ಭಾಷೆಯ ಬೆಳವಣಿಗೆಯಲ್ಲಿ ಯುವ ಮನಸ್ಸುಗಳ ಪಾತ್ರ..

Share Button
 


ವಿಡಂಬನೆ  “ಭಾಷೆಯ ಬೆಳವಣಿಗೆಯಲ್ಲಿ ಯುವ ಮನಸ್ಸುಗಳ ಪಾತ್ರ”
“ಏನು ಭಾರೀ ಯೋಚನೆಯಲ್ಲಿದ್ದ್ ಹಾಗೆ ಇದೆ ರಾಯರು? ಇದಿರಲ್ಲಿ ಕಾಗದ ಪೆನ್ನಿಟ್ಟುಕೊಂಡು, ಏನು ಕವಿತೆಯಾ?”  ಶಬ್ದ ಕೇಳಿ ತಲೆ ಎತ್ತಿದೆ ಇದಿರಲ್ಲಿ ಶೀನ.
ಇಲ್ಲ ಮರಾಯಾ ಕಬ್ಲಾದವರು ಮೇಲಿನಂತೆ ಒಂದು ಲೇಖನ ಬರೆಯಲು ಹೇಳಿದ್ದಾರೆ, ಅದೇ ಯೋಚನೆಯಲ್ಲಿದ್ದೇನೆ.
“ಅಲ್ಲಾ.. ಯಾವ ಭಾಷೆ?” ಸೀನನಿಗೆ ಯಾವಾಗಲೂ ಸಂಶಯವೇ.
ಗೊತ್ತಿಲ್ಲಪ್ಪಾ.?” ನಾನು.
“ಮತ್ತೆ ಮನಸ್ಸು ಯಾವಾಗಲೂ ಯಂಗ್ ಆಗಿಯೇ ಇರತ್ತಲ್ಲಾ, ಯುವಕರ ಮನಸ್ಸಾ, ಅಥವಾ ಯುವ ಮನಸ್ಸಾ?
ಅದೇ ನೋಡು ತ್ಯಾಂಪನ ಮನಸ್ಸು ಯಾವಾಗಲೂ ಯುವ ಆಗಿಯೇ ಇರತ್ತೆ. ಅಲ್ಲ ಇದೇ ಗೊತ್ತಿಲ್ಲದ ನೀನು ಏನು ಬರೀತಿಯಾ ನಿನ್ನ ತಲೆ?” ಶೀನ ಕುಟುಕಿದ.
“ಅದು ಸರೀನೇ ಬಿಡು, ಎಲ್ಲಿ ತ್ಯಾಂಪ ಜತೆಯಲ್ಲಿ ಬರಲೇ ಇಲ್ವಾ?” ನಾನೆಂದೆ
“ಇಲ್ಲಿಯವರೆಗೆ ನನ್ನ ಜತೆಗೇ ಬಂದಿದ್ದ ಕಣೋ, ಯಾಕೆ ಒಳಗೆ ಬರಲಿಲ್ಲ?” ಶೀನ
ನೋಡೋಣ ?”…ಅಷ್ಟರಲ್ಲೇ ಬಾಗಿಲ ಸದ್ದಾಯ್ತು, ನೋಡಿದರೆ ತ್ಯಾಂಪ ಮುಖ ಊದಿಸಿಕೊಂಡು ಬರ್ತಾ ಇದ್ದಾನೆ!!
ಯಾಕೋ ಮುಖ ಊದಿಸಿಕೊಂಡೆ?” ಶೀನ
ಏನಿಲ್ಲ ಕಣೋ…  ಬರ್ತಾ ಇದ್ನಾ, ಬಸ್ಸಲ್ಲಿ ನನ್ನ ಪಕ್ಕದ ಸೀಟಲ್ಲಿ ಒಂದು ಹುಡುಗ ಒಂದು ಹುಡುಗಿ, ಮಾತಾಡ್ತಾ ಇದ್ದರು.
ಸರಿ… ಅದಕ್ಕೇನೀಗ..?” ಶೀನ
“ಏನು ಮಾತೂಂತಿ, ಆ ನಗೆ , ಹಲ್ಕಿಸಿಯೋದು, ಅಡ್ದಡ್ದ ಬೀಳೋದು,…. ಅಯ್ಯೋ ಅಯ್ಯೊ..” ತ್ಯಾಂಪ
“ಇಬ್ಬರೂ ಪ್ರೀತಿಸ್ತಾ ಇದ್ದಾರೇನೋ” ಶೀನ
“ಅಂದ ಹಾಗೆ ಏನು ಮಾತಾಡ್ತಾ ಇದ್ರೊ, ಅರ್ಧ ಗಂಟೆಯಿಂದ ನೋಡ್ತಾ ಇದ್ದೆ, ಅವ್ರು ಮಾತಾಡೋದು ಏನಂತ ಅಪ್ಪನಾಣೆಗೂ ಗೊತ್ತಾಗ್ಲಿಲ್ಲ ಕಣೋ” ತ್ಯಾಂಪ.
“ಅಲ್ಲಯ್ಯಾ ಮಾತಾಡ್ತಾ ಇದ್ರು ಅಂತಿ, ಗೊತ್ತಾಗ್ಲಿಲ್ಲ ಅಂತೀ, ಮತ್ತೆ ಹೇಗೆ ಮಾತಾಡ್ತಾ ಇದ್ರು ಅವರು..ಒಬ್ಬರನ್ನೊಬ್ಬರು ಕಿವಿಯಲ್ಲೇ ಹೇಳ್ತಾ ಇದ್ರಾ?” ಶೀನ
“ಹೌದು ಕಣೋ, ಅದೂ ಮೊಬಾಯಿಲ್ ನಲ್ಲಿ,..” ತ್ಯಾಂಪ.
“ಅದ್ಯಾಕೆ  ಅವರಿಬ್ಬರೂ,  ಪಕ್ಕ ಪಕ್ಕದಲ್ಲಿ ಕೂತ್ಕೊಂಡ್ರೂ ಮೊಬಾಯಿಲ್ ನಲ್ಲಿ ಯಾಕೆ ಮಾತಾಡ್ತಾ ಇದ್ದರು?” ಶೀನ
 “ಬುದ್ದೂ ಕಣೋ ನೀನೂ, ಅವರಿಬ್ಬರೂ ಬೇರೆ ಬೇರೆ…  ಕಣೋ, ಹುಡುಗಿ ಯಾವ್ದೋ ಅವಳ ಹುಡುಗನ ಹತ್ರ,  ಈ ಹುಡುಗ ಯಾವ್ದೋ ಅವನ ಹುಡುಗಿ  ಜತೆ ಮಾತಾಡ್ತಾ ಇದ್ರು” ನಕ್ಕ ತ್ಯಾಂಪ
ಸರಿ… ಅದಕ್ಕೂನೀನು ಮುಖ ಊದ್ಸಿಕೊಂಡದ್ದಕ್ಕೂ ಏನು ಸಂಬಂಧ?” ನಾನು.
“ಅವ್ರ ಮಾತಾಡೊದ್ ನೋಡಿ ನನಗೂ ಹಾಗೇ ಯಾರ ಜತೆಗಾದ್ರೂ ಮಾತಾಡಬೇಕು ಅನ್ಸಿತ್ತು,  ಅದಕ್ಕೇ, ನಾನೂ ತ್ಯಾಂಪಿಗೆ ಫೋನ್ ಮಾಡ್ದೆ,” ತ್ಯಾಂಪ.

“ಆ ಮಕ್ಕಳು ಮಾಡಿದ  ಹಾಗೇನಾ..?” ನಾನೆಂದೆ.” ನೀನ್ ಹೇಳಿದ್ದೇ ಅವಳಿಗೆ ಅರ್ಥವಾಗಿರಲಿಕ್ಕಿಲ್ಲ ಬಿಡು”

 ” ಹೌದು ಕಣೋ,ಅವಳ ಆಲೋಚನೆಯೇ ಬೇರೆ ಇತ್ತು, ನನ್ನ ಹಿಗ್ಗಾ ಮುಗ್ಗಾ ಬೈದಳು ನನ್ನ ಮೂಡೇ ಕೆಟ್ ಹೋಯ್ತು”. ಎಂದ ತ್ಯಾಂಪ ಮುಖ ಹರಳೆಣ್ಣೇ ಮಾಡಿಕೊಂಡೆ ವಾಪಾಸು ಹೊರಟ.

“ನಿಂಗೊತ್ತಾ ಗೋಪೂ, ನಮ್ ಭಾಷೆ ಹ್ರಸ್ವ ಆಗಿಬಿಟ್ಟಿದೆ ಈ ಯುವ ಜನಾಂಗದ ಕೈಯ್ಯಲ್ಲಿ.” ಶೀನ.
ನಾನೆಂದೆ “ಅಲ್ಲಾ ಕಣೋ, ಈಗಿನ ಜನರೇಶನ್ ಸ್ವಲ್ಪ ಮುಂದುವರಿದ ಜನಾಂಗ. ಎಲ್ಲಾ ಅರ್ಜೆಂಟ್ ನಲ್ಲೇ ಆಗಬೇಕು ಅವಕ್ಕೆ”.
” ಸರೀ, ಅದಕ್ಕೇ ಕಲಬೆರಕೆ ಭಾಷೆ ಉಪಯೋಗಿಸ ಬೇಕಾ?” ಶೀನ.
“ನೋಡು ಶೀನಾ ಯಾವಾಗ ಪ್ರಪಂಚ ತಾಂತ್ರಿಕತೆಯ ಆಧುನೀಕರಣದಿಂದ ಚಿಕ್ಕದಾಯ್ತೋ, ಆಗ ಸಂಭಂಧದ ಸರಹದ್ದು ದೊಡ್ಡದಾಯ್ತು, ಅಳವಡಿಸುವಿಕೆ ಹೆಚ್ಚಾಗಬೇಕಾದ್ರೆ ಹೊಂದಿಕೊಳ್ಳೋ ಕ್ಷಮತ್ವ ಜಾಸ್ತಿಯಾಗಬೇಕು ಅಳಿವು ಉಳಿವಿನ ಪ್ರಶ್ನೆಗಾಗಿ…” ನಾನು.
ಹಾಗಾದರೆ ಈ ದಿಸೆಯಿಂದ ನಮ್ಮ ಭಾಷೆಯ ಬೆಳವಣಿಗೆಗೆ ಬದಲಾವಣೆ ಅನಿವಾರ್ಯ ಅಂತೀಯಾ?” ಶೀನ.

“ಅದರಲ್ಲಿ  ನೀನೂ ನಾನೂ ಎಷ್ಟು ಮುಖ್ಯವೋ ಹಾಗೇ ಯುವ ಮನಸ್ಸುಗಳ ಪ್ರಯತ್ನವೂ ಮುಖ್ಯ ಅಲ್ಲವೇ. ಅವರೇ ತಾನೆ ಮುನ್ನಡೆಸೋದು ಈ ದೇಶವನ್ನ, ಭಾಷೆಯನ್ನ..??” ನಾನು.

“ಇದೊಂದ್ ತರಾ ವಿಷ ವರ್ತುಲ ನಾವು ಅವರಿಗೆ ಯಾವ ರೀತಿಯ ಸಮಾಜ ಮತ್ತು ವಾತಾವರಣ ಸೃಷ್ಟಿಸಿ ಕೊಡ್ತೇವೋ ಅದರಂತೆ ಅವರು ಯೋಚಿಸುತ್ತಾರೆ, ಬೆಳೆಯುತ್ತಾರೆ ಮತ್ತು ಬೆಳೆಸುತ್ತಾರೆ ಯೋಚನೆಯಂತೆ ನಡೆಯುತ್ತಾರೆ ಮತ್ತು ನಡೆಸುತ್ತಾರೆ”.
“ಹಾಗಾದರೆ ನಮ್ಮ ಪ್ರಯತ್ನ ಸರಿಯಾದ ದಿಸೆಯಲ್ಲಿಲ್ಲ ಅಂತಾನಾ ನೀನು ಹೇಳುವುದು?” ಶೀನ.
“ಇದಕ್ಕೆ ಸಮರ್ಪಕ ಉತ್ತರ ನನ್ನ ಬಳಿ ಇಲ್ಲ ಕಣೋ, ಯಾಕೆಂದರೆ ಇದೆಲ್ಲಾ ಒಬ್ಬಿಬ್ಬರು ಮಾಡೋ ಕೆಲಸ ಅಲ್ಲ ಸರಕಾರ, ಸಂಘ ಸಂಸ್ಥೆ, ಶಾಲಾ ಕಾಲೇಜು, ಎಲ್ಲಾ ಕಡೆಯಿಂದಲೂ ಕಾಯಾ ವಾಚಾ ಮನಸಾ ಪ್ರಯತ್ನ ಪಟ್ಟರೆ ಮಾತ್ರ ಆಗಬಹುದು.”
 .
ಯಾವುದೇ ಭಾಷೆಯ ಬೆಳವಣಿಗೆ ಅದರ ಸಮ್ರದ್ಧತೆಯಲ್ಲಿ ಅದರ ಅಳವಡಿಕೆಯ ವಿಶಾಲತೆಯಲ್ಲಿ ಮತ್ತು ಅದರ ಬಳಸುವಿಕೆಯಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಅದರ ಸಂಪನ್ಮೂಲತೆಯ ಹರಹಿನಲ್ಲಿರುತ್ತದೆ. ಇದಕ್ಕೆ ಒಬ್ಬಿಬ್ಬರು ಅಥವಾ ಬೆರಳೆಣಿಕೆಯ ಸಂಘ ಸಂಸ್ಥೆಯ ಅಥವಾ ಉತ್ಸವಗಳ ಅವಶ್ಯಕಥೆಗಿಂತಲೂ ಹೃದಯಾಳದ ಅಭಿಮಾನ ಅದರ ಹೊರಗೆಡಹುವಿಕೆಯ ಉತ್ಸಾಹ ಪ್ರೋತ್ಸಾಹಗಳಿಗಿಂತಲೂ ಹೆಚ್ಚಾದ ಅವಶ್ಯಕಥೆ ಅಳವಡಿಕೆ, ಬಳಸುವಿಕೆ ಮತ್ತು ಕ್ರೋಢೀಕರಿಸುವ ಸಂಪನ್ಮೂಲಗಳಲ್ಲಿರುತ್ತದೆ ಎಂಬುದು ಅರಿವಾದರೆ ಭಾಷೆಯ ಉಳಿಕೆ ಬಾಳಿಕೆ ಮತ್ತು ಬೆಳವಣಿಗೆಗೆ ಈಗಿನ ಪ್ರಸಕ್ತವಲ್ಲದ ವಿಧ್ಯಮಾನದ ಅಥವಾ ಹೊಸತೊಂದು ಸಂಪನ್ಮೂಲಗಳ ಕ್ರೋಢೀಕರಣದ ರಂಗದ ಅವಶ್ಯಕಥೆಯಿದೆ ಎನ್ನುವುದು ನಮ್ಮ ಅರಿವಿಗೆ ಸಿಗುತ್ತದೆ.
 .
ನಮ್ಮ ಈಗಿನ ಯುವಕ ಯುವತಿಯರಲ್ಲಿ ಭಾಷೆಯ  ಅಭಿವ್ಯಕ್ತತೆಗೆ ಪರಿಪೂರ್ಣ ಪರಿಸರ ಹಾಗೂ ರಂಗ ಮಾಧ್ಯಮವಿಲ್ಲವೇ ಎಂದರೆ ಇದಕ್ಕೆ ಉತ್ತರ ಹೌದು ಎಂಬುದೇ ಆದರೂ ಅಂತರಾಳಕ್ಕೆ ಹೊಕ್ಕು ನೋಡಿದರೆ ಇನ್ನೂ ಬಹಳಷ್ಟು ಜಟಿಲತೆಗಳು ಗೋಚರಿಸುತ್ತವೆ. ಏಕೆಂದರೆ ಸಾಧಾರಣವಾಗಿ ಇದಕ್ಕ್ಜೆ ಎರಡು ಮಜಲುಗಳಿವೆ. ಒಂದು ಗ್ರಾಮೀಣ ಚೌಕಟ್ಟಿನ ಮನಸ್ಸು, ಇನ್ನೊಂದು ಪಟ್ಟಣದ ವಿಸ್ತ್ರತ ಯುವ ಮನಸ್ಸು. ಎರಡೂ ತಮ್ಮ ತಮ್ಮ ಹಂದರಗಳಲ್ಲಿ ಅನಿವಾರ್ಯತೆಯ ಬಂಧನದಲ್ಲಿ ಬದುಕಿನ ಮಜಲುಗಳಲ್ಲಿ ಹರಡಿಕೊಂಡಿವೆ.ಹಾಗಾಗಿ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಇನ್ನೊಂದಕ್ಕೆ ಎಸಗುವ ಅನ್ಯಾಯವಾಗುತ್ತದೆ.
 .
ಗ್ರಾಮೀಣ ಪರಿಸರ ತಮ್ಮ ಭಾಷೆಯ ಚೌಕಟ್ಟಿನಲ್ಲಿಯೇ ದೈನಂದಿನ ಚಟುವಟಿಕೆಗಳಿಂದ ಆರಂಭಿಸಿ ದಿನವಿಡೀ ವಹಿವಾಟುಗಳೆಲ್ಲವೂ ನಡೆಯುತ್ತವಾದುದರಿಂದ ಇಲ್ಲಿ ಈ ವಿಚಾರಗಳ ವೈಭವೀಕರಣದ ಅಥವಾ ಬೆಳವಣಿಗೆ ಅಥವಾ ನಾಶದ ವಿಷಯ ಅಪ್ರಸ್ತುತವಾಗುತ್ತದೆ. ಅಂದರೆ ಇಲ್ಲಿ ಯುವ ಮನಸ್ಸುಗಳ ಪಾತ್ರವೇ ಇಲ್ಲವೇ ಅಂತಲ್ಲ, ಇಲ್ಲಿ ಭಾಷೆಯೇ ಅವರವರ ಪರಿಸರ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿರುವುದರಿಂದ ಮೇಲಿನ ವಿಷಯ ಗೌಣವೆಂದೆ.
.
ಸಂಪನ್ಮೂಲತೆಯ ಬಗೆಗೆ ಬಂದರೆ ನಮ್ಮ ಭಾಷೆಯಲ್ಲಿ ಯುವ ಮನಸ್ಸುಗಳ ಸಾಮಾಜಿಕ ಭಧ್ರತೆಗಾಗಿ ನಾವು, ನಮ್ಮ ಸಮಾಜ, ಸರಕಾರ ಏನು ಮಾಡುತ್ತಿದ್ದೇವೆ ಎಂದು ಕೇಳಿದರೆ ಏನೂ ಮಾಡುತ್ತಿಲ್ಲ ಎಂತಲೇ ಹೇಳಬೇಕಾಗುತ್ತವೆ. ಬೆರಳೆಣಿಕೆಯಲ್ಲಿನ ಸಂಘ ಸಂಸ್ಥೆಗಳು ಈ ವಿಷಯದ ಬಗೆಗೆ ತಮ್ಮ ಕಾಯಾ ವಾಚಾ ಮನಸಾ ಪ್ರಯತ್ನಿಸುತ್ತವೆಯಾದರೂ ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿವೆ. ಪ್ರತಿಯೊಬ್ಬ ಯುವ ಮನಸ್ಸಿನಲ್ಲಿ ನಮ್ಮ ಭಾಷೆಯ ಸಂಪನ್ಮೂಲತೆಯ ಅರಿವಾಗಬೇಕಾದರೆ ಆ ದಿಸೆಯಲ್ಲಿನ ನಮ್ಮೆಲ್ಲರ ಕರ್ತವ್ಯವೆಂದರೆ ಅವರ ಸಾಮಾಜಿಕ ಭದ್ರತೆಗಾಗಿ ರಂಗವನ್ನು ಅಥವಾ ಹರಹಿನ ದಾರಿಯನ್ನು ತೋರಿಸಬೇಕಾಗುತ್ತದೆ. ಕನ್ನಡವನ್ನೇ ತನ್ನ ಬದುಕಿಗೂ ದಾರಿಯನ್ನಾಗಿಸಬೇಕಾದರೆ  ಅವರಿಗೆ ಬದುಕುವ ದಾರಿಯನ್ನು ಅದೇ ಭಾಷೆಯು ತೋರಿಸಬೇಕಾದದ್ದು ಅನಿವಾರ್ಯ. ಇದಕ್ಕೆ ಪಟ್ಟಣದಲ್ಲಿನ ಬದುಕುವ ದಾರಿಯನ್ನು ತೋರಿಸುತ್ತಿರುವ ಐಟಿ ಬೀಟಿ ಮುಂತಾದ ಅನೇಕ ದಾರಿಗಳಿಗೆ ಸಡ್ಡು ಹೊಡೆಯುವ ಗರ್ಜು ನಮ್ಮ ಭಾಷೆಯಲ್ಲಿ ಅಥವಾ ಅದನ್ನು ಬಳಸಿ ತಮ್ಮದೇ ಬದುಕುವ ದಾರಿಯನ್ನು ಹುಟ್ಟು ಹಾಕುವ ಜವಾಬ್ದಾರಿಯೂ ನಮಗೇ ಸೇರಿದೆ. ಹಾಗಾದರೆ ಸರಕಾರ, ಸಮಾಜ ಏನು ಮಾಡಬೇಕು..?”
.
ಶೀನ ಹೇಳಿದ “ಹೌದೌದು, ನಿನ್ನ ಧಾಟಿ ನನಗರ್ಥವಾಯ್ತು,  ನನ್ನನ್ನು ಕೇಳಿದರೆ ಇಂತಹ ಒಂದು ಪ್ರಶ್ನೆಯೇ ತಪ್ಪುಆಲ್ಲವೇ?. ಸೂಕ್ಷ್ಮವಾಗಿ ನೋಡಿದರೆ ಸಮಾಜ ಸರಕಾರ ಎಲ್ಲವೂ ನಾವೇ, ನಮ್ಮನ್ನೊಳಗೊಂಡಂತೆಯೇ ಸಾಮಾಜವಿದೆ ಅಂತೆಯೇ ಸರಕಾರವೂ. ಉದಾಹರಣೆಗೆಂತ ಈಗ ಒಂದು ಸಣ್ಣ ಲೆಕ್ಕಾಚಾರ ಮಾಡೋಣ. ನಮ್ಮ ಬ್ಲಾಗಿನಲ್ಲಿ ನನ್ನನ್ನೂ ಸೇರಿ ಒಂಬತ್ತು ಸಾವಿರ ಸದಸ್ಯರಿದ್ದಾರೆ, ಒಬ್ಬೊಬ್ಬರು ಒಂದು ಸಾವಿರ ಕೊಟ್ಟರೆಂದುಕೊಂಡರೆ (ಮಹತ್ಕಾರ್ಯಕ್ಕೆಂದರೆ ಪ್ರತಿಯೊಬ್ಬರಿಗೂ ಇದೇನೂ ದೊಡ್ದ ಮೊತ್ತವಲ್ಲ, ಇದಕ್ಕಿಂತಲೂ ಹೆಚ್ಚು ಕೊಡುವವರೂ ಇದ್ದಾರೆನ್ನು, ಅದು ಬೇರೆ ವಿಷಯ) ಒಟ್ಟು ತೊಂಭತ್ತು ಲಕ್ಷ ರುಪಾಯಿ ಸೇರುತ್ತದೆ,  ಇದೊಂದು ಉದಾಹರಣೆಯಷ್ಟೇ, ಹೀಗೆ ಕನ್ನಡಕ್ಕೆಂತಲೇ ಕನ್ನಡದಿಂದಲೇ ಕನ್ನಡದ ಕನ್ನಡವರ ಅಭಿವ್ರದ್ಧಿ ಸಾಧ್ಯ.ಈ ಉದಾಹರಣೆಯನ್ನು ಕರ್ನಾಟಕಕ್ಕೆ ಪಸರಿಸಿದರೆ ಅದರ ಫಲಿತಾಂಶದ ಅಗಾಧತೆಯನ್ನು ನಾವು ಊಹಿಸಿಕೊಳ್ಳಬಹುದು. ಇದೊಂದು ಯೋಚನೆಯಷ್ಟೇ, ಇಂತಹಾ ಅಸಂಖ್ಯಾತ ಉದಾಹರಣೆಗಳಿರಬಹುದು, ಆದರೆ ಇದನ್ನು ಅನುಷ್ಟಾನಕ್ಕೆ ತರಬಲ್ಲಂತಹ ಅಭಿಮಾನೀ ನಿಸ್ವಾರ್ಥ ಮನಸ್ಸು ಬೇಕಾಗಿದೆ.”
“ನಿಜ ಕಣೋ…..”ನಾನು ಏನನ್ನೋ ಹೇಳುವಷ್ಟರಲ್ಲಿ ಹೊರಗಡೆ ಏನೋ ಸದ್ದಾಯ್ತು.. ಎಲ್ಲಿ ತ್ಯಾಂಪ.??
ಇಬ್ಬರೂ ಹೊರಗಡೆ ಧಾವಿಸಿದೆವು.
,
ಹೊರಗಡೆಯ ಹುಲ್ಲುಗಾವಲಿನಲ್ಲಿ…ತ್ಯಾಂಪ ಕಿವಿಗೆ ತನ್ನ ಮೊಬೈಯಿಲ್ ಆನಿಸಿ ಯಾರೊಂದಿಗೋ ಮಾತನಾಡುತ್ತಿದ್ದ.  ನಾನೂ ಶೀನನೂ ನಿಧಾನವಾಗಿ ಸದ್ದು ಮಾಡದೇ ಮರಗಳೆಡೆಯಿಂದ ಅವನ ಬಳಿ ನಡೆದೆವು.
ಅದೆಷ್ಟು ನಿಧಾನವಾಗಿ ಮಾತನಾಡುತ್ತಿದ್ದನೆಂದರೆ ನಮಗೆ ಅರ್ಥವಾಗಲೇ ಇಲ್ಲ. ನಾನು ಬಳಿ ಹೋಗಿ ಎಬ್ಬಿಸಬೇಕೆಂದುಕೊಂಡೆ.. ಆದರೆ ಶೀನ ನನ್ನನ್ನು ಸುಮ್ಮನಾಗಿರಿಸಿದ ಕಣ್ಣಲ್ಲೇ….
ಈತನಾ .. ಯುವ ಮನಸ್ಸಿನ ಪ್ರತೀಕ..??
.
 .
 –ಬೆಳ್ಳಾಲ ಗೋಪಿನಾಥ ರಾವ್
Follow

Get every new post on this blog delivered to your Inbox.

Join other followers: