ಕಾಸಿದ್ದರೆ ಕೈಲಾಸ

Share Button

ಹಣಕ್ಕೂ ನಮ್ಮ ಜೀವನಕ್ಕೂ ಅವಿನಾ ಭಾವ ಸಂಬಂಧವಿದೆ. ‘ಸರ್ವೇ ಗುಣ: ಕಾಂಚನಮಾಶ್ರಯಂತಿ’ ಎನ್ನುವಂತೆ ದುಡ್ಡಿದ್ದವವರು ದೊಡ್ಡಪ್ಪ  ಆಗುವುದು ಸರ್ವೇ ಸಾಮಾನ್ಯ. ಹಣವಿಲ್ಲದಿರುವಿಕೆ  ನಮ್ಮ ಖಿನ್ನತೆಗೂ ನಿರುತ್ಸಾಹಕ್ಕೂ ಭವಿಷ್ಯದ ಬಗ್ಗೆ ಕಳವಳಕ್ಕೂ ಕಾರಣವಾಗುತ್ತದೆ . ಹಣದ ಅಭಾವ ನಮ್ಮ ಸುಪ್ತ ಪ್ರಜ್ಞೆ ಯನ್ನು ಕೂಡ ಎಷ್ಟರ ಮಟ್ಟಿಗೆ ಪ್ರಭಾವಿಸುತ್ತದೆ ಎಂದರೆ ನಮ್ಮೆಲ್ಲರ ಕೊಳ್ಳುವಿಕೆ, ನಿರ್ಧಾರ ಕೈಗೊಳ್ಳುವಿಕೆ ಎಲ್ಲವೂ ಅದರ ಮೇಲೆ ಅವಲಂಬಿಸಿದೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು, ವಿಷಮ ದಾಂಪತ್ಯದಲ್ಲಿದ್ದರೂ ದುಡ್ಡಿಲ್ಲದ ಕಾರಣ ದಿನಾ ಕುಡುಕ ಗಂಡನಿಂದ ಒದೆಸಿಕೊಳ್ಳುವವರು, ಶಾಲೆಗೆ ಹೋಗಲು ಸಾಧ್ಯವಾಗದೆ ಕಾರ್ಖಾನೆಗಳಲ್ಲಿ ದುಡಿಯುವ ಪುಟ್ಟ ಮಕ್ಕಳು ..ಹೀಗೆ ಹಣವಿದ್ದರೆ ಅವರ ಜೀವನ ಖಂಡಿತವಾಗಿಯೂ ಸುಗಮವಾಗಲು ಸಾಧ್ಯವಿದೆ.

ಮಿತವ್ಯಯ, ಸರಳಜೀವನ ಎಂದೇನೇ ಹೇಳಲಿ, ಅಧುನಿಕ ಜಗತ್ತಿನಲ್ಲಿ ಹಣವನ್ನು ಖರ್ಚುಮಾಡಲು ಆಕರ್ಷಣೆಗಳು ಅನೇಕ. ಈ ಬೆಲೆಯೇರಿಕೆಯ ದಿನಗಳಲ್ಲಿ ಎಷ್ಟು ದುಡಿದರೂ ಸಾಕಾಗದಿದ್ದರೂ ಕ್ಷಣಿಕ ಸುಖಕ್ಕೋಸ್ಕರ  ಕೈಯಾರೆ ಖರ್ಚು ಮಾಡಿಬಿಡುತ್ತೇವೆ. ಉದಾ: ಡಿಸ್ಕೌಂಟ್ ಸೇಲ್ ಗಳಲ್ಲಿ ಕೊಳ್ಳುವ ರಾಶಿ ಸೀರೆಗಳು, ಪುಸ್ತಕ ಪ್ರದರ್ಶನಗಳಲ್ಲಿ ಖರೀದಿಸುವ ಪುಸ್ತಕಗಳು, ಟೂರ್ ಹೋದಾಗ ಕೊಳ್ಳುವ ಅನವಶ್ಯಕ ಆಲಂಕಾರಿಕ ವಸ್ತುಗಳು..ಹೀಗೆ. ಹಣ ಖರ್ಚು ಮಾಡಲು ಇನ್ನೊಂದು ಕಾರಣ ‘ ಎಂಜಾಯ್’  ಮಾಡಬೇಕೆಂಬ ಪರಿಕಲ್ಪನೆ. ಸತ್ಯ ಹೇಳಬೇಕೆಂದರೆ ನಮ್ಮ ಪಿಕ್ ನಿಕ್ ಗಳು, ಜಾಲಿ ರೈಡ್ ಗಳು, ಗೆಟ್ ಟುಗೆದರ್ ಗಳು ಸುಮ್ಮನೇ ತಿಂದು, ಕುಡಿದು, ಬುರುಗು ನೊರೆಯಂತೆ ಯಥಾ ಪ್ರಕಾರ ಖಾಲಿತನವನ್ನೂ, ಸ್ವಲ್ಪ ಮಟ್ಟಿಗೆ ನೆನಪುಗಳನ್ನೂ ಉಳಿಸುತ್ತವೆ.

ಭಾರತದಂತಹ ವಿರೋಧಾಭಾಸಗಳೇ ತುಂಬಿದ ದೇಶದಲ್ಲಿ ಹಣವನ್ನು ಯಾತಕ್ಕೆ ಖರ್ಚು ಮಾಡುತ್ತೇವೆ ಎನ್ನುವುದೇ ಕುತೂಹಲದ ವಿಷಯ. ಸ್ಲಮ್ಮಿನಲ್ಲಿರುವ ಕಡುಬಡವರ ಒಂದು ರೂಮಿನ ಮನೆಗಳಲ್ಲಿ  ಕೂಡ    ಕೇಬಲ್ ಟಿವಿ ಇರುತ್ತದೆ. ತನ್ನ ಹಣವನ್ನೆಲ್ಲ ಸಾರಾಯಿಯ ಮೇಲೆ ಸುರಿಯುವ ಕುಡುಕ ಮಕ್ಕಳ ಸ್ಕೂಲ್ ವೆಚ್ಚವನ್ನೋ, ಹೆಂಡತಿಯ ಮಾಸಲು ಸೀರೆ, ಕೃಶ ಶರೀರವನ್ನೋ ನೆನಪಿಸಿಕೂಳ್ಳುವುದಿಲ್ಲ. ಅಕ್ಕಪಕ್ಕದವರಿಂದ ಸಾಲ ಪಡೆದಾದರೂ ಯುಗಾದಿ, ದೀಪಾವಳಿಗಳನ್ನು ಗ್ರಾಂಡ್ ಆಗಿ ಆಚರಿಸುವ, ಉರಿದು ಬೂದಿಯಾಗುವ ಪಟಾಕಿಗೆ ರಾಶಿ ದುಡ್ಡು ಸುರಿಯುವವರನ್ನು ನೋಡಿದ್ದೇನೆ.. ಬಹುಶ: ಇವೆಲ್ಲ ಅವರ ಭಾವನಾತ್ಮಕ ಅಗತ್ಯಗಳನ್ನು ಪೂರೈಸ್ಸುತ್ತದೆ.

ನಮ್ಮ ಮಾರ್ಕೆಟಿಂಗ್ ತಂತ್ರಗಳು ಎಷ್ಟು ಜಾಣತನದಿಂದ ಕೂಡಿವೆ ಎಂದರೆ, ಇಲ್ಲದ ಅಗತ್ಯಗಳನ್ನು ಸೃಷ್ಟಿಸಿ ಹಣವನ್ನು ಖರ್ಚುಮಾಡಿಸುತ್ತವೆ. ಉದಾ: ಕಡಿಮೆ ಆದಾಯದವರಿಗೆ ಕೊಳ್ಳಬಹುದಾದ ಚಿಕ್ಕ-ಪುಟ್ಟ ಶ್ಯಾಂಪೂ ಸ್ಯಾಶೆ ಗಳು, ಪೌಡರ್, ಸೋಪ್ ಹೀಗೆ. ವ್ಯಂಗ್ಯವೆಂದರೆ, 1 ಕಿಲೊ  ಬಾಸ್ಮತಿ ಅಕ್ಕಿಯ ಮೇಲೆ ಅಥವಾ  5 ಲಿ. ಸೂಫ಼್ಟ್ ಡ್ರಿಂಕ್ಸ್ ನ ಮೇಲೆ ಇರುವ ಡಿಸ್ಕೌಂಟ್ ಗಳು ದಿನಬಳಕೆಯ ವಸ್ತುಗಳ ಮೇಲೆ ಇರುವುದಿಲ್ಲ. ನಮ್ಮ ಮಾಲ್ ಗಳು ಈ ಮನಸ್ಥಿತಿಯನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತವೆ.

ಈ ಜೀವನ ಮಾಯೆ, ದುಡ್ಡಿಗಿಂತ ನಿರ್ಮಲವಾದ ಮನಸ್ಸು ಮುಖ್ಯ ಹೀಗೆಲ್ಲ ತತ್ವಗಳನ್ನು ಕೇಳಿ ಕೇಳಿ ಜನಸಾಮಾನ್ಯರ ರಕ್ತ ಕುದಿಯಲಾರಂಭಿಸಿದೆ. ಮುಂಬಯಿಯಲ್ಲಿನ ಸ್ಲಮ್ಮಿನಲ್ಲಿಯೋ. ನಮ್ಮದೇ ನಗರಗಳ ಕೆಳಮಧ್ಯಮ ವರ್ಗದವರಲ್ಲಿಯೋ  ಕೇಳಿದರೆ ಆತ್ಮಸಾಕ್ಷಾತ್ಕಾರಕ್ಕಿಂತ ನೆಟ್ಟಗಿನ ಕರೆಂಟ್ ಸಪ್ಲೈ, ಗುಂಡಿಗಳಿಲ್ಲದ ರಸ್ತೆಗಳು, ಅಕ್ಕಿ ಬೇಳೆಗಳಿಗೆ ಕಡಿಮೆ ದರ, ಇಕ್ಕಟ್ಟಿಲ್ಲದೆ ಕಾಲು ಚಾಚುವ ಯೋಗ್ಯವಾದ ಮನೆಗಳಿದ್ದರೆ ಅವೇ ಸ್ವರ್ಗ ಎಂದು ಉತ್ತರಿಸಿಯಾರು. ಉರಿಬಿಸಿಲಿನಲ್ಲಿ ಕಟ್ಟಡ ಕೆಲಸ ಮಾಡುವವರು, ಇನ್ನೊಬ್ಬರ  ಮನೆಕೆಲಸ ಮಾದಿ ಹೊಟ್ಟೆಹೊರೆಯುವವರೂ ಮನುಷ್ಯರೇ ಎಂದು ನಾವಿಲ್ಲಿ ಗಮನಿಸಬೇಕಾಗಿದೆ. ಹಣ ಇಲ್ಲದೇ ಇರುವುದು ನಮ್ಮ ಆತ್ಮವಿಶ್ವಾಸವನ್ನು ಉಡುಗಿಸಿ ಯಾರು ಯಾರಿಗೋ ಡೊಗ್ಗು ಸಲಾಮು ಹಾಕಲು, ಹಲ್ಲುಗಿಂಜಲು ಪ್ರೇರೇಪಿಸುತ್ತದೆ. ಹೆಚ್ಚೇಕೆ ಮದುವೆಯಂತಹ ಸಮಾರಂಭಗಳು ಕೂಡ ಒಡವೆ , ವಸ್ತ್ರ, ಅಂತಸ್ತನ್ನು ಪ್ರದರ್ಶಿಸುತ್ತ , ಕೃತಕನಗೆ ಬೀರುತ್ತ ಒಳಗಿಂದೊಳಗೆ ಇನ್ನೊಬ್ಬರನ್ನು ಜಡ್ಜ್ ಮಾಡುವ ತಾಣಗಳಾಗಿ ಪರಿಣಮಿಸಿವೆ.

George Orwell ನ   ‘Animal Farm’ ನಲ್ಲಿ ಹೇಳಿದಂತೆ ಪ್ರಜಾಪ್ರಭುತ್ವದಲ್ಲಿ  ‘ All are equal, but some are more equal’ ಎಂದು ನಾವಿಲ್ಲಿ ಗಮನಿಸಬೇಕಿದೆ. ಬಡವರಿಗೂ ಆತ್ಮಗೌರವವಿದೆಯೆಂದೂ, ಅವರೂ ಮನುಷ್ಯರೇ ಎಂದೂ ಪರಿಗಣಿಸಬೆಕು. ಹೆಚ್ಚಿನ ಕೊಲೆ, ಸುಲಿಗೆ , ದರೋಡೆಗಳು , ನಕ್ಸಲಿಸಮ್ ಈ ರೀತಿಯ ದಮನಿತ ಮನೋಭಾವದ ಸೆಟೆದೆದ್ದ ಆಕ್ರೋಶವೇ ಇನ್ನುವುದನ್ನು ಗಮನಿಸಬೆಕಾಗಿದೆ.  ಬೂಕರ್ ಅವಾರ್ಡ್  ಪಡೆದ ಅರವಿಂದ ಅಡಿಗರ  ‘The White Tiger’  ಈ ರೀತಿಯ ಸಾಮಾನ್ಯ ವರ್ಗದ ಜನರ ಆಕ್ರೋಶಕ್ಕೆ ಸಾಕ್ಷಿಯಾದ ಕಾದಂಬರಿ.

.

– ಜಯಶ್ರೀ. ಬಿ. ಕದ್ರಿ .

3 Responses

  1. Ghouse says:

    Nice article…..

  2. ಕಾಸಿದ್ದರೆ ಕೈಲಾಸ ಬಹಳ ಚೆನ್ನಾಗಿದೆ

  3. Shruthi says:

    So true words, nicely written..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: