ಕೊಟ್ಟು ಹೋಗಬೇಕು

Share Button

ಬಲಿಯುತ್ತಿದೆ  
ಕೊಟ್ಟು ಹೋಗೆನ್ನುವ  ಭಾವ 
ಎಲ್ಲ ಬಿಟ್ಟು ಹೊರಡುವ  ಮುನ್ನ    
ಆಲಯದ  ಚೌಕಟ್ಟಿನ  ಬದುಕಲಿ  ಬಂದವರಿಗೆ
ನನ್ನೆದೆಲ್ಲವ  ಕೊಟ್ಟ  ತೃಪ್ತಿಯೊಂದಿಗೆ 
ಉಳಿದಿದ್ದಷ್ಟೆ  ನನಗಾಗಿ  
ಬದುಕಿನ  ಇಳಿಹೊತ್ತಲಿ ನೊಗವಿಳಿಸಿದ  ನೆಮ್ಮದಿ 
ಏಗಿದ್ದಾಗಿದೆ  ಆಲಯದ 
ಬದುಕಿನ  ಬವಣೆಗಳೊಂದಿಗೆ  

ಆಲಯದೊಳಗಿನ  ಬದುಕು  ಸಂಕೀರ್ಣ 
ಪ್ರತಿಫಲಾಪೇಕ್ಷೆಯ  ಸ್ವಾರ್ಥದ  ಲೆಕ್ಕ
ಮಮಕಾರಗಳ  ಬಂಧನದ ಸಿಕ್ಕುಗಳ
ಒಳತೋಟಿಯ  ತೀರದ ತೊಳಲಾಟ 
ಹಿಟ್ಟಿಲ್ಲದಾಗ ಹೊಟ್ಟೆಗೆ
ಮುಚ್ಚಬೇಕು  ಕಿಟಕಿ  ಬಾಗಿಲು
ಮಲ್ಲಿಗೆಯಿದ್ದಾಗ  ಜುಟ್ಟಿಗೆ
ಹಾರುಹೊಡೆಯ ಬೇಕು ಬಾಗಿಲು  
ರಟ್ಟು ಮಾಡದೆ  ಗುಟ್ಟಿನ ಮಾತುಗಳ
ಕಾಪಿಡಬೇಕು ಉಸಿರು ತೊರೆವ ತನಕ
ಜ್ವಾಲಾಮುಖಿಯೊಳಗಿನ  ಲಾವಾರಸದಂತೆ 
ಕೂಪ ಮಂಡೂಕದ  ಸೀಮಿತ  ಜಗತ್ತು
ಆಲಯದೊಳಗಿನ  ಬದುಕು 

ಬಂಧನಗಳ  ಕಳಚಿ ಹೊರಡುವುದು
ಆಲಯದಿಂದ  ಬಯಲಿನತ್ತ ಹೊರಟ
ಅಕ್ಕನಷ್ಟು ಸುಲಭ  ಸಾಧ್ಯವಲ್ಲ 

ಎಂ. ಆರ್.ಅನಸೂಯ. 

7 Responses

  1. ನಯನ ಬಜಕೂಡ್ಲು says:

    ಸೊಗಸಾದ ಕವನ. ಅರ್ಥಪೂರ್ಣವಾಗಿದೆ

  2. ಅರ್ಥಪೂರ್ಣ ವಾದ ಕವನ ಆದರೆ ಅದನ್ನು ಅರ್ಥೈಸಿಕೊಳ್ಳುವವರೆಷ್ಟು ಮಂದಿ…
    ಧನ್ಯವಾದಗಳು ಮೇಡಂ

  3. Hema says:

    ವಾಸ್ತವವನ್ನು ಚಿತ್ರಿಸುವ ಚೆಂದದ ಕವನ.

  4. sudha says:

    ಯೋಚನೆ ಹೀಗೇ ಇರಬೇಕು

  5. Padma Anand says:

    ಜೀವನ ತತ್ವಗಳ ಸರಳೀಕರಣ ಹಾಸುಹೊಕ್ಕಾಗಿರುವ ಸುಂದರ ಕವಿತೆ. ಅಭಿನಂದನೆಗಳು ತಮಗೆ.

  6. . ಶಂಕರಿ ಶರ್ಮ says:

    ಜೀವನದ ಸರಳ ಸುಂದರ ಸೂತ್ರವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಕರೆನೀಡಿದ ಸುಂದರ ಕವನ.

  7. Mittur Nanajappa Ramprasad says:

    ಜನಿಸಿದ ಮರುಕ್ಷಣವೆ ವಿಧಿಯಿಲ್ಲದೆ ಹೊರುವೆವು ನೊಗವ/
    ಬಾಳ ಬಂಧನಗಳ ಬವಣೆಯಲ್ಲಿ ಹೆಣೆಯುವೆವು ಜೀವನವ/
    ಜನಿಸಿದ ಮರುಕ್ಷಣವೆ ವಿಧಿಯಿಲ್ಲದೆ ಹೊರುವೆವು ನೊಗವ/
    ಭಾವಗಳ ಕಡಲಲ್ಲಿ ತೆವಳುವೆವು ತಲುಪಲು ದೂರ ತೀರವ/

    ಪರಿಸರದ ಪ್ರಭಾವದಲ್ಲಿ ಸ್ವರೂಪಿಸುವೆವು ಬದುಕಿನ ಸಾಕಾರವ /
    ಧರ್ಮ ಕರ್ಮಗಳ ಸಾರಸತ್ವದಲ್ಲಿ ನಿರೂಪಿಸುವೆವು ಬಾಳಪಥವ/
    ನ್ಯಾಯ ನೀತಿಯೆಂಬ ಕಟ್ಟು ನಿಟ್ಟುಗಳಲ್ಲಿ ನಿರ್ಮಿಸುವೆವು ಭವಿಷ್ಯವ/
    ಅರಿಯದೆ ಹರಸಿರುವ ಆಯುಷ್ಯದ ಅವಧಿಯ ಕಟ್ಟುವೆವು ಆಲಯವ/

    ಬದುಕಿನ ಮೌಲ್ಯ ಪರಿಶೀಲಿಸುವ ಸಮಯ ಬಾಗ್ಯ ಸುಯೋಗವು
    ಪೂರ್ವಜನುಮದ ಪ್ರತಿಫಲದಲ್ಲಿ ದೊರಕುವುದು ಆ ಸೌಬಾಗ್ಯವು/
    ಬಂಧನಗಳ ಕಳಚಲು ಬದುಕಿನಲ್ಲಿ ಬೇಕು ಧಾರ್ಮಿಕತೆಯ ನೆರವು/
    ಬಯಲಿನ ಕಡಗೆ ತೃಪ್ತಿಯಲ್ಲಿ ಹೋಗುವುದು ದೈವದಾಶೀರ್ವಾದವು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: