ಸುದಾಮನ ಗೆಳೆಯ

Share Button

ವಿಚಲಿತ ಕುಚೇಲನ
ಕುತೂಹಲಿ ಕೃಷ್ಣ ಕೇಳುತ್ತಿದ್ದಾನೆ
“ಏನ ತಂದೆಯೊ ಗೆಳೆಯ
ನನಗಾಗಿ ನಿನ್ನ ಉತ್ತರೀಯದ
ತುದಿಯ ಈ ಪುಟ್ಟ ಗಂಟಿನಲ್ಲಿ?”

ನಾಲ್ಕು ಹಿಡಿ ಅವಲಕ್ಕಿ ತಂದ
ಹಿಂಡಿದ ಹೃದಯದ
ಸುದಾಮ ಹಿಡಿಕಾಯ
ಕೃಷ್ಣನೋ ಹಿಗ್ಗಿ ಎಳೆವ ಸದಯ!

ಧ್ವನಿ ಉಡುಗಿದ ಸುದಾಮ ಸ್ವಗತ,
’ಈ ಮುಷ್ಟಿಯಲ್ಲಿ ನನ್ನೆಲ್ಲ
ದಾರಿದ್ರ್ಯ, ದಾಸ್ಯ, ದುಮ್ಮಾನ
ಅಸಹಾಯಕತೆ, ಅಪಮಾನ,
ಭರ್ತ್ಸನೆ, ಭಯ
ಅವನತಿಯತ್ತಲ ಭ್ರಾಂತಿಯ ಚಿತ್ತ…..’

ಕಣ್ಣಂಚಲಿ ತುಳುಕಿತೇ ಹನಿ?
“……………………………..
………………………………”
ಹತ ಭಾಗ್ಯ ಸುದಾಮ, ಮೌನಿ

ಗಂಟು ಕಳಚಿ ಕೃಷ್ಣ
ಕಂಡು ಅವಲಕ್ಕಿ
ಆಸೆಯಲ್ಲಿ ಹಿಡಿತುಂಬಿ
ಬಾಯಿಗಿಟ್ಟು ಮೆಲ್ಲುತ್ತ
ಮೌನ ಮುರಿಯುತ್ತಾ ನಗುತ್ತಾ,
“ಸಾಕು.. ಸಾಕು ಗೆಳೆಯಾ… ಸಾಕಿಷ್ಟು
ಅಬ್ಬಾ.. ಅದ್ಭುತ ರುಚಿಯೆಷ್ಟು!
ಇದೊ ಮುಷ್ಟಿಯಷ್ಟೂ ರುಚಿಯ ತಿಂದೆ
ನನ್ನಪಾರ ಹಸಿವ ನೀನಿಂಗಿಸಿ ತೇಗಿಸಿಬಿಟ್ಟೆ !
ಈ ಗೊಲ್ಲನಲ್ಲಿ ಇಷ್ಟು ಪ್ರೀತಿ ಏತಕಿಟ್ಟೆ!”

ಕೃಷ್ಣನ ಬೆರಳುಗಳಲ್ಲಿ
ಹಗುರಾದವು ಸುದಾಮನ ಹಸ್ತಗಳು
ವಿಶ್ವಾಸದ ಹೆಮ್ಮರದಲ್ಲಿ
ಹರಡಿತು ಗೆಳೆತನದ ತಂಪು ನೆರಳು
ಅರಮನೆಯ ಅಂಗಳದಲ್ಲೀಗ
ಪಟಪಟಿಸಲಿವೆ ಹಾರುವ ನೆನಪ ಹಕ್ಕಿಗಳು

,

– ಅನಂತ ರಮೇಶ್

 

2 Responses

  1. ಚಂದ್ರಶೇಖರ. says:

    ಅರ್ಥಪೂರ್ಣವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: