ಕಡೆದಿಟ್ಟ ದಿಟ್ಟರು

Share Button

anatha-ramesh

ಶಾಂತರು ಅವಿಶ್ರಾಂತರು
ವಿನೀತರು ವಂದ್ಯರು
ಹಮ್ಮುಬಿಮ್ಮುಗಳ ತೊರೆದವರು
ಸಹಮತದಿ ನಡೆವವರು 
ಕರ್ನಾಟಕದ ದಿಟ್ಟರು
ಎಂದು ಬೆನ್ನುತಟ್ಟಿಕೊಳ್ಳೆವು

ಕೈ ಚಾಚಿದರೆ ಮೈದಡವಿ
ದುಡಿಸದೆಲೆ ಉಪಚರಿಸಿ
ಅಶನ ಅರಿವೆ ಅಂದಣವ 
ನೀಡಿ ಅಂದಗಾಣುವವರು 
ಕುಶಲಿಗರಲ್ಲಿಕಲಶಪ್ರಾಯ

ಕನ್ನಡಿಗರು ಎಂದು ಬೀಗೆವು

ಜಗದ ಕಷ್ಟಗಳೆಲ್ಲ
ನನ್ನದೆನ್ನುವ ಹೃದ್ಯರು
ಸಹನೆಗಾನದ ಹಸನು ಮನಸಿನ 
ಸಾಮರಸ್ಯದ ಹರಿಕಾರರು 
ಕಂನಾಡ ಚೆನ್ನುಡಿಗರು
ಎಂದು ಡಂಗುರಿಸೆವು

ಕೊಡುಗೈಯ ಕರ್ಣರು
ರಾಷ್ಟ್ರ ಸಮ್ಮಾನಕ್ಕಾದ್ಯರು 
ಆಢ್ಯ ಅಪ್ರತಿಮ ಅಜಾತರು 
ನಿಸ್ವಾರ್ಥಿ ನಿರಪೇಕ್ಷರು 
ಕರುನಾಡ ಕಂಪಿನವರು
ಎಂದು ಸ್ವಘೋಷಕರಾಗೆವು

ರಸಾಸ್ವಾದಿ ಸಂಪನ್ನರು
ಕಲಾರಾಧಕ ಕುಲರು
ಕೆಚ್ಚಿಗೆ ಅನ್ವರ್ಥ ಅನುರೂಪರು
ಅಸೀಮ ವೀರರ ಬೀಡು
ಕುಶಾಗ್ರಮತಿಗಳ ಕಣಜ ಕರ್ಣಾಟ
ಎಂದು ಅಹಮಿಸೆವು

ಚಾರಿತ್ರರು ಛಲದಂಕರು
ಸಾಪೇಕ್ಷ ಸಾಕ್ಷರರು
ಸುಮನಸ ಸೂಕ್ಷ್ಮರು 
ನಾಡು ನುಡಿ ಕಡೆದಿಟ್ಟ 
ಕರ್ಮಿಷ್ಠರು ಕನ್ನಡಿಗರು 
ಎಂದೆಂದೂ ಪೂರ್ವಜರ ನೆನೆದೇವು

.

 – ಅನಂತ ರಮೇಶ್

2 Responses

  1. k manjunath says:

    ತುಂಬ ಅರ್ಥಗರ್ಭಿತ ಕವನ .ಕನ್ನಡಿಗರು ಅಜಾತ ಶತ್ರುಗಳು ಎನ್ನುವದು ಪೂರ್ಣ ಸತ್ಯ ಆದರೆ ನಮ್ಮ ಭಾಷೆಯ ಬಗ್ಗೆ ದುರಭಿಮಾನ ಅಲ್ಲದಿದ್ದರೂ
    ಸದಭಿಮಾನದ ಕೊರತೆ ಇದೆ ಎನ್ನಿಸುತ್ತಿದೆ. ಜೈ ಕರ್ನಾಟಕ ! ಜೈ ಕನ್ನಡ !!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: