ಎತ್ತಲೋ ಪಯಣ

Share Button

ಎತ್ತ ಕಡೆ ಚಿತ್ತ ಒಯ್ದತ್ತ ನಿನ್ನ ಪಯಣವೊ ಹೇಳು
ಬತ್ತಿ ಹೋಗಿಹ ಭಾವಗಳ ಪುನಹ ಹಸಿರಾಗಿಸಲೆಂದೋ..
ರೋಗರುಜಿನಗಳಿಲ್ಲದೆಡೆ
ಸಾವಿರದ ಮನೆಯ ಸಾಸಿವೆ ಹುಡುಕಿ ತರಲೆಂದೋ ಮನುಜಾ..

ಬಂಧಗಳ ಸರಪಣಿಯೊಳು
ಬಂಧಿಸಿ ಇಂದು ಮನವು ಬರಿದಾಗಿ
ಮೌನದ ಮೊರೆ ಹೊಕ್ಕಾಗ ಮುಖವು ಬಾಡಿ ತೋಷವನರಸಿ
ದಿಗಂತದಂಚಿಂದ ಹೊಂಬೆಳಕು ಮೂಡುವೆಡೆಗೆ
ಸುಖವನರಸಿ ನಡೆವೆಯೋ ಮನುಜಾ…

ಆಗೊಮ್ಮೆ ಈಗೊಮ್ಮೆಕಾಡುವ
ಭಾವದಲೆಗಳ ಬೆಳಕ ದೀವಿಗೆ ಹಿಡಿದು
ಹುಡುಕಿ ಬೇಸ್ತು ಬೆಂಡಾಗಿ ಕಪಟ ನಾಟಕ
ಅಡಿಗಡಿಗೆ ನೊಂದು ಅತ್ತಿತ್ತ ಕೆಸರೆರೆಚುವ
ಕಾಯಕದಿ ದಣಿದು ಕಾಣದೂರತ್ತ
ಒಂಟಿ ಪಯಣ ಹೊರಟಿರುವೆಯೋ ಮನುಜಾ..

ಲೋಭ ಧ್ವೇಷಾಗ್ನಿಯ ಮರೆತು
ಎಲ್ಲೋ ನವೋಲ್ಲಾಸವನರಸಿ ಮೂಕ ರೋದನವಿತ್ತ
ಹೃದಯಾಂತರಾಳವ ಶುಚಿಗೊಳಿಸಿ ಬರಲು
ಹಳಸಿ ನಾರುವ ಸರಕು ಕಿತ್ತೊಗೆದು ಬರುವೆಡೆ
ಯಾನವೇನೋ ಮನುಜಾ..

ಹೋಗು..ಬರಬೇಡ ಹಿಂದಿರುಗಿ…
ಬರುವುದೇ ಆದರೆ.. ಸುತ್ತ ಹಸಿರು ತರುಗಳ ನೆರಳು ಹಾಸಿ ಉದುರಿದರೆ
ಭೂಮಾತೆಗೆ ಹೊದಿಕೆಯಾಗುವ ತರಗೆಲೆಗಳಂತೆ
ತ್ಯಾಗದ ಸಂಕೇತವಾಗಿ ಬಾ ಮನುಜಾ..

ಸುತ್ತ ಸಾಲು ಮರಗಳ ನೆಟ್ಟ ಸ್ವಾರ್ಥವಿರದ ನಿಸ್ವಾರ್ಥಿ ಹೃದಯದಂತೇ..
ನಿತ್ಯ ಬೆಳಕ ಚೇತನವಿತ್ತು ಮುನ್ನಡೆಸೊ ರವಿಸೋಮರಂತೆ
ಬಾ ಮರಳಿ ಹೊಸ ಹುಟ್ಟು ಪಡೆದು
ಇತಿಹಾಸ ಪುಟದಿ ಅಚ್ಚಾಗುವಂತೆ ಸನ್ಮನದ ಮಹಾತ್ಮನಂತಾಗಿ
ಬಾರೆಲೊ ಮನುಜಾ…

-ಪ್ರಮೀಳಾ ಚುಳ್ಳಿಕ್ಕಾನ.

4 Responses

  1. ನಯನ ಬಜಕೂಡ್ಲು says:

    ಬ್ಯೂಟಿಫುಲ್. ನಿಸ್ವಾರ್ಥ ಕ್ಕೆ ಉತ್ತಮ ನಿದರ್ಶನ ನಮ್ಮ ಪ್ರಕೃತಿ.

  2. Anonymous says:

    ಈ ಕವನದ ಭಾವ ಎಲ್ಲರ ಹೃದಯ, ಮನಗಳ ದೀಪ ವಾದರೆ …… ಬದುಕೆಸ್ತು ಸುಂದರ…… ತುಂಬಾ ಚೆನ್ನಾಗಿದೆ …

  3. ಶೋಭಾ says:

    ಕವನದ ಅರ್ಥಗರ್ಭಿತ ಭಾವದಿಂದ ಒಟ್ಟಿಗೇ ಹೆಜ್ಜೆ ಹಾಕುವ ಆಸೆ ತುಂಬಿ ಬಂದಿದೆ…… ಸುಂದರ ಕವನ ..

  4. Anonymous says:

    ಭಾವಪೂರ್ಣ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: