ಓ  ಎಮ್ಮೆ! ಕಾಪಾಡೆನ್ನನು 

Share Button

ನನಗೆ ಪ್ರತಿದಿನವೂ  ಮಧ್ಯಾಹ್ನ  ನನ್ನ ಮಗಳ  ಮನೆಗೆ  ಹೋಗುವ ಅಭ್ಯಾಸ. ಹೋಗಿಬರಲು ಸ್ಕೂಟರ್  ಅಥವಾ ಕಾರನ್ನು  ಬಳಸುತ್ತೇನೆ. ಕೆಲವೊಮ್ಮೆ ಬಸ್ಸಿನ ಮೂಲಕವೂ ಪ್ರಯಾಣಿಸುತ್ತೇನೆ. ಈ ಘಟನೆಯು ಸಂಭವಿಸಿ  ಬಹುಶ: ತಿಂಗಳೊಂದು  ಕಳೆದಿರಬೇಕು .. ಆ ದಿನ ಬಸ್ಸಿನಲ್ಲಿ  ಹಿಂದುರಿಗಿ  ಬರುತ್ತಿದ್ದೆ . ಪ್ರಧಾನ  ಮಾರ್ಗವು ಮನೆಯಿಂದ 5 ನಿಮಿಷದ  ಕಾಲುನಡಿಗೆಯ ದೂರದಲ್ಲಿದೆ .. ಅಲ್ಲೇ ಪಕ್ಕದಲ್ಲಿ  ಬಸ್ಸಿನ ತಂಗುದಾಣವಿದೆ .ಆದರೆ  ಆ ತಂಗುದಾಣವನ್ನು  ತಲುಪಲು   ”ಮಾರ್ಗೋಲ್ಲಂಘನ”ವೆಂಬ  ಘನಕಾರ್ಯವು ಜರಗಬೇಕು .

ಸಾಯಂಕಾಲದ  ಸಮಯದಲ್ಲಿ ಆ ಮಾರ್ಗದಲ್ಲಿರುವ  ಜನಸಂದಣಿ , ನುಗ್ಗುವ ವಾಹನಗಳ  ವೇಗವೋ  ವರ್ಣನಾತೀತ . ಪುಣೆ ವಿದ್ಯಾಪೀಠದಿಂದ  ಪೌಡ್ ರೋಡ್ ಡಿಪೋದ  ತನಕ,  ಐದು  ಕಿಲೋಮೀಟರು ದೂರದ ಆ ವ್ಯಾಪ್ತಿಯಲ್ಲಿ ಎಲ್ಲಿಯೂ ಚತುಷ್ಪಥ ಮಾರ್ಗವಿಲ್ಲ . ಆದ್ಧರಿ೦ದ  ಜಲಪ್ರವಾಹದಂತೆ ಮಾರ್ಗದ ಎರಡೂ ಪಾರ್ಶ್ವಗಳಲ್ಲಿ ಎಲ್ಲಾತರದ   ವಾಹನಗಳು ರಭಸದಿಂದ ಚಲಿಸುವುದನ್ನು ನೋಡಿದರೆ , ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ಹೊರಡುವ  ಹೊಗೆಯೇ  ಆವರಿಸಿದಂತೆ  ತೋರುತ್ತದೆ . ಹೆಚ್ಚಾಗಿ  ಎರಡೂ, ಮೂರೋ  ನಿಮಿಷಗಳ ಕಾಲಾವಕಾಶದಲ್ಲಿ  ಅಡ್ಡದಾಟಲು ಸಾಧ್ಯವಾಗುವ ದಿನಗಳಿದ್ದವು . ಇಂದು ಅದು ಕೂಡಾಸಾಧ್ಯವಾಗದೆ  ಹೋಯಿತು . ಅನೇಕ ಸಲ ಬಹಳ ಪ್ರಯತ್ನದಿಂದ ನಾಕುಹೆಜ್ಜೆಗಳಷ್ಟು  ಮುನ್ನುಗ್ಗಿ ಭೀತಿಯಿಂದ ಮತ್ತೆ ಹಿ೦ದೆ ಸರಿದಿದ್ದೆ . ಆ  ಪ್ರಯತ್ನದಲ್ಲಿ  ಹತ್ತುನಿಮಿಷಗಳಿಗಿಂತಲೂ ಹೆಚ್ಚಿನ ಸಮಯ ಆಗಲೇ ಕಳೆದಿತ್ತು . ಎಲ್ಲಿ  ಇದ್ದೆನೋ ಇನ್ನೂ ಅಲ್ಲೇ ಉಳಿದಿದ್ದೆ .

ಆಗ  ಹಿಂದಿನಿಂದ  ಬಂದ  ದಢೂತಿ  ಎಮ್ಮೆಯೊಂದು ನನ್ನ ದೃಷ್ಟಿಗೆ  ಬಿತ್ತು . ಬಾಲಕನೊಬ್ಬ  ಅದರ  ಕೊರಳಿಗೆ  ಬಿಗಿದ  ಹಗ್ಗವನ್ನು  ಹಿಡಿದುಕೊಂಡಿದ್ದ. ಅವನನ್ನು ನೋಡಿದ  ಕೂಡಲೇ ನನಗೊಂದು  ಉಪಾಯ  ಹೊಳೆಯಿತು .  ಉಪಾಯ ಕಂಡುಕೊಂಡೆ , ಉಪಾಯ ಕಂಡುಕೊಂಡೆ ಎನ್ನುತ್ತಾ (ಆರ್ಕಿಮಿಡಿಸನು   ಯುರೇಕಾ , ಯುರೇಕಾ ಎಂದ೦ತೆ) ಮನದಲ್ಲೇ  ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುತ್ತಾ , ಆ ಹುಡುಗನನ್ನು ಕೇಳಿದೆ ”ಈ  ಎಮ್ಮೆಯ ಹಗ್ಗಹಿಡಿದುಕೊಂಡು ನನ್ನೊಂದಿಗೆ  ಮಾರ್ಗದ  ಆಚೆ ಬದಿಗೆ ಬರುವೆಯಾ ?”

”ಯಾಕಾಗಿ? ಅಲ್ಲಿ  ಏನು ಕೆಲಸವಿದೆ ?” ಎಂದು ಮುಗ್ದನಾಗಿ   ಪ್ರಶ್ನಿಸಿದ  ಬಾಲಕ .
”ಅಲ್ಲೇನು ಕೆಲಸವಿಲ್ಲಪ್ಪಾ ; ನನ್ನ ಜೊತೆ  ಮಾರ್ಗದ ಆಚೆ  ಬದಿಗೆ ಬಂದು  ಮತ್ತೆ   ಈ ಕಡೆಗೆ  ಹಿಂದುರುಗುವುದಷ್ಟೇ  ನಿನ್ನ ಕೆಲಸ .  ಅದಕ್ಕಾಗಿ   ನಿನಗೆ  ಐದು  ರೂಪಾಯಿಗಳನ್ನು  ಕೊಡುವೆ ” ಎಂದೆ .
ಏನೊಂದೂ  ಅರ್ಥವಾಗದಿದ್ದರೂ ”ಯಾವ ಮಹಾಕಾರ್ಯವನ್ನು  ಮಾಡದೆ ಹಣವಂತೂ  ಸಿಗುತ್ತದೆ”  ಎಂದು  ಯೋಚಿಸಿದ  ಆ ಬಾಲಕ  ನನ್ನ  ಪ್ರಸ್ತಾಪವನ್ನು  ಅಂಗೀಕರಿಸಿದ .

ಮಾರ್ಗದಲ್ಲಿರುವ  ವಾಹನಗಳ ನೂಕುನುಗ್ಗಲಿಗೂ  ಎಮ್ಮೆಗೂ ಏನೇನೂ  ಸಂಬ೦ಧವಿಲ್ಲದ೦ತೆ   ಅದು ಹೊರಡುವುದು  ಕಂಡು ಬಂತು . ಬಹಳಷ್ಟು  ವಾಹನಗಳು ಚಲಿಸುತ್ತಿದ್ದರೂ ಎಮ್ಮೆಯು   ತಾನು   ಅವುಗಳಿಗೆ  ಅಡ್ಡಲಾಗಿ   ಚಲಿಸತೊಡಗಿತು . ಅದರ  ನೇತೃತ್ವದಲ್ಲಿ  ನಾನೂ ಮುಂದಡಿಯಿಟ್ಟೆ    . ಕೆಲವು ವಾಹನಚಾಲಕರು  ಕೋಪದಿಂದ  ನನ್ನನ್ನು ನೋಡಿ   ಗೊಣಗುತ್ತಿರುವಂತೆಯೇ  ನಾನು ಎಮ್ಮೆಯ ಸಹಾಯದಿಂದ ಸುಖವಾಗಿ ಮಾರ್ಗದ  ಮತ್ತೊಂದು ಬದಿಯನ್ನು ತಲುಪಿದೆ . ಮಾರ್ಗದ  ಇನ್ನೊಂದು ಬದಿಗೆ ತಲುಪಿದ  ನಾನು  ಬಾಲಕನಿಗೆ  ಐದು ರೂಪಾಯಿಗಳನ್ನು  ಕೊಡುತ್ತಾ  ಧನ್ಯವಾದಗಳನ್ನು   ತಿಳಿಸಿದೆ . ಇಲ್ಲಿ  ಮಾರ್ಗದ  ಇನ್ನೊಂದು ಬದಿಯನ್ನು   (ನಾನು ಹೊರಟ ಬದಿ) ತಲುಪಲು  ನಾಲ್ಕು ಜನ ವೃದ್ದರು  ನನ್ನಂತೆ  ”ಉತ್ತಮ”  ಸಮಯಕ್ಕಾಗಿ ಕಾಯುತ್ತಿದ್ದರು . ನಾನು   ಮಾರ್ಗದ  ಆ ಬದಿಯಿಂದ  ಈ ಬದಿಗೆ ಸುಖವಾಗಿ ತಲುಪಿದ್ದನ್ನು ನೋಡಿದ ಅವರು  ಬಾಲಕನಿಗೆ  ಹಣಕೊಟ್ಟು  ಆ  ಬದಿಗೆ ಹೊರಡಲು  ತಯಾರಾದರು  . ಬಾಲಕನು  ಅದಕ್ಕೆ  ಸಮ್ಮತಿಸಿ  ಎಮ್ಮೆಯನ್ನು  ಜತೆಗೂಡಿಸಿ  ನನ್ನನು  ಕರೆತಂದ ಬದಿಗೆ  ಹಿಂದಿರುಗಿದ .

ಇದೆಲ್ಲವನ್ನೂ  ನೋಡುತ್ತಾ  ನಾನು ಬಸ್ ತಂಗುದಾಣದಲ್ಲಿ  ಬಸ್ಸಿಗಾಗಿ ಕಾಯುತ್ತಾ  ಕುಳಿತಿದ್ದೆ .  ಆ ಸಮಯದಲ್ಲಿ ಪುನಃ  ಮತ್ತಿಬ್ಬರು  ಎಮ್ಮೆಯ ಸಹಾಯದಿಂದ   ಮಾರ್ಗವನ್ನು ಅಡ್ಡದಾಟಿದರು  . ಎಮ್ಮೆಯ ಸಹಾಯ ಪಡೆದು ದಾಟಿದವರು  ಖುಷಿಯಲ್ಲಿರುವಂತೆ ಭಾಸವಾಗುತ್ತಿತ್ತು . ವೇಗವಾದ ವಾಹನಗಳನ್ನು ಕ್ರಮಿಸಿ ಹೋಗಲು ಎಮ್ಮೆಯ ಸಹಾಯ ಪಡೆಯುವುದು  ಉತ್ಕೃಷ್ಟವಾದ  ಉಪಾಯವಾಗಿ  ಪರಿಣಮಿಸಿತು . ಆ ಬಾಲಕನು  ದೂರದಿಂದ  ನನ್ನನ್ನು  ನೋಡಿ , ನನ್ನತ್ತ   ಕೈಬೀಸುತಿದ್ದನು .  ಬಹುಶ:  ಆತ  ನನಗೆ ಧನ್ಯವಾದಗಳನ್ನು  ತಿಳಿಸುತ್ತಿದ್ದಿರಬೇಕು ;,  ನಾನೂ  ಕೈ  ಬೀಸಿದೆ . ನನಗೆ  ಬೇಕಾದ  ಬಸ್  ಬಂದು , ನಾನು ಅಲ್ಲಿಂದ  ಹೊರಟೆ .  ಈ ಘಟನೆಯ ನಂತರ ನಾನು  ಸ್ಕೂಟರ್  ಇಲ್ಲವೇ  ಕಾರಿನಲ್ಲಿ ಹೋಗುತ್ತಿದ್ದೆ . ತಿಂಗಳ ತನಕ  ನಾನು ಬಸ್  ತಂಗುದಾಣದ  ಹತ್ತಿರ ಕೂಡಾ ಸುಳಿಯಲಿಲ್ಲ .

ಪುನಃ  ಮತ್ತೊಮ್ಮೆ  ಆಕಸ್ಮಿಕವಾಗಿ ಆ ರಸ್ತೆಯಲ್ಲಿ ಹೋಗಬೇಕಾಗಿ ಬಂತು . ಸ್ವಲ್ಪ  ನಡೆದು  ನಾನು ಮುಖ್ಯಮಾರ್ಗವನ್ನು  ತಲುಪಿದೆ . ಅಲ್ಲಿಯೋ  ಅದೇ  ನೂಕುನುಗ್ಗಲು . ಅವ್ಯವಸ್ಥೆಯಿಂದಲೇ  ಮಾರ್ಗದ ಎರಡೂ  ಬದಿಯಲ್ಲಿ  ಓಡಾಡುವ  ದ್ವಿಚಕ್ರ ,ಚತುಶ್ಚಕ್ರ ವಾಹನಗಳ ಸಂಚಾರ ಭೀಕರವಾಗಿತ್ತು .ಆದುದರಿಂದ  ಮಾರ್ಗವನ್ನು  ಅಡ್ಡದಾಟಲು  ಜನರು ‘ಉತ್ತಮ ‘ ಸಮಯಕ್ಕಾಗಿ ಕಾಯುತ್ತಿದ್ದರು  . ಯಾಕೆ ಈ ರೀತಿಯಾಗುತ್ತಿದೆ  ಎಂದು ಯೋಚಿಸುತ್ತಿರುವಾಗಲೇ  ನನ್ನ ದೃಷ್ಟಿಗೆ ಬಿದ್ದ,  ಆ ಎಮ್ಮೆ  ಹಿಡಿದುಕೊಂಡಿರುವ  ಬಾಲಕ . ನನ್ನನ್ನು ನೋಡಿ ಕೈಬೀಸಿ ಬಾಲಕನೆಂದ – ”ನಡೆಯಿರಿ ಚಿಕ್ಕಪ್ಪ! ನಿಮ್ಮನ್ನು   ರಸ್ತೆಯ ಆ ಬದಿಗೆ  ಶುಲ್ಕರಹಿತವಾಗಿ  ಬಿಟ್ಟು ಬರುತ್ತೇನೆ .”

ತಿಂಗಳ ಹಿಂದೆ  ಸಂಭವಿಸಿದ ಘಟನೆ ನನ್ನ  ಸ್ಮೃತಿ ಪಟಲದಲ್ಲಿ  ಇನ್ನೂ  ಹಸಿಯಾಗಿಯೇ ಇತ್ತು  .” ಆ ದಿನ  ಮಾರ್ಗವನ್ನು  ಕ್ರಮಿಸಲು  ಸಹಾಯ ಮಾಡಿದ್ದಕ್ಕಾಗಿ  ನೀವು   ನನಗೆ ಐದು  ರೂಪಾಯಿಗಳನ್ನು  ಕೊಟ್ಟಿದ್ದೀರಲ್ಲವೇ?”ಎಂದು  ಹೇಳಿದ ಬಾಲಕ ನನ್ನನ್ನು  ಅಲ್ಲಿಯೇ  ಇರಲು  ಹೇಳಿ ಪುಷ್ಪಗುಚ್ಛವೊ೦ದನ್ನು  ಖರೀದಿಸಿ ತಂದ . ನನಗೆ ನಮಸ್ಕರಿಸಿ ,ಅದನ್ನು   ಕೊಟ್ಟು ” ಹೊರಡೋಣ  ಸ್ವಾಮೀ ” ಎ೦ದ . ಒಂದು ತಿಂಗಳಲ್ಲೇ  ಆ ಎಮ್ಮೆಯು ನೂಕುನುಗ್ಗಲಿನಲ್ಲಿ  ನಿರ್ಭಯವಾಗಿ  ಮಾರ್ಗವನ್ನು  ಅಡ್ಡ  ದಾಟುವುದನ್ನು   ಕರಗತ ಮಾಡಿಕೊಂಡಿತ್ತು .ಈ ಮಧ್ಯದಲ್ಲಿ  ನಾನು ಮತ್ತು  ಹುಡುಗ   ಸಂಭಾಷಣೆಗೆ ತೊಡಗಿಸಿಕೊಂಡೆವು  .

” ಎಮ್ಮೆಯೊಂದಿಗೆ ನೀನು ಇಲ್ಲೇನು ಮಾಡುತ್ತಿದ್ದೆ . ಈ  ಪುಷ್ಪ ಗುಚ್ಚವನ್ನು  ಯಾಕೆ  ನನಗಿತ್ತೆ ?”ಆತನಿಗೆ ನನ್ನ ಪ್ರಶ್ನೆ …
 ”ಅಂದು  ನಿಮ್ಮನ್ನು ಭೇಟಿಯಾದ ದಿನದಿಂದ ಈ ಹೊತ್ತಿನಲ್ಲಿ  ನಾನು   ಇಲ್ಲಿಯೇ  ಇರುತ್ತೇನೆ . ನಿಮ್ಮನ್ನು ಕೂಡಾ ನೀರಿಕ್ಷಿಸುತ್ತಿರುತ್ತೇನೆ ” ಎಂದು  ನುಡಿದ .

”ಯಾಕಾಗಿ ? ” ಎಂದು ನಾನು ಮರು ಪ್ರಶ್ನೆಯನ್ನೆಸೆಯಲು   ಅವನು  ಈ  ರೀತಿ ನುಡಿದ -”ನೀವೇ,  ನನ್ನ  ಈ  ಕಾರ್ಯಕ್ಕೆ   ಮಾರ್ಗದರ್ಶಕರು .ಸಾಯಂಕಾಲ ಎಮ್ಮೆಯನ್ನು  ಇಲ್ಲಿಗೆ  ತಂದು , ಜನರಿಗೆ  ಮಾರ್ಗವನ್ನು  ಅಡ್ಡದಾಟಲು  ಸಹಾಯ ಮಾಡುತ್ತೇನೆ . ಈಗ  ಹತ್ತು ದಿನಗಳಿಂದ  ಎಂಟು  ಎಮ್ಮೆಗಳನ್ನು  ಈ ಕೆಲಸಕ್ಕಾಗಿ  ನಿಯೋಜಿಸಿದ್ದೇನೆ . ಮನೆಮಂದಿಯೆಲ್ಲ  ಎರಡೋ  , ಮೂರೋ ಘಂಟೆಗಳ ಕಾಲ  ಇಲ್ಲೇ ಇರುತ್ತೇವೆ . ಪ್ರತಿ ಎಮ್ಮೆಯೂ  ಪ್ರತಿದಿನವೂ ಹತ್ತಿರ ಹತ್ತಿರ  ನೂರು  ರೂಪಾಯಿಗಳಷ್ಟು  ಕಮಾಯಿಸುತ್ತದೆ. (ಸಂಪಾದಿಸುತ್ತದೆ ). ಈ ಹೊತ್ತಿನಲ್ಲಿ ಎಮ್ಮೆಗಳಿಗೆ ಬೇರೇನೂ  ಕಾರ್ಯಗಳಿರುವುದಿಲ್ಲ. ಹಿಂಡಿ ತಿ೦ದ ನಂತರ  ಅವುಗಳಿಗೆ    ಇದರಿಂದಲಾಗಿ  ಕೈಕಾಲಾಡಿಸಿದಂತಾಗುತ್ತದೆ  . ಅವುಗಳಿ೦ದ   ದೊರೆಯುವ ಹಾಲಿನ ಪ್ರಮಾಣವೂ ಜಾಸ್ತಿಯಾದಂತಿದೆ . ” ಎಂದ  ಸಂತಸದಿಂದ

”ನೂಕುನುಗ್ಗಲು ಕಡಿಮೆಯಿದ್ದಾಗ ?” – ನಾನು ಜಿಜ್ಞಾಸೆಯಿಂದ  ಕೇಳಿದೆ.
”ನೂಕುನುಗ್ಗಲು  ಕಡಿಮೆ ಇದ್ದ  ಪಕ್ಷದಲ್ಲಿ ಕೂಡಾ ವಿಚಿತ್ರವಾಗಿ ಚಲಿಸುವ ವಾಹನಗಳಿಂದಾಗಿ  ಜನರು  ಎಮ್ಮೆಯ  ಸಹಾಯವನ್ನೇ  ಯಾಚಿಸುತ್ತಾರೆ . ನೂಕುನುಗ್ಗಲು  ತೀರಾ  ಕಡಿಮೆಯೆಂದು  ಕಂಡರೆ  ನಾನೇ  ಇತ್ತ ಬರುವುದಿಲ್ಲ  .”  ಎಂದ  ಹುಡುಗ.

 ”ಬಹಳ  ಒಳ್ಳೆ ಕೆಲಸ ” ಎಂದು  ನಾನು ಮೆಚ್ಚುಗೆ ವ್ಯಕ್ತಪಡಿಸಿದೆ. ಆ   ಹೊತ್ತಿಗಾಗಲೇ  ನಾವು  ಮಾರ್ಗದ  ಇನ್ನೊಂದು ಬದಿಯನ್ನು  ತಲುಪಿದ್ದೆವು .  ಈ ಬದಿಯಲ್ಲೂ  ಎಮ್ಮೆಯ  ”ಸಹಾಯಹಸ್ತಕ್ಕಾಗಿ” ಕೆಲವರು  ಕಾಯುತ್ತಿದ್ದರು.  ”ಈ   ಮಹಾಶಯರೇ  ನನ್ನನ್ನು   ಈ  ಕಾರ್ಯಕ್ಕೆ ಪ್ರೇರೇಪಿಸಿದವರು ” ಎಂದು ಹುಡುಗ ಬಹಳ ಗೌರವದಿಂದ  ನನ್ನನ್ನು  ಅವರಿಗೆ  ಪರಿಚಯಿಸಿದ. ಅದನ್ನು  ಕೇಳಿ ಸಂತಸದಿಂದ   ನಾನು  ದೇವರಿಗೆ ಮನಸಿಲಿನಲ್ಲೇ ವಂದಿಸಿದೆ . ಆ ಬಾಲಕನನ್ನು  ಹೋಗಗೊಟ್ಟು  ಆ ವೃದ್ದರು  ನನ್ನೊಡನೆ ಮಾತಿಗಿಳಿದರು …

”ಅಲ್ಲಿ ಎಮ್ಮೆಯಿದ್ದರೆ  ಮಾತ್ರ  ಮಾರ್ಗವನ್ನು  ಅಡ್ಡದಾಟಿ ” ಎಂದು ನನ್ನ  ಹೆಂಡತಿ  ಮುನ್ನೆಚ್ಚರಿಕೆಯನ್ನೀಯುತ್ತಾಳೆ   ಎಂದರು  ಮೊದಲನೆಯವರು.

”ಈ ತರದ  ಯೋಜನೆಯು  ನಮ್ಮಂತಹವರಿಗೆ  ವರದಾನವಾಗಿದೆ ” ಎಂದು ಎರಡನೆಯವರು  ತನ್ನ ಸರದಿಯನ್ನು  ಮುಗಿಸಿದರು.

”ಮೊದಲಾದರೋ  ಈ ಜನಸಂದಣಿಯೂ,  ವಾಹನಗಳ  ನೂಕುನುಗ್ಗಲೂ  ಜತೆಗೂಡಿ ಮಹಿಷಾರೂಢನಾದ ಯಮನ ಆವಾಸ ಸ್ಥಾನವೋ  ಎಂಬಂತೆ  ಭಾಸವಾಗುತ್ತಿತ್ತು .  ಈಗಲಾದರೋ   ಮಹಿಷಿಯೇ  ನಮ್ಮನ್ನು  ಕಾಪಾಡುತ್ತದೆ ”.  ಎನ್ನುತ್ತಾ ಎಮ್ಮೆಯು   ನಡೆಸುವ ರಕ್ಷಣಾಕಾರ್ಯಕ್ಕೆ ”ಭೇಷ್” ಅಂದವರು  ಮೂರನೆಯವರು.    ”ಇನ್ನು  ಸದ್ಯೋ ಭವಿಷ್ಯದಲ್ಲಿ   ನಡೆಯುವ  ನಮ್ಮ  ವೃದ್ಧನಾಗರಿಕರ  ಸಭೆಯಲ್ಲಿ  ನಿಮ್ಮ  ಈ ಕಾರ್ಯಕ್ಕಾಗಿ  ನಿಮ್ಮನ್ನು  ಸನ್ಮಾನಿಸುವ  ಆಶಯ ನಮಗಿದೆ  . ನೀವು ಸೂಚಿಸಿದ   ಈ ಉಪಾಯವು ಅತ್ಯದ್ಭುತವಾದುದಾಗಿದೆ ” ಎಂದು ಅರುಹಿ ವೃದ್ಧನಾಗರಿಕ ಸಂಘದ ಪರವಾಗಿ  ಅಮಿತಾನಂದವನ್ನು  ವ್ಯಕ್ತ ಪಡಿಸಿದವರು  ನಾಲ್ಕನೆಯವರು . ಅವರ ಮಾತಿನಿಂದ  ಆಶ್ಚರ್ಯವಾದರೂ ಹರ್ಷಿತನಾಗಿದ್ದೆ . ಸಣ್ಣದೊಂದು  ಉಪಾಯದಿಂದ   ಮಹತ್ತರವಾದುದನ್ನು  ಸಾಧಿಸಿದ ತೃಪ್ತಿಯೊಂದಿಗೆ ನನ್ನ ಬಸ್  ಬರುತ್ತಲೇ ಅದನ್ನೇರಿದೆ .
.
ಮೂಲ : ಸಂಸ್ಕೃತ, ಲೇಖಕರು : ಕಾಂಚನೀಯ
ಕನ್ನಡಕ್ಕೆ ಅನುವಾದ : ಭಾಗ್ಯಲಕ್ಷ್ಮಿ, ಮೈಸೂರು
ಕೃಪೆ : ಸಂಭಾಷಣ-ಸಂದೇಶ ಮಾಸಪತ್ರಿಕೆ
.

13 Responses

  1. Hema says:

    ಕಥೆ ಸ್ವಾರಸ್ಯಕ್ರರವಾಗಿದೆ, ಅನುವಾದ ಚೆನ್ನಾಗಿದೆ.

  2. Shashikala Madaiah says:

    ಪಾದಚಾರಿಗಳ ಪಾಡನ್ನು ಭಗವಂತನೇ ಬಲ್ಲ

    • bhagyalaxmi says:

      ಅಂದರೆ ಆ ಬಾಲಕ, ಭಗವಂತನು ಅಲ್ಲಿಗೆ ಕಳುಹಿಸಿದ ಸಹಾಯಕ ಅನ್ನೋಣವೇ ? . ಧನ್ಯವಾದಗಳು

  3. ಉಷಾ ಚಂದ್ರ says:

    ಎಮ್ಮೆಗೂ ಒಂದು ವೃತ್ತಿ ಮತ್ತೆ ಸಂಭಾವನೆ super

    • bhagyalaxmi says:

      ನಿಮ್ಮ ಯೋಚನೆ ಚೆನ್ನಾಗಿದೆ . ಎಮ್ಮೆಯ ಬಗ್ಗೆ ಗೌರವ ತಂದು ಕೊಟ್ಟ someಭಾವನೆ ಅನ್ನಲೂ ಅಡ್ಡಿಯಿಲ್ಲ . ಧನ್ಯವಾದಗಳು

  4. Shruthi Sharma says:

    Wonderful writing! 🙂

  5. Sadashiva Bhat says:

    ಇದನ್ನೋದಿದ ಮೇಲೆ ಮೂಲ ಸಂಸ್ಕೃತ ದ ಲೇಖನ ಓದಬೇಕಾಗಿಲ್ಲ . . .

    • bhagyalaxmi says:

      ಧನ್ಯವಾದಗಳು . ಲೇಖನವನ್ನು ಮೆಚ್ಚಿ ಬರೆದ ನಿಮ್ಮ ಪ್ರಶಂಸೆಗೆ ಆಭಾರಿಯಾಗಿದ್ದೇನೆ .

  6. ಹಾ ಹ್ಹಾ! ಲೇಖಕರ ಸಮಯ ಸ್ಫೂರ್ತಿ ಮೆಚ್ಚುವಂತದ್ದು. ರಸ್ತೆ ದಾಟಲು ಹೊಸ ಟ್ರಾಫಿಕ್ಕು ಪೋಲೀಸನೊಬ್ಬನ್ನು ಅನ್ವೇಷಣೆ ಮಾಡಿದ್ದು, ಆ ಮೂಲಕ ಮಹಿಷಾಧಿಪನಿಗೆ ಹೊಸ ಆದಾಯಮೂಲ ಹುಡುಕಿಸಿಕೊಟ್ಟದ್ದು ವಿಶೇಷ ಸಾಧನೆಯೇ! ಪಾದಚಾರಿಗಳಿಗೆ ಕಿರಿಕಿರಿ ಮಾಡುವ ವಾಹನಸವಾರರಿಗೆ ಪೆಚ್ಚಾಗಿರಬಹುದಲ್ಲ!

    ಮುಂದೊಂದು ದಿನ ಈ ಪದ್ಧತಿ ಎಲ್ಲೆಡೆ ಕಾಣಸಿಕ್ಕರೆ ಆಶ್ಚರ್ಯ ಇಲ್ಲಬಿಡಿ!

    • ಅನುವಾದ ಹಾಗೂ ನಿಮ್ಮ ಹಾಸ್ಯಪ್ರಜ್ಞೆ ಎರಡೂ ಇಷ್ಟವಾಯಿತು. ಮೂಲ ಲೇಖಕರು ಯಾರು? ಬರಹ ಓದಲು ಸಿಗಬಹುದೇ? ಧನ್ಯವಾದಗಳು.

      • bhagyalaxmi says:

        ಧನ್ಯವಾದಗಳು . ದಯವಿಟ್ಟು ಲೇಖನವನ್ನು ಇನ್ನೊಮ್ಮೆ ಗಮನಿಸಿ . ನೀವು ಕೇಳಿದ ವಿವರಗಳು ಲೇಖನದ ಕೆಳಭಾಗದಲ್ಲಿ ದಾಖಲಿಸಿಯೇ ಇದೆ . ೨೦೧೭ ನೇ ಇಸವಿಯ ನವಂಬರ್ ತಿಂಗಳ ಪತ್ರಿಕೆಯಿಂದ . ”ಅಯಿ ಮಹಿಷಿ ! ತಾರಯ ಮಾಮ್ ” ಅನ್ನುವ ತಲೆಬರಹದಲ್ಲಿ ಇದೆ .

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: