ಅಹಂಕಾರಕ್ಕೆ ಉದಾಸೀನವೇ ಮದ್ದು….
ಹೌದು ನಮ್ಮ ನಡುವೆ ಇಂತಹ ಜನಗಳಿರುತ್ತಾರೆ. ತುಂಬಿದ ಸಭೆಯಲ್ಲೋ, ಗೆಳೆಯರ ಗುಂಪಿನಲ್ಲಿ ಚರ್ಚೆಯ ಸಮಯದಲ್ಲೋ ಅಥವಾ ಹರಟೆಯ ಸಮಯದಲ್ಲೋ, ಯಾವಸಂದರ್ಭದಲ್ಲಿಯೂ ಅವರು ಹಿಂದೆ ಮುಂದೆ ನೋಡುವುದಿಲ್ಲ. ಸದಾ ನಿಮ್ಮನ್ನು, ನಿಮ್ಮ ಮಾತುಗಳನ್ನು, ನಿಮ್ಮ ವ್ಯಕ್ತಿತ್ವವನ್ನು ಅಲ್ಲೆಗಳೆಯುತ್ತಾರೆ, ನಿಮ್ಮನ್ನು ಕೀಳಾಗಿ ಬಿಂಬಿಸುವ ಪ್ರಯತ್ನದಲ್ಲಿರುತ್ತಾರೆ. ಎಲ್ಲರ ಮುಂದೆ ನಿಮ್ಮ ದೌರ್ಬಲ್ಯವನ್ನು ಎತ್ತಿಹಿಡಿದು ನಿಮ್ಮನ್ನು ತಲೆತಗ್ಗಿಸುವಂತೆ ಮಾಡಿಬಿಡಬೇಕು ಎಂದು ಹವಣಿಸುತ್ತಾರೆ. ತಾವೇ ಮಹಾನ್ ಬುದ್ಧಿವಂತ ಎಂಬಂತೆ ಭಾವಿಸಿರುತ್ತಾರೆ. ಮತ್ತೊಬ್ಬರ ನಂಬಿಕೆಯನ್ನು ಒಪ್ಪುವುದೇ ಇಲ್ಲ. ಆದರೆ ಎಲ್ಲರೂ ಇವರ ಅಭಿಪ್ರಾಯಗಳನ್ನೇ ಒಪ್ಪಬೇಕು ಎಂಬ ಧೋರಣೆಯಲ್ಲಿರುತ್ತಾರೆ. ಅವರ ಅಭಿಪ್ರಾಯವನ್ನು ನೀವು ಒಪ್ಪದಿದ್ದರೇ ನಿಮ್ಮನ್ನು ಅವಿವೇಕಿ ಎಂದೇ ಅವರ ಭ್ರಮಿಸುತ್ತಾರೆ. ಇದಕ್ಕೆಲ್ಲಾ ಕಾರಣ ಅವರ ಅಹಂಕಾರ ಹಾಗೂ ಅಜ್ಞಾನ.
ಅವರ ಸಂಪತ್ತಿನ ಬಗ್ಗೆ ಅವರಿಗೆ ಇರುವ ದುರಾಭಿಮಾನ. ಹಣ ಇದ್ದರಷ್ಟೇ ದೊಡ್ಡ ಮನುಷ್ಯ ಎಂದು ಅವರು ನಂಬಿರುತ್ತಾರೆ. ಹಾಗಾಗಿ ಅವರಿಗಿಂತ ಆರ್ಥಿಕವಾಗಿ ಹಿಂದೆ ಇರುವವರನ್ನು ಹೀಯ್ಯಾಳಿಸುವುದು, ನಿಮ್ಮ ಮಾತಿಗೆ ಕುಹಕವಾಡುವುದನ್ನು ಮೈಗೂಡಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲದೇ ನಿಮ್ಮ ಹಿಂದೆ ನಿಮಗೆ ಪರಿಚಯವಿರುವವರ ಬಳಿ ನಿಮ್ಮ ಬಗ್ಗೆ ಅವಹೇಳನಕಾರಿಯಾಗಿ ಆಡಿಕೊಳ್ಳುವುದನ್ನು ಮಾಡುತ್ತಾರೆ. ಅವನೇನು ಮಹಾ ಎಂಬಂತೆ ವರ್ತಿಸುತ್ತಾರೆ. ಹೀಗೆ ಮಾಡುವುರಿಂದ ಅವರಿಗೇನು ಲಾಭ ಎಂಬುದೇ ನಮಗರಿಯುವುದಿಲ್ಲ. ಹೀಗೆ ಮಾಡುವುದರಿಂದ ತಾನು ದೊಡ್ಡವನಾಗುತ್ತೇನೆ ಎಂದು ತಿಳಿದಿರುತ್ತಾರೆ. ಆದರೆ ಇನ್ನೊಬ್ಬರನ್ನು ಅವಹೇಳನ ಮಾಡಿ ಆಡಿಕೊಳ್ಳುವುದರಿಂದ ಅವರ ವ್ಯಕ್ತಿತ್ವ ಹಳ್ಳ ಹಿಡಿದಿರುತ್ತದೆ. ಇಂತವರಿಗೆ ಯಾರು ಸ್ನೇಹಿತರೇ ಇರುವುದಿಲ್ಲ. ಇದ್ದರೂ ಅವರ ಮುಂದೆ, ಅವರ ಹಣಕ್ಕೋ, ಅಧಿಕಾರಕ್ಕೋ ತಲೆಬಾಗಿ ಮಾತ್ರ ಸ್ನೇಹಿತರಂತೆ ನಾಟಕವಾಡುತ್ತಿರುತ್ತಾರೆ. ಆದರೆ ಅವರ ಹತ್ತಿರ ಹೆಚ್ಚು ಹೊತ್ತು ಇರಲು ಇಷ್ಟಪಡುವುದಿಲ್ಲ.
ಇಂತಹ ದುರಹಂಕಾರವಿರುವವರು ಒಬ್ಬ ವ್ಯಕ್ತಿಯನ್ನು ವ್ಯಕ್ತಿಯ ವ್ಯಕ್ತಿತ್ವದ ಮೂಲಕ ಅಳೆಯದೇ ಕೇವಲ ಹಣದಿಂದ ಅಳೆಯುತ್ತಾರೆ. ನೀವು ಯಾವುದೇ ವಿಷಯವನ್ನು ವಸ್ತುನಿಷ್ಠವಾಗಿಯೇ ಹೇಳುತ್ತಿದ್ದರೂ ಅದಕ್ಕೆ ಆಕ್ಷೇಪಣೆ ಸಲ್ಲಿಸಿ, ತಮ್ಮ ಆಂಗಿಕ ಭಾಷೆಯಲ್ಲಿಯೇ, ಕಣ್ಣುಗಳ ನೋಟಗಳಿಂದಲೇ ನಿಮ್ಮ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ಅಷ್ಟಕ್ಕೂ ಅವರು ನಿಮ್ಮನ್ನು ದ್ವೇಷಿಸುವುದಕ್ಕೆ ಕಾರಣವೇ ಇರುವುದಿಲ್ಲ. ಆದರೂ ಅವರು ನಿಮ್ಮನ್ನು ಬೆನ್ನು ಬೀಳುತ್ತಾರೆ.
ಇನ್ನು ಇಂತಹ ಅಹಂಕಾರಿಗಳು ತಾವೇನಾದರೂ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಅಂದರೆ ಆರ್ಥಿಕವಾಗಿಯೋ, ಅಧಿಕಾರಿಯಾಗಿದ್ದರೇ ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳುವುದು ತಮ್ಮ ಹೆಸರಿನಿಂದಲ್ಲ, ಬದಲಾಗಿ ತಮ್ಮ ಹುದ್ದೆಯಿಂದ, ಅಧಿಕಾರದಿಂದ. ತಾವು ಹುಟ್ಟಿದಾಗಿನಿಂದ ಅಧಿಕಾರಿಯಾಗಿಯೇ ಹುಟ್ಟಿದ್ದೇನೆ ಎಂಬಂತಿರುತ್ತದೆ ಅವರ ನಡವಳಿಕೆ. ಇದಕ್ಕೆ ಕಾರಣ ಅವರ ಅಲ್ಪಜ್ಞಾನ.
ಇಂತಹ ಅಹಂಕಾರದ ವರ್ತನೆಗೆ ಸೂಕ್ತ ಉಪಾಯವೆಂದರೆ “ಉದಾಸೀನ” ಮಾಡಿಬಿಡುವುದು. ಅವರು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಾರೆ ಎಂಬುದು ನಿಮಗೆ ತಿಳಿದಿರುವುದರಿಂದ, ಅವರು ಹೇಳುವುದನ್ನು ಮನಸ್ಸಿಗೆ ಹಾಕಿಕೊಳ್ಳಬಾರದು. ಏನು ಆಗೆ ಇಲ್ಲವೆಂಬಂತೆ ಅವರ ಕುಹಕದ ನುಡಿಗಳಿಗೆ ಮುಗುಳ್ನಗೆಯನ್ನು ಬೀರಬೇಕು. ಅದೇ ಪರಿಹಾರ. “ಅಹಂಕಾರಕ್ಕೆ ಉದಾಸೀನವೇ ಮದ್ದು-ಕುಹಕಕ್ಕೆ ಮುಗುಳ್ನಗೆಯೇ ಉತ್ತರ” ಆಗ ಅವರಿಗಾಗುವ ಮಾನಸಿಕ ಸೋಲು ಅವರನ್ನು ಕಂಗೆಡಿಸುತ್ತದೆ. ಮಾನಸಿಕವಾಗಿ ಅವರಿಗೆ ಗೊಂದಲವಾಗಿಬಿಡುತ್ತದೆ. ಅರೇ.. ನಾನು ಏನು ಹೇಳಿದರೂ ಇವನು ತಲೆ ಕೆಡಿಸಿಕೊಳ್ಳುತ್ತಿಲ್ಲವಲ್ಲ ಎಂದು ಚಡಪಡಿಸುತ್ತಾರೆ. ಅಷ್ಟಕ್ಕೂ ತನ್ನಲ್ಲಿರುವ ದೌಲತ್ತಿನ ಬಗ್ಗೆ ಅಹಂಕಾರ ಪಟ್ಟುಕೊಂಡು ಇನ್ನೊಬ್ಬರನ್ನು ಆಡಿಕೊಳ್ಳುವುದು, ಸಭೆಯಲ್ಲಿ ತೇಜೋವಧೆ ಮಾಡುವುದು, ಕುಹಕದ ನುಡಿಗಳನ್ನಾಡುವುದು ಒಂದು ರೀತಿಯ ಮಾನಸಿಕ ರೋಗವೇ ಸರಿ.
“ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ,
ಸಮುದ್ರ ತಡಿಯಲ್ಲೊಂದು ಮನೆಯ ಮಾಡಿ ನೆರೆ–ತೊರೆಗಳಿಗಂಜಿದೊಂಡೆತಯ್ಯ,
ಸಂತೆಯಲ್ಲೊಂದು ಮನೆಯ ಮಾಡಿ ಸದ್ದು–ಗದ್ದಲಗಳಿಗಂಜಿದೊಡೆಂತಯ್ಯ,
ಚನ್ನಮಲ್ಲಿಕಾರ್ಜುನ ಲೋಕದಲ್ಲಿ ಹುಟ್ಟಿಬಂದ ಬಳಿಕ, ನಿಂದೆಗಳು ಬಂದಾಗ ಸಮಾಧಾನಿಯಾಗಿರಬೇಕು”
ಎಂದು ಅಕ್ಕಮಹಾದೇವಿಯವರು ಈಗಾಗಲೇ ಹೇಳಿದ್ದಾರೆ. ಹಾಗಾಗಿ ನಿಮ್ಮ ನಡುವೆ ಇಂತಹ ಅಹಂಕಾರ ತುಂಬಿದ, ಕುಹಕಿಗಳು ಇದ್ದಾಗ ಅವರನ್ನು, ಅವರ ಮಾತುಗಳನ್ನುಉದಾಸೀನ ಮಾಡಿಬಿಡಿ. ಅವರ ಕುಹಕಕ್ಕೆ ಮುಗುಳ್ನಕ್ಕುಬಿಡಿ. ಆಗ ಅವರ ಮಾನಸಿಕ ಸೋಲು ಅವರಿಗೆ ಅರಿವಾಗುತ್ತದೆ..
–ಶರತ್ ಪಿ.ಕೆ. ಹಾಸನ.
ನಿಜ..ಬರಹ ಇಷ್ಟವಾಯಿತು. ನಮ್ಮ ನಡುವೆ ಇಂಥಹ ಮಂದಿ ಆಗಾಗ ಕಾಣಸಿಗುತ್ತಾರೆ.
ಹೌದು
ಹೌದು ಎಷ್ಟೋ ಜನ ತಾವೇ ಬುದ್ದಿವಂತರೆಂದು ಬೇರೆಯವರನ್ನು ಕುಹಕದಿಂದ ಮಾತನಾಡುತ್ತಾರೆ.ಅಂತಹವರನ್ನು ಉದಾಸೀನ ಮಾಡಿದರೆ ಸರಿಹೋಗಬಹುದು. “ಅಹಂಕಾರ ಕ್ಕೆ ಉದಾಸೀನ ಮದ್ದು” ಹಿಂದಿನವರು ಮಾಡಿದ ಗಾದೆ
ನಿಜ ನಿಜ
ಒಪ್ಪೋವಂತ ಬರಹ ಮತ್ತು ಅಭಿಪ್ರಾಯ…!!!
ಈಗ ಸಾಮಾನ್ಯವಾಗಿ ಕಂಡು ಬರುವಂತಹ ಜನಗಳು ಹೀಗೆಯೆ
ಹೌದು
ಉತ್ತಮ ಬರಹ .
ತುಂಬಾ ಸೊಗಾಸಾದ್ ವಿವರನೆ