ಆಗೊಮ್ಮೆ ಈಗೊಮ್ಮೆ ಹಾದು ಹೋಗುವ ಮೋಡಗಳು, ಶಿಸ್ತಿನ ಸಿಪಾಯಿಗಳಂತೆ ಬೆಳೆದು  ನಿಂತ ದೇವದಾರು ವೃಕ್ಷಗಳ ಮಧ್ಯೆ, ಅನನ್ಯವಾದ ಶಾಂತ ಪರಿಸರ. ನಗರದ ದೇವಾಲಯಗಳಂತೆ ಕಿಕ್ಕಿರಿದ ಜನಸಂದಣಿಯಿಲ್ಲ,ಮೊರೆಯುವ ಮೈಕಾಸುರನಿಲ್ಲ, ಚಪ್ಪಲಿ ಕಳೆದು ಹೋದೀತೆಂಬ ಚಿಂತೆಯೂ ಇಲ್ಲ, ಭಿಕ್ಷುಕರ ಕಾಟವೂ ಇಲ್ಲ… ಇಲ್ಲಿರುವುದು ಕೇವಲ ಶಾಂತತೆ.

ಇಂತಹ ನಿಸರ್ಗದ ಮಡಿಲಲ್ಲಿ ತನ್ನದಾದ ಒಂದು ಪುಟ್ಟ ಮಂದಿರವನ್ನು ಹೊಂದಿರುವ ಹಿಡಿಂಬೆ ನಿಜವಾಗಲೂ ಅದೃಷ್ಟವಂತೆ!

– ಹೇಮಮಾಲಾ.ಬಿ

.

4 Responses

  1. Ramesh Bhat Belagodu says:

    ದೇಶದಲ್ಲಿ ಎರಡೇ ಎರಡು ಕಡೆ ಹಿಡಿಂಬೆಯ ದೇಗುಲವಿದೆಯಂತೆ. ಒಂದು – ಮನಾಲಿಯಲ್ಲಿ. ಇನ್ನೊಂದು – ಚಿತ್ರದುರ್ಗದಲ್ಲಿ.

  2. Mohini Damle says:

    ಇಪ್ಪತ್ತು ವರ್ಷ ಹಿಂದೆ ನೋಡಿದ್ದ ಕುಲು – ಮನಾಲಿ , ಹಿಮಾಚಲದ ಪ್ರವಾಸವನ್ನು ನೇನಪಿಸುತ್ತಿವೆ.

  3. ನೀವು ಬರೆದ ಪ್ರಶಾಂತತೆಯ ವಿವರವನ್ನೆಲ್ಲ ತಾನೆ ಹೇಳಿಕೊಳ್ಳುತ್ತಿರುವಂತಿದೆ ದೇಗುಲದ ಚಿತ್ರ. ಬಹುಶಃ ಭೀಮನ ಭೀಮಕಾಯದ ದೆಸೆಯಿಂದ ಮತ್ತು ಹಿಡಿಂಬೆಯ ರಾಕ್ಷಸ ಕುಲದ ಹಿನ್ನಲೆಯ ಕಾರಣಕ್ಕೆ ಅವಳಿಗೆ ದಢೂತಿ ದೇಹವನ್ನು ಆರೋಪಿಸಿಬಿಟ್ಟಿರಬೇಕು. ಅದರೆ ಹೆಸರಲ್ಲೆ ‘ಹಿಡಿ’ಯಷ್ಟಿರುವ ‘ಇಂಬೆ’ (ಹಿಡಿ + ಇಂಬೆ)ಯ ಸಪೂರತೆಗೆ ಬಲೆಗೆ ಬಿದ್ದೆ ಭೀಮ ಅವಳನ್ನು ವರಿಸಲು ಸಿದ್ದನಾದನೆಂದು ಕಾಣುತ್ತದೆ !

Leave a Reply to Mohini Damle Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: