ತರ್ಜುಮೆ

Share Button

ತರ್ಜುಮೆ ಮಾಡುವುದೆಂದರೆ
ವ್ಯತ್ಯಸ್ತ ಭಾಷೆಯ ಪದಗಳ
ಯಥಾವತ್ ತಂದು ಶಬ್ದ ಜೋಡಿಸಿದಂತಲ್ಲ…
ನಿರ್ಭಾವ ವಾಕ್ಯಗಳು ಬಲಹೀನ..!
ಸುಳಿಗಾಳಿಗೆ ಚದುರಿ ಕಾರ್ಮೋಡ,
ಮತ್ತದೇ ನಿರ್ಲಿಪ್ತ ನೀಲಭಾನು..!

ಭಾಷಾಂತರವೆಂದರೆ ಸುಮ್ಮನಲ್ಲ
ಕಡಲೆದೆಯ ಬಗೆದು, ಕವಾಟಗಳ ತೆರೆದು
ನೆತ್ತರಿನ ಲೆಕ್ಕಾಚಾರ ಹಾಕಿದಂತೆ..
ಹೃತ್ಕರ್ಣ ಹೃತ್ಕಕ್ಷಿಗಳಿಗೂ ಸಿಗದ  ಶುದ್ದತೆಯ ಅಂದಾಜು..
ಇಂಗಾಲ ಪ್ರಾಣವಾಯುಗಳ ತುಲನ..!!
ಎದೆ ಸೀಳಿ ಅಕ್ಷರ ಹುಡುಕಿದಂತೆ..!!
ಸುಖಾಸುಮ್ಮನೆ ತೀರಕ್ಕಪ್ಪಳಿಸುವ
ಆರ್ಭಟದ ಅಲೆಗಳಂತಲ್ಲ
ಭಾವ-ಶೂನ್ಯ , ಅರ್ಥಹೀನ…!!

ಅನುವಾದವೆಂದರೆ ರೇಶಿಮೆಯ ಸೀರೆ ನೇಯ್ದಂತೆ
ಅದೇನು ಸುಲಭ ಗ್ರಾಸವಲ್ಲ..!
ಹದವರಿತು ಶಬ್ಧಗಳ ಹೆಣೆದು
ನೇಮದಿಂದ ಎಳೆಗಳ ನೇಯಬೇಕು.
ಬಿದಿರಿನ ಚಂದ್ರಿಕೆಯಲಿ ನಾಜೂಕಾಗಿ
ಹುಳುಗಳ ಹಣ್ಣಾಗಿಸಬೇಕು..!!
ಕಕೂನ್ ಗಳ ಬೇಯಿಸಿ, ಪ್ಯೂಪಾವನ್ನು ಕೊಲ್ಲಬೇಕು
ಭಾವತೀವ್ರತೆಯನ್ನು ಕೊಂದಲ್ಲ !!
ಕಚ್ಚಾ ವಸ್ತುಗಳ ಬೆಲೆ ಹೆಚ್ಚಿರಬಹುದು
ಕೆಲವೊಮ್ಮೆ ಕೊಲ್ಲದೇ ವಿಧಿಯಿಲ್ಲ..!!

ಮೂಲಪದಗಳ ಜಾಡುಹಿಡಿದು
ಅರ್ಥಕೇನು ಧಕ್ಕೆ ತರದೆ  ಕಟ್ಟಿದರೆ,
ಗೀಜಗನ ಗೂಡಷ್ಟು ಅಚ್ಚುಕಟ್ಟು..!
ತೊರೆಯ ಹರಿವ ಪಾರದರ್ಶಕತೆ
ಚಿಗುರೊಡೆದ ಚೊಚ್ಚಲೆಲೆಯ ನುಣುಪು;
ಕಡಲೊಡಲ ನದಿಯೊಲವು ಸಂದಣಿಸಿದಂತೆ..!
ಶೃಂಗರಿಸಿ ವಧುವ ಹಸೆಗೇರಿಸಿದಂತೆ..!!
ಬೇರನು ಹಣ್ಣಾಗಿಸುವ ಪ್ರಕ್ರಿಯೆ..

-ಅರ್ಚನಾ ಎಚ್ , ಬೆಂಗಳೂರು

  

8 Responses

  1. ಧರ್ಮಣ ಧನ್ನಿ says:

    ಭಾಷಾಂತರ ಆಯಾಮಗಳ ಕುರಿತು ಕವನದಲ್ಲಿ ಚೆನ್ನಾಗಿ ವಿವರಿಸಲಾಗಿದೆ . ಧನ್ಯವಾದಗಳು ಅರ್ಚನಾ ಸಹೋದರಿ

  2. Hema says:

    ಸೊಗಸಾದ ಅರ್ಥಪೂರ್ಣ ಕವನ, ಇಷ್ಟವಾಯಿತು

  3. ಮಹಾಬಲ says:

    ಭಾಷಾಂತರದ ಪ್ರಕ್ರಿಯೆಯ ವರ್ಣನೆ ಸೊಗಸಾಗಿದೆ

  4. ಶಂಕರಿ ಶರ್ಮ says:

    ಭಾಷಾಂತರದಲ್ಲಿನ ಭಾವಾಭಿವ್ಯಯಕ್ತಿ ಬಗೆಗಿನ ತಮ್ಮ ಕವನ ಸೊಗಸಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: