ಗಮ್ಯ

Share Button

ನಮ್ಮದಲ್ಲಿ ನೆಲೆ ಬಂದೆವೆನೆ ಇಲ್ಲಿ ಏನಿದೇನು ಮರ್ಮ
ಸುಳ್ಳೆ ಬಾಳು ತೊಡಕಾಗಿಸುತ್ತ ಮರಮರಳಿ ಬರುವ ಕರ್ಮ
ಬಾಳಲಾಗದೇ ಬೆಂಕಿಯಾಗದೊಲು ತಂಗಾಳಿಯಾಗಿ ಜನಕೆ
ಮುಗಿದಂತೆ ಕೆಲಸ ಕರೆ ಬಂದಿತೆನಲು ಕೊರಗಾಗದಂತೆ ಮನಕೆ

ಸಂತನಾಗಲಿಕೆ ಸಾಧ್ಯವಿಲ್ಲದಿರೆ ಕೊಂತವಾಗಲೇಕೆ
ಕುಂತು ನಿಂತು ಮರೆ ಮಾತಿನಲ್ಲಿ ಕಾಪಟ್ಯ ಹುಸಿಯದೇಕೆ
ಧನ ಪದವಿ ಸ್ಥಾನ ಅಧಿಕಾರವೇನು ನೆರವಾಗಲಿಕ್ಕೆ ಬೇಡಾ
ಕರುಣೆ ತುಂಬಿದೆದೆ ಕಕ್ಕುಲಿತೆಯ ಕರ ಚಾಚದೇನು ನೋಡಾ

ಹಸಿವು ನಿದ್ರೆ ಭಯ ಮೈಥುನದ ಬಯಕೆ ಮೃಗದಂತೆ ನಮಗು ಇರದೇ
ಇಷ್ಟೆ ಗೋಲದಲ್ಲಿ ಸುತ್ತುತ್ತಲಿರಲು ಮನುಜರೆನ್ನಬಹುದೇ
ಎಷ್ಟೆಷ್ಟೊ ಜನ್ಮತಳೆದಿರುವೆವಂತೆ ನೆನಪಾರಿಗಿಹುದು ಹೇಳು
ಪುಣ್ಯಗಳ ಫಲಿತ ನರಜನುಮವಿರಲು ಹುಸಿಹೋಗಲೇಕೆ ಬಾಳು

ಹೆತ್ತವರು ಬಳಗ ನೆಲ ದೇಶ ಭಾಷೆ ನಮ್ಮ ಆಯ್ಕೆಗಿತ್ತೇ
ಮೈಮಾಟ ಬಣ್ಣ ಮೇಧಾವಿತನವು ಕೊಳಲು ಬಿಕರಿಗಿತ್ತೇ
ವಿಕಲಾಂಗತನವ ಬುದ್ಧಿಮಾಂದ್ಯತೆಯ ಬಯಸಿ ಪಡೆವರೇನು
ಕುಬ್ಜ ಕಾಯವನು ವಿಕೃತ ರೂಪವನು ಹೊರೆಯೆ ಸುಲಭವೇನು

ಪಡೆದು ಬಂದೆವೆನೆ ಸುಕೃತವೆನಲಷ್ಟೆ ಸಾಧನೆಯ ಪಟ್ಟಿಗಲ್ಲ
ನಡೆ ನುಡಿಯ ಮದವ ತೊಡೆಯುತ್ತ ವಿನಯ ಬೆಳೆಸಿಕೊಳೆ ಕಷ್ಟವಲ್ಲ
ಹಿಂದು ಮುಂದಿನದ ಬಲ್ಲವರು ಇಹರೆ ಇಂದು ನಾಳೆಗಿಹುದೇ
ಬಂದುದಾಯ್ತಿನ್ನು ಕೊರಗಿ ಕಳೆಯದಳಿಸುತ್ತ ಹೋಗಬರದೇ

ಕಿರುಗಾತ್ರವೇನು ಕೊರೆಯಲ್ಲ ಸಿದ್ಧಿಗೆ ಪಾತ್ರ ಬಹಳ ಮುಖ್ಯ
ಬೇಡಿ ಬಲಿ ಮುರಿದ ವಾಮನನ ನೋಡಿ ಮಾಡಬಹುದು ಸಖ್ಯ
ವ್ಯಕ್ತಿಯಾಗಿರದೆ ಶಕ್ತಿಯಾಗೆದ್ದು ಸಂಕವಾದವರ ಹಾದಿ
ಸದ್ವಿನಯ ಛಲವು ಸೌಜನ್ಯ ದೃಢವು‌ ಪಟ್ಟಿಯಲಿ ಮೊದಲ ಯಾದಿ

ಪಡೆದುದೂ ಇಹುದು ಕಳೆದುದೂ ಇಹುದು ನಾನೆಲ್ಲಿ ಹುಡುಕು ಮೊದಲು
ತೊಡಕಾಗದಂತೆ ಅಡಿಗಡಿಗೆ ಸಿಕ್ಕು ತಡೆವುದನು‌ ಮಾಡು ಬದಲು
ಏಳುಬೀಳುಗಳ ಪಯಣದುದ್ದಕೂ  ಕೈಮರವ ನೆಡುತಲಿರಲು
ಮುತ್ತು ಬಿತ್ತದಲೆ ಮರೆತ ಕಂಕರಕೆ ಆಗಬಹುದು ಬರಲು

(ಕೊಂತ = ಭರ್ಚಿ, ಈಟಿ.
ಬರಲು = ಪೊರಕೆ.
ಸಂಕ = ಸೇತುವೆ
ಕಂಕರ = ಕಲ್ಲು)

 – ರತ್ನ 

4 Responses

  1. ನಯನ ಬಜಕೂಡ್ಲು says:

    Very ನೈಸ್. ನಿಮ್ಮ ವಿವಿಧ ಪ್ರಾಕಾರದ ಬರಹಗಳು ಚಂದ ಮೇಡಂ ( ಕಥೆ, ಲೇಖನ, ಕವನ ಹೀಗೆ )

  2. ಶಂಕರಿ ಶರ್ಮ says:

    ಎಂದಿನಂತೆ ಇಂದೂ ಚೆನ್ನ..ನಿಮ್ಮ ಕವನ. ಏರು ಪೇರಿನ ಈ ಜೀವನ ಪಯಣದುದ್ದಕ್ಕೂ ಸಂಭಾಳಿಸುತ್ತ ಸಾಗುವ ಪರಿಯನ್ನು ವಿಶದೀಕರಿಸಿ ರೀತಿ ಮನ ಮುಟ್ಟುವಂತಿದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: