ಆಗಸ್ಟ್ 26 : ಮಹಿಳಾ ಸಮಾನತಾ ದಿವಸ

Share Button

ಸಾವಿರದ ಒಂಬೈ ನೂರ ಇಪ್ಪತ್ತು ಆಗಸ್ಟ್ ಇಪ್ಪತ್ತಾರು : ಅಮೆರಿಕಾದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ .ಆ ದಿನ ಮಹಿಳೆಯರಿಗೂ ಮತದಾನ ಮಾಡುವ ಹಕ್ಕು ಲಭಿಸಿತು .ಹಾಗಾಗಿಯೇ ಅಂದಿನ ಸಂಭ್ರಮವನ್ನು ಮಹಿಳಾ ಸಮಾನತೆಯ ದಿನ ಎಂದು ಗುರುತಿಸಿ ಆಚರಿಸಿಕೊಂಡು ಬರಲಾಗುತ್ತಿದೆ .ಈ ಸಂದರ್ಭದ ಹಿನ್ನೆಲೆಯಲ್ಲಿ ಸ್ವಾತಂತ್ರೋತ್ತರ ಭಾರತದಲ್ಲಿ ಮಹಿಳೆಯರ ಸಮಾನತೆಯ ಬಗ್ಗೆ ದೃಷ್ಟಿ ಹರಿಸೋಣ ಬನ್ನಿ 

ಪರಂಪರಾನುಗತವಾಗಿ ಭಾರತದಲ್ಲಿ ಮಹಿಳೆಯರ ಸ್ಥಾನ ಉಚ್ಚ ಮಟ್ಟದಲ್ಲಿಯೇ ಇತ್ತು. “ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಂ”  ಎಂಬುದು ವೇದದ ಕಾಲದ ಪರಿಸ್ಥಿತಿ . ವಿದ್ಯೆಯಲ್ಲಿ ಪುರುಷರಷ್ಟೇ ಸಮಾನತೆ ಹೊಂದಿ ಪಾಂಡಿತ್ಯವಿದ್ದ ಗಾರ್ಗಿ ಮೈತ್ರೇಯಿ ಲೋಪಾಮುದ್ರೆಯರ, ವಾದದಲ್ಲಿ ಶಂಕರಾಚಾರ್ಯರ ಸಮಾನ ಚರ್ಚಿಸಿದ ಉಭಯಭಾರತಿ ಇವರ ಉದಾಹರಣೆಗಳು ಅಂದಿನ ಕಾಲದಲ್ಲಿದ್ದ ಸ್ತ್ರೀಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತವೆ. ನಂತರದ ಪರಕೀಯರ ಆಳ್ವಿಕೆಯ ಆಕ್ರಮಣಗಳಲ್ಲಿ ಹೆಣ್ಣನ್ನು 4 ಗೋಡೆಗಳ ಮಧ್ಯೆ ರಕ್ಷಿಸುವ ನೆಪದಲ್ಲಿ ಹಾಗೂ ಅನ್ಯ ಸಂಸ್ಕೃತಿಗಳ ಪ್ರಭಾವದಲ್ಲಿ ಸ್ತ್ರೀಯರಿಗಿದ್ದ ಪ್ರಾಮುಖ್ಯತೆ ಕಡಮೆಯಾಗುತ್ತಾ ಪುರುಷರಿಗಿಂತ ಕೀಳು ಎಂದು ಬಿಂಬಿಸಲ್ಪಟ್ಟಿತು .ಇದಿಷ್ಟು ಬ್ರಿಟಿಷರ ಕಾಲದಲ್ಲಿದ್ದ ಮಹಿಳೆಯರ ಪರಿಸ್ಥಿತಿ. ಸಮಾನತೆಯಿರದ, ವಿದ್ಯಾಭ್ಯಾಸ ದೊರಕದ, ಸತೀಪದ್ಧತಿ, ಜೋಹರ್, ವರದಕ್ಷಿಣೆ, ಬಾಲ್ಯವಿವಾಹ ವಿಧವೆಯರ ಕೇಶಮುಂಡನ, ಬಹುಪತ್ನಿತ್ವ, ಮುಂತಾದ ಸಾಮಾಜಿಕ ಅನಿಷ್ಟಗಳ ಕಪಿಮುಷ್ಟಿಯಲ್ಲಿ ವನಿತೆ ಸಿಕ್ಕು ನಲುಗುತ್ತಿದ್ದಳು. ಈ ಎಲ್ಲ ಪಡಿಪಾಟಲುಗಳಿಗೆ ಸಿಕ್ಕಿ ನರಳುವುದಕ್ಕಿಂತ ಹೆಣ್ಣು ಸಂತಾನವೇ ಬೇಡ ಎಂಬ ಭಾವನೆಯೂ ಉದ್ಭವವಾಗಿತ್ತು . 

ಸ್ವಾತಂತ್ರಾ ನಂತರ ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಯಲ್ಲಿ ಗಣನೀಯ ಪ್ರಗತಿ ಸುಧಾರಣೆ ಕಂಡುಬಂದಿದೆ ಎಂಬುದಂತೂ ನಿರ್ವಿವಾದ. ಸಂವಿಧಾನದಲ್ಲಿ ಲಿಂಗ ಸಮಾನತೆಯು ಮೂಲಭೂತ ಹಕ್ಕಾಗಿರುವುದರಿಂದ ಉಳಿದೆಲ್ಲ ವಿಷಯಗಳಲ್ಲಿ ಸಮಾನತೆ ಹಾಗೂ ಮೀಸಲಾತಿಗಳು ಸ್ತ್ರೀ ಸ್ವಾತಂತ್ರ್ಯದ ಹಾದಿಯಲ್ಲಿ ಹೊಸ ಹೊಳಹುಗಳನ್ನು ಝಳಪಿಸಿದೆ.  ಹತ್ತೊಂಬತ್ತನೆಯ ಶತಮಾನದ ಸಂಪೂರ್ಣ ಅಧೀನತೆ ಹಾಗೂ ಅಧೋಗತಿಯ ಸ್ಥಾನದಿಂದ ಈ ಇಪ್ಪತ್ತೊಂದನೆಯ ಶತಮಾನದ ಸಮಾನತೆಯ ಸ್ಥಾನಕ್ಕೇರಿರುವುದು ಖಂಡಿತವಾಗಿಯೂ ಪ್ರಗತಿಪಥದ ಗಮನಾರ್ಹ ಬದಲಾವಣೆ.  ಹಾಗೂ ಇದು ಕಡಿಮೆ ಮಟ್ಟದ ಸಾಧನೆ ಏನಲ್ಲ . ಈ ಹಿನ್ನೆಲೆಯಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡಬಹುದು. 

ಶೈಕ್ಷಣಿಕ ಸ್ವಾತಂತ್ರ್ಯ: 

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಮಾನ ಹಕ್ಕುಗಳ ಫಲಾನುಭವಿಗಳಾದ ಮಹಿಳೆಯರಲ್ಲಿ ವಿದ್ಯಾಭ್ಯಾಸದ ಮಟ್ಟ ಹೆಚ್ಚಿತು.  ಇದರಿಂದಾಗಿ ಅವಳ ಜ್ಞಾನದ ಪರಿಧಿ ವಿಸ್ತಾರವಾದುದಲ್ಲದೆ ಹೆಚ್ಚಿದ  ಉದ್ಯೋಗಾವಕಾಶ ಆತ್ಮವಿಶ್ವಾಸವನ್ನು ಬೆಳೆಸುವ ದಾರಿಯಾಯಿತು.  ಸ್ತ್ರೀಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಹೆಚ್ಚಿನ ವಿದ್ಯಾಭ್ಯಾಸ ಹಕ್ಕು ಅಧಿಕಾರಗಳ ಅರಿವು ಮೂಡಿಸಿತು..1961 ರಿಂದ ಈಚೆಗೆ ಮೂಲಭೂತ ವಿದ್ಯಾಭ್ಯಾಸವಷ್ಟೇ ಅಲ್ಲದೆ ಉನ್ನತ ವಿದ್ಯಾಭ್ಯಾಸ, ವಿದೇಶಿ ವಿದ್ಯಾಭ್ಯಾಸ ಎಲ್ಲದರಲ್ಲೂ ಮಹಿಳೆಯರ ಶೇಕಡಾವಾರು ಸಂಖ್ಯೆ ಗಣನೀಯವಾಗಿ ಏರಿವೆ . 

ಆರ್ಥಿಕ ಸ್ವಾತಂತ್ರ್ಯ: 

1976 ರ ಸಮಾನ ಸಂಭಾವನೆ ಕಾಯಿದೆ ಮೊದಲಾದುವು, ವೈಟ್ ಕಾಲರ್ ಉದ್ಯೋಗಗಳ ವಿಷಯದಲ್ಲಿ ಮಾತ್ರವಲ್ಲದೆ ಕೃಷಿ ಹಾಗೂ ಇನ್ನಿತರ ಕನಿಷ್ಠ  ಅಸಂಘಟಿತ ವರ್ಗದಲ್ಲಿನ ಮಹಿಳೆಯರ ಕೂಲಿಯ ಅಸಮಾನತೆಯನ್ನೂ ನಿವಾರಿಸಿದೆ . ಸ್ತ್ರೀಯರಿಗೆ ಅವರಿಗೆ ಸಲ್ಲಬೇಕಾದ ಸಂಭಾವನೆ ಪುರುಷರಿಗೆ ಸಮಾನವಾಗಿ ಸಿಗುವಂತೆ ಮಾಡಿದೆ . 

ಸ್ವಾತಂತ್ರ್ಯದ ಬಳಿಕದ  ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಏರಿದೆ . ಎಲ್ಲಾ ವರ್ಗಗಳಲ್ಲೂ ಮಹಿಳೆಯರು ಸಮರ್ಥವಾಗಿ ಕಾರ್ಯ ನಿರ್ವಹಿಸಿ ಯಶಸ್ಸು ಹೊಂದುತ್ತಿದ್ದಾರೆ.  ಉದಾಹರಣೆಯಾಗಿ ಕಂಪನಿಗಳ ಸಿಇಒ ಆಗಿ ಯಶಸ್ವಿಯಾಗಿರುವ ಈ ಮಹಿಳೆಯರೇ ಸಾಕ್ಷಿ ಇಂದ್ರಾ ನೂಯಿ (ಪೆಪ್ಸಿಕೋ) ಕಿರಣ್ ಮಜುಮ್ದಾರ್ (ಬಯೋಕಾನ್) ಚಿತ್ರಾ ರಾಮಕೃಷ್ಣ (NSE) ಶಿಖಾ ಶರ್ಮಾ, ವಿನಿತಾ ಬಾಲಿ, ರೋಶನಿ ನಾಡಾರ್ ಸುಧಾ ಮೂರ್ತಿ ಮುಂತಾದವರು.  ಇತ್ತೀಚೆಗೆ ರಾಷ್ಟ್ರದ ರಕ್ಷಣಾ ಪಡೆಯ 3 ವಿಭಾಗಗಳಲ್ಲಿಯೂ ಸ್ತ್ರೀಯರನ್ನು ಸಮಾನವಾಗಿ ಉದ್ಯೋಗಕ್ಕೆ ತೆಗೆದುಕೊಳ್ಳುತ್ತಿದ್ದಾರೆ.   ವಿದ್ಯೆ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ಮಹಿಳಾ ಜೀವನದಲ್ಲಿ ಹುಟ್ಟಿಸುವ ಭರವಸೆ ಆತ್ಮವಿಶ್ವಾಸಗಳ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ.

ಸಾಮಾಜಿಕ ಸ್ವಾತಂತ್ರ್ಯ: 

ಕೆಲವೊಂದು ಕಾನೂನಾತ್ಮಕ ಕಾಯಿದೆಗಳು ಸ್ತ್ರೀಗೆ ಅವಶ್ಯಕವಿದ್ದ ಅನೇಕಾನೇಕ ಅಗತ್ಯತೆಗಳನ್ನು ಪೂರ್ಣಗೊಳಿಸಿ ಅವಳಿಗೆ ಸ್ವಾಯತ್ತತೆ ಕೊಡಿಸಿದೆ. ೧೯೫೫ ರ ಹಿಂದೂ ವಿವಾಹ ಕಾಯಿದೆ, 1956 ರ ಹಿಂದೂ ಉತ್ತರಾಧಿಕಾರ ಕಾಯಿದೆ, 1973 ರ ಹಿಂದೂ ಮಹಿಳಾ ಆಸ್ತಿ ಹಕ್ಕು ಕಾಯಿದೆ ಇವೆಲ್ಲವುಗಳು ಹೆಚ್ಚಿನ ಸೌಲಭ್ಯಗಳನ್ನು ನೀಡಿ ಒಟ್ಟಾರೆ ಮಹಿಳೆಯರ, ವಿಶೇಷವಾಗಿ ವಿಧವೆಯರ ಹಕ್ಕುಗಳನ್ನು ಬಲಪಡಿಸಿವೆ . ಅನಿಷ್ಠ ಸಂಪ್ರದಾಯಗಳಿಗೆ ಮುಕ್ತಾಯ ಹಾಡಿದೆ.  ಈಶ್ವರಚಂದ್ರ ವಿದ್ಯಾಸಾಗರ್ ಮೊದಲಾದ ಸಮಾಜ ಸುಧಾರಕರ ಕೊಡುಗೆಯೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. 1961 ರ ವರದಕ್ಷಿಣೆ ನಿಷೇಧ ಕಾಯಿದೆ ಈ ಸಂಧರ್ಭದಲ್ಲಿ ಉಲ್ಲೇಖಾರ್ಹ.  ಆರ್ಥಿಕ ಭಾಗವಹಿಸುವಿಕೆ ವಿದ್ಯಾವಂತ ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಹಾಯಕವಾಗಿ ಕೌಟುಂಬಿಕ ನೆಲೆಯಲ್ಲೂ ತನ್ನ ಅಭಿಪ್ರಾಯಗಳನ್ನು ಧ್ವನಿಸುವಂತೆ ಮಾಡಿತ್ತು.  ಸಮಾನತೆಯ ಹಾದಿಗೆ ಇವು ಪೂರಕ ತಾನೇ? 

ರಾಜಕೀಯ ಸ್ವಾತಂತ್ರ್ಯ:  

ಮತ ಹಾಕುವುದಕ್ಕೆ ಅಷ್ಟೇ ಅಲ್ಲದೆ ಚುನಾವಣೆಯಲ್ಲಿ ಭಾಗವಹಿಸಲು ಅಧಿಕಾರ ಮೀಸಲಾತಿ ಸೌಲಭ್ಯಗಳು ಮಹಿಳೆಯರು ಅಧಿಕಾರಕ್ಕೆ ಬಂದು ಚುಕ್ಕಾಣಿ ಹಿಡಿಯಲು ಎಡೆಮಾಡಿಕೊಟ್ಟಿದೆ . ಇದೇನೂ ಅಂತಿಂತಹ ಸಾಧನೆಯಲ್ಲ.  ಪ್ರಧಾನಮಂತ್ರಿ, ರಾಷ್ಟ್ರಪತಿ, ಸ್ಪೀಕರ್ ನಂತಹ  ಉತ್ತಮ ಉನ್ನತ ಹುದ್ದೆಗಳಲ್ಲಿಯೂ ಭಾರತೀಯ ಮಹಿಳೆ ನಿರ್ವಹಣೆ ಮಾಡಿ ಸೈ ಎನಿಸಿಕೊಂಡಿದ್ದಾಳೆ . 

ಸ್ತ್ರೀ ಸಮಾನತೆಯ  ಮಹಿಳಾ ಹಕ್ಕುಗಳ ರಕ್ಷಣೆ ಹೋರಾಟ / ಸಂಘಟನೆಗಳು ಹುಟ್ಟಿ ಬೆಳೆದು ತಮ್ಮ ಪ್ರಾಬಲ್ಯ ಮೆರೆಯುತ್ತಿವೆ.  ಶೋಷಿತರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿವೆ .

ಇಷ್ಟೆಲ್ಲಾ ಆದರೂ ನಿರೀಕ್ಷಿತ ಸ್ವಾತಂತ್ರದ ಫಲಾನುಭವಿಯಾಗಿದ್ದಾಳೆಯೇ

ಹೆಣ್ಣು ? ಅಂದರೆ ಉತ್ತರ ನಕಾರಾತ್ಮಕವೇ

16.12.2012 ರ ದೆಹಲಿಯ ನಿರ್ಭಯಾ ಪ್ರಕರಣ 

27.12.2019 ರ ಡಾಕ್ಟರ್ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ 

ಇವೆಲ್ಲವೂ ಪ್ರಗತಿಯ ಹಾದಿಯಲ್ಲಿನ ಕಪ್ಪು ಚುಕ್ಕೆಗಳಾಗಿ ಉಳಿದುಬಿಟ್ಟಿವೆ.  ಎಷ್ಟೇ ಮುಂದುವರೆದರೂ ಗಾಂಧೀಜಿಯವರು ಕನಸು ಕಂಡ ಹಾಗೆ ಮಧ್ಯರಾತ್ರಿಯಲ್ಲಿರಲಿ ನಡು ಮಧ್ಯಾಹ್ನದಲ್ಲೂ ನಿರ್ಭೀತರಾಗಿ ಮಹಿಳೆಯರು ಓಡಾಡಲಾಗುತ್ತಿಲ್ಲ.  ಉತ್ಪಾದನಾ ಕ್ಷೇತ್ರದಲ್ಲೂ ಅಷ್ಟೇ ಮಹಿಳೆಯರು ಹೆಚ್ಚಿನ ಲಾಭಾಂಶ ಫಲಾನುಭೋಕ್ತರೇ  ಹೊರತು ಉತ್ಪಾದಕರಲ್ಲ . ಅಷ್ಟೇ ಅಲ್ಲದೆ ಇನ್ನೂ ಗಂಡು ಸಂತಾನದ ಆಸೆಯಲ್ಲಿ ಹೆಣ್ಣುಭ್ರೂಣ ಹತ್ಯೆ ನಿಂತಿಲ್ಲ. 

ಎಷ್ಟೋ ಮಹಿಳಾಪರ ಕಾಯಿದೆಗಳು ಅವಶ್ಯಕತೆ ಇರುವವರಿಗೆ ತಲುಪುತ್ತಿಲ್ಲ, ದುರುಪಯೋಗ ಮಾಡಿಕೊಳ್ಳುವವರಿಗೆ ಮತ್ತೊಂದು ಶಸ್ತ್ರವಾಗಿ ಪರಿಣಮಿಸಿವೆ.  ಸಮಾಜದ ದ್ವಿಮುಖ ನೀತಿ ಮಹಿಳೆಯರ ಸ್ವಾತಂತ್ರ್ಯದ ಪ್ರವಾಹಕ್ಕೆ ತಡೆಯಾಗಿದೆ . ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ಮಧ್ಯದ ಗೆರೆ ಅಳಿಸಿ ಕೆಲವೊಮ್ಮೆ ದುರ್ಬಳಕೆಯ ಸಾಧನಗಳಾಗಿ ಸ್ತ್ರೀಕುಲಕ್ಕೆ ಕಳಂಕವಾಗಿರುವ ನಿದರ್ಶನಗಳೂ ಉಂಟು.  ಕೇವಲ ಕಾನೂನಾತ್ಮಕವಾಗಿ ಏನನ್ನೂ ಸಾಧಿಸಲು ಆಗುವುದಿಲ್ಲ.  ಕಾಯಿದೆಗಳು ಗರಗಸ ಇದ್ದಂತೆ ಎರಡೂ ಕಡೆ ಸೀಳುವ ಅಪಾಯವಿದ್ದೇ ಇರುತ್ತದೆ.  ಹೆಚ್ಚಿನಂಶ ಒಳ್ಳೆಯದಿರುವುದರಿಂದ ವಿಚಕ್ಷಣೆಯಲ್ಲಿ ಉಪಯೋಗಿಸಬೇಕು, ಸಿಕ್ಕಿರುವ ಸೌಲಭ್ಯಗಳ ಸದುಪಯೋಗವಾಗಬೇಕು.  ಹಾಗಾದಾಗ ಮಾತ್ರ ಮಹಿಳೆಯರಿಗೆ ನೈಜ ಸ್ವಾತಂತ್ರ್ಯ ಸಿಕ್ಕ ಹಾಗೆ .

ಮಹಿಳೆಯರಿಗೆ ಅವರ ಸಂಸಾರಗಳಲ್ಲಿ ವೃತ್ತಿಕ್ಷೇತ್ರಗಳಲ್ಲಿ ಹಾಗೂ ಸಮಾಜದ ಇನ್ನಿತರ  ನೆಲೆಗಟ್ಟಿನಲ್ಲಿ ಸಮಾನತೆ ಸಿಕ್ಕು ನೆಮ್ಮದಿ ಸ್ವಾತಂತ್ರ ಶಾಂತಿಯನ್ನು ಪಡೆಯುವಂತಾಗಲಿ ಎಂಬ ಹರಕೆ ಹಾರೈಕೆ .

ಸುಜಾತಾ ರವೀಶ್

4 Responses

  1. ನಯನ ಬಜಕೂಡ್ಲು says:

    Nice

  2. ಲೇಖನ. ಚೆನ್ನಾಗಿ ಮೂಡಿಬಂದಿದೆ..
    ಧನ್ಯವಾದಗಳು ಮೇಡಂ

  3. ಸ್ತ್ರೀ ಸ್ವತಂತ್ರದ ಎಲ್ಲಾ ಮಜಲುಗಳನ್ನು ಎಳೆ ಎಳೆಯಾಗಿ ಬಿಡಿಸಿದ್ದೀರಾ ಧನ್ಯವಾದಗಳು

  4. . ಶಂಕರಿ ಶರ್ಮ says:

    ಉತ್ತಮ ಮಾಹಿತಿಯುಕ್ತ ಲೇಖನ.

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: