ಸುಂದರ ಸಕುರದ ನಾಡಿನಲ್ಲಿ… ಚೆರ್ರಿ:1

Share Button


(ಈ ಸಂಚಿಕೆಯಿಂದ ಕೆಲವು ವಾರಗಳ ಕಾಲ ‘ಸುರಹೊನ್ನೆ’ಯಲ್ಲಿ ಡಾ.ಎಸ್.ಸುಧಾ ಅವರು ಬರೆದಿರುವ ಜಪಾನ್ ಪ್ರವಾಸ ಕಥನ ‘ಸುಂದರ ಸುಕುರದ ನಾಡಿನಲ್ಲಿ…’ ಪ್ರಕಟವಾಗಲಿದೆ. ಪ್ರಾಣಿಶಾಸ್ತ್ರದ ಅಧ್ಯಾಪಕಿಯಾಗಿ ಹಲವು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಇವರು ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಪ್ರವಾಸಕಥನಗಳು,ಪುರಾಣದ ಕತೆಗಳು ಹಾಗೂ ವೈಜ್ಞಾನಿಕ ಬರಹಗಳನ್ನು ಒಳಗೊಂಡ ಒಟ್ಟು ೧೦ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ತಮ್ಮದೇ ಆದ ‘ಚೈತ್ರ ಫೌಂಡೇಶನ್ ‘ ಎಂಬ ಸಂಸ್ಥೆಯ ಟ್ರಸ್ಟಿಯಾಗಿದ್ದು, ವಿವಿಧ ಸಮಾಜಮುಖಿ ಹಾಗೂ ಪರಿಸರ ಕಾಳಜಿಯ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾಡಿನ ಕೆಲವು ಪತ್ರಿಕೆಗಳಿಗೆ ಆಗಾಗ ಬರೆಯುವುದು ಕೂಡ ಇವರ ಹವ್ಯಾಸ. ಡಾ.ಎಸ್. ಸುಧಾ ಅವರ ‘ಹುಲಿಗಳ ಪ್ರವಾಸ ಮತ್ತು ಇತರ ಪರಿಸರದ ಕಥೆಗಳು’ ಪುಸ್ತಕಕ್ಕೆ ಮಕ್ಕಳ ಸಾಹಿತ್ಯ ವಿಭಾಗದಲ್ಲಿ   ಗುಣಸಾಗರಿ ನಾಗರಾಜ್ ಪ್ರಶಸ್ತಿ ಸಂದಿದೆ. -ಸಂಪಾದಕಿ)

ಜಪಾನ್ ಪ್ರವಾಸಕ್ಕೆ ಮೊದಲು

ಸಂಸ್ಕೃತಿ ಮತ್ತು ಜೀವನ ಒಂದು ದೇಶದಿಂದ ಇನ್ನೊಂದಕ್ಕೆ ಬದಲಾಗುತ್ತದೆ. ಆಚರಣೆಗಳೂ ಬದಲಾಗುತ್ತವೆ. ನೋಟಗಳು ಬದಲಾಗುತ್ತವೆ. ಗಿಡ ಮರಗಳಲ್ಲಿ, ಪ್ರಾಣಿಪಕ್ಷಿಗಳಲ್ಲಿ ವೈವಿಧ್ಯತೆ ಕಾಣುತ್ತದೆ. ಇದೆಲ್ಲವನ್ನೂ ಪ್ರತ್ಯಕ್ಷವಾಗಿ ಅನುಭವಿಸಲು ಬೇರೆ ದೇಶಗಳಿಗೆ ಹೋಗಲೇಬೇಕಲ್ಲ? ಅದಕ್ಕೊಂದು ಉತ್ಸಾಹ ಬೇಕು. ಎಲ್ಲವನ್ನೂ ಆದಷ್ಟು ಕಂಡು ಕೇಳಿ ಮನದಲ್ಲಿ ಹಿಡಿದಿಟ್ಟುಕೊಳ್ಳಬೇಕು. ಒಳ್ಳೆಯ ವಿಷಯಗಳನ್ನು ನಾವೂ ಅನುಷ್ಠಾನಕ್ಕೆ ತರಬೇಕು. ಮೇಲಿನ ಎಲ್ಲಾ ವಿಷಯಗಳು ಯಾವುದಾದರೂ ದೇಶಕ್ಕೆ ಹೋದಾಗ ನನ್ನ ಮನಸ್ಸಿನಲ್ಲಿರುತ್ತವೆ. ಹಾಗೂ ನಮ್ಮ ಸಂಸ್ಕೃತಿಯ ಹಿರಿಮೆ, ಗರಿಮೆಗಳು ಅಥವಾ ಲೋಪದೋಷಗಳು ಇದ್ದಲ್ಲಿ ಅವು ಇನ್ನೂ ಸ್ಪಷ್ಟವಾಗಿ ತೋರಲಾರಂಭಿಸುತ್ತವೆ. ಈ ನಿಟ್ಟಿನಲ್ಲಿ ವಿದೇಶ ಪ್ರವಾಸ ನನ್ನನ್ನು ಯಾವಾಗಲೂ ಆಕರ್ಷಿಸುತ್ತದೆ. ಅಂದಾಜಿನಲ್ಲಿ ನಲವತ್ತು ದೇಶಗಳನ್ನು ನಾನು ನೋಡಿದ್ದೇನೆ. ಯಾವ ದೇಶವನ್ನೂ ನಾವು ಹತ್ತಿಪ್ಪತ್ತು ದಿನಗಳಲ್ಲಿ ಪೂರ್ತಿ ನೋಡಲಾರೆವು. ಮುಖ್ಯ ಸ್ಥಳಗಳನ್ನು ಮತ್ತು ವಿಶೇಷ ಸ್ಥಳಗಳನ್ನು ಮಾತ್ರ ಸಂದರ್ಶಿಸಿರುತ್ತೇವೆ. ಇದೊಂದು ರೀತಿಯಲ್ಲಿ ಹುಟ್ಟಿದ ಹಬ್ಬದ ಕೇಕ್ ತಿಂದ ಹಾಗೆ! ಒಂದೇ ಚೂರನ್ನು ತಿಂದರೂ ಕೇಕ್ ತಿಂದೆವು ಎಂದು ಹೇಳುತ್ತೇವಲ್ಲಾ! ಹಾಗೆ.

ಜಪಾನ್ ದೇಶದ ಪ್ರವಾಸ ಮಾಡಬೇಕೆನ್ನುವ ಇಚ್ಚೆ ಕೆಲವು ವರ್ಷಗಳಿಂದ ನನ್ನಲ್ಲಿತ್ತು. ಅದು ಏಪ್ರಿಲ್ 15, 2019 ರಲ್ಲಿ ಕೂಡಿ ಬಂತು. ಹತ್ತು ದಿನಗಳ ಪ್ರವಾಸ. ಇಸ್ಕಾನ್‌ನಲ್ಲಿದ್ದ ಶ್ರೀ  ಮಾಧವಾನಂದ ದಾಸ ಅವರು ನಮ್ಮ ಮಾರ್ಗದರ್ಶಿಗಳು. ಪ್ರವಾಸದಲ್ಲಿ ಜಪಾನಿನ ಸಂಸ್ಕೃತಿ, ಜನರ ಸ್ವಭಾವ ಪರಿಚಯವಾಯಿತು. ಗಮನ ಸೆಳೆದದ್ದು ಜಪಾನೀಯರ ಶಿಸ್ತು, ಸಮಯ ಪರಿಪಾಲನೆ ಮತ್ತು ಕೆಲಸದಲ್ಲಿರುವ ಅತ್ಯಂತ ಉನ್ನತ ಮಟ್ಟದ ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆ. ಒಂದು ದೇಶ ಬಹಳವಾಗಿ ಮುಂದುವರೆಯಲು ಇವೆಲ್ಲಾ ಬೇಕು. ಆದ್ದರಿಂದಲೇ ಜಪಾನ್ ಎರಡನೆಯ ಮಹಾಯುದ್ಧದಲ್ಲಿ ಅತೀವ ತೊಂದರೆ ಅನುಭವಿಸಿದ್ದರೂ ಈಗ ಬಹಳವಾಗಿ ಮುಂದುವರೆದ ದೇಶ. ಯಾರೂ ಕೆಲಸ ಕದಿಯುವುದಿಲ್ಲ. ಜೊತೆಗೆ ತಮ್ಮ ಸಂಸ್ಕೃತಿಯನ್ನೂ ಕಾಪಾಡಿಕೊಂಡು ಬಂದಿದ್ದಾರೆ. ನಮ್ಮ ಹಾಗೆಯೇ ಪ್ರಕೃತಿಯನ್ನೂ ಪೂಜಿಸುತ್ತಾರೆ. ಬೆಟ್ಟ, ಗುಡ್ಡಗಳು ಮತ್ತು ವನಗಳು ಪವಿತ್ರ. ಭಾರತದಿಂದ ಜಪಾನ್ ಬೌದ್ಧಧರ್ಮವನ್ನು ಪಡೆಯಿತು. ಇಂದೂ ಅನೇಕಾನೇಕ ಬುದ್ಧನ ಅನುಯಾಯಿಯಗಳಿಗೆ ಬೌದ್ಧ ದೇವಾಲಯಗಳಿವೆ.
ಒಟ್ಟಿನಲ್ಲಿ ಜಪಾನ್ ಪ್ರವಾಸ ನನಗೆ ಅನೇಕ ವಿಷಯಗಳನ್ನು ಕಲಿಸಿತು. ನಾವು ನೋಡಿದ ಅನೇಕ ಉದ್ಯಾನಗಳು ಕಣ್ಣಿಗೆ, ಮನಸ್ಸಿಗೆ ಹಬ್ಬ ಉಂಟು ಮಾಡಿದವು. ಸ್ಮರಣೀಯ ಪ್ರವಾಸ ಇದಾಗಿತ್ತು. ಇದನ್ನೆಲ್ಲಾ ಹಂಚಿಕೊಳ್ಳಲು ಪ್ರವಾಸದಲ್ಲಿ ಪ್ರತಿದಿನ ರಾತ್ರಿ ಮಲಗುವ ಮುಂಚೆ ಎಷ್ಟೇ ಆಯಾಸವಾಗಿದ್ದರೂ ದಾಖಲಿಸಿದ್ದೇನೆ. ಅಕ್ಷರ ರೂಪದಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ಸುಂದರ ಸಕುರದ ನಾಡಿನಲ್ಲಿ
15-04-2019
ಸೋಮವಾರ ಏಪ್ರಿಲ್ ಹದಿನೈದು 2019 ನೆಯ ಇಸವಿ. ಅನೇಕ ದಿನಗಳಿಂದ ನೋಡಬೇಕು ಎಂದುಕೊಂಡಿದ್ದ ಜಪಾನ್ ದೇಶಕ್ಕೆ ನಾನು ಮತ್ತು ನನ್ನ ಪತಿ ರಮೇಶ್‌ರವರು ಪ್ರವಾಸ ಹೊರಟೆವು. ‘ಭಕ್ತಿವೇದಾಂತ’ ಎನ್ನುವ ಸಂಸ್ಥೆ ಹಮ್ಮಿಕೊಂಡಿದ್ದ ಪ್ಯಾಕೇಜ್ ಪ್ರವಾಸ ಇದಾಗಿತ್ತು. ಒಟ್ಟು ಹತ್ತು ದಿನಗಳ ಪ್ರವಾಸ. ನಮ್ಮ ಮಾರ್ಗದರ್ಶಿಗಳಾಗಿ ಶ್ರೀ ಮಾಧವಾನಂದ ದಾಸರು ಬರುವವರಿದ್ದರು. ಇವರು ಮೊದಲು ಇಸ್ಕಾನ್‌ನಲ್ಲಿದ್ದವರು. ನಾವು ಮೈಸೂರಿನಿಂದ ಟ್ಯಾಕ್ಸಿ ಮಾಡಿಕೊಂಡು ಮಧ್ಯಾಹ್ನ 3-15  ಗಂಟೆಗೆ ಹೊರಟೆವು. ವಿದೇಶ ಯಾತ್ರೆಗೆ ಹೊರಡುವಾಗ ತಯಾರಿ ಮತ್ತು ಕಾಳಜಿಗಳು ಜಾಸ್ತಿಯಾಗೇ ಇರುತ್ತವೆ. ನಮ್ಮ ಪಾಸ್‌ಪೋರ್ಟ್ ಮತ್ತು ವೀಸಾ ಅತಿ ಮುಖ್ಯ. ನಂತರ ನಾವು ಪ್ರಯಾಣಿಸುವ ದೇಶದ ಹಣ.

ಇನ್ನೊಂದು ಮುಖ್ಯವಾದ ವಿಷಯವೆಂದರೆ ನಾವು ದಿನನಿತ್ಯ ತೆಗೆದುಕೊಳ್ಳಬೇಕಾಗಿರುವ ಔಷಧಿಗಳು. ಇವುಗಳನ್ನು ತೆಗೆದುಕೊಳ್ಳಲು ವೈದ್ಯರ ಸಲಹಾಪತ್ರ, ಇದಲ್ಲದೆ ನಮ್ಮ ಬಟ್ಟೆಗಳು ಇತ್ಯಾದಿ. ನಮಗೆ ಇವುಗಳೆಲ್ಲಾ ಅನೇಕ ಸಲ ತಯಾರು ಮಾಡಿಕೊಂಡಿರುವುದರಿಂದ ಅಭ್ಯಾಸವಾಗಿತ್ತು.

ಮೈಸೂರಿನಿಂದ ಹೊರಟು ಮಾರ್ಗಮಧ್ಯದಲ್ಲಿ ಒಂದು ಕಾಫಿ ಬ್ರೇಕ್ ಕೊಟ್ಟೆವು. ಅಲ್ಲಿಂದ ಮತ್ತೆ ಪ್ರಯಾಣಿಸಿ ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಏರ್‌ಪೋರ್ಟ್ ಸೇರುವಾಗ ಹೆಚ್ಚುಕಡಿಮೆ ರಾತ್ರಿ 8 ಗಂಟೆ ಆಗಿತ್ತು. ಏರ್‌ಪೋರ್ಟ್ ಮುಂಭಾಗದಲ್ಲಿ ನಿಗದಿತ ಸ್ಥಳದಲ್ಲಿ ರಾತ್ರಿ 9 ಗಂಟೆಗೆ ಇರಬೇಕು ಎಂದು ಮೆಸೇಜ್ ಕಳುಹಿಸಿದ್ದರು. ಅಲ್ಲಿ ಯಾರೂ ನಮ್ಮ ತಂಡದವರ ಹಾಗೆ ಕಾಣಿಸಲಿಲ್ಲ. ಆದರೆ ಇಬ್ಬರು ಕಾವಿಧಾರಿ ವ್ಯಕ್ತಿಗಳು ಇದ್ದರು. ಇವರು ನಮ್ಮ ಜೊತೆ ಬರಬಹುದು ಎನ್ನಿಸಲಿಲ್ಲ. ಎಂಟೂವರೆ ಆಯಿತು. ಒಬ್ಬೊಬ್ಬರೇ ಬರತೊಡಗಿದರು. ಎಲ್ಲರಿಗೂ ಒಂದು ಚಿಕ್ಕ ಸೂಟ್‌ಕೇಸ್ ಕೊಡುತ್ತೇವೆಂದು ಮೊದಲೇ ಹೇಳಿದ್ದರು. ಹಾಗೆಯೇ ನನ್ನದು ಸಿಕ್ಕಿತು. ಕೆಲವು ಬಟ್ಟೆಗಳನ್ನು ಅದಕ್ಕೆ ಹಾಕಿದೆ. ರಮೇಶರವರದ್ದು ಸದ್ಯಕ್ಕೆ ನಮಗೆ ಹಂಚುವ ತಿಂಡಿಗಳನ್ನು ಒಳಗೊಂಡಿತ್ತು! ಆದ್ದರಿಂದ ಸಿಗಲಿಲ್ಲ. ಶ್ರೀ ಮಾಧವಾನಂದ ದಾಸರನ್ನು ನಾವು ‘ಸ್ವಾಮೀಜಿ’ ಅಥವಾ ‘ಪ್ರಭುಜೀ’ ಎಂದು ಸಂಬೋಧಿಸುತ್ತೇವೆ. ಬಹಳ ಪ್ರಶಾಂತ ವದನವನ್ನು ಉಳ್ಳವರು. ಮೆಲುಮಾತಿನವರು. ಮುಖ ಬಹಳ ತೇಜಸ್ಸನ್ನು ಸೂಸುತ್ತದೆ. ಧ್ಯಾನ, ಚಿಂತನೆ, ಆಹಾರ ಮುಂತಾದವು ಒಬ್ಬ ವ್ಯಕ್ತಿಯ ಮೇಲೆ ಎಂತಹ ಒಳ್ಳೆಯ ಪರಿಣಾಮವನ್ನು ಬೀರುತ್ತವೆ ಎನ್ನುವುದನ್ನು ಪ್ರಭುಜೀ ಅವರನ್ನು ನೋಡಿದರೇ ತಿಳಿಯುತ್ತದೆ ಎಂದು ಮನಸ್ಸಿನಲ್ಲಿ ಆಗಾಗ ಅಂದುಕೊಳ್ಳುತ್ತೇನೆ. ಪ್ರಭುಜೀ ಅವರಿಗೆ ವಂದನೆಗಳನ್ನು ಸಲ್ಲಿಸಿದೆವು. ಉಭಯ ಕುಶಲೋಪರಿ ಆಯಿತು. ನಂತರ ಎಲ್ಲರನ್ನೂ ಉದ್ದೇಶಿಸಿ ಕೆಲವು ಮಾತುಗಳನ್ನಾಡಿದರು. ಸೂಚನೆಗಳನ್ನು ನೀಡಿದರು. ಎಲ್ಲರ ಪರಿಚಯ ಈಗಲೇ ಸಾಧ್ಯವಿರಲಿಲ್ಲ. ಎಲ್ಲರ ಹಾಜರಾತಿ ತೆಗೆದುಕೊಂಡರು.

ಮೊದಲು ಬ್ಯಾಗೇಜ್‌ನ್ನು ಪರಿಶೀಲಿಸಿ ಒಳಗೆ ಹಾಕಿದರೆ ಅರ್ಧ ಆರಾಮ ಆದಂತೆ. ಈ ಕೆಲಸಕ್ಕೆ ಮುಂದಾದೆವು. ನಮ್ಮದು ಥಾಯ್ ಏರ್‌ವೇಸ್‌ನಲ್ಲಿ ಪ್ರಯಾಣ. ಬೆಂಗಳೂರಿನಿಂದ ಮೊದಲು ಬ್ಯಾಂಕಾಕ್ (ಥೈಲೆಂಡ್) ಗೆ ಪ್ರಯಾಣ. ಸುಮಾರು ನಾಲ್ಕು ಗಂಟೆಗಳ ಮೇಲಿನ ಪ್ರಯಾಣ. ಬ್ಯಾಗೇಜನ್ನು ಅವರಿಗೆ ಒಪ್ಪಿಸಿದ್ದಾಯಿತು. ಯಾವಾಗಲೂ ಒಂದು ಜೊತೆ ಬಟ್ಟೆ ಮತ್ತು ನಮ್ಮ ದಿನನಿತ್ಯ ಸೇವಿಸುವ ಮಾತ್ರೆಗಳಿದ್ದಲ್ಲಿ ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಆದರೆ ನಾವು ಬಟ್ಟೆಗಳನ್ನು ಇಟ್ಟುಕೊಳ್ಳಲಿಲ್ಲ. ಒಂದು ಕೈಚೀಲ ಮಾತ್ರ ಇಟ್ಟುಕೊಂಡೆ. ಸೆಕ್ಯೂರಿಟಿ ಚೆಕ್‌ಗೆ ಹೋಗುವ ಮೊದಲು ಊಟ ಮುಗಿಸಿಕೊಂಡು ಬಿಡಿ ಎಂದು ಸಿದ್ಧಪಡಿಸಿದ ಊಟದ ಪ್ಯಾಕೆಟ್‌ಗಳನ್ನು ನೀಡಿದ್ದರು. ಒಂದೆಡೆ ಕುಳಿತು ಊಟ ಮಾಡಿದೆವು. ಅಪ್ಪಟ ದಕ್ಷಿಣ ಭಾರತದ ಪುಳಿಯೋಗರೆ ಇತ್ತು. ಜೊತೆಗೆ ಎರಡು ಚಪಾತಿ ಮತ್ತು ಎರಡು ಪಲ್ಯಗಳು. ತಿನ್ನಲು ಸಾಧ್ಯವೇ ಇರಲಿಲ್ಲ. ಜೊತೆಗೆ ಕೇಕ್ ಬೇರೆ. ಮಿತವಾಗಿ ಸೇವಿಸಿ ಮಿಕ್ಕಿದ್ದನ್ನು ಕಸದ ಬುಟ್ಟಿಗೆ ಹಾಕಬೇಕಾಯಿತು. ನಂತರ ಸೆಕ್ಯೂರಿಟಿ ಚೆಕ್. ಇದು ಸುಲಭವಾಗಿಯೇ ಆಯಿತು. ಮುಂದಕ್ಕೆ ಹೋಗಿ ವಿಮಾನ ಹೊರಡುವ ಗೇಟಿನಲ್ಲಿ ಕುಳಿತಾಯಿತು. ರಾತ್ರಿ 12.30 ಗೆ ನಮ್ಮ ಹಾರುವಿಕೆ ಅಥವಾ ಹಾರೋಣ? ರಾತ್ರಿಯೆಲ್ಲಾ ಯಾವ ವಿಮಾನ ನಿಲ್ದಾಣವಾದರೂ ಗಿಜಿಗಿಜಿ ಎನ್ನುತ್ತಿರುತ್ತದೆ. ಅಂತಾರಾಷ್ಟ್ರೀಯ ಫ್ಲೈಟ್‌ಗಳೆಲ್ಲಾ ಹೊರಡುವುದು ಸಾಧಾರಣವಾಗಿ ಅರ್ಧರಾತ್ರಿಯ ನಂತರವೇ. ನಮ್ಮ ಗುಂಪಿನ ಕೆಲವರ ಮುಖ ಪರಿಚಯ ಆಯಿತು ಅಷ್ಟೇ. ಎಲ್ಲರೂ ಅವರವರ ಕೆಲಸಗಳಲ್ಲಿ ತುಂಬಾ ಬಿಸಿಯಾಗಿದ್ದರು. ವಿಮಾನ ಕಾಲಕ್ಕೆ ಸರಿಯಾಗಿ ಹೊರಟಿತು.

ಅದೊಂದು ಏರ್‌ಬಸ್. ನಾನೂರಕ್ಕೂ ಹೆಚ್ಚು ಪ್ರಯಾಣಿಕರು, ಬಿಸಿನೆಸ್ ಕ್ಲಾಸ್‌ನ್ನು ‘ರಾಯಲ್ ಸಿಲ್ಕ್’ ಎಂದು ಕರೆಯುತ್ತಾರೆ. ನಮ್ಮದು ‘ಇಕಾನಮಿ ಕ್ಲಾಸ್’ ಬಿಡಿ. ಆದರೂ ಕಾಲಿಡುವ ಸ್ಥಳ ಅಷ್ಟಾಗಿ ಕಿರಿದಾಗಿರಲಿಲ್ಲ. ಸುಧಾಮೂರ್ತಿಯವರು ಬರೆದಿರುವ ‘ಕ್ಯಾಟಲ್ ಕ್ಲಾಸ್’ ನೆನಪಾಗಿ ನಗು ಬಂದಿತು. ಒಮ್ಮೆ ಸುಧಾಮೂರ್ತಿಯವರು ವಿದೇಶ ಪ್ರಯಾಣ ಮಾಡಲು ಹೊರಟಿದ್ದರು. ಸಾಧಾರಣ ಚೂಡಿದಾರ ಧರಿಸಿದ್ದರು. ಅವರು ವಿಮಾನ ಏರುವ ಮೊದಲು ಬಿಸಿನೆಸ್ ಕ್ಲಾಸ್‌ನ ಕ್ಯೂನಲ್ಲಿ ನಿಂತರು. ಅದೇ ಸಾಲಿನಲ್ಲಿದ್ದ ಇತರ ಕೆಲವು ಹೆಂಗಸರು ಇವರನ್ನು ಉದ್ದೇಶಿಸಿ ಇದು ನಿಮ್ಮ ಸಾಲು ಅಲ್ಲ. ನೀವು ತಪ್ಪು ತಿಳಿದಿರಬೇಕು. ಇದು ಬಿಸಿನೆಸ್ ಕ್ಲಾಸ್ ಹೆಚ್ಚು ಪಾವತಿ ಮಾಡಬೇಕು? ಎಂದು ಸಾರಿಸಾರಿ ಹೇಳಿದರು. ಆದರೆ ಸುಧಾಮೂರ್ತಿಯವರು ಮಾತನಾಡದೇ ಅಲ್ಲಿಯೇ ನಿಂತಿದ್ದರು. ಅವರೆಲ್ಲಾ ಬಹಳ ಅತ್ಯಾಧುನಿಕ ರೀತಿಯಲ್ಲಿ ಬಟ್ಟೆ ಹಾಕಿಕೊಂಡಿದ್ದರು! ಕಡೆಗೆ ಆ ಲಲನಾಮಣಿಯರು ಇಂಗ್ಲೀಷ್‌ನಲ್ಲಿ ಮಾತನಾಡಿಕೊಳ್ಳುತ್ತಾ ‘ಏನು ಮಾಡುವುದು’? ಎಷ್ಟು ಹೇಳಿದರೂ ಈಯಮ್ಮಂಗೆ ಗೊತ್ತಾಗ್ತಿಲ್ಲ, ‘ಕ್ಯಾಟಲ್ ಕ್ಲಾಸ್’ ಎಂದರಂತೆ! ಅಂದರೆ ದನದ ಗುಂಪು. ಮತ್ತೆ ಬೆಂಗಳೂರಿಗೆ ವಾಪಸ್ಸಾದ ಮೇಲೆ ಒಂದು ದಿನ ಈ ಲಲನೆಯರು ಸುಧಾಮೂರ್ತಿಯವರನ್ನು ಭೇಟಿ ಮಾಡಲು ಬಂದರು. ಧನ ಸಹಾಯಕ್ಕೆಂದು! ಇವರ ಕೊಠಡಿಯ ಒಳಗೆ ಬಂದು ಮುಖ್ಯಸ್ಥರ ಪೀಠದಲ್ಲಿ ಅಸೀನರಾಗಿದ್ದ ಸುಧಾಮೂರ್ತಿಯವರನ್ನು ನೋಡಿ ಆಶ್ಚರ್ಯ ಹಾಗೂ ಅವಮಾನದಿಂದ ಅದು ಹೇಗೆ ನಿಭಾಯಿಸಿದರೋ ನನಗೆ ಊಹಿಸಲು ಆಗುತ್ತಿಲ್ಲ!

ನಮ್ಮ ವಿಮಾನ ಸುರಕ್ಷಿತವಾಗಿ ಬ್ಯಾಂಕಾಕ್‌ನ ನೆಲಮುಟ್ಟಿತ್ತು. ಆಗ ಅಲ್ಲಿಯ ಕಾಲಮಾನದ ಪ್ರಕಾರ ಬೆಳಿಗ್ಗೆ  5.45 ಗಂಟೆ. ಅಂದರೆ 16 ನೆಯ ತಾರೀಖು ಆಗಿತ್ತು. ನಾವು ಪೂರ್ವದಿಕ್ಕಿಗೆ ಹೋಗುತ್ತಾ ಸಮಯವನ್ನು ಹೆಚ್ಚಿಸಿಕೊಳ್ಳಬೇಕು. ಭಾರತದಲ್ಲಿ ಆಗ ಇನ್ನೂ ರಾತ್ರಿ. 3.30  ಆಗಿರುತ್ತದೆ. ಬ್ಯಾಂಕಾಕ್‌ನಲ್ಲಿ ನಾವು ಥಾಯ್ ಏರ್‌ವೇಸ್‌ನ ಜಪಾನಿಗೆ ಹೋಗುವ ಮತ್ತೊಂದು ವಿಮಾನವನ್ನು ಹತ್ತಬೇಕಿತ್ತು. ಮತ್ತೆ ಸೆಕ್ಯೂರಿಟಿ ಚೆಕ್ ಎದುರಿಸಬೇಕು. ಸಮಯ ಅಂದಾಜು ಎರಡು ಗಂಟೆಗಳ ಕಾಲ ಇತ್ತು. ತಪಾಸಣೆಗೆ ದೊಡ್ಡ ಸಾಲೇ ಇತ್ತು. ಪ್ರಪಂಚದ ನಾನಾ ದೇಶಗಳ ಜನ ನಿಂತಿದ್ದರು. ಒಬ್ಬೊಬ್ಬರೂ ವಿವಿಧ ಉಡುಪು, ಮುಖಚರ್ಯೆ, ಭಾಷೆ ಮತ್ತು ಚರ್ಮದ ಬಣ್ಣ ಹೊಂದಿದ್ದರು. ವಸುಂಧರೆಯ ಮೇಲೆ ಎಷ್ಟು ರೀತಿಯ ಜನರಿದ್ದಾರೆ ಎನಿಸಿತು. ಏನೂ ತೊಂದರೆಯಿಲ್ಲದೆ ಮುಂದೆ ನಡೆದು, ತಪಾಸಣೆ ಮುಗಿಸಿ ವಿಮಾನ ಏರುವ ಸ್ಥಳಕ್ಕೆ ಬಂದೆವು. ಮತ್ತೆ ಎ-320 ಏರ್‌ಬಸ್‌ನಲ್ಲಿ ಆಸೀನರಾದೆವು. ಇದು ಸ್ವಲ್ಪ ದೀರ್ಘ ಪ್ರಯಾಣ. ಜಪಾನಿನ ನೆರಿಟ ವಿಮಾನನಿಲ್ದಾಣವನ್ನು ತಲುಪಲು ಆರುಗಂಟೆಗಳ ಕಾಲ ಪ್ರಯಾಣಿಸಬೇಕು. ಉದ್ದಕ್ಕೂ ಸಾಗರದ ಮೇಲೆ ಪ್ರಯಾಣ. ನಮಗೆ ವಿಮಾನದಲ್ಲಿ ಜೈನ್ ಆಹಾರವನ್ನೇ ಪ್ರಭುಜೀ ಹೇಳಿದ್ದರು. ವಿಮಾನದ ಊಟ ಯಾರಿಗೂ ರುಚಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ಅರ್ಧ ತಿಂದು ಬಿಸಾಡುತ್ತಾರೆ. ವಿಮಾನ ಹೊರಡುವ ಸ್ಥಳದಿಂದ ತೆಗೆದುಕೊಂಡು ಬರುವ ಆಹಾರವನ್ನು ಬಿಸಿಮಾಡಿ ನೀಡುತ್ತಾರೆ. ಗಗನ ಸಖಿ ಚೆಲುವೆಯಾಗಿದ್ದರೂ ಸಹ ನೀಡಿದ ಆಹಾರ ರುಚಿ ಕಾಣುವುದಿಲ್ಲ. ಪಾಪ, ಅವರದ್ದು ತಪ್ಪು ಏನೂ ಇಲ್ಲ ಬಿಡಿ! ನಮ್ಮ ನಾಲಿಗೆಯದ್ದೇ ಗಡಿಬಿಡಿ. ಮೂವತ್ತು ಸಾವಿರ ಅಡಿ ಎತ್ತರದಲ್ಲಿ ನಮ್ಮ ನಾಲಿಗೆಯ ಮೇಲಿರುವ ರುಚಿಗ್ರಾಹಿ ಮೊಗ್ಗುಗಳು ಸರಿಯಾಗಿ ರುಚಿಯನ್ನು ಗುರುತಿಸುವುದಿಲ್ಲ. ಪರಿಮಳವೂ ಅಷ್ಟಾಗಿ ಗೊತ್ತಾಗುವುದಿಲ್ಲ. ಆದ್ದರಿಂದ ನಮಗೆ ಆಹಾರ ರುಚಿಸುವುದಿಲ್ಲ! ತಂಪು ಪಾನೀಯ ಪರವಾಗಿಲ್ಲ ಎನ್ನಿಸುತ್ತದೆ. ವಿಮಾನದ ಮ್ಯಾಗಜೀನ್‌ನಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಜಪಾನಿನಲ್ಲಿ ಅರಳುವ ಎಲ್ಲರೂ ಆರಾಧಿಸುವ ಸಕುರ (ಚೆರ್ರಿ) ಹೂಗಳು ಯಾವ ಊರಿನಲ್ಲಿ ಯಾವಾಗ ಅರಳುತ್ತವೆ ಎಂದು ತೋರಿಸುವ ಚಿತ್ರವಿತ್ತು. ನಾವು ಹೊರಟಿದ್ದ ಸಮಯ ಚೆರ್ರಿ ಹೂಬಿಡುವ ಸಮಯವಾಗಿತ್ತು.

ಸಕುರ (ಚೆರ್ರಿ) ಹೂಗಳು


(ಮುಂದುವರಿಯುವುದು)

-ಡಾ.ಎಸ್.ಸುಧಾ, ಮೈಸೂರು

45 Responses

  1. ನಿರ್ಮಲ says:

    ಪ್ರಾರಂಭ ಚೆಂದವಾಗಿದೆ. ಕಣ್ಣಿಗೆ ಕಟ್ಟಿದಂತಿದೆ. ಶುಭಾಶಯಗಳು

  2. ನಾವು ನಿಮ್ಮೊಂದಿಗೆ ಜಪಾನಿಗೆ ಬರುತ್ತಿದ್ದೇವೆ ಮೇಡಂ
    ಸೊಗಸಾದ ನಿರೂಪಣೆ

  3. ಜಿ.ವಿ.ರಾಧಾ says:

    ೧.ಎರಡು ಬಾರಿ ಕೊಟ್ಟ ಊಟವು ಹೆಚ್ಚಿಗೆಯಾಗಿಯೋ ಅಥವಾ ರುಚಿಯಿಲ್ಲದೆಯೋ ಕಸದ ಬುಟ್ಟಿ ಸೇರಿದ್ದ ವಿವರಣೆ ಮನಸ್ಸಿಗೆ ಖೇದವಾಯಿತು.
    ೨.ಮಾಧವಾನಂದ ಪ್ರಭುಗಳ ಹೆಸರು ಒಂದು ಕಡೆ ‘ಮಾಧವಾನಂದ ಪ್ರಿಯದಾಸರು ‘ ಅಂತಾಗಿದೆ, ಸರಿ ಪಡಿಸಬಹುದಾ?

    ಮುಂದಿನ ಭಾಗಕ್ಕೆ ಕಾಯುತ್ತಿರುವೆ

  4. Samatha.R says:

    Interesting

  5. Anonymous says:

    Excellent narration madam. Felt as if am on board and you are leading us. Awaiting for your next issue.

  6. Hema says:

    ಶುಭಾರಂಭ ಕುತೂಹಲಕಾರಿಯಾಗಿದೆ..

  7. ನಾಗರತ್ನ ಬಿ. ಅರ್. says:

    ಪ್ರವಾಸ ಕಥನದ ಪೀಠಿಕೆ ತಯಾರಿ ನಂತರದ ಸುಧಾಮೂರ್ತಿಯವರ ಒಂದು ಅನುಭವದ ಒಕ್ಕಣೆ ಆಹಾರದ ವಿತರಣೆ ಅಲ್ಲಿ ನಮ್ಮ ನಾಲಿಗೆಯ ಅವಸ್ಥೆ ಅದಕ್ಕೆ ವೈಜ್ಞಾನಿಕ ಕಾರಣ .ಹಾ.. ಮೇಡಂ ಮುಂದಿನ ಸಂಚಿಕೆಯನ್ನು ನೋಡುವ ಕಾತುರ ಹುಟ್ಟಿಸುವಂತಿದೆ ನಿರೂಪಣೆ.ಅಭಿನಂದನೆಗಳು. ಮೇಡಂ

  8. Anonymous says:

    Thanks to everyone . and for the encouragement.

  9. sudha says:

    Thanks to everyone for all the good words
    sudha

  10. sudha says:

    dear nirmala dr gayathri radha samatha anonymous hema and nagarathna
    thank you all

  11. sudha says:

    Thanks for all your good wishes
    sudha

  12. ನಯನ ಬಜಕೂಡ್ಲು says:

    Super. ಆರಂಭ ತುಂಬಾ ಚೆನ್ನಾಗಿದೆ.

  13. ಶಂಕರಿ ಶರ್ಮ, ಪುತ್ತೂರು says:

    ಎಲ್ಲದರಲ್ಲೂ ಮುಂದುವರಿದ ದೇಶ ಜಪಾನ್.. ಅದರ ಪ್ರವಾಸದ ಪ್ರಾರಂಭವೇ ಖುಷಿಕೊಟ್ಟಿತು.

  14. Anonymous says:

    ಎಲ್ಲದರಲ್ಲೂ ಮುಂದುವರಿದ ದೇಶ ಜಪಾನ್. ಅದರ ಪ್ರವಾಸದ ಪ್ರಾರಂಭವೇ ಖುಷಿಕೊಟ್ಟಿತು

  15. Padma Anand says:

    ಆಸಕ್ತಿ ಹುಟ್ಟಿಸುವ ಆರಂಭ, ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ.

  16. K N Subba Rào says:

    Very niçe Awaiting next episode

  17. Anonymous says:

    Excellent article specially what author spoken about swamiji I fully endorse. I had life time opportunity of visiting Srilanka along with swamijiHarekrishna

  18. K N Subba Rao says:

    Very nice Awaiting. the next episode

  19. Vathsala says:

    ಯಾವುದೇ ವಿದೇಶಿ ಪ್ರವಾಸದಲ್ಲಿ ಹೆಚ್ಚು ಪ್ರಯಾಸದಾಯಕ ಅಂಶವೆಂದರೆ ನಮ್ಮ ಪಾಸ್ಪೋರ್ಟ್ನ್ನುನ್ನು ಕಾಪಾಡಿಕೊಳ್ಳುವುದು.
    ಬರಹ ಬಹಳ ವಿಶೇಷವಾಗಿದೆ. ಸುಧಾ ಮೇಡಂ ರವರಿಗೆ
    ಅಭಿನಂದನೆಗಳು.

  20. Diwakar says:

    Kayuttiddeve katuradinda

  21. Anonymous says:

    Very nice Sudha Mam, waiting to read the next part.

  22. Subramanyam says:

    Very nice narration, keep it up. Waiting for next part.

Leave a Reply to ಗಾಯತ್ರಿ ಸಜ್ಜನ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: